ಆ್ಯಪ್ನಗರ

ಮೈತ್ರಿ ಬಳಿಕವೂ ಸಿಎಂ ಗಾದಿ ದೋಸ್ತಿ ಕುಸ್ತಿ

ವಿಧಾನಸಭೆ ಚುನಾವಣೆಯಲ್ಲಿ ಗರಿಷ್ಠ ಸ್ಥಾನ ಗಳಿಸುವ ಪಕ್ಷಕ್ಕೇ ಮುಖ್ಯಮಂತ್ರಿ ಹುದ್ದೆ ದೊರೆಯಬೇಕೆಂಬ ಷರತ್ತನ್ನು ತಿರಸ್ಕರಿಸಿರುವುದಾಗಿ ಶಿವಸೇನೆ ವರಿಷ್ಠ ಉದ್ಧವ್‌ ಠಾಕ್ರೆ ಹೇಳಿದ್ದಾರೆ.

Vijaya Karnataka Web 21 Feb 2019, 8:08 am
ಹೊಸದಿಲ್ಲಿ: ಮಹಾರಾಷ್ಟ್ರದಲ್ಲಿ ಹಳೆಯ ದೋಸ್ತಿಗಳಾದ ಬಿಜೆಪಿ ಮತ್ತು ಶಿವಸೇನೆ ನಡುವೆ ಚುನಾವಣಾ ಪೂರ್ವ ಮೈತ್ರಿ ಏರ್ಪಟ್ಟಿದೆಯಾದರೂ ಸಿಎಂ ಹುದ್ದೆ ವಿಚಾರವಾಗಿ ಉಭಯ ಪಕ್ಷಗಳ ನಡುವೆ ಭಿನ್ನಮತ ಮುಂದುವರಿದಿದೆ.
Vijaya Karnataka Web Shiv sena


ವಿಧಾನಸಭೆ ಚುನಾವಣೆಯಲ್ಲಿ ಗರಿಷ್ಠ ಸ್ಥಾನ ಗಳಿಸುವ ಪಕ್ಷಕ್ಕೇ ಮುಖ್ಯಮಂತ್ರಿ ಹುದ್ದೆ ದೊರೆಯಬೇಕೆಂಬ ಷರತ್ತನ್ನು ತಿರಸ್ಕರಿಸಿರುವುದಾಗಿ ಶಿವಸೇನೆ ವರಿಷ್ಠ ಉದ್ಧವ್‌ ಠಾಕ್ರೆ ಹೇಳಿದ್ದಾರೆ.

ಸರಕಾರದಲ್ಲಿ ಎರಡೂ ಪಕ್ಷಗಳ ನಾಯಕರಿಗೂ ಸ್ಥಾನಗಳು ಸಮಾನವಾಗಿ ಹಂಚಿಕೆಯಾಗಬೇಕೆಂಬ ಬೇಡಿಕೆಯನ್ನು ಬಿಜೆಪಿಯ ಮುಂದಿಟ್ಟಿರುವುದಾಗಿ ಅವರು ತಿಳಿಸಿದ್ದಾರೆ.

''ಗರಿಷ್ಠ ಸ್ಥಾನ ಗಳಿಸಿದವರೇ ಸಿಎಂ ಹುದ್ದೆ ಪಡೆಯುವ ನಿಯಮವನ್ನು ಕಳೆದ 25 ವರ್ಷಗಳಿಂದಲೂ ಅನುಸರಿಸಿಕೊಂಡು ಬರಲಾಗುತ್ತಿದೆ. ಆದರೆ ಈ ಬಾರಿ ನಾನು ಇದಕ್ಕೆ ಒಪ್ಪಿಲ್ಲ,'' ಎಂದು ಕಾರ್ಯಕರ್ತರ ಜತೆಗಿನ ಸಂವಾದದ ವೇಳೆ ಠಾಕ್ರೆ ಮಾಹಿತಿ ನೀಡಿದ್ದಾರೆ.

ಕಳೆದ ಸೋಮವಾರ ಅಂತಿಮಗೊಂಡ ಮೈತ್ರಿ ಒಪ್ಪಂದದ ಪ್ರಕಾರ, ಬಿಜೆಪಿ ಮತ್ತು ಶಿವಸೇನೆ ಲೋಕಸಭೆ ಚುನಾವಣೆಯಲ್ಲಿ ಕ್ರಮವಾಗಿ 25 ಮತ್ತು 23 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ. ಲೋಕಸಭೆ ಸಮರದ ಬಳಿಕ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಉಭಯ ಪಕ್ಷಗಳೂ ಸಮಾನ ಸ್ಥಾನಗಳಲ್ಲಿ ಸ್ಪರ್ಧಿಸಲಿವೆ.

2014ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಪ್ರತ್ಯೇಕತವಾಗಿ ಕಣಕ್ಕಿಳಿದಿದ್ದವು. ಒಟ್ಟು 288 ಸ್ಥಾನಗಳ ಪೈಕಿ ಬಿಜೆಪಿ 122 ಕ್ಷೇತ್ರಗಳಲ್ಲಿ ಗೆಲುವು ಕಂಡರೆ, ಶಿವಸೇನೆ 63 ಕ್ಷೇತ್ರಗಳಲ್ಲಿ ಜಯಗಳಿಸಿತ್ತು.

ನಾಯಕರ ಭಿನ್ನರಾಗ
ಈ ಮಧ್ಯೆ ಸಿಎಂ ಹುದ್ದೆ ಕುರಿತಾಗಿ ಬಿಜೆಪಿ ಮತ್ತು ಶಿವಸೇನೆ ನಾಯಕರ ನಡುವೆ ವಾಕ್ಸಮರವೂ ನಡೆದಿದೆ.
''ಚುನಾವಣೆಯಲ್ಲಿ ಗರಿಷ್ಠ ಸ್ಥಾನ ಗಳಿಸುವ ಪಕ್ಷಕ್ಕೇ ಮುಖ್ಯಮಂತ್ರಿ ಹುದ್ದೆ ದೊರೆಯಲಿದೆ,'' ಎಂದು ಬಿಜೆಪಿ ಸಚಿವ ಚಂದ್ರಕಾಂತ್‌ ಪಾಟೀಲ್‌ ಹೇಳಿದ್ದಾರೆ. ಆದರೆ ಇದನ್ನು ತಿರಸ್ಕರಿಸಿರುವ ಶಿವಸೇನೆಯ ಸಚಿವ ರಾಮದಾಸ್‌ ಕದಮ್‌ ಅವರು, ''ಮುಖ್ಯಮಂತ್ರಿ ಹುದ್ದೆಯನ್ನು ನೀಡಲು ಒಪ್ಪಿದ ಬಳಿಕವೇ ಮೈತ್ರಿಗೆ ಸಮ್ಮತಿಸಲಾಗಿದೆ. ಇದಕ್ಕೆ ಬಿಜೆಪಿ ಒಪ್ಪದಿದ್ದರೆ, ತಕ್ಷಣವೇ ಮೈತ್ರಿಯನ್ನು ಮುರಿದುಕೊಳ್ಳಬಹುದು. ಇದಕ್ಕೆ ನಮ್ಮದೇನೂ ಆಕ್ಷೇಪವಿಲ್ಲ,'' ಎಂದು ಕದಮ್‌ ಗುಡುಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ