ಆ್ಯಪ್ನಗರ

ವಿದೇಶದಲ್ಲೂ ವಾದ್ರಾ ಆಸ್ತಿ!: ಇಡಿ ಅಧಿಕಾರಿಗಳ ದಾಳಿ ವೇಳೆ ಬಯಲು

ರಕ್ಷಣಾ ಒಪ್ಪಂದ ಕುದುರಿಸಿದ ಕಮೀಷನ್‌ ರೂಪದಲ್ಲಿ ಬಂದಿರುವ ಹಣದಲ್ಲಿ ವಾದ್ರಾ ಅವರು ದೇಶದಲ್ಲಷ್ಟೇ ಅಲ್ಲದೇ ಲಂಡನ್‌ ಮತ್ತಿತರ ಕಡೆ ಆಸ್ತಿ ಖರೀದಿಸಿರುವುದು ಪತ್ತೆಯಾಗಿದೆ. ವಿವಿಧ ಸಂಸ್ಥೆಗಳ ಹೆಸರಿನಲ್ಲಿ ವಾದ್ರಾ ದೇಶದಲ್ಲಷ್ಟೇ ಅಲ್ಲದೇ ಲಂಡನ್‌ನಲ್ಲೂ ಆಸ್ತಿ ಹೊಂದಿರುವ ಬಗ್ಗೆ ಪುರಾವೆಗಳು ದೊರೆತಿವೆ ಎಂದಿರುವ ಇ.ಡಿ ಅಧಿಕಾರಿಗಳ ತಂಡ, ದಾಳಿ ಕಾರ್ಯಾಚರಣೆಯ ವಿವರಗಳನ್ನು ಬಿಟ್ಟುಕೊಟ್ಟಿಲ್ಲ. ವಾದ್ರಾ ಅವರ ಮೂವರು ನಿಕಟವರ್ತಿಗಳು ಹೊಸದಿಲ್ಲಿ, ನೊಯ್ಡಾ, ಗಾಜಿಯಾಬಾದ್‌ ಹಾಗೂ ಬೆಂಗಳೂರಿನಲ್ಲಿ ಹೊಂದಿರುವ ನಿವಾಸಗಳ ಮೇಲೆ ಇ.ಡಿ ಅಧಿಕಾರಿಗಳ ತಂಡ ದಾಳಿ ನಡೆಸಿ ಸಾಕಷ್ಟು ದಾಖಲೆಗಳನ್ನು ವಶಪಡಿಸಿಕೊಂಡಿತ್ತು.

Vijaya Karnataka 9 Dec 2018, 9:46 am
ಹೊಸದಿಲ್ಲಿ : ರಕ್ಷಣಾ ಸರಬರಾಜುದಾರರಿಂದ ಕಮಿಷನ್‌ ರೂಪದಲ್ಲಿ ಬಂದ ಹಣದಲ್ಲಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್‌ ವಾದ್ರಾ ವಿದೇಶಗಳಲ್ಲೂ ಸಾಕಷ್ಟು ಆಸ್ತಿ ಖರೀದಿಸಿರುವುದು ಜಾರಿ ನಿರ್ದೇಶನಾಲಯದ ತನಿಖೆಯಿಂದ ಬಯಲಿಗೆ ಬಂದಿದೆ. ವಿವಿಧ ಸಂಸ್ಥೆಗಳ ಹೆಸರಿನಲ್ಲಿ ವಾದ್ರಾ ದೇಶದಲ್ಲಷ್ಟೇ ಅಲ್ಲದೇ ಲಂಡನ್‌ನಲ್ಲೂ ಆಸ್ತಿ ಹೊಂದಿರುವ ಬಗ್ಗೆ ಪುರಾವೆಗಳು ದೊರೆತಿವೆ ಎಂದಿರುವ ಇ.ಡಿ ಅಧಿಕಾರಿಗಳ ತಂಡ, ದಾಳಿ ಕಾರ್ಯಾಚರಣೆಯ ವಿವರಗಳನ್ನು ಶನಿವಾರವೂ ಬಿಟ್ಟುಕೊಟ್ಟಿಲ್ಲ.
Vijaya Karnataka Web ib6maqp8_robert-vadra_625x300_07_December_18


ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹಗರಣದ ಮಧ್ಯವರ್ತಿ ಕ್ರಿಶ್ಚಿಯನ್‌ ಮೈಕೆಲ್‌ ಹಸ್ತಾಂತರಗೊಂಡ ಮೂರು ದಿನಗಳ ಬಳಿಕ ಅಂದರೆ ಶುಕ್ರವಾರ ವಾದ್ರಾ ಅವರ ಮೂವರು ನಿಕಟವರ್ತಿಗಳು ಹೊಸದಿಲ್ಲಿ, ನೊಯ್ಡಾ, ಗಾಜಿಯಾಬಾದ್‌ ಹಾಗೂ ಬೆಂಗಳೂರಿನಲ್ಲಿ ಹೊಂದಿರುವ ನಿವಾಸಗಳ ಮೇಲೆ ಇ.ಡಿ ಅಧಿಕಾರಿಗಳ ತಂಡ ದಾಳಿ ನಡೆಸಿ ಸಾಕಷ್ಟು ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ಹೀಗೆ ನಡೆದ ದಾಳಿಗಳಲ್ಲಿ ರಾಷ್ಟ್ರೀಯ ಆಂಗ್ಲ ದೈನಿಕವೊಂದರ ಆಡಳಿತ ಮಂಡಳಿಯಲ್ಲಿ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರ ಮನೆಯೂ ಸೇರಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇ.ಡಿ. ದಾಖಲಿಸಿರುವ ಎರಡು ಎಫ್‌ಐಆರ್‌ಗಳ ಆಧಾರದಲ್ಲಿ ಅಧಿಕಾರಿಗಳ ತಂಡವು ಶನಿವಾರವೂ ಮೂವರ ನಿವಾಸಗಳಲ್ಲಿ ಶೋಧ ಕಾರ್ಯಾಚರಣೆ ಮುಂದುವರಿಸಿತು.

ದಾಳಿ ವೇಳೆ ರಕ್ಷಣಾ ಸರಬರಾಜುದಾರರಿಂದ ವಾದ್ರಾ ಅವರ ಮೂವರು ಬೆಂಬಲಿಗರ ಬ್ಯಾಂಕ್‌ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವ ದಾಖಲೆಗಳು ಸಿಕ್ಕಿವೆ. ರಕ್ಷಣಾ ಒಪ್ಪಂದ ಕುದುರಿಸಿದ ಕಮೀಷನ್‌ ರೂಪದಲ್ಲಿ ಬಂದಿರುವ ಹಣದಲ್ಲಿ ವಾದ್ರಾ ಅವರು ದೇಶದಲ್ಲಷ್ಟೇ ಅಲ್ಲದೇ ಲಂಡನ್‌ ಮತ್ತಿತರ ಕಡೆ ಆಸ್ತಿ ಖರೀದಿಸಿರುವುದು ಪತ್ತೆಯಾಗಿದೆ. ಡಿಫೆನ್ಸ್‌ ಡೀಲರ್‌ ಸಂಜಯ್‌ ಭಂಡಾರಿ ಮತ್ತವನ ನಿಕಟವರ್ತಿಗಳಿಂದ ವಾದ್ರಾ ಹಾಗೂ ಅವರ ಮೂವರು ಬ್ಯೂಸಿನೆಸ್‌ ಪಾರ್ಟನರ್‌ಗಳ ನಡುವೆ ನಡೆದಿದೆ ಎನ್ನಲಾದ ವ್ಯವಹಾರ ಪತ್ರಗಳೂ ಸಿಕ್ಕಿದ್ದು, ಅವುಗಳನ್ನು ಪರಿಶೀಲಿಸುತ್ತಿದೆ ಎಂದು ಇ.ಡಿ ಮೂಲಗಳು ತಿಳಿಸಿವೆ.

ಇ.ಡಿ ಅಧಿಕಾರಿಗಳ ತಂಡ ಶನಿವಾರವೂ ಕಾರ್ಯಾಚರಣೆ ಮುಂದುವರಿಸಿದ್ದು, ವಾದ್ರಾ ಅವರ ನಿಕಟವರ್ತಿ, ವಾಣಿಜ್ಯ ಪಾಲುದಾರರಾಗಿರುವ ಕಾಂಗ್ರೆಸ್‌ ಕಾರ‍್ಯಕರ್ತ ಜಗದೀಶ್‌ ಶರ್ಮಾ ಅವರ ದಿಲ್ಲಿ ಮನೆ ಮೇಲೂ ದಾಳಿ ನಡೆಸಿ, ಸಾಕಷ್ಟು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದೆ.

ರಾಜಕೀಯ ಪ್ರೇರಿತ

ದಾಳಿ ಬೆನ್ನಲ್ಲೇ ಕಾಂಗ್ರೆಸ್‌ ನಾಯಕರು ಇದೊಂದು ರಾಜಕೀಯ ಪ್ರೇರಿತ ಎಂದು ಟೀಕೆ ಮಾಡಿದ್ದಾರೆ. ''ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಲಿರುವ ಭೀತಿಯಿಂದ ಪ್ರಧಾನಿ ಮೋದಿ ಸರಕಾರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಇಂತಹ ದಾಳಿಗಳನ್ನು ನಡೆಸುತ್ತಿದೆ. ಈ ಮೂಲಕ ಮೋದಿ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ,'' ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೆವಾಲ ಹೇಳಿದ್ದಾರೆ. ಸರ್ಚ್‌ ವಾರಂಟ್‌ ಇಲ್ಲದೇ ನಡೆಸಿದ ಈ ದಾಳಿ ಒಂದು ವ್ಯರ್ಥ ಕಸರತ್ತು ಎಂದು ವಾದ್ರಾ ಪರ ವಕೀಲ ಸುಮನ್‌ ಖೇತಾನ್‌ ಪ್ರತಿಕ್ರಿಯಿಸಿದ್ದಾರೆ.

ಪ್ರಧಾನಿ ಮೋದಿ ಸರಕಾರ ದ್ವೇಷ ರಾಜಕಾರಣ ಮಾಡುತ್ತಿದೆ. ಈ ಇ.ಡಿ. ದಾಳಿ ಮಾಧ್ಯಮಗಳ ಹಾಗೂ ಜನರ ಗಮನ ಸೆಳೆಯುವ ಒಂದು ಸರ್ಕಸ್‌ ಅಷ್ಟೆ.
-ರಾಬರ್ಟ್‌ ವಾದ್ರಾ (ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದು)


ಮೈಕೆಲ್‌ ವಿಚಾರಣೆ ವ್ಯಾಪ್ತಿ ವಿಸ್ತರಣೆ

ಸಿಬಿಐ ವಶದಲ್ಲಿರುವ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಕಾಪ್ಟರ್‌ ಹಗರಣದ ಮಧ್ಯವರ್ತಿ ಕ್ರಿಶ್ಚಿಯನ್‌ ಮೈಕೆಲ್‌ನನ್ನು ತನಿಖಾ ಸಂಸ್ಥೆಯು, ಇತರೆ ರಕ್ಷಣಾ ಒಪ್ಪಂದಗಳ ಹಿನ್ನೆಲೆಯಲ್ಲೂ ವಿಚಾರಣೆ ನಡೆಸುತ್ತಿದೆ. ಬ್ರಿಟನ್‌-ಇಟಲಿ ಮೂಲದ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಕಂಪನಿಯಿಂದ 3000 ಕೋಟಿ ರೂ. ಮೊತ್ತದಲ್ಲಿ ಭಾರತೀಯ ಸೇನೆಗೆ 197 ಲೈಟ್‌ ಯುಟಿಲಿಟಿ ಕಾಪ್ಟರ್‌ಗಳನ್ನು ಖರೀದಿಸುವ ಕುರಿತು ಯುಪಿಎ ಸರಕಾರದ ಅವಧಿಯಲ್ಲಿ ನಡೆದಿದ್ದ ಒಪ್ಪಂದಲ್ಲೂ ಸಾಕಷ್ಟು ಅವ್ಯವಹಾರಗಳು ನಡೆದಿದ್ದವು. ಈ ಪ್ರಕರಣದಲ್ಲೂ ಮೈಕೆಲ್‌ನನ್ನು ಸಿಬಿಐ ವಿಚಾರಣೆ ನಡೆಸುತ್ತಿದೆ. ಈ ಒಪ್ಪಂದದಲ್ಲಿ ಅಂದಿನ ಬ್ರಿಗೇಡಿಯರ್‌ ವಿ.ಎಸ್‌. ಸೈನಿ ಡೀಲು ಕುದುರಿಸಲು ಅನುವಾಗುವಂತೆ ಟೆಂಡರ್‌ ನಿಯಮ ಬದಲಿಸಲು 5 ದಶಲಕ್ಷ ಯುರೊಗಳ ಲಂಚದ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಸಿಬಿಐ 2014ರಲ್ಲಿ ಸೈನಿ ಅವರ ವಿರುದ್ಧ ಪ್ರಕರಣ ದಾಖಲಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ