ಆ್ಯಪ್ನಗರ

ಚಿದುಗೆ ಸಿಹಿ-ಕಹಿ ಶುಕ್ರವಾರ

ನ್ಯಾಯಮೂರ್ತಿಗಳಾದ ಆರ್‌. ಭಾನುಮತಿ ಮತ್ತು ಎ.ಎಸ್‌. ಬೋಪಣ್ಣ ಅವರನ್ನೊಳಗೊಂಡ ಪೀಠವು ಎರಡೂ ಸಿಬಿಐ ಮತ್ತು ಇ.ಡಿ ಪ್ರಕರಣಗಳೆರಡರ ವಿಚಾರಣೆಯನ್ನು ಸೋಮವಾರ ಕೈಗೆತ್ತಿಕೊಳ್ಳಲಿದೆ.

PTI 24 Aug 2019, 5:00 am
ಹೊಸದಿಲ್ಲಿ: ಐಎನ್‌ಎಕ್ಸ್‌ ಮೀಡಿಯಾ ಹಗರಣಕ್ಕೆ ಸಂಬಂಧಿಸಿ ಸೋಮವಾರದವರೆಗೆ (ಆಗಸ್ಟ್‌ 26) ಜಾರಿ ನಿರ್ದೇಶನಾಲಯವು ಕಾಂಗ್ರೆಸ್‌ನ ಹಿರಿಯ ನಾಯಕ ಪಿ. ಚಿದಂಬರಂ ಅವರನ್ನು ಬಂಧಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ಶುಕ್ರವಾರ ಹೇಳಿದೆ. ಆದರೆ, ಈಗಾಗಲೇ ಇದೇ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಅವರನ್ನು ಬಂಧಿಸಿರುವ ವಿಷಯದಲ್ಲಿ ಮಧ್ಯಪ್ರವೇಶ ಮಾಡದಿರಲು ನಿರ್ಧರಿಸಿದೆ. ಹೀಗಾಗಿ, ಸಿಬಿಐ ವಿಶೇಷ ನ್ಯಾಯಾಲಯದ ಸೂಚನೆಯಂತೆ ಆಗಸ್ಟ್‌ 26ರವರೆಗೆ ಸಿಬಿಐ ಕಸ್ಟಡಿ ಸೇರಿರುವ ಚಿದಂಬರಂಗೆ ಶುಕ್ರವಾರ ಸಿಹಿ-ಕಹಿ ಅನುಭವಗಳೆರಡೂ ಆದವು!
Vijaya Karnataka Web chidambaram

ನ್ಯಾಯಮೂರ್ತಿಗಳಾದ ಆರ್‌. ಭಾನುಮತಿ ಮತ್ತು ಎ.ಎಸ್‌. ಬೋಪಣ್ಣ ಅವರನ್ನೊಳಗೊಂಡ ಪೀಠವು ಎರಡೂ ಸಿಬಿಐ ಮತ್ತು ಇ.ಡಿ ಪ್ರಕರಣಗಳೆರಡರ ವಿಚಾರಣೆಯನ್ನು ಸೋಮವಾರ ಕೈಗೆತ್ತಿಕೊಳ್ಳಲಿದೆ.

3,500 ಕೋಟಿ ರೂ. ಐಎನ್‌ಎಕ್ಸ್‌ ಮೀಡಿಯಾ ಹಗರಣದಲ್ಲಿ ಸಿಬಿಐ ಈಗಾಗಲೇ ಚಿದಂಬರಂ ಅವರನ್ನು ಬಂಧಿಸಿರುವುದರಿಂದ, ಇ.ಡಿ. ಬಂಧನ ಸಾಧ್ಯತೆ ವಿರುದ್ಧ ಕೋರಿರುವ ನಿರೀಕ್ಷಣಾ ಜಾಮೀನಿಗೆ ಅರ್ಥವಿಲ್ಲ ಎಂದು ಜಾರಿ ನಿರ್ದೇಶನಾಲಯ ಪರ ವಕೀಲರು ವಾದಿಸಿದರು. ಆದರೆ, ಇದನ್ನು ಪ್ರತ್ಯೇಕವಾಗಿ ಪರಿಗಣಿಸಿದ ಕೋರ್ಟ್‌ ಮೂರು ದಿನಗಳ ಕಾಲ ರಕ್ಷಣೆ ನೀಡಿದೆ.

''ಐಎನ್‌ಎಕ್ಸ್‌ ಮೀಡಿಯಾ ಹಗರಣದಲ್ಲಿ ಇ.ಡಿ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಸಹ ಆರೋಪಿಗಳಿಗೆ ಜಾಮೀನು ನೀಡಲಾಗಿರುವುದರಿಂದ ಮುಂದಿನ ವಿಚಾರಣೆ ವರೆಗೆ ಚಿದಂಬರಂ ಅವರನ್ನು ಬಂಧಿಸಬಾರದು ಎಂಬ ಅಭಿಪ್ರಾಯ ತಮ್ಮದು,'' ಎಂದು ಕೋರ್ಟ್‌ ಹೇಳಿತು. ಇ.ಡಿ. ಸೋಮವಾರ ತನ್ನ ವಾದವನ್ನು ಮಂಡಿಸಬಹುದು ಎಂದು ಸ್ಪಷ್ಟಪಡಿಸಿತು.

ವಕೀಲರ ವಾಗ್ವಾದ: ಇ.ಡಿ ಪರ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಮತ್ತು ಚಿದಂಬರಂ ಪರ ಕಪಿಲ್‌ ಸಿಬಲ್‌ ಹಾಗೂ ಎ.ಎಂ. ಸಿಂಘ್ವಿ ನಡುವೆ ಕೋರ್ಟ್‌ನಲ್ಲಿ ಬಿಸಿ ಬಿಸಿ ವಾಗ್ಯುದ್ಧ ನಡೆಯಿತು.

=========
ಏನಿದು ಸಿಬಿಐ, ಇ.ಡಿ ಪ್ರತ್ಯೇಕ ಕೇಸು?


ಚಿದಂಬರಂ ಅವರು ಹಣಕಾಸು ಸಚಿವರಾಗಿದ್ದಾಗ 2007ರಲ್ಲಿ ಐಎನ್‌ಎಕ್ಸ್‌ ಮೀಡಿಯಾ ಗ್ರೂಪ್‌ಗೆ 305 ಕೋಟಿ ರೂ. ವಿದೇಶಿ ನಿಧಿ ಸ್ವೀಕರಿಸಲು ಅವಕಾಶ ನೀಡಲಾಗಿತ್ತು. ಹೀಗೆ ಹಣ ಪಡೆಯುವಲ್ಲಿ ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿ ಅನುಮತಿ ನೀಡುವಲ್ಲಿ ಅಕ್ರಮ ನಡೆದಿದೆ. ಚಿದಂಬರಂ ಅವರಿಗೆ ಪುತ್ರನ ಮೂಲಕ ಲಂಚ ಪಾವತಿಸಲಾಗಿದೆ ಎಂಬ ಬಗ್ಗೆ ಸಿಬಿಐ 2017ರ ಮೇ 15ರಂದು ಎಫ್‌ಐಆರ್‌ ದಾಖಲಿಸಿತ್ತು. ಈ ಪ್ರಕರಣದಲ್ಲಿ ನಡೆದಿದೆ ಎನ್ನಲಾದ ಹಣ ಲೇವಾದೇವಿ ಭಾಗವನ್ನು 2018ರಲ್ಲಿ ಇ.ಡಿ. ಕೈಗೆತ್ತಿಕೊಂಡಿತ್ತು.

=========
ಏರ್‌ಸೆಲ್‌ ಕೇಸಿನಲ್ಲಿ ಸೆ.3ರವರೆಗೆ ರಕ್ಷಣೆ


ಹೊಸದಿಲ್ಲಿ: ಏರ್‌ ಸೆಲ್‌-ಮ್ಯಾಕ್ಸಿಸ್‌ ಹಗರಣದಲ್ಲಿ ಚಿದಂಬರಂ ಮತ್ತು ಪುತ್ರ ಕಾರ್ತಿ ಅವರಿಗೆ ನೀಡಲಾಗಿದ್ದ ಮಧ್ಯಂತರ ರಕ್ಷಣೆಯನ್ನು ದಿಲ್ಲಿಯ ನ್ಯಾಯಾಲಯ ಸೆಪ್ಟೆಂಬರ್‌ 3ರವರೆಗೆ ವಿಸ್ತರಿಸಿದೆ. ಸಿಬಿಐ ಮತ್ತು ಇ.ಡಿ. ಬಂಧನ ಪ್ರಯತ್ನ ವಿರುದ್ಧ ಇಬ್ಬರೂ ನಾಯಕರು ನಿರೀಕ್ಷಣಾ ಜಾಮೀನು ಕೋರಿದ್ದರು. ಇದರ ತೀರ್ಪನ್ನು ಸೆ.3ಕ್ಕೆ ಮುಂದೂಡಲಾಗಿದೆ. ಐಎನ್‌ಎಕ್ಸ್‌ ಮೀಡಿಯಾ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿರುವುದರಿಂದ ವಿಚಾರಣೆ ಮುಂದೂಡಬೇಕೆಂಬ ತನಿಖಾ ಏಜೆನ್ಸಿಗಳ ಪರ ವಕೀಲರ ಮನವಿಗೆ ಕೋರ್ಟ್‌ ಒಪ್ಪಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ