ಅಯೋಧ್ಯಾ
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಕಲ್ಲುಗಳನ್ನು ಕಲೆ ಹಾಕುವ ಕಾರ್ಯವನ್ನು ಆರಂಭಿಸಿದೆ. ಈಗ ಉತ್ತರ ಪ್ರದೇಶದಲ್ಲಿ ಬಿಜೆಪಿ ಸರಕಾರವೇ ಇರುವುದರಿಂದ ಮಂದಿರ ನಿರ್ಮಾಣಕ್ಕೆ ಯಾವುದೇ ಅಡ್ಡಿಯಿಲ್ಲ ಎಂದು ಅದು ಪ್ರತಿಪಾದಿಸಿದೆ.
ರಾಮ ಜನ್ಮಭೂಮಿ ಹಾಗೂ ಬಾಬ್ರಿ ಮಸೀದಿ ವಿವಾದ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ತೀರ್ಪಿಗೆ ಕಾಯದ ವಿಎಚ್ಪಿ, ವರ್ಷದೊಳಗೆ ಮಂದಿರ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡುವುದಾಗಿ ಹೇಳಿದೆ.
''ರಾಜಸ್ಥಾನದ ಭರತ್ಪುರದಿಂದ ಸೋಮವಾರ ಎರಡು ಟ್ರಕ್ಗಳಲ್ಲಿ ಕಲ್ಲುಗಳು ಬಂದಿವೆ. ಮಂದಿರ ನಿರ್ಮಾಣಕ್ಕೆ 100ಕ್ಕೂ ಹೆಚ್ಚು ಟ್ರಕ್ಲೋಡ್ಗಳಷ್ಟು ಕಲ್ಲುಗಳ ಅಗತ್ಯವಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಸರಕಾರವೇ ಇರುವುದರಿಂದ ಈ ಕಾರ್ಯಕ್ಕೆ ಯಾವುದೇ ಅಡ್ಡಿಯಿರುವುದಿಲ್ಲ,'' ಎಂದು ವಿಎಚ್ಪಿಯ ಹಿರಿಯ ನಾಯಕ ತ್ರಿಲೋಕಿನಾಥ್ ಪಾಂಡೆ ಆಶಾವಾದ ವ್ಯಕ್ತಪಡಿಸಿದ್ದಾರೆ.
ರಾಜಸ್ಥಾನದಿಂದ ಬಂದಿರುವ ಕಲ್ಲುಗಳನ್ನು ಇಲ್ಲಿನ ಕರಸೇವಕ್ ಪುರಂನ ವಿಎಚ್ಪಿ ಮುಖ್ಯಕಚೇರಿಯಲ್ಲಿ ಇಳಿಸಲಾಗಿದೆ. ಅಖಿಲೇಶ್ ಯಾದವ್ ಸರಕಾರ ಇದ್ದಾಗ ಈ ಕಲ್ಲುಗಳನ್ನು ಸಾಗಿಸಲು ವಾಣಿಜ್ಯ ತೆರಿಗೆ ಇಲಾಖೆ ಅನುಮತಿ ನೀಡಿರಲಿಲ್ಲ. ಆದಿತ್ಯನಾಥ್ ಸರಕಾರ ಬಂದ ಬಳಿಕ ಆ ಅನುಮತಿಯೂ ದೊರೆತಿದೆ ಎಂದೂ ಪಾಂಡೆ ಹೇಳಿದರು.
ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ನಲ್ಲಿ ಆಕ್ಷೇಪವೆತ್ತಿರುವ ಖಲಿಕ್ ಅಹ್ಮದ್ ಖಾನ್ ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿ, ಮಂದಿರ ನಿರ್ಮಾಣ ಕಾರ್ಯದಿಂದ ಪ್ರಕರಣದ ವಿಚಾರಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನಮಗೆ ಸಂವಿಧಾನ ಹಾಗೂ ಸುಪ್ರೀಂಕೋರ್ಟ್ ಮೇಲೆ ಪೂರ್ಣ ಭರವಸೆ ಇದೆ ಎಂದು ಅವರು ತಿಳಿಸಿದರು.
''ಇನ್ನೂ ವಿಚಾರಣೆ ಪ್ರಗತಿಯಲ್ಲಿರುವುದರಿಂದ ಇಂಥ ಚಟುವಟಿಕೆಗಳು ಕಾನೂನುಬಾಹಿರ ಹಾಗೂ ದೇಶದ್ರೋಹವೆನಿಸಿಕೊಳ್ಳುತ್ತವೆ. ಇದು ಕೋಮುವಾರು ಸಂಘರ್ಷಕ್ಕೆ ಕಾರಣವಾಗಬಹುದು,'' ಎಂದು ಲಖನೌ ವಿವಿಯ ಮಾಜಿ ಉಪ ಕುಲಪತಿ ರೂಪ್ರೇಖಾ ವರ್ಮಾ ಆತಂಕ ವ್ಯಕ್ತಪಡಿಸಿದ್ದಾರೆ.
2015ರಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕಲ್ಲುಗಳನ್ನು ಸಂಗ್ರಹಿಸಲು ದೇಶಾದ್ಯಂತ ಚಳವಳಿ ರೂಪದ ಕಾರ್ಯ ಭರದಿಂದ ನಡೆದಿತ್ತಾದರೂ ಅಂತಿಮವಾಗಿ ನಿರ್ಮಾಣ ಕಾರ್ಯ ಸಾಧ್ಯವಾಗಿರಲಿಲ್ಲ. ಎರಡು ಟ್ರಕ್ಗಳಷ್ಟು ಕಲ್ಲುಗಳು ಬಂದ ಬಳಿಕ, ರಾಜ್ಯಕ್ಕೆ ಇನ್ನು ಕಲ್ಲುಗಳನ್ನು ತರಿಸಿಕೊಳ್ಳಲು ಸಮಾಜವಾದಿ ಪಕ್ಷಾಡಳಿತ ಸರಕಾರ ನಿಷೇಧ ಹೇರಿತ್ತು. ಹೀಗಾಗಿ ವಾಣಿಜ್ಯ ತೆರಿಗೆ ಇಲಾಖೆಯು ಫಾರಂ 39 ನೀಡಲು ತಿರಸ್ಕರಿಸಿತ್ತು.