ಆ್ಯಪ್ನಗರ

ಪ್ರಶಾಂತ್‌ ಭೂಷಣ್‌ ಮೇಲಿನ ನ್ಯಾಯಾಂಗ ನಿಂದನೆ ವಿಚಾರಣೆ ಕೈ ಬಿಡಲು ಸುಪ್ರೀಂ ನಕಾರ

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬ್ಡೆ ಹಾರ್ಲೆ ಡೇವಿಡ್‌ಸನ್‌ ಬೈಕ್‌ ಮೇಲೆ ಕುಳಿತಿದ್ದ ಚಿತ್ರವನ್ನು ಟ್ಟಿಟ್ಟರ್‌ನಲ್ಲಿ ಹಂಚಿಕೊಂಡಿದ್ದ ಪ್ರಕರಣದಲ್ಲಿಯೂ ಪ್ರಶಾಂತ್‌ ಭೂಷಣ್‌ ವಿರುದ್ಧ ನ್ಯಾಯಾಂಗ ನಿಂದನೆ ವಿಚಾರಣೆ ನಡೆಯುತ್ತಿದೆ.

TIMESOFINDIA.COM 10 Aug 2020, 2:02 pm

ಹೊಸದಿಲ್ಲಿ: ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ವಿರುದ್ಧದ ನ್ಯಾಯಾಂಗ ನಿಂದನೆ ಆರೋಪವನ್ನು ಕೈಬಿಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. 2009ರಲ್ಲಿ ತೆಹಲ್ಕಾಗೆ ನೀಡಿದ್ದ ಸಂದರ್ಶನದಲ್ಲಿ ಪ್ರಶಾಂತ್‌ ಭೂಷಣ್‌ ಸುಪ್ರೀಂ ಕೋರ್ಟ್‌ನ 16 ಮಾಜಿ‌ ನ್ಯಾಯಮೂರ್ತಿಗಳಲ್ಲಿ ಅರ್ಧಕರ್ಧ ಜನರು ಭ್ರಷ್ಟರು ಎಂದು ಹೇಳಿದ್ದರು.
Vijaya Karnataka Web prashant-bhushan


ಈ ಸಂಬಂಧ ಪ್ರಶಾಂತ್‌ ಭೂಷಣ್‌ ಮತ್ತು ತೆಹಲ್ಕಾ ಸಂಸ್ಥಾಪಕ ತರುಣ್‌ ತೇಜ್‌ಪಾಲ್‌ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಹೆಚ್ಚಿನ ವಿಚಾರಣೆ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ.

ಈ ಬಗ್ಗೆ ಪ್ರಶಾಂತ್‌ ಭೂಷಣ್‌ ವಿವರಣೆ ನೀಡಿದ್ದರಲ್ಲದೆ, ತಮ್ಮ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರು. ಆದರೆ ಇದನ್ನು ಒಪ್ಪಿಕೊಳ್ಳಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಪ್ರಶಾಂತ್‌ ಭೂಷಣ್‌ ಹೇಳಿಕೆ ನ್ಯಾಯಾಂಗ ನಿಂದನೆಯ ಅಡಿಯಲ್ಲಿ ಬರುತ್ತದೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಬೇಕಾಗಿದೆ ಎಂದಿರುವ ನ್ಯಾಯಾಲಯ, ಮುಂದಿನ ಮಂಗಳವಾರಕ್ಕೆ ವಿಚಾರಣೆ ನಿಗದಿಪಡಿಸಿದೆ.

ನ್ಯಾಯಾಂಗ ನಿಂದನೆ ಪ್ರಕರಣ: ಪ್ರಶಾಂತ್‌ ಭೂಷಣ್‌, ಟ್ಟಿಟ್ಟರ್‌ಗೆ ಸುಪ್ರೀಂನಿಂದ ನೋಟಿಸ್‌

ಕೊರೊನಾ ವೈರಸ್‌ ಲಾಕ್‌ಡೌನ್‌ ತೆರವಾಗಿ ಎಂದಿನಂತೆ ವಿಚಾರಣೆಗಳು ಆರಂಭವಾದ ನಂತರ ಪ್ರಕರಣದ ವಿಚಾರಣೆ ಮುಂದುವರಿಸಬೇಕು ಎಂದು ಹಿರಿಯ ವಕೀಲ, ಮಾಜಿ ಕಾನೂನು ಸಚಿವ ಹಾಗೂ ಪ್ರಶಾಂತ್‌ ಭೂಷಣ್‌ ತಂದೆ ಶಾಂತಿ ಭೂಷಣ್‌ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು. ಇದನ್ನೂ ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿದೆ.

ಈ ಹಿಂದಿನ ವಿಚಾರಣೆ ವೇಳೆ ವಿಷಾದ ವ್ಯಕ್ತಪಡಿಸಿದ್ದ ಪ್ರಶಾಂತ್‌ ಭೂಷಣ್‌, "ನಾನು ಹೇಳಿದ್ದು ಅವರಲ್ಲಿ ಯಾರಿಗಾದರೂ (ಸಿಜೆಐ) ಅಥವಾ ಅವರ ಕುಟುಂಬದವರಿಗೆ ಯಾವುದೇ ರೀತಿಯಲ್ಲಿ ನೋವುಂಟು ಮಾಡಿದ್ದರೆ, ನಾನು ವಿಷಾದಿಸುತ್ತೇನೆ." ಭ್ರಷ್ಟಾಚಾರದ ಪದವನ್ನು "ವಿಶಾಲ ಅರ್ಥದಲ್ಲಿ ಸರಿಯಾದ ತೀರ್ಮಾನದ ಕೊರತೆ"ಎಂಬರ್ಥದಲ್ಲಿ ಬಳಸಲಾಗಿದೆ ಎಂದು ಅವರು ಹೇಳಿದ್ದರು. "ನಾನು ಹಣಕಾಸಿನ ಭ್ರಷ್ಟಾಚಾರ ಅಥವಾ ಯಾವುದೇ ಲಾಭವನ್ನು ಪಡೆದಿದ್ದಾರೆ ಎಂದು ಹೇಳಿಲ್ಲ." ಎಂದು ತಿಳಿಸಿದ್ದರು.

ಪ್ರಕರಣದ ಇನ್ನೋರ್ವ ಆರೋಪಿ ಪತ್ರಕರ್ತ ತರುಣ್‌ ತೇಜ್‌ಪಾಲ್‌ ಈ ಹೇಳಿಕೆಯನ್ನು ಪ್ರಕಟಿಸಿದ್ದಕ್ಕಾಗಿ ಕ್ಷಮೆಕೋರಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ಹಾರ್ಲೆ ಡೇವಿಡ್‌ಸನ್‌ ಬೈಕ್‌ ಮೇಲೆ ಕುಳಿತಿದ್ದ ಚಿತ್ರವನ್ನು ಟ್ಟಿಟ್ಟರ್‌ನಲ್ಲಿ ಹಂಚಿಕೊಂಡಿದ್ದ ಪ್ರಕರಣದಲ್ಲಿಯೂ ಪ್ರಶಾಂತ್‌ ಭೂಷಣ್‌ ವಿರುದ್ಧ ನ್ಯಾಯಾಂಗ ನಿಂದನೆ ವಿಚಾರಣೆ ನಡೆಯುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ