ಹೊಸದಿಲ್ಲಿ: ''ಧಾರ್ಮಿಕ ಸಂಪ್ರದಾಯಗಳನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಕೇವಲ ಪ್ರಚಾರಕ್ಕೆ ಸಂಪ್ರದಾಯದ ಉಲ್ಲಂಘನೆ ಮಾಡುವುದು ದೇಶದ ವಿವಿಧತೆಗೆ ಮಾಡುವ ಅಪಚಾರ,'' ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅಭಿಪ್ರಾಯಪಟ್ಟಿದ್ದಾರೆ. ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತು ದಿಲ್ಲಿ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನಡೆದ ಸಂವಾದದಲ್ಲಿ ಭಾಗವಹಿಸಿದ್ದ ಅವರು, ''ನಾನು ಪಾರ್ಸಿ ಧರ್ಮದ ವ್ಯಕ್ತಿಯನ್ನು ಮದುವೆಯಾಗಿದ್ದೇನೆ. ಆ ಧರ್ಮದ ಸಂಪ್ರದಾಯದಂತೆ ಮಹಿಳೆಯರು ದೇಗುಲ ಪ್ರವೇಶಿಸುವಂತಿಲ್ಲ. ನನ್ನ ಮಕ್ಕಳು ಪ್ರಾರ್ಥನೆ ಸಲ್ಲಿಸುವಾಗ ನಾನು ಹೊರಗೆ ನಿಂತಿರುತ್ತೇನೆ. ಆದರೆ ಈ ವಿಚಾರವಾಗಿ ದೇಗುಲ ಪ್ರವೇಶಕ್ಕೆ ಅವಕಾಶ ಕೋರಿ ನಾನು ಸುಪ್ರೀಂ ಕೋರ್ಟ್ ಮೊರೆ ಹೋಗಿಲ್ಲ. ಏಕೆಂದರೆ ಅವರ ಧಾರ್ಮಿಕ ನಂಬಿಕೆಗಳನ್ನು ನಾನು ಗೌರವಿಸುತ್ತೇನೆ,'' ಎಂದು ಇರಾನಿ ಪ್ರತಿಕ್ರಿಯಿಸಿದ್ದಾರೆ. ''ದೇಶದ ಕೆಲವು ದೇಗುಲಗಳಲ್ಲಿ ಪುರುಷರಿಗೆ ಪ್ರವೇಶವಿಲ್ಲ. ಅಲ್ಲದೇ ಧಾರ್ಮಿಕ ನಂಬಿಕೆಗಳಡಿ ಅನೇಕ ಚರ್ಚ್ ಮತ್ತು ಮಸೀದಿಗಳಲ್ಲಿ ನಿರ್ಬಂಧಗಳನ್ನು ಪರಿಪಾಲಿಸಲಾಗುತ್ತಿದೆ. ದೇಶದಲ್ಲಿರುವ ವಿವಿಧ ಧರ್ಮಗಳು, ಅದರ ಆಚರಣೆಗಳು, ನಂಬಿಕೆಗಳು ಮತ್ತು ಸಂಪ್ರದಾಯವನ್ನು ಗೌರವಿಸುವುದು ವ್ಯಕ್ತಿಗಳಾಗಿ ನಮ್ಮ ಜವಾಬ್ದಾರಿ,'' ಎಂದು ಹೇಳಿದ್ದಾರೆ.
ಪ್ರಚಾರಕ್ಕಾಗಿ ಸಂಪ್ರದಾಯದ ಉಲ್ಲಂಘನೆ ಸಲ್ಲದು: ಸ್ಮೃತಿ
ದೇಶದಲ್ಲಿರುವ ವಿವಿಧ ಧರ್ಮಗಳು, ಅದರ ಆಚರಣೆಗಳು, ನಂಬಿಕೆಗಳು ಮತ್ತು ಸಂಪ್ರದಾಯವನ್ನು ಗೌರವಿಸುವುದು ವ್ಯಕ್ತಿಗಳಾಗಿ ನಮ್ಮ ಜವಾಬ್ದಾರಿ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.
Vijaya Karnataka 16 Feb 2019, 5:00 am