ಆ್ಯಪ್ನಗರ

ರಾಜಸ್ಥಾನದಲ್ಲಿ ಮಾಯಾ ಪಕ್ಷದ ಎಲ್ಲ ಆರು ಶಾಸಕರು ಕಾಂಗ್ರೆಸ್‌ ಸೇರ್ಪಡೆ: ಗೆಹ್ಲೋಟ್‌ ಸರಕಾರಕ್ಕೆ ಈಗ ನಿಚ್ಚಳ ಬಹುಮತ

ರಾಜಸ್ಥಾನದಲ್ಲಿನ ನಗರ ಪಾಲಿಕೆಗಳ ಚುನಾವಣೆ ಮತ್ತು ಎರಡು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗೆ ಮೊದಲು ಈ ಬೆಳವಣಿಗೆ ಘಟಿಸಿದೆ. 200 ಸದಸ್ಯ ಬಲದ ವಿಧಾನಸಭೆಯಲ್ಲಿಬಿಎಸ್ಪಿ ಬಾಹ್ಯ ಬೆಂಬಲದೊಂದಿಗೆ ಸರಕಾರ ರಚಿಸಿದ್ದ ಕಾಂಗ್ರೆಸ್‌ನ ಸದಸ್ಯ ಬಲ ಈಗ 106ಕ್ಕೆ ಏರಿದೆ.

Vijaya Karnataka 18 Sep 2019, 6:10 am
ಜೈಪುರ: ರಾಜಸ್ಥಾನದಲ್ಲಿಪಕ್ಷಾಂತರದ ಬಿರುಗಾಳಿ ಬೀಸಿದ್ದು ಬಹುಜನ ಸಮಾಜ ಪಕ್ಷ(ಬಿಎಸ್ಪಿ)ದ ಎಲ್ಲಆರು ಶಾಸಕರು ಕಾಂಗ್ರೆಸ್‌ಗೆ ಸಾಮೂಹಿಕ ಗುಳೆ ಹೋಗಿದ್ದಾರೆ. ಇದನ್ನು 'ಮಹಾದ್ರೋಹ' ಎಂದು ಕರೆದಿರುವ ಬಿಎಸ್ಪಿ ವರಿಷ್ಠ ನಾಯಕಿ ಮಾಯಾವತಿ ಅವರು, ''ಕಾಂಗ್ರೆಸ್‌ ಎಂದಿಗೂ ವಿಶ್ವಾಸಾರ್ಹ ಪಕ್ಷವಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ,'' ಎಂದು ಹೇಳಿದ್ದಾರೆ.
Vijaya Karnataka Web Mayavati 2


ರಾಜಸ್ಥಾನದಲ್ಲಿನ ನಗರ ಪಾಲಿಕೆಗಳ ಚುನಾವಣೆ ಮತ್ತು ಎರಡು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗೆ ಮೊದಲು ಈ ಬೆಳವಣಿಗೆ ಘಟಿಸಿದೆ. 200 ಸದಸ್ಯ ಬಲದ ವಿಧಾನಸಭೆಯಲ್ಲಿಬಿಎಸ್ಪಿ ಬಾಹ್ಯ ಬೆಂಬಲದೊಂದಿಗೆ ಸರಕಾರ ರಚಿಸಿದ್ದ ಕಾಂಗ್ರೆಸ್‌ನ ಸದಸ್ಯ ಬಲ ಈಗ 106ಕ್ಕೆ ಏರಿದೆ. ಶಾಸಕರಾದ ರಾಜೇಂದ್ರ ಸಿಂಗ್‌ ಗುದ್ದಾ, ಜೋಗೇಂದರ್‌ ಸಿಂಗ್‌ ಅವಾನಾ, ವಾಜಿಬ್‌ ಅಲಿ, ಲಖನ್‌ ಸಿಂಗ್‌ ಮೀನಾ, ಸಂದೀಪ್‌ ಯಾದವ್‌ ಮತ್ತು ದೀಪ್‌ಚಂದ್‌ ಸೋಮವಾರ ರಾತ್ರಿ ಸ್ಪೀಕರ್‌ ಸಿ.ಪಿ.ಜೋಷಿ ಅವರನ್ನು ಭೇಟಿಯಾಗಿ ಕಾಂಗ್ರೆಸ್‌ ಸೇರುವ ತಮ್ಮ ನಿರ್ಧಾರ ಕುರಿತ ಪತ್ರ ನೀಡಿದರು. ಮಂಗಳವಾರ ರಾಜ್ಯಪಾಲರಿಗೂ ತಮ್ಮ ನಿರ್ಧಾರವನ್ನು ಲಿಖಿತವಾಗಿ ತಿಳಿಸಿದರು. ಈ ಆರೂ ಶಾಸಕರು ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಜತೆ ನಿರಂತರ ಸಂಪರ್ಕದಲ್ಲಿದ್ದರು. ''ರಾಜ್ಯದ ಹಿತದೃಷ್ಟಿಯಿಂದ ನಾವು ಈ ಕ್ರಮ ಕೈಗೊಂಡಿದ್ದೇವೆ. ಮೊದಲು ಮುಖ್ಯಮಂತ್ರಿ ಗೆಹ್ಲೋಟ್‌ ಅವರನ್ನು ಭೇಟಿಯಾಗಿ ಚರ್ಚಿಸಿದ ಬಳಿಕ ರಾಜ್ಯಪಾಲರಿಗೆ ಪತ್ರ ನೀಡಲಾಯಿತು,'' ಎಂದು ಶಾಸಕ ಜೋಗೇಂದರ್‌ ಸಿಂಗ್‌ ತಿಳಿಸಿದ್ದಾರೆ.

ಮಾಯಾ ಕಿಡಿ: ಈ ಬೆಳವಣಿಗೆಯಿಂದ ಆಘಾತಕ್ಕೀಡಾದ ಬಿಎಸ್ಪಿ ವರಿಷ್ಠ ನಾಯಕಿ ಮಾಯಾವತಿ, ಕಾಂಗ್ರೆಸ್‌ ನಂಬಿಕೆದ್ರೋಹಿ ಪಕ್ಷ ಎಂದು ಸರಣಿ ಟ್ವೀಟ್‌ಗಳ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ''ಕಾಂಗ್ರೆಸ್‌ ಪಕ್ಷವು ರಾಜಸ್ಥಾನದಲ್ಲಿಮತ್ತೊಮ್ಮೆ ಬಿಎಸ್ಪಿಯ ಶಾಸಕರನ್ನು ಕಿತ್ತುಕೊಳ್ಳುವ ಮೂಲಕ ತಾನು ನಂಬಿಕೆಗೆ ಅರ್ಹವಲ್ಲದ ವಿಶ್ವಾಸದ್ರೋಹಿ ಪಕ್ಷ ಎನ್ನುವುದನ್ನು ಸಾಬೀತುಪಡಿಸಿದೆ,'' ಎಂದಿದ್ದಾರೆ. ''ಕಾಂಗ್ರೆಸ್‌ ತನ್ನ ಕಡು ಶತ್ರುಗಳ ವಿರುದ್ಧ ಹೋರಾಡುವುದನ್ನು ಬಿಟ್ಟು ತನಗೆ ಸಹಕರಿಸಿ ಜತೆ ನಿಂತವರ ಬೆನ್ನಿಗೆ ಚೂರಿ ಹಾಕುವುದನ್ನು ಪರಿಪಾಠ ಮಾಡಿಕೊಂಡಿದೆ. ಎಸ್ಸಿ, ಎಸ್ಟಿ ಮತ್ತು ಒಬಿಸಿ ವಿರೋಧಿಯಾದ ಈ ಪಕ್ಷ ಎಂದೂ ಪ್ರಾಮಾಣಿಕವಾಗಿ ವರ್ತಿಸಿಲ್ಲ. ಕಾಂಗ್ರೆಸ್‌ ಸದಾ ಡಾ.ಬಿ.ಆರ್‌.ಅಂಬೇಡ್ಕರ್‌ ಹಾಗೂ ಅವರ ಮಾನವೀಯ ವಿಚಾರಧಾರೆಯನ್ನು ವಿರೋಧಿಸುತ್ತ ಬಂದಿದೆ. ಇದರಿಂದಾಗಿಯೇ ದೇಶದ ಪ್ರಥಮ ಕಾನೂನು ಸಚಿವರಾಗಿದ್ದ ಅವರು ರಾಜೀನಾಮೆ ನೀಡಿ ಹೊರ ಬಂದಿದ್ದರು,'' ಎಂದು ಕಿಡಿಕಾರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ