ಆ್ಯಪ್ನಗರ

ಬಿಜೆಪಿ - ಪಿಡಿಪಿ ಮೈತ್ರಿ ಮುರಿಯಲು ಪಂಚ ಕಾರಣ

ಸಿದ್ಧಾಂತದ ವಿಷಯದಲ್ಲಿ ಬಿಜೆಪಿ ಉತ್ತರವಾದರೆ, ಪಿಡಿಪಿ ದಕ್ಷಿಣ. ಆದರೂ ಇವುಗಳ ನಡುವೆ ‘ಅಸಹಜ ಮೈತ್ರಿ’ ಏರ್ಪಟ್ಟಿತ್ತು. ಅಸ್ಥಿರತೆಯನ್ನು ಒಡಲಲ್ಲಿ ಇಟುಕೊಂಡೇ ಹುಟ್ಟಿದ ಸರಕಾರ ಮೂರು ವರ್ಷಗಳ ಬಳಿಕ ಪತನಗೊಂಡಿದೆ. ಅದಕ್ಕೆ ಸೈದ್ಧಾಂತಿಕ ಭಿನ್ನತೆಯ ಜತೆಗೆ ಬೇರೆ ಕಾರಣಗಳೂ ಇವೆ.

Vijaya Karnataka 20 Jun 2018, 10:54 am
ಹೊಸದಿಲ್ಲಿ: ಸಿದ್ಧಾಂತದ ವಿಷಯದಲ್ಲಿ ಬಿಜೆಪಿ ಉತ್ತರವಾದರೆ, ಪಿಡಿಪಿ ದಕ್ಷಿಣ. ಆದರೂ ಇವುಗಳ ನಡುವೆ ‘ಅಸಹಜ ಮೈತ್ರಿ’ ಏರ್ಪಟ್ಟಿತ್ತು. ಅಸ್ಥಿರತೆಯನ್ನು ಒಡಲಲ್ಲಿ ಇಟುಕೊಂಡೇ ಹುಟ್ಟಿದ ಸರಕಾರ ಮೂರು ವರ್ಷಗಳ ಬಳಿಕ ಪತನಗೊಂಡಿದೆ. ಅದಕ್ಕೆ ಸೈದ್ಧಾಂತಿಕ ಭಿನ್ನತೆಯ ಜತೆಗೆ ಬೇರೆ ಕಾರಣಗಳೂ ಇವೆ.
Vijaya Karnataka Web bjp pdp


1. ಕಾಶ್ಮೀರಕ್ಕೆ ಬೆಣ್ಣೆ, ಜಮ್ಮು ಅಂದ್ರೆ ಅಲರ್ಜಿ
ಜಮ್ಮು-ಕಾಶ್ಮೀರದ ಅಭಿವೃದ್ಧಿಗೆ ಕೇಂದ್ರ ಸರಕಾರ ನೀಡಿದ ನೆರವಿನ ಪ್ಯಾಕೇಜ್‌ 80 ಸಾವಿರ ಕೋಟಿ ರೂ. ಈ ಹಣ ಕಣಿವೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ಬಳಕೆಯಾಗಬೇಕಿತ್ತು. ಆದರೆ, ಮೆಹಬೂಬಾ ಮುಫ್ತಿಯವರಿಗೆ ಕಾಶ್ಮೀರದ ಬಗ್ಗೆ ಮಾತ್ರ ಒಲವು. ಜಮ್ಮು ಕಂಡರೆ ಅವರಿಗೆ ಅಲರ್ಜಿ ಎನ್ನುವುದು ಬಿಜೆಪಿ ಶಾಸಕರ ಆರೋಪ. ಈ ವಿಷಯದಲ್ಲಿ ಮುಫ್ತಿ ಮತ್ತು ಬಿಜೆಪಿ ಶಾಸಕರ ನಡುವಿನ ಭಿನ್ನಾಭಿಪ್ರಾಯ ಇತ್ಯರ್ಥಗೊಳ್ಳದೇ ಕೊನೆಗೆ ಸರಕಾರ ಉರುಳಿತು ಎನ್ನುವ ಅಭಿಪ್ರಾಯ ಕೇಳಿ ಬಂದಿದೆ.

2. ಉಗ್ರರ ಉಪಟಳ
ಉಗ್ರಗಾಮಿ ಚಟುವಟಿಕೆ ಮತ್ತು ಮತಾಂಧತೆ ಮಟ್ಟಹಾಕುವುದು ಬಿಜೆಪಿಯ ಕನಸಾಗಿತ್ತು. ಆದರೆ ಆ ದಿಸೆಯಲ್ಲಿ ಒಂದಿಂಚೂ ಪ್ರಗತಿ ಸಾಧಿಸಲು ಮೆಹಬೂಬಾ ಅವರಿಗೆ ಸಾಧ್ಯವಾಗಲಿಲ್ಲ. ನಿರೀಕ್ಷೆಗೆ ವ್ಯತಿರೀಕ್ತವಾಗಿ ಕಣಿವೆಯಲ್ಲಿ ಉಗ್ರಗಾಮಿ ಚಟುವಟಿಕೆ ಹೆಚ್ಚಿದವು, ಮತಾಂಧತೆಯೂ ಮೇರೆ ಮೀರಿತು. ಬಿಜೆಪಿ ಪಾಲಿಗೆ ಇದು ನುಂಗಲಾಗದ ತುತ್ತಾಯಿತು.

3. ಕಥುವಾ ಅತ್ಯಾಚಾರ ಮತ್ತು ಕೊಲೆ
ಕಥುವಾದಲ್ಲಿ ಎಂಟು ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ಪಿಡಿಪಿ-ಬಿಜೆಪಿ ಸರಕಾರದ ವರ್ಚಸ್ಸಿಗೆ ತೀವ್ರ ಧಕ್ಕೆ ಉಂಟು ಮಾಡಿತು. ಈ ಪ್ರಕರಣದಲ್ಲಿ ಆರೋಪಿಗಳ ಪರ ಬಿಜೆಪಿ ಮೃದು ಧೋರಣೆ ತಳೆದಿದೆ ಎಂದು ಪಿಡಿಪಿ ಆರೋಪಿಸಿತ್ತು. ಅಂದೇ ಮೈತ್ರಿಯಲ್ಲಿ ತಳಮಳ ಸೃಷ್ಟಿಯಾಗಿತ್ತು. ತನಿಖೆ ವಿಷಯದಲ್ಲಿಯೂ ಉಭಯ ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ತಲೆದೋರಿತ್ತು.

4. ಏಕಪಕ್ಷೀಯ ನಿರ್ಧಾರ
ಆಡಳಿತಾತ್ಮಕ ವಿಷಯಗಳಲ್ಲಿ ಮೆಹಬೂಬಾ ಮುಫ್ತಿ ಅವರು ಬಿಜೆಪಿಯನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ, ತಮ್ಮ ಮೂಗಿನ ನೇರಕ್ಕೆ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎನ್ನುವ ದೂರು ಬಿಜೆಪಿ ಶಾಸಕರದ್ದಾಗಿತ್ತು. ಈ ಬಗ್ಗೆ ಹಲವು ಬಾರಿ ಕೇಂದ್ರ ನಾಯಕತ್ವಕ್ಕೆ ದೂರು ಕೂಡ ನೀಡಿದ್ದರು. ಕಲ್ಲು ತೂರಾಟಗಾರರ ಬಿಡುಗಡೆ, ಬೇಕರ್‌ವಾಲಾಗಳ ಸ್ಥಳಾಂತರ ಸೇರಿದಂತೆ ಹಲವು ವಿಷಯಗಳಲ್ಲಿ ಸಂಘರ್ಷ ಕಾಣಿಸಿತ್ತು.

5. ಲೋಕಸಭೆ ಚುನಾವಣೆ
ಕಾಶ್ಮೀರ ಬಿಕ್ಕಟ್ಟು ಇತ್ಯರ್ಥ ಪಡಿಸುವ ಕುರಿತು 2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಭರವಸೆ ನೀಡಿತ್ತು. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಅದು ಸಾಧ್ಯವಾಗಿಲ್ಲ. ಕಣಿವೆ ರಾಜ್ಯದ ಆಂತರಿಕ ಬಿಕ್ಕಟ್ಟು ಹೆಚ್ಚುತ್ತಲೇ ಬಂದಿದೆ. ಗಡಿ ಭಾಗದಲ್ಲಿಯೂ ನೆಮ್ಮದಿ ಇಲ್ಲದಾಯಿತು. ಮೈತ್ರಿ ಕಾರಣ ಪಕ್ಷದ ಕೈಕಟ್ಟಿದೆ ಎನ್ನುವ ಸಬೂಬು ಇತ್ತು. ಇದೇ ಸ್ಥಿತಿಯಲ್ಲಿ ಮುಂಬರುವ ಲೋಕಸಭೆ ಚುನಾವಣೆ ಎದುರಿಸುವುದು ಬಿಜೆಪಿ ಪಾಲಿಗೆ ದುಸ್ತರ ಎನಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ