ಆ್ಯಪ್ನಗರ

2019ರಲ್ಲಿ ಬಿಜೆಪಿ ಗೆಲ್ಲಬೇಕೆಂದರೆ ಮೋದಿ ಜಾಗಕ್ಕೆ ನಿತಿನ್ ಗಡ್ಕರಿ ತರಬೇಕಂತೆ!

. ದಶಕಗಳಿಂದ ಬಿಜೆಪಿ- ಆರ್‌ಎಸ್ಎಸ್ ಕಾರ್ಯಕರ್ತರಾಗಿರುವ ಗಡ್ಕರಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ, ಮಹಾರಾಷ್ಟ್ರದಲ್ಲಿ ಮತ್ತೀಗ ಕೇಂದ್ರದಲ್ಲಿ ಸಚಿವರಾಗಿರುವ ಅನುಭವ ಹೊಂದಿದ್ದು ಉನ್ನತ ಸ್ಥಾನಕ್ಕೆ ಸಾಕಷ್ಟು ಅರ್ಹತೆ ಹೊಂದಿದ್ದಾರೆ.

THE ECONOMIC TIMES 18 Dec 2018, 3:29 pm
ಮುಂಬಯಿ: 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕೆಂದು ನೀವು ಬಯಸಿದರೆ ಪ್ರಧಾನಿ ನರೇಂದ್ರ ಮೋದಿ ಜಾಗಕ್ಕೆ ನಿತಿನ್ ಗಡ್ಕರಿಯವನ್ನು ಬದಲಾಯಿಸಿ ಎಂದ ಮಹಾರಾಷ್ಟ್ರದ ಪ್ರಮುಖ ರೈತ ನಾಯಕರೊಬ್ಬರು ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಪತ್ರ ಬರೆದಿದ್ದಾರೆ.
Vijaya Karnataka Web Narendra Modi


ಥಾಣೆ ಮತ್ತು ಪುಣೆಯಲ್ಲಿ ಮೆಟ್ರೊ ರೈಲ್ವೆ ಅಡಿಗಲ್ಲು ಕಾರ್ಯಕ್ರಮ ಸೇರಿದಂತೆ ಸರಣಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಅವರು ಮಹಾರಾಷ್ಟ್ರಕ್ಕೆ ಬಂದಿರುವ ದಿನದಂದೇ ರಾಜ್ಯ ಸರಕಾರಕ್ಕೆ ಸಂಬಂಧಿಸಿದ ಸಮಿತಿ, ವಸಂತ್ ರಾವ್ ನಾಯಕ್ ಶೇಟಿ ಸ್ವಾವಲಂಬನ್ ಮಿಷನ್ (ವಿಎನ್ಎಸ್ಎಸ್ಎಮ್) ಅಧ್ಯಕ್ಷ ಕಿಶೋರ್ ತಿವಾರಿಯಿಂದ ಈ ಬೇಡಿಕೆ ಕೇಳಿ ಬಂದಿದೆ.

ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಪ್ರಧಾನ ಕಾರ್ಯದರ್ಶಿ ಭಯ್ಯಾಜಿ ಸುರೇಶ್ ಜೋಶಿ ಅವರನ್ನುದ್ದೇಶಿಸಿ ಬರೆದಿರುವ ಪತ್ರದಲ್ಲಿ ನೋಟು ಅಮಾನ್ಯೀಕರಣ, ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್ಟಿ) , ಇಂಧನ ಬೆಲೆ ಏರಿಕೆ ಮತ್ತು ಇತರ ಜನವಿರೋಧಿ ಯೋಜನೆಗಳನ್ನು ಜಾರಿಗೆ ತಂದ ದುರಹಂಕಾರಿ ಮುಖಂಡರಿಂದಾಗಿ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಬಿಜೆಪಿ ಸೋಲುಣ್ಣುವಂತಾಯಿತು, ಎಂದು ಅವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

"ಪಕ್ಷ ಮತ್ತು ಸರಕಾರದಲ್ಲಿ ತೀವ್ರವಾದಿ ಮತ್ತು ನಿರಂಕುಶ ವರ್ತನೆಗಳನ್ನು ಮುಂದುವರಿಸಿರುವ ನಾಯಕರು ಸಮಾಜ ಮತ್ತು ದೇಶಕ್ಕೆ ಅಪಾಯಕಾರಿ. ಇದೀಗಾಗಲೇ ಸಾಬೀತಾಗಿದೆ. ಇತಿಹಾಸ ಪುನರಾವರ್ತಿಸಬಾರದೆಂದಿದ್ದರೆ 2019 ರ ಚುನಾವಣೆಗೆ ಗಡ್ಕರಿಗೆ ಅಧಿಕಾರವನ್ನು ಹಸ್ತಾಂತರಿಸಬೇಕು ಎಂದವರು ಒತ್ತಾಯಿಸಿದ್ದಾರೆ.

ಮೋದಿ ಮತ್ತು ಅಮಿತ್ ಶಾ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದ ಮಾಜಿ ಬಿಜೆಪಿ ಸರಕಾರಗಳು ಮಾಡಿದ ಉತ್ತಮ ಕೆಲಸಗಳು ನಿಷ್ಫಲವಾಗುವಂತೆ ಮಾಡಿದರು. ಅವರಿಗೆ ಆಸಕ್ತಿ ಇರುವುದು ಕೇವಲ ಬುಲೆಟ್ ರೈಲು ಮತ್ತು ಮೆಟ್ರೊ ರೈಲು ಯೋಜನೆಗಳಲ್ಲಿ ಎಂದು ತಿವಾರಿ ಕಿಚಾಯಿಸಿದ್ದಾರೆ.

ಎಲ್ಲಾ ದೃಷ್ಟಿಕೋನಗಳನ್ನು ಸರಿದೂಗಿಸಿಕೊಂಡು ಮುನ್ನಡೆಯುವ, ಸ್ನೇಹಪರ, ಒಮ್ಮತದ ವಿಕಾಸದತ್ತ ಕೊಂಡೊಯ್ಯುವಂತಹ ವ್ಯಕ್ತಿತ್ವದ ಗಡ್ಕರಿ ಅವರು ಜನರಲ್ಲಿನ ಭಯವನ್ನು ಹೋಗಲಾಡಿಸಬಹುದು. ದಶಕಗಳಿಂದ ಬಿಜೆಪಿ- ಆರ್‌ಎಸ್ಎಸ್ ಕಾರ್ಯಕರ್ತರಾಗಿರುವ ಗಡ್ಕರಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ, ಮಹಾರಾಷ್ಟ್ರದಲ್ಲಿ ಮತ್ತೀಗ ಕೇಂದ್ರದಲ್ಲಿ ಸಚಿವರಾಗಿರುವ ಅನುಭವ ಹೊಂದಿದ್ದು ಉನ್ನತ ಸ್ಥಾನಕ್ಕೆ ಸಾಕಷ್ಟು ಅರ್ಹತೆ ಹೊಂದಿದ್ದಾರೆ" ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ