ಆ್ಯಪ್ನಗರ

ಗುಟ್ಟಾಗಿ ಮದುವೆಯಾಗಿ ಗುಂಡೇಟಿಗೆ ಬಲಿ!: ಅಕ್ರಮ ಸಂಬಂಧದ ಸುಳಿಯಲ್ಲಿ ಮುಳುಗಿದ ಟೆಕ್ಕಿ

ಹೆಣ್ಣು, ಹೊನ್ನು, ಮಣ್ಣು ಮಾಯೆ ಅಂತಾರೆ. ಹೆಣ್ಣಿನ ಮೋಹಕ್ಕೆ ಸಿಲುಕಿದ ನಡುವಯಸ್ಸಿನ ವ್ಯಕ್ತಿಯೊಬ್ಬ, ಆಕೆಯ ಪತಿಯನ್ನು ಹತ್ಯೆ ಮಾಡಿ ಇದೀಗ ಜೈಲಲ್ಲಿ ಮುದ್ದೆ ಮರಿಯುತ್ತಿದ್ದಾನೆ.

TIMESOFINDIA.COM 27 Aug 2019, 1:50 pm
ಲಖನೌ: ಹೆಣ್ಣಿಗಾಗಿ ನಡೆದ ಕಲಹ ಕೊಲೆಯಲ್ಲಿ ಅಂತ್ಯವಾದ ಘಟನೆ ಉತ್ತರಪ್ರದೇಶ ರಾಜಧಾನಿ ಲಖನೌನಲ್ಲಿ ನಡೆದಿದೆ. 30 ವರ್ಷದ ಸಾಫ್ಟ್ ವೇರ್ ಉದ್ಯೋಗಿ ಶಾರದ್ ನಿಗಮ್ ಗುಂಡಿಗೆ ಬಲಿಯಾದ ದುರ್ದೈವಿ. ಪ್ರಕರಣದ ಪ್ರಮುಖ ಆರೋಪಿಗಳಾದ ಗಾರ್ಮೆಂಟ್ ಮಳಿಗೆಯೊಂದರ ಮಾಲೀಕ 50 ವರ್ಷ ವಯಸ್ಸಿನ ಸುರೇಂದ್ರ ಜೈಸ್ವಾಲ್ ಹಾಗೂ ಆತನ ಸಹಚರ 19 ವರ್ಷ ವಯಸ್ಸಿನ ಸೂರಜ್ ಕುಮಾರ್ ಚೌಹಾಣ್ ಇದೀಗ ಖಾಕಿ ಬಲೆಗೆ ಬಿದ್ದಿದ್ದಾರೆ.
Vijaya Karnataka Web fire


ಘಟನೆ ಹಿನ್ನೆಲೆ : 2 ಮಕ್ಕಳ ತಂದೆಯಾಗಿರುವ ಸುರೇಂದ್ರ ಜೈಸ್ವಾಲ್ ಗೆ ತನ್ನ ಪಕ್ಕದ ಮನೆಯಲ್ಲಿದ್ದ 26 ವರ್ಷ ವಯಸ್ಸಿನ ಮಹಿಳೆಯೊಂದಿಗೆ ಅಕ್ರಮ ಸಂಬಂಧವಿತ್ತು. ಆಕೆಗೆ 12 ವರ್ಷ ವಯಸ್ಸಾಗಿದ್ದಾಗ ತಂದೆ ನಿಧನರಾಗಿದ್ದರು, ಅಂದಿನಿಂದಲೇ ಜೈಸ್ವಾಲ್ ಆಕೆಗೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಹಣಕಾಸಿನ ಮುಗ್ಗಟ್ಟಿನಿಂದಾಗಿ ಮಹಿಳೆ ಕೂಡಾ ತನಗಾಗುತ್ತಿದ್ದ ಲೈಂಗಿಕ ದೌರ್ಜನ್ಯವನ್ನು ಯಾರೊಂದಿಗೂ ಹೇಳಿಕೊಂಡಿರಲಿಲ್ಲ. ಆದ್ರೆ, ಕಳೆದ ಒಂದೂವರೆ ವರ್ಷಗಳ ಹಿಂದೆ ತನ್ನ ದೂರದ ಸಂಬಂಧಿ ಶಾರದಾ ನಿಗಮ್ ಜೊತೆ ಮಹಿಳೆ ಸ್ನೇಹ ಬೆಳೆಸಿದಳು. ಗುಟ್ಟಾಗಿ ಮದುವೆಯೂ ಆಯ್ತು. ಆದ್ರೆ, ಮಹಿಳೆ ಜೊತೆ ಅಕ್ರಮ ಸಂಬಂಧ ಕಡಿದುಕೊಳ್ಳಲು ಸುರೇಂದ್ರ ಜೈಸ್ವಾಲ್ ಸಿದ್ಧನಿರಲಿಲ್ಲ. ಹೀಗಾಗಿ, ಆಕೆಯನ್ನು ತನ್ನ ಬಳಿಯಲ್ಲೇ ಇಟ್ಟುಕೊಳ್ಳಲು ಗಾರ್ಮೆಂಟ್ ಮಳಿಗೆಯೊಂದನ್ನು ಆರಂಭಿಸಿ, ಮಾಲೀಕತ್ವವನ್ನು ಮಹಿಳೆಗೇ ಬಿಟ್ಟುಕೊಟ್ಟಿದ್ದ. ಗುಟ್ಟಾಗಿ ಮದುವೆಯಾಗಿರುವ ಶಾರದಾ ನಿಗಮ್ ಜೊತೆ ಸಂಬಂಧ ಕಡಿದುಕೊಳ್ಳುವಂತೆ ಒತ್ತಾಯಿಸುತ್ತಿದ್ದ. ಆದ್ರೆ, ಇದಕ್ಕೆ ಒಪ್ಪದ ಮಹಿಳೆ, ಜೈಸ್ವಾಲ್ ಜೊತೆಗಿನ ಅಕ್ರಮ ಸಂಬಂಧ ಹಾಗೂ ಆತ ನೀಡಿದ್ದ ಗಾರ್ಮೆಂಟ್ ಮಳಿಗೆಯನ್ನು 3 ತಿಂಗಳ ಹಿಂದೆ ಬಿಟ್ಟುಬಿಟ್ಟಳು.

ಈ ಎಲ್ಲಾ ಬೆಳವಣಿಗೆಗಳಿಂದ ಸಿಟ್ಟಾದ ಜೈಸ್ವಾಲ್, ತನ್ನ ಸಹಚರನ ಜೊತೆಗೂಡಿ ನಿಗಮ್ ನನ್ನು ಮುಗಿಸಲು ಸ್ಕೆಚ್ ಹಾಕಿದ. ನಿಗಮ್ ತನ್ನ ಕಚೇರಿಯಿಂದ ಮನೆಗೆ ಮರಳುತ್ತಿದ್ದ ವೇಳೆ ಮೋಟಾರ್ ಸೈಕಲ್ ನಲ್ಲಿ ಹಿಂಬಾಲಿಸಿ ಗುಂಡಿಟ್ಟು ಹತ್ಯೆಗೈದಿದ್ದ.

ಘಟನಾಸ್ಥಳದಲ್ಲಿ ಸಿಕ್ಕ ನಿಗಮ್ ಅವರ ಬ್ಯಾಗ್ ನಲ್ಲಿದ್ದ ಫೋಟೋ ಹಾಗೂ ಪೆನ್ ಡ್ರೈವ್ ನಲ್ಲಿ ಮಹಿಳೆ ಜೊತೆಗೆ ಸುರೇಂದ್ರ ಜೈಸ್ವಾಲ್ ಗೆ ಇದ್ದ ಅಕ್ರಮ ಸಂಬಂಧಕ್ಕೆ ಸಾಕ್ಷಿ ಸಿಕ್ಕವು. ವಿಚಾರಣೆ ವೇಳೆ ಮಹಿಳೆ ಕೂಡಾ ಜೈಸ್ವಾಲ್ ಜೊತೆಗಿದ್ದ ಅಕ್ರಮ ಸಂಬಂಧವನ್ನು ಒಪ್ಪಿಕೊಂಡಳು. ಪೊಲೀಸರು ಜೈಸ್ವಾಲ್ ನನ್ನು ಬಂಧಿಸಲು ಆತನ ಮನೆಗೆ ಹೋದ ವೇಳೆ ಸುಳಿವು ಅರಿತು ನೇಪಾಳಕ್ಕೆ ಪರಾರಿಯಾಗಿದ್ದ. ವಾಪಸ್ ಬಂದ ಕೂಡಲೇ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ