ಆ್ಯಪ್ನಗರ

ಜಾಮೀನು ವಿಳಂಬ, ಇನ್ನೂ ಒಂದು ರಾತ್ರಿ ಜೈಲಲ್ಲೇ ಸಲ್ಲು

ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಜಾಮೀನು ಸಿಗುವುದು ವಿಳಂಬವಾಗಿರುವ ಹಿನ್ನೆಲೆಯಲ್ಲಿ ಇನ್ನೂ ಒಂದು ರಾತ್ರಿ ಅವರು ಜೈಲಿನಲ್ಲೇ ಕಳೆಯಲಿದ್ದಾರೆ. ಜೋಧ್‌ಪುರ ಸೆಷನ್ಸ್ ನ್ಯಾಯಾಲಯ ಜಾಮೀನು ಅರ್ಜಿಯನ್ನು ಶನಿವಾರಕ್ಕೆ ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆಗಳಿವೆ.

TNN 6 Apr 2018, 11:53 am
ಹೊಸದಿಲ್ಲಿ: ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಜಾಮೀನು ಸಿಗುವುದು ವಿಳಂಬವಾಗಿರುವ ಹಿನ್ನೆಲೆಯಲ್ಲಿ ಇನ್ನೂ ಒಂದು ರಾತ್ರಿ ಅವರು ಜೈಲಿನಲ್ಲೇ ಕಳೆಯಲಿದ್ದಾರೆ. ಜೋಧ್‌ಪುರ ಸೆಷನ್ಸ್ ನ್ಯಾಯಾಲಯ ಜಾಮೀನು ಅರ್ಜಿಯನ್ನು ಶನಿವಾರಕ್ಕೆ ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆಗಳಿವೆ.
Vijaya Karnataka Web salman-khan1


1998ರಲ್ಲಿ ನಡೆದ ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್‍ ದೋಷಿ ಎಂದು ತೀರ್ಪು ನೀಡಿದರುವ ಜೋಧ್‌ಪುರ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಶಿಕ್ಷೆ ಜಾರಿಯಾಗಿರುವ ಕಾರಣ ಗುರುವಾರ ರಾತ್ರಿ ಸಲ್ಮಾನ್ ಖಾನ್ ಒಂದು ರಾತ್ರಿಯನ್ನು ಜೈಲಿನಲ್ಲೇ ಕಳೆದಿದ್ದಾರೆ.

ಸಲ್ಲುಗೆ ಶಿಕ್ಷೆ ಜಾರಿಯಾಗುತ್ತಿದ್ದಂತೆ ಅವರ ಪರ ವಕೀಲರಾದ ಎಚ್ ಎಂ ಸರಸ್ವತ್ ಕೂಡಲೆ ಸೆಷನ್ಸ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದರು. ಆದರೆ ಅವರ ಜಾಮೀನು ಅರ್ಜಿ ವಿಚಾರಣೆಯ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನೂ ಒಂದು ರಾತ್ರಿ ಅವರು ಜೈಲಿನಲ್ಲೇ ಕಳೆಯಬೇಕಾಗಿದೆ.

'ಆರೋಪಿಯು ಒಬ್ಬ ಜನಪ್ರಿಯ ನಟನಾಗಿದ್ದು ಅವರನ್ನು ಜನ ಫಾಲೋ ಮಾಡುತ್ತಾರೆ. ಮಿಗಿಲಾಗಿ ಅವರು ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದ್ದಾರೆ' ಎಂದು ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ದೇವ್ ಕುಮಾರ್ ಖತ್ರಿ ತಮ್ಮ ಲಿಖಿತ ತೀರ್ಪಿನಲ್ಲಿ ತಿಳಿಸಿದ್ದಾರೆ.

ಇದು ನಾಲ್ಕನೇ ಪ್ರಕರಣ
ಕೃಷ್ಣಮೃಗ ಬೇಟೆಗೆ ಸಂಬಂಧಿಸಿ 4 ಪ್ರಕರಣಗಳು ದಾಖಲಾಗಿದ್ದು 3 ಪ್ರಕರಣಗಳಲ್ಲಿ ಸಲ್ಮಾನ್‌ ಖಾನ್‌ ಶಿಕ್ಷೆಯಾಗಿತ್ತು. ಆದರೆ, ಮೇಲ್ಮನವಿ ಮಾಡಿದಾಗ ಎಲ್ಲ ಪ್ರಕರಣಗಳಲ್ಲಿ ಬಿಡುಗಡೆ ದೊರೆತಿತ್ತು. ಚಿಂಕಾರಗಳು ಸತ್ತಿದ್ದು ಸಲ್ಮಾನ್‌ ಖಾನ್‌ನ ಲೈಸನ್ಸ್‌ಡ್‌ ರಿವಾಲ್ವರ್‌ನಿಂದ ಹಾರಿದ ಗುಂಡಿನಿಂದ ಅಲ್ಲ ಎಂಬ ವಾದ ಅಂದು ಗೆದ್ದಿತ್ತು. ಜತೆಗೆ ಪ್ರಮುಖ ಸಾಕ್ಷಿಯಾಗಿರುವ ವಾಹನದ ಚಾಲಕ ದುಲಾನಿ ಈ ಮಧ್ಯೆ ನಿಗೂಢವಾಗಿ ನಾಪತ್ತೆಯಾಗಿದ್ದು ಪ್ರಕರಣ ದುರ್ಬಲಗೊಳ್ಳಲು ಕಾರಣವಾಗಿತ್ತು.

ಬಾಲಿವುಡ್‌ನ ಯಶಸ್ವಿ ನಾಯಕರಲ್ಲಿ ಪ್ರಮುಖ ಸ್ಥಾನ ಹೊಂದಿರುವ ಸಲ್ಮಾನ್‌ ಖಾನ್‌ ಅವರು ಪ್ರಮುಖ ಆರೋಪಿಯಾಗಿರುವ 1998ರ ಮೃಗ ಬೇಟೆ ಪ್ರಕರಣದ ನಾಲ್ಕನೇ ಮತ್ತು ಕೊನೆಯ ಕೇಸು ಇದಾಗಿದ್ದು, ಮಾರ್ಚ್‌ 28ರಂದು ಅಂತಿಮ ವಿಚಾರಣೆ ಅಂತ್ಯಗೊಂಡು ಗುರುವಾರಕ್ಕೆ ತೀರ್ಪು ನಿಗದಿಯಾಗಿತ್ತು.
ಹೀಗಾಗಿ ಜೋಧ್‌ಪುರ ನ್ಯಾಯಾಲಯದ ಸುತ್ತ ಭಾರಿ ಸಂಖ್ಯೆಯಲ್ಲಿ ಜನ ನೆರೆದಿದ್ದರು. ಸಲ್ಮಾನ್‌ ಖಾನ್‌ಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸುತ್ತಿದ್ದ ಸ್ಥಳೀಯ ಬಿಷ್ಣೋಯಿ ಜನಾಂಗದ ನೂರಾರು ಮಂದಿ ಅಲ್ಲಿ ಸೇರಿದ್ದರು. ಶಿಕ್ಷೆ ಘೋಷಣೆಯಾಗುತ್ತಿದ್ದಂತೆಯೇ ಅವರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಏನಿದು ಮೃಗ ಬೇಟೆ ಪ್ರಕರಣ?
ಹಮ್‌ ಹೈ ಸಾಥ್‌ ಸಾಥ್‌ ಚಿತ್ರದ ಚಿತ್ರೀಕರಣಕ್ಕೆಂದು ರಾಜಸ್ಥಾನದ ಕಂಕಣಿಗೆ ಹೋಗಿದ್ದಾಗ ನಡೆದ ವಿದ್ಯಮಾನವಿದು.1998ರ ಸೆಪ್ಟೆಂಬರ್‌ 26-27ರಂದು ರಾತ್ರಿ ಸಲ್ಮಾನ್‌ ಖಾನ್‌ ಮತ್ತು ತಂಡ ಭವಾಡ್‌ ಗ್ರಾಮಕ್ಕೆ ಹೋಗಿದ್ದಾಗ ಎರಡು ಚಿಂಕಾರ(ಜಿಂಕೆ), 28-29ರ ರಾತ್ರಿ ಮತಾನಿಯಾ ಪ್ರದೇಶದಲ್ಲಿ ಒಂದು ಚಿಂಕಾರವನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಅಕ್ಟೋಬರ್‌ 1ರಂದು ವಾಹನದಲ್ಲಿ ಸಾಗುತ್ತಿದ್ದಾಗ ಕಂಡ ಎರಡು ಕೃಷ್ಣ ಮೃಗಗಳನ್ನು ಸಲ್ಮಾನ್‌ ಗುಂಡು ಹಾರಿಸಿ ಕೊಂದರು ಎನ್ನುವುದು ಆರೋಪ. ಅಂದು ಸಲ್ಮಾನ್‌ ಖಾನ್‌ ಜತೆ ಸೈಫ್‌ ಆಲಿ ಖಾನ್‌, ನೀಲಂ, ಟಬು, ಸೋನಾಲಿ ಬೇಂದ್ರೆ, ಸ್ಥಳೀಯ ದುಷ್ಯಂತ್‌ ಮತ್ತು ವಾಹನ ಚಾಲಕ ದುಲಾನಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ