ಆ್ಯಪ್ನಗರ

ಡೌರಿ ಕೇಸ್‌: ತಕ್ಷಣ ಬಂಧನಕ್ಕೂ ಅವಕಾಶ

ವರದಕ್ಷಿಣೆ ಪ್ರಕರಣಗಳಿಗೆ ಸಂಬಂಧಿಸಿ ಆರೋಪಿಗಳನ್ನು ತಕ್ಷಣ ಬಂಧಿಸಬಾರದು, ತನಿಖೆ ನಡೆಸಿ ಪ್ರಕರಣದ ನೈಜತೆ ಪರಿಶೀಲಿಸಿದ ನಂತರ ಬಂಧಿಸಬೇಕು ಎಂಬ ತನ್ನ ಮೊದಲಿನ ಆದೇಶವನ್ನು ಸುಪ್ರೀಂಕೋರ್ಟ್‌ ಪರಿಷ್ಕರಿಸಿದೆ.

Vijaya Karnataka 15 Sep 2018, 7:52 am
ಹೊಸದಿಲ್ಲಿ: ವರದಕ್ಷಿಣೆ ಪ್ರಕರಣಗಳಿಗೆ ಸಂಬಂಧಿಸಿ ಆರೋಪಿಗಳನ್ನು ತಕ್ಷಣ ಬಂಧಿಸಬಾರದು, ತನಿಖೆ ನಡೆಸಿ ಪ್ರಕರಣದ ನೈಜತೆ ಪರಿಶೀಲಿಸಿದ ನಂತರ ಬಂಧಿಸಬೇಕು ಎಂಬ ತನ್ನ ಮೊದಲಿನ ಆದೇಶವನ್ನು ಸುಪ್ರೀಂಕೋರ್ಟ್‌ ಪರಿಷ್ಕರಿಸಿದೆ.
Vijaya Karnataka Web dowry


ಆರೋಪಿ ಮತ್ತು ಆತನ ಕುಟುಂಬ ಸದಸ್ಯರನ್ನು ಬಂಧಿಸುವ ಕುರಿತಾದ ನಿರ್ಧಾರವನ್ನು ಕೋರ್ಟ್‌ ಪೊಲೀಸರಿಗೇ ಬಿಟ್ಟಿದೆ. ಹೀಗಾಗಿ ಪ್ರಕರಣ ದಾಖಲಿಸಿಕೊಂಡ ಕೂಡಲೇ ಬಂಧಿಸುವ ಅವಕಾಶ ಇರುವ ಹಳೆ ನಿಯಮವೇ ಜಾರಿಗೆ ಬಂದಂತಾಗಿದೆ.

ಸುಪ್ರೀಂ ಕೋರ್ಟ್‌ ಮಧ್ಯ ಪ್ರವೇಶದಿಂದ ವರದಕ್ಷಿಣೆ ನಿಯಂತ್ರಣ ಕಾನೂನು ದುರ್ಬಲವಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ನಡೆ ಅನುಸರಿಸಿದೆ.

ಇದೇ ವೇಳೆ, ಖೊಟ್ಟಿ ಕೇಸ್‌ಗಳ ಮೂಲಕ ಪುರುಷರನ್ನು ಕಿರುಕುಳಕ್ಕೆ ಗುರಿಪಡಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ, ಆರೋಪಿ ಮತ್ತು ಆತನ ಕುಟುಂಬ ಸದಸ್ಯರ ತಕ್ಷಣ ಬಂಧನ ಕುರಿತಾಗಿ ಯಾವುದೇ ಆದೇಶ ಅಥವಾ ನಿರ್ದೇಶನ ನೀಡದೆ ಸುಪ್ರೀಂ ಕೋರ್ಟ್‌ ಸಮತೋಲನದ ನಡೆ ಅನುಸರಿಸಿದೆ.

ವರದಕ್ಷಿಣೆ ವಿರೋಧಿ ಕಾನೂನು ದುರ್ಬಲಗೊಂಡಿರುವ ಹಿನ್ನೆಲೆಯಲ್ಲಿ ತೀರ್ಪು ಮರುಪರಿಶೀಲನೆ ಮಾಡಬೇಕೆಂದು ಕೋರಿ 'ನ್ಯಾಯಾಧಾರ್‌' ಹೆಸರಿನ ಎನ್‌ಜಿಒ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ನ್ಯಾ. ಎ.ಎಂ. ಖನ್ವೀಲ್ಕರ್‌ ಮತ್ತು ನ್ಯಾ. ಡಿ.ವೈ. ಚಂದ್ರಚೂಡ್‌ ಅವರನ್ನೊಳಗೊಂಡ ನ್ಯಾಯಪೀಠ, ಏ. 23ರಂದು ತೀರ್ಪನ್ನು ಕಾಯ್ದಿರಿಸಿತ್ತು.

''ವರದಕ್ಷಿಣೆ ಎನ್ನುವುದು ಜೀವನದ ಮೇಲೆ ಅತೀವ ಪರಿಣಾಮ ಬೀರುವುದರಿಂದ ಮಹಿಳೆಯರಿಗೆ ಲಿಂಗಾಧಾರಿತವಾಗಿ ನ್ಯಾಯ ದೊರಕಿಸಿಕೊಡಬೇಕು. ಇದೇ ವೇಳೆ, ಪುರುಷನ ಜೀವನ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನೂ ಗಣನೆಗೆ ತೆಗೆದುಕೊಳ್ಳಬೇಕು,'' ಎಂದು ನ್ಯಾಯಪಪೀಠ ಅಭಿಪ್ರಾಯಪಟ್ಟಿದೆ.

2017ರ ಜುಲೈನಲ್ಲಿ ಸುಪ್ರೀ ಕೋರ್ಟ್‌ನ ದ್ವಿಸದಸ್ಯ ಪೀಠ ವರದಕ್ಷಿಣೆ ಪ್ರಕರಣಗಳಲ್ಲಿ ಆರೋಪಿಯ ತಕ್ಷಣ ಬಂಧನಕ್ಕೆ ತಡೆ ನೀಡಿತ್ತು. ಎರಡೂ ಕಡೆಯ ಕುಟುಂಬ ಸದಸ್ಯರನ್ನು ಒಳಗೊಂಡ ವಿಶೇಷ ಸಮಿತಿಯನ್ನು ರಚಿಸಿ, ಪ್ರಕರಣದ ಸಾಚಾತನ ಖಚಿತಪಟ್ಟ ನಂತರವಷ್ಟೇ ಆರೋಪಿ ಮತ್ತು ಆತನ ಕುಟುಂಬ ಸದಸ್ಯರನ್ನು ಬಂಧಿಸಬೇಕೆಂದು ಸೂಚಿಸಿತ್ತು. ಖೊಟ್ಟಿ ಕೇಸ್‌ಗಳ ಮೂಲಕ ಪುರುಷರನ್ನು ಸಿಕ್ಕಿಸುವ ಪ್ರವೃತ್ತಿ ಹೆಚ್ಚಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಕಾನೂನಿನಲ್ಲಿ ಮಧ್ಯ ಪ್ರವೇಶ ಮಾಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ