ಆ್ಯಪ್ನಗರ

ಜ್ವಾಲೆಯಾದ ಕಬ್ಬಿನ ಜಲ್ಲೆ: ಪ್ರತಿಭಟನೆ ತಾರಕಕ್ಕೆ

ರಾಜ್ಯದಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ಭಾನುವಾರ ತಾರಕಕ್ಕೇರಿ ಸಂಘರ್ಷದ ರೂಪ ಪಡೆಯಿತು. ಪ್ರತಿಭಟನಾಕಾರರರು ವಿಧಾನ ಸೌಧದ ಗೇಟು ಮುರಿಯಲೆತ್ನಿಸಿದ್ದಲ್ಲದೆ ಕಬ್ಬಿನ ಲಾರಿ ನುಗ್ಗಿಸಿದರು. ಹಲವು ಕಡೆ ಲಾರಿಗಳಿಗೆ ಬೆಂಕಿ ಹಚ್ಚಲಾಯಿತು. ಅಂತಿಮವಾಗಿ ಬೆಳೆಗಾರರು ಸಿಎಂ ಮಾತಿಗೆ ಮನ್ನಣೆ ಕೊಟ್ಟು ಬೆಂಗಳೂರಿನ ಸಭೆಗೆ ಬರಲು ಒಪ್ಪಿದರು.

Vijaya Karnataka 19 Nov 2018, 7:27 am
ಬೆಳಗಾವಿ/ಬೆಂಗಳೂರು: ರಾಜ್ಯದಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ಭಾನುವಾರ ತಾರಕಕ್ಕೇರಿ ಸಂಘರ್ಷದ ರೂಪ ಪಡೆಯಿತು. ಪ್ರತಿಭಟನಾಕಾರರು ಬೆಳಗಾವಿ ಸುವರ್ಣ ಸೌಧದ ಗೇಟ್‌ ಮುರಿಯಲೆತ್ನಿಸಿದ್ದಲ್ಲದೆ ಆವರಣಕ್ಕೆ ಲಾರಿಗಳನ್ನು ನುಗ್ಗಿಸಲಾಯಿತು. ಬಾಗಲಕೋಟದಲ್ಲಿ ಕಾರ್ಖಾನೆಗಳಿಗೆ ಕಬ್ಬು ಸಾಗಿಸುತ್ತಿದ್ದ ಮೂರು ಲಾರಿಗಳಿಗೆ ಬೆಂಕಿ ಹಚ್ಚಲಾಗಿದೆ. ಹಲವು ತಾಲೂಕುಗಳಲ್ಲಿ ಪ್ರತಿಭಟನೆ, ರಸ್ತೆ ತಡೆ, ಕಬ್ಬು ಹೊತ್ತ ವಾಹನಗಳನ್ನು ಉರುಳಿಸುವ ಕೃತ್ಯಗಳು ನಡೆದಿವೆ.
Vijaya Karnataka Web ಕಬ್ಬು ಬೆಳೆಗಾರರ ಪ್ರತಿಭಟನೆ


ಈ ನಡುವೆ, ನವೆಂಬರ್‌ 19ರಂದು (ಸೋಮವಾರ) ಬೆಳಗಾವಿಗೆ ಬಂದು ಮಾತುಕತೆ ನಡೆಸುವುದಾಗಿ ಪ್ರಕಟಿಸಿದ್ದ ಸಿಎಂ ಕುಮಾರಸ್ವಾಮಿ ಏಕಾಏಕಿಯಾಗಿ ಮಂಗಳವಾರ ಬೆಂಗಳೂರಿನಲ್ಲಿ ಸಭೆ ನಿಗದಿಪಡಿಸಿದ್ದು ಕೂಡಾ ಪ್ರತಿಭಟನಾಕಾರರನ್ನು ಒಂದು ಹಂತದಲ್ಲಿ ಕೆರಳಿಸಿತು. ಅಂತಿಮವಾಗಿ ಬೆಂಗಳೂರಿನ ಸಭೆಯಲ್ಲಿ ಭಾಗವಹಿಸಲು ಒಪ್ಪುವ ಮೂಲಕ ವಿವಾದ ತಣ್ಣಗಾಯಿತು.

ಕಬ್ಬಿಗೆ ಸಮರ್ಪಕ ದರ ನಿಗದಿ ಮಾಡಬೇಕು, ಕಾರ್ಖಾನೆಗಳು ಕೂಡಲೇ ಬಾಕಿ ಪಾವತಿ ಮಾಡಬೇಕು ಎಂಬ ಪ್ರಧಾನ ಬೇಡಿಕೆಯೊಂದಿಗೆ ಭುಗಿಲೆದ್ದ ಬೆಳೆಗಾರರ ಆಕ್ರೋಶವನ್ನು ಮಂಗಳವಾರ ಸಭೆ ತಣಿಸುವುದೇ ಎಂಬುದನ್ನು ಕಾದು ನೋಡಬೇಕಾಗಿದೆ.

ಸೌಧದ ಗೇಟು ಮುರಿಯಲು ಯತ್ನ

ಪ್ರತಿಭಟನಾಕಾರರು ಬೆಳಗಾವಿಯ ಸುವರ್ಣ ವಿಧಾನಸೌಧದ ಗೇಟ್‌ ಬೀಗವನ್ನು ಕಲ್ಲಿನಿಂದ ಒಡೆಯಲು ಯತ್ನಿಸಿದ್ದಲ್ಲದೆ, ಕಾವಲುಗಾರ ಗೇಟು ತೆರೆದಾಗ ರಸ್ತೆಯಲ್ಲಿ ಹೋಗುತ್ತಿದ್ದ ಕಬ್ಬಿನ ಲಾರಿಗಳನ್ನು ಆವರಣದೊಳಗೆ ನುಗ್ಗಿಸಿದರು. ವಿದ್ಯಮಾನವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಒಬ್ಬ ಮಹಿಳೆ ಸೇರಿ 11 ಜನರನ್ನು ಬಂಧಿಸಿದರು. ಮೊದಲು ಜಾಮೀನುರಹಿತ ಪ್ರಕರಣ ದಾಖಲಿಸಿದರೂ ಬಳಿಕ ಎಚ್ಚರಿಕೆ ಹೆಜ್ಜೆ ಇಟ್ಟು ಬಿಡುಗಡೆ ಮಾಡಿದರು. ಈ ಬಂಧಮುಕ್ತಿಯಿಂದ ಸಮಾಧಾನಗೊಂಡ ರೈತ ಮುಖಂಡರು ಮಂಗಳವಾರ ಸಿಎಂ ಅವರು ಬೆಂಗಳೂರಿನಲ್ಲಿ ಕರೆದಿರುವ ಸಭೆಯಲ್ಲಿ ಭಾಗವಹಿಸಲು ಒಪ್ಪಿದರು.

ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕಾಗಿ ಮಂಗಳವಾರ ಸಿಎಂ ಕರೆದಿರುವ ಸಭೆಯಲ್ಲಿ ಭಾಗವಹಿಸುವ ರೈತ ಪ್ರತಿನಿಧಿಗಳನ್ನು ಸರಕಾರಿ ಖರ್ಚಿನಲ್ಲಿ ಕರೆತರುವಂತೆ ಬೆಳಗಾವಿ, ಬಾಗಲಕೋಟ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಬೆಳೆಗಾರರ ದ್ವಂದ್ವ ನಿಲುವು

ಬಾಗಲಕೋಟ ಮತ್ತು ಬೆಳಗಾವಿಯಲ್ಲಿ ರೈತರ ಒಂದು ಬಣ ವಿವಾದ ಇತ್ಯರ್ಥವಾಗುವವರೆಗೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಬಾರದು ಎಂದು ಒತ್ತಡ ಹೇರುತ್ತಿದ್ದರೆ, ಹಲವಾರು ರೈತರು ಕಬ್ಬು ಸಾಗಿಸುತ್ತಿದ್ದಾರೆ. ಕೆಲವು ಕಡೆ ರೈತರು ಕಬ್ಬು ಸಾಗಾಟಕ್ಕೆ ಪೊಲೀಸರ ಭದ್ರತೆಯನ್ನೂ ಕೋರಿದ್ದಾರೆ. ಈ ನಡುವೆ, ಹಲವಾರು ಕಬ್ಬಿನ ವಾಹನಗಳಿಗೆ ಬೆಂಕಿ ಕೂಡಾ ಹಚ್ಚಲಾಗಿದೆ. ಕೆಲವನ್ನು ಕಬ್ಬು ಸಮೇತ ರಸ್ತೆ ಬದಿಗೆ ಉರುಳಿಸಲಾಗುತ್ತಿದೆ. 500ಕ್ಕೂ ಅಧಿಕ ಟ್ರ್ಯಾಕ್ಟರ್‌ಗಳನ್ನು ಮಾರ್ಗ ಮಧ್ಯದಲ್ಲೇ ತಡೆಹಿಡಿದು ಮುಂದೆ ಸಾಗದಂತೆ ಟೆಂಟ್‌ ಹಾಕಿ ಕಾವಲು ಕಾಯಲಾಗುತ್ತಿದೆ.

ಇಂದು ವಿಧಾನಸೌಧಕ್ಕೆ ಮುತ್ತಿಗೆ

ನ.19ರಂದು ಕಬ್ಬು ಬೆಳೆಗಾರರು ವಿಧಾನಸೌಧಕ್ಕೆ ಮುತ್ತಿಗೆ ಹಾಕುವಂತೆ ರೈತ ಸಂಘ ಕರೆ ನೀಡಿದೆ. ರಾಜ್ಯದ ಬೇರೆ ಬೇರೆ ಕಡೆಗಳಿಂದ 25000ಕ್ಕೂ ಅಧಿಕ ರೈತರು ಆಗಮಿಸುವ ನಿರೀಕ್ಷೆ ಇದೆ. ಅದರಲ್ಲೂ ಮಂಡ್ಯ ಭಾಗದಿಂದ ಹೆಚ್ಚಿನ ರೈತರು ಆಗಮಿಸುತ್ತಿರುವುದು ವಿಶೇಷವಾಗಿದೆ. ಹೀಗಾಗಿ ರಾಜಧಾನಿಯಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಪ್ರತಿಭಟನೆಯಿಂದಾಗಿ ರಸ್ತೆ ಸಂಚಾರ ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ.

ವಿವಾದ ಸೃಷ್ಟಿಸಿದ ಮುಖ್ಯಮಂತ್ರಿ ಮಾತು

ಬೆಳಗಾವಿ ಸುವರ್ಣ ವಿಧಾನಸೌಧದ ಬಳಿ ನಡೆದ ಪ್ರತಿಭಟನೆ ವೇಳೆ, ಖಾನಾಪುರ ತಾಲೂಕಿನ ಮಹಿಳೆಯೊಬ್ಬರು 'ಸಿಎಂ ನಾಲಾಯಕ್‌' ಎಂದು ಹೇಳಿರುವುದು ಕುಮಾರಸ್ವಾಮಿ ಅವರನ್ನು ಕೆಣಕಿದೆ. ಅದಕ್ಕೆ ಅವರು ನೀಡಿರುವ ಪ್ರತಿಕ್ರಿಯೆ ವಿವಾದಕ್ಕೆ ಕಾರಣವಾಗಿದ್ದು, ಸೋಮವಾರ ಖಾನಾಪುರ ತಾಲೂಕು ಬಂದ್‌ಗೆ ಕರೆ ನೀಡಲಾಗಿದೆ. ''ನಾಲ್ಕು ವರ್ಷದ ಹಿಂದಿನ ಬಾಕಿ ಹಣ ಕೊಡದಿದ್ದಕ್ಕೆ ನಾನು ಕಾರಣವೆಂದು ಬಿಂಬಿಸಲಾಗಿದೆ. ಈ ನಾಲ್ಕು ವರ್ಷ ಆಕೆ ಎಲ್ಲಿ ಮಲಗಿದ್ದಳು,'' ಎಂದು ಬೆಂಗಳೂರಿನ ಕೃಷಿಮೇಳದಲ್ಲಿ ಕುಮಾರಸ್ವಾಮಿ ಪ್ರಶ್ನಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ