ಆ್ಯಪ್ನಗರ

ತಲಾ 2.5 ವರ್ಷದ ಅವಧಿಗೆ ಎನ್‌ಸಿಪಿ-ಶಿವಸೇನೆ ಮಧ್ಯೆ ಸಿಎಂ ಸ್ಥಾನ ಹಂಚಿಕೆ ಸಾಧ್ಯತೆ

ಹೊಸ ಸೂತ್ರದ ಪ್ರಕಾರ ಎನ್‌ಸಿಪಿ ಮತ್ತು ಶಿವಸೇನೆ ತಲಾ ಎರಡೂವರೆ ವರ್ಷಗಳಿಗೆ ಮುಖ್ಯಮಂತ್ರಿ ಹುದ್ದೆಯನ್ನು ಹಂಚಿಕೊಳ್ಳುವ ಬಗ್ಗೆ ತೀರ್ಮಾನವಾಗಿದ್ದು, ಐದು ವರ್ಷಗಳ ಅವಧಿಗೆ ಕಾಂಗ್ರೆಸ್‌ ಉಪಮುಖ್ಯಮಂತ್ರಿ ಹುದ್ದೆಯನ್ನು ಪಡೆದುಕೊಳ್ಳಲಿದೆ.

Agencies 13 Nov 2019, 3:58 pm
ಮುಂಬಯಿ: ಮಹಾರಾಷ್ಟ್ರ ರಾಜಕಾರಣಕ್ಕೆ ಹೊಸ ತಿರುವು ಸಿಕ್ಕಂತೆ ಭಾಸವಾಗುತ್ತಿದೆ. ಮಂಗಳವಾರ ಹಿರಿಯ ಕಾಂಗ್ರೆಸ್‌ ನಾಯಕ ಅಹಮದ್‌ ಪಟೇಲ್‌ರನ್ನು ಉದ್ಧವ್‌ ಠಾಕ್ರೆ ಭೇಟಿಯಾಗಿದ್ದು, ಅಧಿಕಾರ ಹಂಚಿಕೆ ಸೂತ್ರ ಚರ್ಚೆಯಾಗಿದೆ ಎನ್ನಲಾಗಿದೆ.
Vijaya Karnataka Web Uddhav Thackeray Sharad Pawar


ಹೊಸ ಸೂತ್ರದ ಪ್ರಕಾರ ಎನ್‌ಸಿಪಿ ಮತ್ತು ಶಿವಸೇನೆ ತಲಾ ಎರಡೂವರೆ ವರ್ಷಗಳಿಗೆ ಮುಖ್ಯಮಂತ್ರಿ ಹುದ್ದೆಯನ್ನು ಹಂಚಿಕೊಳ್ಳುವ ಬಗ್ಗೆ ತೀರ್ಮಾನವಾಗಿದ್ದು, ಐದು ವರ್ಷಗಳ ಅವಧಿಗೆ ಕಾಂಗ್ರೆಸ್‌ ಉಪಮುಖ್ಯಮಂತ್ರಿ ಹುದ್ದೆಯನ್ನು ಪಡೆದುಕೊಳ್ಳಲಿದೆ.

ಶಿವಸೇನೆ ಮುಂದಿಟ್ಟ ಹೊಸ ಅಧಿಕಾರ ಹಂಚಿಕೆ ಸೂತ್ರದ ಪ್ರಕಾರ ಮೂರೂ ಪಕ್ಷಗಳು ತಲಾ 14 ಸಚಿವ ಸ್ಥಾನವನ್ನು ಪಡೆದುಕೊಳ್ಳಲಿವೆ. ಈ ಸೂತ್ರಕ್ಕೆ ಅಹ್ಮದ್‌ ಪಟೇಲ್‌ ಯಾವ ಪ್ರತಿಕ್ರಿಯೆ ನೀಡಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಅವರು ತಡ ರಾತ್ರಿ ನೇರವಾಗಿ ದೆಹಲಿ ವಿಮಾನ ಹತ್ತಿದ್ದಾರೆ.

ಈ ಹಿಂದೆ ಮಹಾರಾಷ್ಟ್ರದಲ್ಲಿ ತಲಾ ನಾಲ್ಕು ಶಾಸಕರಿಗೆ ಒಂದು ಸಚಿವ ಸ್ಥಾನದಂತೆ ಅಧಿಕಾರ ಹಂಚಿಕೆಗೆ ಕಾಂಗ್ರೆಸ್‌ ತನ್ನ ಸೂತ್ರವನ್ನು ಮುಂದಿಟ್ಟಿತ್ತು. ಇದಕ್ಕೆ ಬದಲಾಗಿ ಎನ್‌ಸಿಪಿ ತಲಾ 20 ತಿಂಗಳ ಅವಧಿಗೆ ಮುಖ್ಯಮಂತ್ರಿ ಹುದ್ದೆಯನ್ನು ವರ್ಗಾವಣೆ ಮಾಡುವ ಪ್ರಸ್ತಾಪ ಇಟ್ಟಿತ್ತು.

ಕಾಂಗ್ರೆಸ್‌ ಮತ್ತು ಎನ್‌ಸಿಪಿ ಸಭೆಗಳಲ್ಲಿ ಈ ಸೂತ್ರದ ಬಗ್ಗೆ ಮೇಲ್ಮಟ್ಟದ ಚರ್ಚೆಗಳು ನಡೆದಿದ್ದು ಇದರ ಬಗ್ಗೆ ಶಿವಸೇನೆ ನಿರ್ಲಕ್ಷ್ಯ ವಹಿಸಿತ್ತು. ಕೊನೆಗೆ ಬಿಜೆಪಿ ಮುಂದಿಟ್ಟಿದ್ದ ಪ್ರಸ್ತಾಪವನ್ನೇ ಶಿವಸೇನೆ ಎನ್‌ಸಿಪಿ-ಕಾಂಗ್ರೆಸ್‌ ಮುಂದಿಟ್ಟಿದೆ.

ಆದರೆ ಈ ಹಂತದಲ್ಲಿ ಕಾಂಗ್ರೆಸ್‌ ಮತ್ತು ಎನ್‌ಸಿಪಿ ಜೊತೆ ಕೈ ಜೋಡಿಸುವ ಬಗ್ಗೆ ಶಿವಸೇನೆ ಸ್ಪಷ್ಟ ತೀರ್ಮಾನಕ್ಕೆ ಬಂದಿದೆ. "ಈಗ ನಾವು ಸಾಕಷ್ಟು ಸಮಯವನ್ನು ಹೊಂದಿದ್ದೇವೆ, ವೈವಿಧ್ಯಮಯ ಸಿದ್ಧಾಂತಗಳನ್ನು ಹೊಂದಿರುವ ಪಕ್ಷಗಳು ಸರ್ಕಾರಗಳನ್ನು ಹೇಗೆ ನಡೆಸುತ್ತಿದ್ದವು ಎಂಬುದನ್ನು ಅಧ್ಯಯನ ಮಾಡಲು ನಾವು ಯೋಜಿಸಿದ್ದೇವೆ. ನಾವು ಬಿಜೆಪಿ ಮತ್ತು ಮೆಹಬೂಬಾ ಮುಫ್ತಿ (ಪಿಡಿಪಿ), ಬಿಜೆಪಿ ಮತ್ತು ನಿತೀಶ್ (ಜೆಡಿಯು), ಬಿಜೆಪಿ ಮತ್ತು ಪಾಸ್ವಾನ್ (ಎಲ್ಜೆಪಿ) ನಡುವಿನ ಸೂತ್ರವನ್ನು ಅಧ್ಯಯನ ಮಾಡುತ್ತೇವೆ. ಈ ಎಲ್ಲದರ ಬಗ್ಗೆ ನಾನು ಮಾಹಿತಿಯನ್ನು ಕೇಳಿದ್ದೇನೆ ಮತ್ತು ನಾವು ನಮ್ಮದೇ ಆದ ಸೂತ್ರವನ್ನು ಕಂಡುಕೊಳ್ಳುತ್ತೇವೆ,” ಎಂಬುದಾಗಿ ಮಂಗಳವಾರ ರಾತ್ರಿ ಉದ್ಧವ್‌ ಠಾಕ್ರೆ ಮಾಧ್ಯಮಗಳಿಗೆ ಹೇಳಿದ್ದಾರೆ.

ಕಾಂಗ್ರೆಸ್‌ ಮತ್ತು ಎನ್‌ಸಿಪಿ ಜೊತೆ ಕೈ ಜೋಡಿಸುವ ತೀರ್ಮಾನವನ್ನು ಸಮರ್ಥಿಸಿಕೊಂಡ ಅವರು, “ನಾವು ನಮ್ಮದೇ ರೀತಿಯಲ್ಲಿ ಆಡಳಿತ ನಡೆಸಲು ಸಿದ್ಧತೆ ನಡೆಸುತ್ತಿದ್ದೇವೆ,” ಎಂದಿದ್ದಾರೆ.

ಕಾಂಗ್ರೆಸ್ ತನ್ನ ಪ್ರಸ್ತಾವನೆಯಲ್ಲಿ, ಠಾಕ್ರೆಗಳಲ್ಲಿ ಯಾರೂ ಸಿಎಂ ಅಥವಾ ಡಿವೈ ಸಿಎಂ ಹುದ್ದೆಯನ್ನು ಅಲಂಕರಿಸುವುದಿಲ್ಲ ಎಂದು ಹೇಳಿತ್ತು.
ಆದರೆ, ಮುಂದಿನ ಕೆಲವು ದಿನಗಳಲ್ಲಿ ನಡೆಯುವ ಮಾತುಕತೆಯ ಸಂದರ್ಭದಲ್ಲಿ ಈ ಬೇಡಿಕೆಯನ್ನು ಕೈಬಿಡುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ