ಆ್ಯಪ್ನಗರ

ನ್ಯಾಯಮೂರ್ತಿಗಳ ಭೇಟಿ ವರದಿ ತಳ್ಳಿಹಾಕಿದ ಸುಪ್ರೀಂ ಕೋರ್ಟ್‌

''ಸಿಜೆಐ ಪ್ರಕರಣವನ್ನು ಪರಿಶೀಲಿಸಲು ರಚಿಸಲಾಗಿರುವ ಆಂತರಿಕ ತನಿಖಾ ಸಮಿತಿಯು ಸುಪ್ರೀಂ ಕೋರ್ಟ್‌ನ ಇತರೆ ಯಾವ ನ್ಯಾಯಮೂರ್ತಿಗಳ ಸಲಹೆ-ಸೂಚನೆಗಳ ಅಗತ್ಯವಿಲ್ಲದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ,'' ಎಂದೂ ಸುಪ್ರೀಂ ಕೋರ್ಟ್‌ನ ಸೆಕ್ರೆಟರಿ ಜನರಲ್‌ ಸ್ಪಷ್ಟಪಡಿಸಿದ್ದಾರೆ.

Vijaya Karnataka 6 May 2019, 5:00 am
ಹೊಸದಿಲ್ಲಿ: ಸಿಜೆಐ ರಂಜನ್‌ ಗೊಗೊಯ್‌ ಅವರ ವಿರುದ್ಧ ಕೇಳಿಬಂದಿರುವ ಲೈಂಗಿಕ ಹಗರಣ ಆರೋಪದ ಕುರಿತು ಆಂತರಿಕ ತನಿಖೆ ನಡೆಸುತ್ತಿರುವ ಸಮಿತಿಯ ಮುಖ್ಯಸ್ಥರಾದ ನ್ಯಾಯಮೂರ್ತಿ ಎಸ್‌.ಎ. ಬೊಬ್ಡೆ ಅವರನ್ನು ಸುಪ್ರೀಂ ಕೋರ್ಟ್‌ನ ಮತ್ತಿಬ್ಬರು ನ್ಯಾಯಮೂರ್ತಿಗಳು ಭೇಟಿಯಾಗಿದ್ದಾರೆ ಎಂಬ ವರದಿಯನ್ನು ಸುಪ್ರೀಂ ಕೋರ್ಟ್‌ ತಳ್ಳಿಹಾಕಿದೆ.
Vijaya Karnataka Web supreme


'' ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌ ಹಾಗೂ ಆರ್‌.ಎಫ್‌. ನಾರಿಮನ್‌ ಅವರು ಶುಕ್ರವಾರ ಸಂಜೆ ನ್ಯಾ. ಬೊಬ್ಡೆ ಅವರನ್ನು ಭೇಟಿಯಾಗಿದ್ದಾರೆ. ದೂರು ನೀಡಿರುವ ಮಹಿಳೆಯು ಸಮಿತಿ ಮುಂದೆ ವಿಚಾರಣೆಗೆ ಹಾಜರಾಗಲು ನಿರಾಕರಿಸಿರುವುದರಿಂದ ಅಕೆಯ ಅನುಪಸ್ಥಿತಿಯಲ್ಲಿ ವಿಚಾರಣೆ ಮುಂದುವರಿಸಬಾರದು ಎಂಬುದಾಗಿ ಇಬ್ಬರೂ ಸಲಹೆ ನೀಡಿದ್ದಾರೆ ಎಂದು ಭಾನುವಾರ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಪ್ರಮುಖ ಮಾಧ್ಯಮಗಳು ಇಂತಹ ಸುಳ್ಳು ವರದಿ ಮಾಡಿರುವುದು ದುರದೃಷ್ಟಕರ,'' ಎಂದು ಸುಪ್ರೀಂ ಕೋರ್ಟ್‌ನ ಸೆಕ್ರೆಟರಿ ಜನರಲ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

''ಸಿಜೆಐ ಪ್ರಕರಣವನ್ನು ಪರಿಶೀಲಿಸಲು ರಚಿಸಲಾಗಿರುವ ಆಂತರಿಕ ತನಿಖಾ ಸಮಿತಿಯು ಸುಪ್ರೀಂ ಕೋರ್ಟ್‌ನ ಇತರೆ ಯಾವ ನ್ಯಾಯಮೂರ್ತಿಗಳ ಸಲಹೆ-ಸೂಚನೆಗಳ ಅಗತ್ಯವಿಲ್ಲದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ,'' ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಸಿಜೆಐ ವಿರುದ್ಧ ಆರೋಪ ಹೊರಿಸಿರುವ ಮಾಜಿ ಸುಪ್ರೀಂ ಕೋರ್ಟ್‌ ಮಾಜಿ ಉದ್ಯೋಗಿ ವಿಚಾರಣೆ ಎದುರಿಸಲು ಹಿಂದೆ ಸರಿದಿದ್ದರು. ಗೌಪ್ಯ ವಿಚಾರಣೆ ಹೆಸರಲ್ಲಿ ವಕೀಲರಿಗೂ ಒಳಗೆ ಬರಲು ಅವಕಾಶ ನೀಡದೆ, ಒಂಟಿಯಾಗಿ ವಿಚಾರಣೆಗೆ ಒಳಪಡಿಸುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ವಿಚಾರಣೆಗೆ ಗೈರಾದರೆ, ಏಕಪಕ್ಷೀಯವಾಗಿ ವಿಚಾರಣೆ ಮುಂದುವರಿಸುವ ಸಾಧ್ಯತೆ ಹಾಗೂ ಪರಿಣಾಮಗಳ ಬಗ್ಗೆ ಎಚ್ಚರಿಸಿದ್ದರೂ ಮಹಿಳೆ ಹಾಜರಾಗಲು ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಏ.23ರಂದು ಸಮಿತಿ ರಚನೆಯಾದ ಬಳಿಕ ಇದುವರೆಗೂ ಮೂರು ದಿನ ಮಾತ್ರ ಮಹಿಳೆ ವಿಚಾರಣೆಗೆ ಹಾಜರಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ