ಹೊಸದಿಲ್ಲಿ: ಕಲಾಪದ ವೇಳೆ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುವ ಅಥವಾ ಉದ್ದೇಶಪೂರ್ವಕವಾಗಿ ಕಲಾಪಕ್ಕೆ ಅಡ್ಡಿಪಡಿಸುವ ಸಂಸದರ ಸದಸ್ಯತ್ವವನ್ನು ರದ್ದುಪಡಿಸುವಂತೆ ಲೋಕಸಭೆಯ 'ನಿಯಮಗಳ ಸಮಿತಿ' ಶಿಫಾರಸು ಮಾಡಿದೆ.
ಪ್ರಸ್ತುತ ಇರುವ ನಿಯಮದಡಿ, ಸದಸ್ಯರನ್ನು ಅಮಾನತುಗೊಳಿಸಬೇಕಾದರೆ, ಸ್ಪೀಕರ್ ಅವರು ಖುದ್ದಾಗಿ ಸಂಸದರ ಹೆಸರನ್ನು ಕೂಗಿ ಮೌಖಿಕವಾಗಿ ಅಮಾನತು ಆದೇಶ ಹೊರಡಿಸಬೇಕು. ಹೊಸ ನಿಯಮ ಜಾರಿಯಾದರೆ, ಇದು ಸ್ವಯಂಚಾಲಿತವಾಗಿ ನಡೆಯಲಿದೆ.
ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸುಮಿತ್ರಾ ಮಹಾಜನ್ ಅವರು, ''ಜನಪ್ರತಿನಿಧಿಗಳು ಸ್ವಯಂ ಶಿಸ್ತು ಪಾಲಿಸುವುದು ಅಪೇಕ್ಷಣೀಯ,'' ಎಂದು ತಿಳಿಸಿದರು.
ನಡೆಯದ ಕಲಾಪ:
ಮೇಕೆದಾಟು, ರಫೇಲ್ ಮತ್ತು ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಚಾರಗಳು ಶುಕ್ರವಾರವೂ ಸಂಸತ್ತಿನ ಉಭಯ ಸದನಗಳ ಕಲಾಪವನ್ನು ಬಲಿ ಪಡೆದವು.
ಲೋಕಸಭೆಯಲ್ಲಿ ಶೂನ್ಯವೇಳೆಯ ಕಲಾಪ ಆರಂಭವಾಗುತ್ತಿದ್ದಂತೆ ಮೇಕೆದಾಟು ಅಣೆಕಟ್ಟೆ ನಿರ್ಮಾಣ ವಿರೋಧಿಸಿ ಎಐಎಡಿಎಂಕೆ ಸದಸ್ಯರು, ರಫೇಲ್ ಒಪ್ಪಂದದ ಕುರಿತು ಜಂಟಿ ಸಂಸದೀಯ ಸಮಿತಿ ತನಿಖೆಗೆ ಆಗ್ರಹಿಸಿ ಕಾಂಗ್ರೆಸ್, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನಕ್ಕೆ ಒತ್ತಾಯಿಸಿ ಟಿಡಿಪಿ ಸದಸ್ಯರು ಧರಣಿ ಆರಂಭಿಸಿದರು. ಇದರ ನಡುವೆಯೇ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸೇರಿದಂತೆ ಮೂರು ಸ್ಥಾಯಿ ಸಮಿತಿಗಳ ವರದಿಗಳನ್ನು ಮಂಡಿಸಲಾಯಿತು. ಗದ್ದಲ ನಿಲ್ಲದಿದ್ದಾಗ ಸ್ಪೀಕರ್ ಸುಮಿತ್ರಾ ಮಹಾಜನ್ ಕಲಾಪ ಮುಂದೂಡಿದರು. ಕ್ರಿಸ್ಮಸ್ ರಜೆ ಹಿನ್ನೆಲೆಯಲ್ಲಿ ಸದನ ಡಿ.27ಕ್ಕೆ ಸೇರಲಿದೆ. ಅಂದೇ ತ್ರಿವಳಿ ತಲಾಕ್ ವಿಧೇಯಕದ ಕುರಿತು ಚರ್ಚೆ ನಡೆಯಲಿದೆ.
ರಾಜ್ಯಸಭೆಯಲ್ಲೂ ಇದೇ ವಿಚಾರಗಳ ಕುರಿತು ಧರಣಿ ಮುಂದುವರಿಯಿತು. ರಫೇಲ್ ಸೇರಿದಂತೆ ಯಾವುದೇ ವಿಷಯ ಚರ್ಚೆಗೆ ಸರಕಾರ ಸಿದ್ಧವಿದೆ, ಆದರೆ ಪ್ರತಿಪಕ್ಷಗಳೇ ಪಲಾಯನ ಮಾಡುತ್ತಿವೆ ಎಂದು ಸಂಸದೀಯ ವ್ಯವಹಾರಗಳ ಖಾತೆ ರಾಜ್ಯ ಸಚಿವ ವಿಜಯ್ ಗೋಯಲ್ ಟೀಕಿಸಿದರು. ಅದು ಪ್ರತಿಪಕ್ಷಗಳ ಆಕ್ರೋಶಕ್ಕೆ ಮತ್ತಷ್ಟು ಇಂಬು ನೀಡಿತು. ಅಂತಿಮವಾಗಿ ಸಭಾಪತಿ ಎಂ.ವೆಂಕಯ್ಯ ನಾಯ್ಡು ದಿನದಮಟ್ಟಿಗೆ ಕಲಾಪ ಮುಂದೂಡಿದರು.