ಆ್ಯಪ್ನಗರ

ಪಾಕ್‌ ಮತ್ತೆ ಕದನ ವಿರಾಮ ಉಲ್ಲಂಘನೆ: ನಾಲ್ವರು ಯೋಧರ ಬಲಿ

ಶತ್ರು ಪಡೆಗಳ ಅಪ್ರಚೋದಿತ ಗುಂಡಿನ ದಾಳಿ| ಅಂತಾರಾಷ್ಟ್ರೀಯ ಗಡಿ ಮತ್ತೇ ತಲ್ಲಣ

Vijaya Karnataka 13 Jun 2018, 8:27 pm
Vijaya Karnataka Web ಸೇನಾ ಯೋಧರು
ಸೇನಾ ಯೋಧರು
ಜಮ್ಮು: ಗಡಿ ಶಾಂತಿ, ಕದನ ವಿರಾಮದಂತಹ ಒಡಂಬಡಿಕೆಗಳಿಗೆ ಕವಡೆಕಾಸಿನ ಕಿಮ್ಮತ್ತೂ ನೀಡದ ಪಾಕಿಸ್ತಾನದ ಉದ್ಧಟ ಗಡಿ ಭದ್ರತಾ ಪಡೆಗಳು ಬುಧವಾರ ರಾತ್ರಿ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ಭಾರತದ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.

ಇದರೊಂದಿಗೆ ಭಾರತೀಯ ಪಡೆಗಳು ಸೇಡಿನ ಪ್ರತಿದಾಳಿಗೆ ಸನ್ನದ್ಧಗೊಂಡಿದ್ದು, ಗಡಿ ನಿಯಂತ್ರಣಾ ರೇಖೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಮರು ಕಳಿಸಿದೆ.

ಮಂಗಳವಾರ ರಾತ್ರಿಯಿಂದಲೇ ಶುರುವಾದ ಪಾಕ್‌ ಪಡೆಗಳ ದಾಳಿ ಬುಧವಾರ ನಸುಕಿನ ತನಕ ಮುಂದುವರಿಯಿತು. ಈ ವೇಳೆ ನಾಲ್ವರು ಯೋಧರ ಸಾವಿನ ಜತೆಗೆ ಇತರ ಮೂವರಿಗೆ ಗಂಭೀರ ಗಾಯಗಳಾಗಿವೆ.

ಇದರೊಂದಿಗೆ, ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯಲ್ಲಿ ಈ ವರ್ಷ ಇಲ್ಲಿಯ ತನಕ ಸಂಭವಿಸಿದ ಗಡಿಯಾಚೆಗಿನ ಪಾಕಿಸ್ತಾನ ಪಡೆಗಳ ಗುಂಡಿನ ದಾಳಿಗೆ ಒಟ್ಟು 11 ಬಿಎಸ್‌ಎಫ್‌ ಯೋಧರು ಹುತಾತ್ಮರಾದಂತಾಗಿದೆ. ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಕಳೆದ 5 ವರ್ಷಗಳಿಗೆ ಹೋಲಿಸಿದರೆ ಇದು ಒಂದು ವರ್ಷದೊಳಗೆ ಗಡಿ ಭದ್ರತಾ ಪಡೆಗಳಿಗೆ ಸಂಭವಿಸಿದ ಅತಿ ದೊಡ್ಡ ನಷ್ಟ ಎನಿಸಿಕೊಂಡಿದೆ.

ಇತ್ತೀಚೆಗೆ 'ಸೆಕ್ಟರ್‌ ಕಮಾಂಡರ್‌' ಮಟ್ಟದ ಸಭೆಯಲ್ಲಿ ಮಾಡಿಕೊಳ್ಳಲಾದ 'ಕದನ ವಿರಾಮ' ಒಪ್ಪಂದವನ್ನು ತಾನು ಚಾಚೂತಪ್ಪದೆ ಗೌರವಿಸುತ್ತಿರುವುದಾಗಿ ಬಿಎಸ್‌ಎಫ್‌ ಹೇಳಿಕೊಂಡಿದೆ. ಆದರೆ, ಭಾರತದ ತಾಳ್ಮೆಯನ್ನು ದೌರ್ಬಲ್ಯವೆಂದೇ ಪರಿಗಣಿಸಿರುವ ಪಾಕಿಸ್ತಾನ ತನ್ನ ಹಳೆಯ ಚಾಳಿಯನ್ನು ಪುನರಾವರ್ತಿಸುತ್ತಲೇ ಇದೆ.

ಪಾಕಿಸ್ತಾನಿ ರೇಂಜರ್‌ಗಳು ಅಸ್ರಫ್‌ ಪೋಸ್ಟ್‌ನಿಂದ ಮಂಗಳವಾರ ರಾತ್ರಿ 9.40ರಿಂದಲೇ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಹಾಗೂ ಮೋರ್ಟಾರ್‌ ಶೆಲ್‌ಗಳಿಂದ ಅಪ್ರಚೋದಿತ ದಾಳಿ ಆರಂಭಿಸಿದ್ದವು. ಸಹಾಯಕ ಕಮಾಂಡೆಂಟ್‌ ಜಿತೇಂದ್ರ ಸಿಂಗ್‌ (34), ಸಬ್‌ಇನ್‌ಸ್ಪೆಕ್ಟರ್‌ ರಜನೀಶ್‌ ಕುಮಾರ್‌ (32), ಕಾನ್‌ಸ್ಟೆಬಲ್‌ ಹನ್ಸ್‌ರಾಜ್‌ ಗುಜ್ರಾರ್‌ (28) ಹಾಗೂ ಸಹಾಯಕ ಸಬ್‌ಇನ್‌ಸ್ಪೆಕ್ಟರ್‌ (ಎಎಸ್‌ಐ) ರಾಮ್‌ ನಿವಾಸ್‌ (52) ಮೃತಪಟ್ಟರು.

ಎಎಸ್‌ಐ ರಾಮ್‌ ನಿವಾಸ್‌ ಅವರು ಗಸ್ತು ನಡೆಸುತ್ತಿದ್ದ ವೇಳೆ ಗಡಿಯಾಚೆಗಿನ ದಾಳಿಗೆ ಬಲಿಯಾದರೆ, ಉಳಿದವರು ನಿವಾಸ್‌ ಅವರನ್ನು ಬೇರೆ ಕಡೆ ಸಾಗಿಸುವ ಪ್ರಯತ್ನದಲ್ಲಿದ್ದಾಗ ಪಾಕ್‌ ಮೋರ್ಟಾರ್‌ ಶೆಲ್‌ ದಾಳಿಗೆ ತುತ್ತಾದರು. ಭಾರತದ ಅರೆಸೇನಾ ಪಡೆ ಪ್ರತಿದಾಳಿ ನಡೆಸಿರುವುದಾಗಿಯೂ ವರದಿಯಾಗಿದೆ. ಆದರೆ, ಅತ್ತ ಕಡೆ ಸಂಭವಿಸಿದ ಸಾವು-ನೋವಿನ ಕುರಿತು ಮಾಹಿತಿ ದೊರೆತಿಲ್ಲ.

ಈ ದಾಳಿಯೂ ಸೇರಿದಂತೆ, ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತಾರಾಷ್ಟ್ರೀಯ ಗಡಿ ಹಾಗೂ ನಿಯಂತ್ರಣ ರೇಖೆಯಲ್ಲಿ ಈ ವರ್ಷ ನಡೆಸಿದ ದಾಳಿಗೆ ಒಟ್ಟು 51 ಮಂದಿ ಬಲಿಯಾದಂತಾಗಿದೆ. ಈ ಪೈಕಿ 25 ಮಂದಿ ಭದ್ರತಾ ಸಿಬ್ಬಂದಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ