ಆ್ಯಪ್ನಗರ

ಮೇಕೆದಾಟು: ಅನುಮತಿ ತಡೆಗೆ ಸುಪ್ರೀಂ ನಿರಾಕರಣೆ

ಮೇಕೆದಾಟು ಯೋಜನೆ ಸಂಬಂಧಿಸಿದ ಮೊದಲ ಕಾನೂನು ಹೋರಾಟದಲ್ಲಿ ರಾಜ್ಯಕ್ಕೆ ಜಯ ಸಿಕ್ಕಿದೆ. ಅಣೆಕಟ್ಟು ನಿರ್ಮಿಸಲು ಕರ್ನಾಟಕಕ್ಕೆ ನೀಡಿದ ಅನುಮತಿಯನ್ನು ತಡೆ ಹಿಡಿಯಬೇಕೆಂಬ ತ.ನಾಡು ಬೇಡಿಕೆಗೆ ಸುಪ್ರೀಂಕೋರ್ಟ್‌ ನೋ ಎಂದಿದೆ

Vijaya Karnataka 13 Dec 2018, 5:00 am
ಹೊಸದಿಲ್ಲಿ: ಮೇಕೆದಾಟು ಯೋಜನೆಗೆ ಕೇಂದ್ರ ಸರಕಾರ ನೀಡಿರುವ ಅನುಮತಿಯನ್ನು ತಡೆ ಹಿಡಿಯಲು ಸುಪ್ರೀಂಕೋರ್ಟ್‌ ಬುಧವಾರ ನಿರಾಕರಿಸಿದೆ. ಇದರಿಂದ ತಮಿಳುನಾಡಿಗೆ ಮುಖಭಂಗವಾಗಿದ್ದು, ರಾಜ್ಯಕ್ಕೆ ನೈತಿಕ ಜಯವಾಗಿದೆ.
Vijaya Karnataka Web BNG-1212-2-2-MEKEDATU_IN_SUMMER

ವಿಸ್ತೃತ ಯೋಜನಾ ವರದಿ (ಡಿಪಿಆರ್‌) ತಯಾರಿಗೆ ಜಲ ಆಯೋಗವು ಕರ್ನಾಟಕಕ್ಕೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ತಮಿಳುನಾಡು ಮತ್ತು ಪುದುಚೆರಿಗಳು ಒಟ್ಟು ನಾಲ್ಕು ಅರ್ಜಿಗಳನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದವು. ವಿಚಾರಣೆ ನಡೆಸಿದ ಕೋರ್ಟ್‌ ತಡೆಯಾಜ್ಞೆ ನೀಡಲು ನಿರಾಕರಿಸಿತು. ಜತೆಗೆ ನಾಲ್ಕು ವಾರಗಳ ಒಳಗೆ ಪ್ರತಿಕ್ರಿಯೆಯನ್ನು ದಾಖಲಿಸುವಂತೆ ಕೇಂದ್ರ ಜಲ ಆಯೋಗಕ್ಕೆ ಸೂಚಿಸಿತು.
ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟುವ ನಿಟ್ಟಿನಲ್ಲಿ ಪ್ರಾಥಮಿಕ ಅನುಮತಿ ನೀಡಿದ್ದಕ್ಕೆ ಮಧ್ಯಂತರ ತಡೆಯಾಜ್ಞೆ ಕೋರಿ ತಮಿಳುನಾಡು ಸರಕಾರ ಆರಂಭದಲ್ಲಿ ಅರ್ಜಿ ಸಲ್ಲಿಸಿತ್ತು. ಬಳಿಕ ಅದು ಕೇಂದ್ರ ಜಲ ಆಯೋಗ, ಕರ್ನಾಟಕದ ಜಲ ಸಂಪನ್ಮೂಲ ಸಚಿವರು, ಕೆಲವು ಅಧಿಕಾರಿಗಳ ಮೇಲೆ ನ್ಯಾಯಾಂಗ ನಿಂದನೆ ದಾವೆ ಸಲ್ಲಿಸಿತ್ತು. ಸುಪ್ರೀಂಕೋರ್ಟ್‌ ಆದೇಶ ಉಲ್ಲಂಘಿಸಿ ಅನುಮತಿ ಪಡೆಯಲಾಗಿದೆ ಎನ್ನುವುದು ಅದರ ಆಕ್ಷೇಪವಾಗಿತ್ತು.
ತಮಿಳುನಾಡು ತನ್ನ ಮೂರನೇ ದಾವೆಯಲ್ಲಿ ಕೇಂದ್ರ ಜಲ ಆಯೋಗದ ಅಧ್ಯಕ್ಷರಾಗಿರುವ ಮಸೂದ್‌ ಹುಸೇನ್‌ ಅವರು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಕೆಲಸ ಮಾಡುತ್ತಿರುವುದನ್ನು ಪ್ರಶ್ನಿಸಿತ್ತು. ಜತೆಗೆ ಪ್ರಾಧಿಕಾರಕ್ಕೆ ಪೂರ್ಣಾವಧಿ ಅಧ್ಯಕ್ಷರ ನೇಮಕ್ಕೆ ಒತ್ತಾಯಿಸಿತ್ತು.
''ಕಾವೇರಿ ಜಲ ವಿವಾದ ಈಗಾಗಲೇ ಪರಿಹಾರವಾಗಿರುವಾಗ ಮಧ್ಯಂತರ ಅರ್ಜಿ ಸಲ್ಲಿಸಿದ್ದೇಕೆ,'' ಎಂದು ಸುಪ್ರೀಂಕೋರ್ಟ್‌ ತಮಿಳುನಾಡಿನ ವಕೀಲರನ್ನು ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ವಕೀಲರು, ಇದು ಕಾವೇರಿ ವಿವಾದಕ್ಕೆ ಸಂಬಂಧಿಸಿದ ವಿಷಯ ಎಂದರು.
ಇದೇ ವಿಷಯದಲ್ಲಿ ಎಐಎಡಿಎಂಕೆ ಸಂಸದರು ಬುಧವಾರ ಸಂಸತ್ತಿನ ಉಭಯ ಸದನಗಳಲ್ಲಿ ಗದ್ದಲವೆಬ್ಬಿಸಿದರು ಮತ್ತು ಕರ್ನಾಟಕಕ್ಕೆ ನೀಡಿರುವ ಅನುಮತಿ ರದ್ದತಿಗೆ ಒತ್ತಾಯಿಸಿದರು.
ಚರ್ಚಿಸಿ ಮುಂದಿನ ಹೆಜ್ಜೆ: ಈ ನಡುವೆ, ಕಾನೂನು ತಜ್ಞರ ಜತೆ ಚರ್ಚೆ ನಡೆಸಿ ಮೇಕೆದಾಟು ವಿಷಯದಲ್ಲಿ ಮುಂದಿನ ಹೆಜ್ಜೆ ಇಡಲಾಗುವುದು ಎಂದು ತಮಿಳುನಾಡಿನ ಮೀನುಗಾರಿಕಾ ಸಚಿವ ಡಿ. ಜಯಕುಮಾರ್‌ ಹೇಳಿದ್ದಾರೆ.

ಅವಸರವೇಕೆ ಎಂದು ಪ್ರಶ್ನಿಸಿದ ಸುಪ್ರೀಂ
ಡಿಪಿಆರ್‌ ಸಿದ್ಧಪಡಿಸಲು ಅನುಮತಿ ನೀಡಿದಷ್ಟಕ್ಕೆ ತಕ್ಷಣವೇ ತಮಿಳುನಾಡಿನ ಮೇಲೆ ಯಾವ ಪರಿಣಾಮವೂ ಉಂಟಾಗುವುದಿಲ್ಲ. ಹಾಗಾಗಿ ಈಗಲೇ ತಡೆಯಾಜ್ಞೆ ನೀಡಲು ಆಗದು. ಡಿಪಿಆರ್‌ನ ಅಂಶಗಳನ್ನು ಗಮನಿಸಿ ಮುಂದಿನ ನಿರ್ಣಯ ತೆಗೆದುಕೊಳ್ಳಬಹುದು ಎಂದು ಸುಪ್ರೀಂಕೋರ್ಟ್‌ ತಮಿಳುನಾಡು ವಕೀಲರಿಗೆ ಹೇಳಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ