ಆ್ಯಪ್ನಗರ

ನಿಗದಿಯಂತೆ ನೀಟ್: ಸುಪ್ರೀಂ ಖಡಕ್ ನುಡಿ

ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಿಗದಿಯಂತೆಯೇ ಮೇ 1 ಮತ್ತು ಜುಲೈ 24ರಂದು ಎರಡು ಹಂತಗಳ ‘ರಾಷ್ಟ್ರಿಯ ವೈದ್ಯಕೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ’ (ನೀಟ್) ನಡೆಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ.

ಏಜೆನ್ಸೀಸ್ 30 Apr 2016, 4:00 am
* ಸರಕಾರದ ಮನವಿ ತಿರಸ್ಕೃತ ಯಥಾಸ್ಥಿತಿಗೆ ಆದೇಶ ಮೇ 1, ಜು. 24ಕ್ಕೆ ಪರೀಕ್ಷೆ ಅಬಾಧಿತ
Vijaya Karnataka Web supreme court gives nod to common medical entrance test
ನಿಗದಿಯಂತೆ ನೀಟ್: ಸುಪ್ರೀಂ ಖಡಕ್ ನುಡಿ


ಹೊಸದಿಲ್ಲಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಿಗದಿಯಂತೆಯೇ ಮೇ 1 ಮತ್ತು ಜುಲೈ 24ರಂದು ಎರಡು ಹಂತಗಳ ‘ರಾಷ್ಟ್ರಿಯ ವೈದ್ಯಕೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ’ (ನೀಟ್) ನಡೆಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ.

ಈ ಸಂಬಂಧ ಗುರುವಾರ ನೀಡಿದ್ದ ಆದೇಶ ಮರುಪರಿಶೀಲಿಸುವಂತೆ ಕೇಂದ್ರ ಸರಕಾರ ಸಲ್ಲಿಸಿದ ಮನವಿಯನ್ನು ನ್ಯಾಯಮೂರ್ತಿ ಅನಿಲ್ ಆರ್ ದವೆ ನೇತೃತ್ವದ ನ್ಯಾಯಪೀಠ ತಳ್ಳಿಹಾಕಿದೆ.

ಇದರೊಂದಿಗೆ ತಾನೇ ನೀಟ್ ನಡೆಸಲು ಸಿದ್ಧವಾಗಿರುವುದಾಗಿ ತಿಳಿಸಿ, ಮರುದಿನ ಯೂ-ಟರ್ನ್ ಮಾಡಿದ ಕೇಂದ್ರ ಸರಕಾರಕ್ಕೆ ಹಿನ್ನಡೆಯಾಗಿದೆ.

‘‘ಹಲವು ರಾಜ್ಯಗಳಲ್ಲಿ ಪ್ರಸಕ್ತ ಸಾಲಿನಿಂದಲೇ ನೀಟ್ ಕಡ್ಡಾಯಗೊಳಿಸುವುದು ಕಷ್ಟಸಾಧ್ಯ. ಅಲ್ಲದೆ, ಮೇ 1ರಂದೇ ಮೊದಲ ಹಂತದ ಪರೀಕ್ಷೆ ನಿಗದಿಯಾಗಿರುವುದರಿಂದ, ಇಂಗ್ಲಿಷ್ ಪ್ರಾವಿಣ್ಯತೆ ಇಲ್ಲದ, ಮಾತೃಭಾಷೆಯಲ್ಲಿ ಓದಿದ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆ ಕಷ್ಟವಾಗುತ್ತದೆ. ಎರಡನೇ ಹಂತ ಮತ್ತು ಮೊದಲ ಹಂತದ ವಿದ್ಯಾರ್ಥಿಗಳಲ್ಲಿ ತಾರತಮ್ಯಕ್ಕೂ ಇದು ದಾರಿ ಮಾಡುತ್ತದೆ. ಹೀಗಾಗಿ ಎರಡೂ ಹಂತದ ಪರೀಕ್ಷೆಗಳನ್ನೂ ಒಟ್ಟಿಗೆ ಜುಲೈ 24ರಂದು ನಡೆಸಲು ಅವಕಾಶ ಕೊಡಬೇಕು,’’ ಎಂದು ಸರಕಾರದ ಪರವಾಗಿ ಅಟಾರ್ನಿ ಜನರಲ್ ಮುಕುಲ್ ರೋಹತಗಿ ಶುಕ್ರವಾರ ನ್ಯಾಯಾಲಯಕ್ಕೆ ಮನವಿ ಮಾಡಿದರು.

ಆದರೆ, ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘‘ಪರೀಕ್ಷೆಗಳು ನಿಗದಿಯಂತೆ ನಡೆಯಲಿವೆ. ಸಂಬಂಧಪಟ್ಟ ಕಕ್ಷಿದಾರರು ತಮ್ಮ ಬೇಡಿಕೆ ಮತ್ತು ಮನವಿಗಳನ್ನು ಸಲ್ಲಿಸಬಹುದು. ಅವುಗಳನ್ನು ಸೂಕ್ತ ಕಾಲದಲ್ಲಿ ಆಲಿಸಲಾಗುವುದು,’’ ಎಂದು ಹೇಳಿತು.

ಸಿಬಿಎಸ್‌ಇ ಮತ್ತು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ಎಂಸಿಐ) ಎರಡು ಹಂತಗಳಲ್ಲಿ ಪರೀಕ್ಷೆ ನಡೆಸುವುದಾಗಿ ಜಂಟಿ ಪ್ರಮಾಣಪತ್ರ ಸಲ್ಲಿಸಿದ ಬಳಿಕ ಏಕರೂಪ ಪ್ರವೇಶ ಪರೀಕ್ಷೆಗೆ ಸುಪ್ರಿಂಕೊರ್ಟ್ ಗುರುವಾರ ಆದೇಶಿಸಿತ್ತು.

ಮೇ 1ರಂದು ಸಿಬಿಎಸ್‌ಇ ನಡೆಸಲಿರುವ ಅಖಿಲ ಭಾರತ ವೈದ್ಯಕೀಯ ಪೂರ್ವ ಪರೀಕ್ಷೆಯನ್ನು (ಎಐಪಿಎಂಟಿ) ಮೊದಲ ಹಂತದ ನೀಟ್ ಆಗಿ ಪರಿಗಣಿಸುವಂತೆ ಮತ್ತು ಇದಕ್ಕೆ ಅರ್ಜಿ ಸಲ್ಲಿಸದ ಅಭ್ಯರ್ಥಿಗಳಿಗೆ ಜುಲೈ 24ರಂದು 2ನೇ ಹಂತದ ನೀಟ್ ನಡೆಸುವಂತೆ ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿತ್ತು.

ಕರ್ನಾಟಕ, ತಮಿಳುನಾಡು ಸೇರಿದಂತೆ ಹಲವು ರಾಜ್ಯ ಸರಕಾರಗಳು ಹಾಗೂ ಖಾಸಗಿ ಕಾಲೇಜು ಒಕ್ಕೂಟಗಳ ವಿರೋಧದವನ್ನು ನ್ಯಾಯಾಲಯ ತಳ್ಳಿಹಾಕಿತ್ತು.

ಸಂಸತ್‌ನಲ್ಲೂ ನೀಟ್ ಕೂಗು

ನೀಟ್ ಕುರಿತ ಸುಪ್ರೀಂ ಕೋರ್ಟ್ ಆದೇಶ ಶುಕ್ರವಾರ ಸಂಸತ್ತಿನಲ್ಲೂ ಸದ್ದು ಮಾಡಿತು.

ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸಂಸದ ಜಗದಾಂಬಿಕಾ ಪಾಲ್ ಹಾಗೂ ಇನ್ನಿಬ್ಬರು ಸದಸ್ಯರು ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ವಿದ್ಯಾರ್ಥಿಗಳು ತೊಂದರೆ ಅನುಭವಿಸಲಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಜುಲೈ 24ರಂದು ಒಂದೇ ಹಂತದಲ್ಲಿ ನೀಟ್ ಪರೀಕ್ಷೆ ನಡೆಸಲು ಅವಕಾಶ ಕೊಟ್ಟಲ್ಲಿ ಎಲ್ಲ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಸದನಕ್ಕೆ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ