ಆ್ಯಪ್ನಗರ

ಕೋರ್ಟ್‌ ನಿಂದನೆ ಮಾಡಿರುವ ನಿಮ್ಮನ್ನು ದೇವರೇ ಕಾಪಾಡಬೇಕು: ನಾಗೇಶ್ವರ ರಾವ್‌ ವಿರುದ್ಧ ಸುಪ್ರೀಂ ಕಿಡಿ

ನಾಗೇಶ್ವರ ರಾವ್‌ ಮತ್ತು ಪ್ರಕರಣದ ಉಸ್ತುವಾರಿ ಪ್ರಾಸಿಕ್ಯೂಷನ್‌ ಭಾಸುರನ್‌ ಅವರು ನ್ಯಾಯಾಂಗ ನಿಂದನೆ ಎಸಗಿದ್ದಾರೆ. ''ನಮ್ಮ ಆದೇಶದ ಜತೆ ನೀವು ಚೆಲ್ಲಾಟವಾದ್ದೀರಿ. ನಿಮ್ಮನ್ನು ದೇವರೇ ಕಾಯಬೇಕು'' ಎಂದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌

Vijaya Karnataka 7 Feb 2019, 8:50 pm
ಹೊಸದಿಲ್ಲಿ: ದೇಶವನ್ನೇ ಬೆಚ್ಚಿ ಬೀಳಿಸಿದ್ದ ಬಿಹಾರದ ಬಾಲಿಕಾಗೃಹಗಳಲ್ಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖೆಯಲ್ಲಿ ಆಗಿರುವ ವಿಳಂಬ ಹಾಗೂ ಲೋಪ ಕುರಿತು ಸುಪ್ರೀಂ ಕೋರ್ಟ್‌ ಗುರುವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
Vijaya Karnataka Web Supreme court


ತನಿಖೆ ವಿಷಯದಲ್ಲಿ ಆಗಿರುವ ನ್ಯಾಯಾಂಗ ನಿಂದನೆಗೆ ಸಂಬಂಧಿಸಿದಂತೆ ಸೂಕ್ತ ವಿವರ ನೀಡುವಂತೆ ಸಿಬಿಐ ಹಂಗಾಮಿ ನಿರ್ದೇಶಕರಾಗಿದ್ದ ಎಂ.ನಾಗೇಶ್ವರ ರಾವ್‌ ಅವರಿಗೆ ಆದೇಶ ನೀಡಿದೆ.

ಬಿಹಾರ ಪೊಲೀಸರಿಂದ ಸಿಬಿಐಗೆ ಪ್ರಕರಣ ವರ್ಗಗೊಂಡ ನಂತರ ಎ.ಕೆ.ಶರ್ಮಾ ಅವರಿಗೆ ತನಿಖೆಯ ಉಸ್ತುವಾರಿ ವಹಿಸಲಾಗಿತ್ತು. ಆದರೆ, ಮಾಜಿ ನಿರ್ದೇಶಕ ಅಲೋಕ್‌ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್‌ ಆಸ್ಥಾನಾ ನಡುವಿನ ಸಂಘರ್ಷದ ಬಳಿಕ ಹಂಗಾಮಿ ನಿರ್ದೇಶಕರಾಗಿ ಬಂದ ರಾವ್‌, ರಾತ್ರೋರಾತ್ರಿ ತನಿಖಾ ಸಂಸ್ಥೆಯ ಅನೇಕ ಅಧಿಕಾರಿಗಳನ್ನು ವರ್ಗ ಮಾಡಿದ್ದರು. ಅವರಲ್ಲಿ ಎ.ಕೆ.ಶರ್ಮಾ ಕೂಡ ಸೇರಿದ್ದರು. ಇವರ ವರ್ಗಾವಣೆಯಿಂದ ತನಿಖೆಗೆ ಹಿನ್ನಡೆಯುಂಟಾಯಿತು ಎಂದು ಭಾವಿಸಲಾಗಿದೆ. ತನಿಖೆಯ ಜವಾಬ್ದಾರಿ ಹೊತ್ತಿದ್ದ ಶರ್ಮಾ ಅವರನ್ನು ಕದಲಿಸಬಾರದು ಎಂದು ಕೋರ್ಟ್‌ ಬಯಸಿತ್ತು. ಆದರೂ ಅವರ ವರ್ಗ ನಡೆದಿದ್ದು, ಅಸಮಾಧಾನಕ್ಕೆ ಪ್ರಧಾನ ಕಾರಣವಾಗಿದೆ. ವರ್ಗಾವಣೆಗೆ ಮೊದಲು ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಸಮ್ಮತಿ ಪಡೆಯಲಾಗಿತ್ತೋ ಇಲ್ಲವೋ ತಿಳಿಸಿ ಎಂದು ರಾವ್‌ ಅವರನ್ನು ಕೇಳಲಾಗಿದೆ.

ನಾಗೇಶ್ವರ ರಾವ್‌ ಮತ್ತು ಪ್ರಕರಣದ ಉಸ್ತುವಾರಿ ಪ್ರಾಸಿಕ್ಯೂಷನ್‌ ಭಾಸುರನ್‌ ಅವರು ನ್ಯಾಯಾಂಗ ನಿಂದನೆ ಎಸಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌, ''ನಮ್ಮ ಆದೇಶದ ಜತೆ ನೀವು ಚೆಲ್ಲಾಟವಾದ್ದೀರಿ. ನಿಮ್ಮನ್ನು ದೇವರೇ ಕಾಯಬೇಕು'' ಎಂದು ಎಚ್ಚರಿಸಿದರು.

ಬಿಹಾರ ಸರಕಾರಕ್ಕೆ ತರಾಟೆ

ಬಾಲಿಕಾಗೃಹಗಳ ನಿರ್ವಣೆಯಲ್ಲಿ ತೋರಿದ ಉದಾಸೀನಕ್ಕಾಗಿ ಬಿಹಾರ ಸರಕಾರವನ್ನು ಸುಪ್ರೀಂ ಕೋರ್ಟ್‌ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಇದೇ ವೇಳೆ, ಮುಜಫ್ಫರ್‌ಪುರ ಬಾಲಿಕಾಗೃಹದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಬಿಹಾರದ ಕೋರ್ಟ್‌ನಿಂದ ದಿಲ್ಲಿ ಕೋರ್ಟ್‌ಗೆ ವರ್ಗಾಯಿಸಿ ಆದೇಶ ನೀಡಿದೆ. ಆರು ತಿಂಗಳೊಳಗೆ ಪ್ರಕರಣದ ವಿಚಾರಣೆ ಪೂರ್ಣಗೊಳಿಸುವಂತೆ ತಾಕೀತು ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ