ಆ್ಯಪ್ನಗರ

ಆಸ್ತಿ ಗಳಿಕೆಯಲ್ಲಿ ಶಿವ ಕುಮಾರ್ ವಿಶ್ವ ದಾಖಲೆ: ಇಡಿ ಪರ ವಕೀಲರ ವಾದ

ಇದು ದಂಡ ಹಾಕುವಂತಹ ಪ್ರಕರಣವಷ್ಟೇ ಎಂದ ಡಿಕೆಶಿ ಪರ ವಕೀಲ ಅಭಿಷೇಕ್ ಸಿಂಘ್ವಿ, ಆದೇಶ ಕಾಯ್ದಿರಿಸಿದ ದೆಹಲಿ ಹೈಕೋರ್ಟ್...

Vijaya Karnataka 18 Oct 2019, 10:18 am
ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಬಂಧಿತರಾಗಿರುವ ಕಾಂಗ್ರೆಸ್‌ ನಾಯಕ ಡಿ.ಕೆ.ಶಿವಕುಮಾರ್‌ ಅವರ ಜಾಮೀನು ಅರ್ಜಿಯ ವಾದ-ಪ್ರತಿವಾದವನ್ನು ಗುರುವಾರ ಆಲಿಸಿದ ದಿಲ್ಲಿ ಹೈಕೋರ್ಟ್‌ ತನ್ನ ಆದೇಶವನ್ನು ಕಾಯ್ದಿರಿಸಿದೆ. ಎರಡು ದಿನಗಳ ಹಿಂದೆ ಡಿ.ಕೆ.ಶಿವಕುಮಾರ್‌ ಅವರ ಪರ ವಕೀಲ ಅಭಿಷೇಕ್‌ ಮನು ಸಿಂಘ್ವಿ ವಾದ ಮಂಡಿಸಿದ್ದರು.
Vijaya Karnataka Web DKS 1


ಗುರುವಾರ ಮಧ್ಯಾಹ್ನ 3.30ಕ್ಕೆ ಇ.ಡಿ ವಾದ ಮಂಡಿಸಿಬೇಕಿತ್ತು. ಆದರೆ, ವಾದ ಮಂಡನೆಗೆ ಸಮಯ ಕೇಳಿದ ಇ.ಡಿ ವಿರುದ್ಧ ಕೋರ್ಟ್‌ ಗರಂ ಕೂಡ ಆದ ಘಟನೆ ನಡೆಯಿತು. ಬಳಿಕ ಇ.ಡಿ ಪರ ವಕೀಲರು ಕ್ಷಮಾಪಣೆ ಕೇಳಿದ ಹಿನ್ನೆಲೆಯಲ್ಲಿ ವಾದ ಮಂಡನೆಗೆ ಅವಕಾಶ ಕಲ್ಪಿಸಲಾಯಿತು. ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ಡಿ.ಕೆ.ಶಿವಕುಮಾರ್‌ ಜಾಮೀನು ನೀಡುವಂತೆ ದಿಲ್ಲಿ ಹೈಕೋರ್ಟ್‌ ಅರ್ಜಿ ಸಲ್ಲಿಸಿದ್ದು, ಈ ಸಂಬಂಧ ಅಕ್ಟೋಬರ್‌ 14ರಂದು ಡಿಕೆಶಿ ಪರ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು ಯಾಕೆ ಜಾಮೀನು ನೀಡಬೇಕೆಂದು ಕಾರಣ ಸಹಿತ ವಾದ ಮಂಡಿಸಿದ್ದರು.

ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣ: ಡಿಕೆಶಿ ಜಾಮೀನು ಆದೇಶ ಕಾಯ್ದಿರಿಸಿದ ಕೋರ್ಟ್

ಗುರುವಾರ ಇ.ಡಿ ಪರ ವಕೀಲ ಕೆ.ಎಂ. ನಟರಾಜ್‌ ಅವರು ವಾದ ಮಂಡಿಸಿದರು ಮತ್ತು ಜಾಮೀನು ನೀಡದಂತೆ ಕೇಳಿಕೊಂಡು ‘‘ಡಿಕೆಶಿ ಪ್ರಕರಣವು ಅಕ್ರಮ ಹಣ ವರ್ಗಾವಣೆಯ ಅಪ್ಪಟ ಪ್ರಕರಣವಾಗಿದೆ. ಇ.ಡಿಯ ಯಾವುದೇ ಪ್ರಶ್ನೆಗೆ ಡಿಕೆಶಿ ಸಮರ್ಪಕ ಉತ್ತರ ಒದಗಿಸಿಲ್ಲ. ಒಂದು ವೇಳೆ ಜಾಮೀನು ನೀಡಿದರೆ ತನಿಖೆಗೆ ಅಡ್ಡಿಯಾಗಲಿದೆ,’’ ಎಂದು ಹೇಳಿದರು.

ಅಲ್ಲದೆ, ‘‘ಡಿಕೆಶಿ ಕುಟುಂಬದಲ್ಲಿ 300 ಆಸ್ತಿಗಳಿವೆ. ಹಾಗಾಗಿ, ಆಸ್ತಿ ಗಳಿಕೆಯಲ್ಲಿ ಅವರು ವಿಶ್ವ ದಾಖಲೆ ಮಾಡಿದ್ದಾರೆ,’’ ಎಂದೂ ವಾದಿಸಿದರು.



ಕಣ್ಣು ಮುಚ್ಚಾಲೆ ಆಡ್ತಿದ್ದೀರಾ?

ಹೊಸದಿಲ್ಲಿ: ಡಿ.ಕೆ.ಶಿವಕುಮಾರ್‌ ಜಾಮೀನು ಅರ್ಜಿ ವಿಚಾರಣೆ ವೇಳೆ ಜಾರಿ ನಿರ್ದೇಶನಾಲಯದ ವಿರುದ್ಧ ದಿಲ್ಲಿ ಹೈಕೋರ್ಟ್‌ ಗರಂ ಆಗಿ ‘‘ನ್ಯಾಯಾಲಯದ ಜತೆ ಕಣ್ಣಾ ಮುಚ್ಚಾಲೆ ಆಡಬೇಡಿ,’’ ಎಂದು ತಾಕೀತು ಮಾಡಿತು.

ಈ ಮೊದಲೇ ನಿಗದಿಯಾದಂತೆ ಇ.ಡಿ ಪರ ವಕೀಲ ಕೆ.ಎಂ ನಟರಾಜ್‌ ಅವರು ವಾದ ಮಂಡಿಸಬೇಕಿತ್ತು. ಆದರೆ, ಅವರು ಗೈರು ಹಾಜರಾಗಿದ್ದರು. ಈ ವೇಳೆ, ಇ.ಡಿ ಪರ ಕಿರಿಯ ವಕೀಲರು ‘‘ವಾದ ಮಂಡಿಸಬೇಕಿದ್ದ ವಕೀಲರು(ಕೆ. ಎಂ.ನಟರಾಜ್‌) ಅವರು ಮತ್ತೊಂದು ಪ್ರಕರಣದಲ್ಲಿ ರೋಸ್‌ ಅವಿನ್ಯೂ ಡಿಸ್ಟ್ರಿಕ್ಟ್ ಕೋರ್ಟ್‌ನಲ್ಲಿ ವಾದ ಮಂಡಿಸುತ್ತಿದ್ದಾಕೆ. ಹಾಗಾಗಿ 30 ನಿಮಿಷ ಸಮಯಾವಕಾಶ ನೀಡಬೇಕು,’’ ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂತಿ ರ್‍ ಸುರೇಶ್‌ ಕೈತ್‌ ‘‘ನೀವು ಯಾಲಯದ ಜೊತೆ ಕಣ್ಣಾ ಮುಚ್ಚಾಲೆ ಆಡುವಂತಿಲ್ಲ. ಇದು ಸ್ವೀಕಾರರ್ಹವಲ್ಲ. ಕೋರ್ಟ್‌ ನಿಮಗಾಗಿ ಕಾಯಬೇಕಿಲ್ಲ,’’ ಎಂದು ಆಕ್ರೋಶವನ್ನು ಹೊರ ಹಾಕಿ, ಅಕ್ಟೋಬರ್‌ 19ರಂದು ಮಧ್ಯಾಹ್ನ 12ರೊಳಗೆ ತಮ್ಮ ವಾದವನ್ನು ಲಿಖಿತ ರೂಪದಲ್ಲಿ ಸಲ್ಲಿಸುವಂತೆ ಇ.ಡಿಗೆ ಸೂಚಿಸಿದರು.ಬಳಿಕ ಕ್ಷಮಾಪಣೆ ಕೇಳಿದ್ದರಿಂದ ವಾದ ಮಂಡಿಸಲು ಅವಕಾಶ ನೀಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ