ಆ್ಯಪ್ನಗರ

ಟಕ್‌ಟಕ್‌ ಕಳ್ಳ ಮತ್ತು ಮೂವರು ಮಕ್ಕಳು!

ಪೊಲೀಸರು ಇತ್ತೀಚೆಗೆ 2.5 ಲಕ್ಷ ರೂ. ಕಳವು ಪ್ರಕರಣದಲ್ಲಿ ಪ್ರಧಾನ ಆರೋಪಿಯಾಗಿದ್ದ ಟಕ್‌-ಟಕ್‌ ಗ್ಯಾಂಗ್‌ ಲೀಡರ್‌ ರವಿಚಂದ್ರನ್‌ ಮುದಲಿಯಾರ್‌ನನ್ನು ಬಂಧಿಸಿದ್ದರು. ಆದರೆ, ಅವನ ಬಾಯಿ ಬಿಡಿಸುವುದೇ ದೊಡ್ಡ ಸಮಸ್ಯೆ.

Vijaya Karnataka 16 Apr 2018, 10:17 am
ಮುಂಬಯಿ: ಪೊಲೀಸರು ಇತ್ತೀಚೆಗೆ 2.5 ಲಕ್ಷ ರೂ. ಕಳವು ಪ್ರಕರಣದಲ್ಲಿ ಪ್ರಧಾನ ಆರೋಪಿಯಾಗಿದ್ದ ಟಕ್‌-ಟಕ್‌ ಗ್ಯಾಂಗ್‌ ಲೀಡರ್‌ ರವಿಚಂದ್ರನ್‌ ಮುದಲಿಯಾರ್‌ನನ್ನು ಬಂಧಿಸಿದ್ದರು. ಆದರೆ, ಅವನ ಬಾಯಿ ಬಿಡಿಸುವುದೇ ದೊಡ್ಡ ಸಮಸ್ಯೆ.
Vijaya Karnataka Web Tak Tak Kalla


ಹಲವು ದಿನ ಅವನನ್ನು ಪೊಲೀಸ್‌ ಕಸ್ಟಡಿಯಲ್ಲಿ ಇಟ್ಟುಕೊಂಡರೂ ಆವನು ಯಾವ ಮಾಹಿತಿಯನ್ನೂ ಕೊಡಲಿಲ್ಲ. ಹಿಂದಿಯಲ್ಲಿ ಪ್ರಶ್ನೆ ಕೇಳಿದರೆ ಅರ್ಥವೇ ಆಗಲ್ಲ ಅಂತಿದ್ದ. ''ನನಗೆ ಗೊತ್ತಿರುವುದು ತಮಿಳು ಮಾತ್ರ,'' ಅನ್ನುತ್ತಿದ್ದ ಅವನು ಅಲ್ಲೂ ಅಸಂಬದ್ಧ ಉತ್ತರಗಳನ್ನೇ ನೀಡುತ್ತಿದ್ದ.

ಆಗ ಪೊಲೀಸರು ಒಂದು ಟ್ರಂಪ್‌ ಕಾರ್ಡ್‌ ಬಳಸಿದರು! ''ನೀನು ಬಾಯಿ ಬಿಡದಿದ್ದರೆ ನಿನ್ನ ಮಕ್ಕಳನ್ನು ಕರೆಸುತ್ತೇವೆ,'' ಎಂದು ಹೇಳಿದರು. ಅದನ್ನು ಕೇಳಿದ್ದೇ ತಡ ಮುದಲಿಯಾರ್‌ ಅಸ್ಖಲಿತ ಹಿಂದಿಯಲ್ಲಿ ಮಾತನಾಡತೊಡಗಿದ!

ಮುದಲಿಯಾರ್‌ನ ಮಕ್ಕಳಲ್ಲಿ ಒಬ್ಬರು ನವೀ ಮುಂಬಯಿಯ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಸರ್ಜನ್‌. ಇನ್ನೊಬ್ಬರು ಮೆರೈನ್‌ ಎಂಜಿನಿಯರ್‌, ಮೂರನೆಯವರು ಹೋಟೆಲ್‌ ಮ್ಯಾನೇಜ್‌ಮೆಂಟ್‌ ವಿದ್ಯಾರ್ಥಿ!

ಆಭರಣ ವಿನ್ಯಾಸಕಿ ಲೂಟಿ:
ಮುದಲಿಯಾರ್‌ ಸಿಕ್ಕಿಬಿದ್ದದ್ದು, ಅವನ ಕುಟುಂಬವನ್ನು ಪತ್ತೆ ಹಚ್ಚಿದ್ದು ಮತ್ತು ಅವನ ಮೂರು ಮಕ್ಕಳು ಒಳ್ಳೆಯ ಉದ್ಯೋಗದಲ್ಲಿರುವುದು ತಿಳಿದದ್ದು-ಇದೆಲ್ಲ ಕುತೂಹಲಕಾರಿ ಕಥೆ.

ದಕ್ಷಿಣ ಮುಂಬಯಿಯ ಆಭರಣ ವಿನ್ಯಾಸಕಿಯೊಬ್ಬರು ಮಾರ್ಚ್‌ನಲ್ಲಿ ಠಾಣೆಗೆ ದೂರು ನೀಡಿದ್ದರು. ಅಪರಿಚಿತ ವ್ಯಕ್ತಿಯೊಬ್ಬ ಕಾರಿನ ಗಾಜಿಗೆ ಬಡಿದು ಆಯಿಲ್‌ ಸೋರಿಕೆಯಾಗುತ್ತಿದೆ ಎಂದು ಹೇಳಿದ. ಕೆಳಗಿಳಿದು ನೋಡಲು ಮುಂದಾದಾಗ ಆತ ಹಿಂಬದಿ ಸೀಟಿನಲ್ಲಿ ಬ್ಯಾಗ್‌, ಚಿನ್ನಾಭರಣ, ಹಣದೊಂದಿಗೆ ಪರಾರಿಯಾದ ಎನ್ನುವುದು ಅವರ ದೂರು.


ಏಪ್ರಿಲ್‌ ತಿಂಗಳ ಆರಂಭದಲ್ಲಿ ಇಂತಹುದೇ ಕೃತ್ಯಕ್ಕೆ ಸಂಚು ನಡೆಸುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದರು. ಅವರಲ್ಲಿ ಒಬ್ಬಾತ ರವಿಚಂದ್ರನ್‌ ಮುದಲಿಯಾರ್‌. ಮುದಲಿಯಾರ್‌ 2017ರ ಮಾರ್ಚ್‌ನಲ್ಲಿ ಧಾರಾವಿಯ ಎಸ್‌ಬಿಐ ಎಟಿಎಂನ ಎದುರು ನಿಲ್ಲಿಸಿದ್ದ ಕ್ಯಾಶ್‌ ವ್ಯಾನ್‌ನಿಂದ 1.6 ಕೋಟಿ ರೂ. ಕದ್ದ ತಂಡದಲ್ಲೂ ಇದ್ದ ಎನ್ನುವುದು ಗೊತ್ತಾಯಿತು.

ಮುದಲಿಯಾರ್‌ ಯಾವ್ಯಾವ ರೀತಿ ತನಿಖೆ ನಡೆಸಿದರೂ ಬಾಯಿ ಬಿಡಲಿಲ್ಲ. ಹಿಂದಿ ಅರ್ಥವೇ ಆಗುವುದಿಲ್ಲ ಎಂದು ಹೇಳುತ್ತಿದ್ದ. ಮೊದಲ ನಾಲ್ಕು ದಿನದ ಕಸ್ಟಡಿಯಲ್ಲಿ ಏನೇನೂ ಮಾಹಿತಿ ಸಿಗಲಿಲ್ಲ. ನ್ಯಾಯಾಲಯದ ಅನುಮತಿ ಪಡೆದು ಇನ್ನೂ ನಾಲ್ಕು ದಿನದ ಅವಕಾಶ ಪಡೆದರು. ಅವನ ಮೊಬೈಲ್‌ನ ಕಾಲ್‌ ರೆಕಾರ್ಡ್‌ ದಾಖಲೆ ಪಡೆದು ತನಿಖೆ ನಡೆಸಿದಾಗ ಅವನು ಗೋವಂಡಿ ನಿವಾಸಿ ಎನ್ನುವುದು ಗೊತ್ತಾಯಿತು. ಅಲ್ಲಿ ಒಬ್ಬ ಧೋಬಿಗಾರ ಮತ್ತು ಇನ್ನೊಬ್ಬನನ್ನು ಕರೆತಂದು ತೋರಿಸಿದಾಗ 'ಇವನೇ ಮುದಲಿಯಾರ್‌' ಎಂದು ಒಪ್ಪಿಕೊಂಡರು. ಅಷ್ಟಾದರೂ ಮುದಲಿಯಾರ್‌ ಬಾಯಿ ಬಿಡಲಿಲ್ಲ.

ಪೊಲೀಸರು ಇನ್ನಷ್ಟು ಮಾಹಿತಿ ಸಂಗ್ರಹಿಸಿದಾಗ ಕೌಟುಂಬಿಕ ವಿವರ ಹೊರಬಿತ್ತು. ಪತ್ನಿ ಮತ್ತು ಮೂವರು ಮಕ್ಕಳು ನವೀ ಮುಂಬಯಿಯಲ್ಲಿ ವಾಸವಾಗಿರುವುದು ತಿಳಿಯಿತು. ಆದರೆ, ಮುದಲಿಯಾರ್‌ ಕುಟುಂಬದ ಜತೆ ವಾಸ ಮಾಡುತ್ತಿರಲಿಲ್ಲ. ಮುದಲಿಯಾರ್‌ನ ಹಿರಿಯ ಮಗ ಎಂಬಿಬಿಎಸ್‌ ಮುಗಿಸಿ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಸರ್ಜನ್‌ ಆಗಿದ್ದರು. ಎರಡನೇ ಮಗ ಮರ್ಚೆಂಟ್‌ ನೇವಿ ಎಂಜಿನಿಯರ್‌, ಮೂರನೆಯವನು ಹೋಟೆಲ್‌ ಮ್ಯಾನೇಜ್‌ಮೆಂಟ್‌ ವಿದ್ಯಾರ್ಥಿ ಎನ್ನುವುದು ಗೊತ್ತಾಯಿತು.

ಈ ಟ್ರಂಪ್‌ ಕಾರ್ಡನ್ನು ಬಿಚ್ಚಿಡುತ್ತಿದ್ದಂತೆಯೇ ಮುದಲಿಯಾರ್‌ ಒಮ್ಮೆಲೇ ಆಘಾತಗೊಂಡ ಮತ್ತು ಅತ್ತು ಕರೆದು ಎಲ್ಲ ಕಥೆಗಳನ್ನು ಹೇಳಿದ ಎನ್ನುತ್ತಾರೆ ಪೊಲೀಸರು. ಇದೀಗ ಆತನನ್ನು ಆರ್ಥರ್‌ ರೋಡ್‌ ಜೈಲಿನಲ್ಲಿಡಲಾಗಿದೆ.

ಏನಿದು ಟಕ್‌-ಟಕ್‌ ಗ್ಯಾಂಗ್‌?
ಟಕ್‌-ಟಕ್‌ ಎನ್ನುವುದು ವಾಹನದ ಗಾಜಿಗೆ ಕೈ ಬೆರಳಿನಿಂದ ಬಡಿಯುವ ಸದ್ದು. ಅಪರಿಚಿತ ವ್ಯಕ್ತಿಯೊಬ್ಬ ಕಾರುಗಳ ಬಾಗಿಲು ಬಡಿದು ತೈಲ ಸೋರಿಕೆಯಾಗಿದೆ ಅಂತಲೋ, ಅಪಘಾತವಾಗಿದೆ ಅಂತಲೋ ಹೇಳುತ್ತಾನೆ. ಭಯಗೊಂಡ ಚಾಲಕ ಬಾಗಿಲು ತೆಗೆದು ಹೊರಗಿಳಿದು ಪರಿಶೀಲಿಸುತ್ತಿದ್ದಂತೆಯೇ ಆ ವ್ಯಕ್ತಿ ಕಾರಿನೊಳಗೆ, ಹಿಂಬದಿ ಸೀಟಿನಲ್ಲಿ ಇಟ್ಟಿರಬಹುದಾದ ಬ್ಯಾಗ್‌, ಮೊಬೈಲ್‌, ಹಣ ಎತ್ತಿಕೊಂಡು ಪರಾರಿಯಾಗುತ್ತಾನೆ. ಹೆಚ್ಚಿನ ಸಂದರ್ಭದಲ್ಲಿ ಮಹಿಳೆಯರೇ ಇವರ ಗುರಿ. ಯಾಕೆಂದರೆ, ಅವರ ಬ್ಯಾಗ್‌ನಲ್ಲಿ ಬೆಲೆಬಾಳುವ ಮೊಬೈಲ್‌, ಚಿನ್ನಾಭರಣ ಇರುತ್ತದೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ