ಆ್ಯಪ್ನಗರ

ಸಹಜ ಸ್ಥಿತಿಯತ್ತ ಜಮ್ಮು-ಕಾಶ್ಮೀರ, ಹಲವೆಡೆ ನಿರ್ಬಂಧ ತೆರವು

ಆರ್ಟಿಕಲ್ 370 ರದ್ದು ಬಳಿಕ ಮುಂಜಾಗರೂಕತಾ ಕ್ರಮವಾಗಿ ವಿಧಿಸಲಾಗಿರುವ ಕೆಲವೊಂದು ನಿರ್ಬಂಧಗಳನ್ನು ಹಂತ ಹಂತವಾಗಿ ತೆರವು ಮಾಡಲಾಗುತ್ತಿದ್ದು ಜಮ್ಮು- ಕಾಶ್ಮೀರ ಸಹಜ ಸ್ಥಿತಿಯತ್ತ ಮರಳುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Agencies 9 Sep 2019, 7:54 pm
ಜಮ್ಮು-ಕಾಶ್ಮೀರ: ಆರ್ಟಿಕಲ್ 370 ರದ್ದು ಹಿನ್ನೆಲೆಯಲ್ಲಿ ಬಿಗುವಿನಿಂದ ಕೂಡಿದ್ದ ಜಮ್ಮು-ಕಾಶ್ಮೀರದ ಪರಿಸ್ಥಿತಿ ಸಹಜತೆಯತ್ತ ಮರಳುತ್ತಿದ್ದು ಹಲವೆಡೆ ಭಾರತೀಯ ಸೇನೆ ವಿಧಿಸಿದ್ದ ನಿರ್ಬಂಧವನ್ನು ತೆರವುಗೊಳಿಸಲಾಗುತ್ತಿದೆ. ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾಗಿ 36 ದಿನಗಳ ಬಳಿಕ ಅಧಿಕಾರಿಗಳು ನಿರ್ಬಂಧ ತೆರವುಗೊಳಿಸುವ ಕುರಿತಾದ ನಿರ್ಧಾರ ಕೈಗೊಂಡಿದ್ದಾರೆ.
Vijaya Karnataka Web jammu- kashmeer


ಶ್ರೀನಗರದ ಕೆಲವೊಂದು ಸೂಕ್ಷ್ಮ ಪ್ರದೇಶಗಳನ್ನು ಹೊರತುಪಡಿಸಿ ಉಳಿದೆಡೆ ಹಂತ ಹಂತವಾಗಿ ನಿರ್ಬಂಧವನ್ನು ಕಡಿತಗೊಳಿಸುವ ಮೂಲಕ ಶೀಘ್ರದಲ್ಲೇ ಸಂಪೂರ್ಣ ತೆರವುಗೊಳಿಸುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಕಣಿವೆ ರಾಜ್ಯದ ಪ್ರಮುಖ ವಾಣಿಜ್ಯ ಪ್ರದೇಶವಾದ ಲಾಲ್ ಚೌಕ್‌ನಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ಇಂದು ತೆರವುಗೊಳಿಸಲಾಗಿದ್ದು, ಭದ್ರತೆಯನ್ನು ಮುಂದುವರಿಸಲಾಗಿದೆ. ಮೊಹರಂ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೆಲವೊಂದು ಅಯಕಟ್ಟಿನ ಪ್ರದೇಶಗಳಲ್ಲಿ ಹೆಚ್ಚಿನ ಬಂದೋಬಸ್ಥ್ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು- ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಕುರಿತಾಗಿ ಆಗಸ್ಟ್ 5 ರಂದು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡ ಬಳಿಕ ಮುಂಜಾಗರೂಕತಾ ಕ್ರಮವಾಗಿ ಕಣಿವೆಯಲ್ಲಿ ಭಾರೀ ಭದ್ರತಾ ಸಿಬಂಧಿಯನ್ನು ನಿಯೋಜಿಸಲಾಗಿದ್ದು ಹಲವಾರು ನಿರ್ಬಂಧಗಳನ್ನು ವಿಧಿಸಲಾಗಿತ್ತು. ಅಲ್ಲದೆ ರಾಜಕೀಯ ಪಕ್ಷದ ಪ್ರಮುಖ ಮುಖಂಡರಾದ ಫಾರೂಕ್ ಅಬ್ದುಲ್ಲಾ, ಉಮ್ಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಸೇರಿದಂತೆ ಪ್ರತ್ಯೇಕತಾವಾದಿ ನಾಯಕರುಗಳನ್ನು ಗೃಹ ಬಂಧನದಲ್ಲಿಡಲಾಗಿದೆ.

ಕಣಿವೆ ರಾಜ್ಯದಲ್ಲಿ ಲ್ಯಾಂಡ್ ಲೈನ್ ಸಂಪರ್ಕ ಮರುಸ್ಥಾಪಿಸಲಾಗಿದ್ದು. ಮೊಬೈಲ್ ಪೋನ್ ಹಾಗೂ ಇಂಟರ್‌ನೆಟ್ ಬಳಕೆಗೆ ವಿಧಿಸಲಾಗಿರುವ ನಿರ್ಬಂಧ ಜಾರಿಯಲ್ಲಿದ್ದು ಶೀಘ್ರದಲ್ಲಿ ಸರಿಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ