ಗುಜರಾತ್: ಚಿನ್ನದ ಬಿಸ್ಕಿಟ್ ಖರೀದಿಸಿ ಐದು ಕೋಟಿ ರೂಪಾಯಿ ಬೃಹತ್ ಮೊತ್ತ ಬಾಕಿ ಉಳಿಸಿಕೊಂಡು ವ್ಯಾಪಾರಿಯನ್ನು ಸತಾಯಿಸುತ್ತಿದ್ದ ಆರೋಪದ ಮೇಲೆ ಗುಜರಾತಿನ ಸಾಧ್ವಿಯೊಬ್ಬರನ್ನು ಬಂಧಿಸಲಾಗಿದೆ.
ದಕ್ಷಿಣ ಗುಜರಾತಿನ ಬನಸ್ಕಾಂತ ಜಿಲ್ಲೆಯ ಪ್ರತಿಷ್ಠಿತ ದೇಗುಲದ ಒಡೆತನ ಹೊಂದಿರುವ ಟ್ರಸ್ಟಿನ ಮುಖ್ಯಸ್ಥೆಯೂ ಆಗಿರುವ ಸಾಧ್ವಿ ಜೈ ಶ್ರೀ ಗಿರಿ ಬಂಧಿತ ಆರೋಪಿ.
ಧರ್ಮ ಪ್ರಚಾರಕಿಯಾಗಿಯೂ ರಾಜ್ಯದಲ್ಲಿ ಪರಿಚಿತಗೊಂಡಿದ್ದ ಇವರು ಚಿನ್ನದ ಬಗ್ಗೆ ವಿಚಿತ್ರ ವ್ಯಾಮೋಹ ಬೆಳೆಸಿಕೊಂಡಿದ್ದರು. ''ಬಾಕಿ ಮೊತ್ತ ಪಾವತಿಸುವಂತೆ ಅನೇಕ ಬಾರಿ ಕೇಳಿದರೂ ಉದಾಸೀನ ತೋರುತ್ತ ಬಂದಿದ್ದಾರೆ. ಇದರಿಂದ ತಮ್ಮ ವಹಿವಾಟಿಗೂ ಅಡಚಣೆಯಾಗಿದೆ,'' ಎಂದು ಸ್ಥಳೀಯ ಚಿನ್ನದ ವ್ಯಾಪಾರಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು.
ದೂರು ಆಧರಿಸಿ 45ರ ಪ್ರಾಯದ ಸಾಧ್ವಿಯ ನಿವಾಸದ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿದಾಗ ಅಪಾರ ಸಂಪತ್ತು ಪತ್ತೆಯಾಗಿದೆ. 80 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ 24 ಚಿನ್ನದ ಗಟ್ಟಿಗಳು ಮತ್ತು 2000 ಮುಖಬೆಲೆಯ 1.2 ಕೋಟಿ ರೂಪಾಯಿ ನಗದು ಸಾಧ್ವಿ ನಿವಾಸದಲ್ಲಿತ್ತು. ಅಷ್ಟು ಮಾತ್ರವಲ್ಲದೆ ಮದ್ಯದ ಬಾಟಲುಗಳು ಕೂಡ ಪತ್ತೆಯಾಗಿವೆ. ಗುಜರಾತಿನಲ್ಲಿ ಪಾನ ನಿಷೇಧ ಜಾರಿ ಇದ್ದರೂ ಈ ಸಾಧ್ವಿಯ ನಿವಾಸದಲ್ಲಿ ಲಿಕ್ಕರ್ ಬಾಟಲ್ಗಳು ಪತ್ತೆಯಾಗಿರುವುದು ಅನೇಕರನ್ನು ಹುಬ್ಬೇರಿಸುವಂತೆ ಮಾಡಿದೆ.
''ಒಟ್ಟು ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆ ಪೈಕಿ ಇದುವರೆಗೆ ಮುಖ್ಯ ಆರೋಪಿ ಎನಿಸಿರುವ ಸಾಧ್ವಿ ಗಿರಿಯವರನ್ನು ಮಾತ್ರ ಬಂಧಿಸಲಾಗಿದೆ,'' ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಾಧ್ವಿಮಣಿ ಸಲ್ಲದ ಕಾರಣಕ್ಕೆ ಸುದ್ದಿ ಮಾಡುತ್ತಿರುವುದು ಇದೇ ಮೊದಲೇನು ಅಲ್ಲ. ಡಿಸೆಂಬರ್ ತಿಂಗಳಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಗಾಯಕರೊಬ್ಬರ ಮೇಲೆ 2000 ಮುಖಬೆಲೆಯ ಒಂದು ಕೋಟಿ ರೂ. ನೋಟು ಎಸೆದು ವಿವಾದಕ್ಕೆ ಕಾರಣರಾಗಿದ್ದರು. ಈ ಸನ್ನಿವೇಶವನ್ನು ಚಿತ್ರೀಕರಿಸಲಾಗಿತ್ತು ಕೂಡ. ಗರಿಷ್ಠ ಮುಖಬೆಲೆಯ ನೋಟು ನಿಷೇಧಗೊಂಡು ನಗದು ಕೊರತೆಯಿಂದ ಜನ ಪರದಾಡುತ್ತಿದ್ದಾಗಲೇ ಈ ನೋಟು ತೂರಾಟ ನಡೆದಿತ್ತು.