ಆ್ಯಪ್ನಗರ

ಈಜಿಪ್ತ್‌ನಲ್ಲಿ ಮೂರು ತಿಂಗಳ ತುರ್ತು ಪರಿಸ್ಥಿತಿ

ಭಾನುವಾರ ಸಂಭವಿಸಿದ ಅವಳಿ ಬಾಂಬ್‌ ಸ್ಫೋಟದ ಹಿನ್ನೆಲೆಯಲ್ಲಿ ಈಜಿಪ್ತ್‌ನಲ್ಲಿ ಮೂರು ತಿಂಗಳ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

Vijaya Karnataka Web 11 Apr 2017, 8:13 am

ಕೈರೊ (ಈಜಿಪ್ತ್‌): ಭಾನುವಾರ ಸಂಭವಿಸಿದ ಅವಳಿ ಬಾಂಬ್‌ ಸ್ಫೋಟದ ಹಿನ್ನೆಲೆಯಲ್ಲಿ ಈಜಿಪ್ತ್‌ನಲ್ಲಿ ಮೂರು ತಿಂಗಳ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಇದೇ ವೇಳೆ, ಪ್ರಮುಖ ಮೂಲ ಸೌಕರ್ಯಗಳಿಗೆ ರಕ್ಷಣೆ ಒದಗಿಸುವಂತೆ ವಿಶೇಷ ಪಡೆಗಳಿಗೆ ಆದೇಶಿಸಲಾಗಿದೆ. ಈಜಿಪ್ತ್‌ನ ತಾಂಟಾ ಮತ್ತು ಅಲೆಕ್ಸಾಂಡ್ರಿಯಾದ ಚರ್ಚ್‌ಗಳಲ್ಲಿ ಭಾನುವಾರ ಕ್ರೈಸ್ತರ ಧಾರ್ಮಿಕ ಉತ್ಸವ ಪಾಮ್‌ ಸಂಡೆ ವೇಳೆ ಐಸಿಸ್‌ ಉಗ್ರರು ನಡೆಸಿದ ಬಾಂಬ್‌ ದಾಳಿಯಲ್ಲಿ 45 ಮಂದಿ ಸಾವಿಗೀಡಾಗಿ ನೂರಾರು ಮಂದಿ ಗಾಯಗೊಂಡಿದ್ದರು.

ಇತ್ತೀಚಿನ ವರ್ಷಗಳಲ್ಲಿ ಕಾಪ್ಟಿಕ್‌ ಕ್ರಿಶ್ಚಿಯನ್ನರ ಮೇಲೆ ಇಷ್ಟೊಂದು ಭೀಕರ ದಾಳಿ ನಡೆದ ಉದಾಹರಣೆಯೇ ಇಲ್ಲ. ಬಾಂಬ್‌ ಸ್ಫೋಟ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ ಟಿವಿ ವಾಹಿನಿಗಳಲ್ಲಿ ಕಾಣಿಸಿಕೊಂಡ ಅಧ್ಯಕ್ಷ ಅಬ್ದೆಲ್‌-ಫತಾಹ್‌ ಅಲ್‌-ಸಿಸಿ, ಮೂರು ತಿಂಗಳ ತುರ್ತು ಪರಿಸ್ಥಿತಿ ಘೋಷಿಸಿದರು.

ಸಿಸಿ ಅವರು ತುರ್ತು ಪರಿಸ್ಥಿತಿ ಘೋಷಣೆಯನ್ನು ಇನ್ನೊಂದು ವಾರದೊಳಗೆ ಸಂಸತ್ತಿನಲ್ಲಿ ಮಂಡನೆ ಮಾಡಬೇಕಾಗಿದೆ. ಭಾನುವಾರ ರಾತ್ರಿ ಘೋಷಣೆ ಹೊರಡಿಸುವುದಕ್ಕೂ ಮೊದಲು, ಅಧ್ಯಕ್ಷರು ರಾಷ್ಟ್ರೀಯ ಭದ್ರತಾ ಸಮಿತಿಯ ಜೊತೆ ಸಮಾಲೋಚನೆ ನಡೆಸಿದರು. ಭಯೋತ್ಪಾದನೆ ವಿರುದ್ಧ ಹೋರಾಡಲು ಶ್ರೇಷ್ಠ ದರ್ಜೆಯ ಸಮಿತಿಯೊಂದನ್ನು ಶೀಘ್ರದಲ್ಲೇ ಅಸ್ತಿತ್ವಕ್ಕೆ ತರುವುದಾಗಿ ಅವರು ಇದೇ ವೇಳೆ ಪ್ರಕಟಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ