ಆ್ಯಪ್ನಗರ

ವಿಪತ್ತು ನಿರ್ವಹಣೆ ಪ್ರಾತ್ಯಕ್ಷಿಕೆ: ಮಹಡಿಯಿಂದ ಜಿಗಿದ ವಿದ್ಯಾರ್ಥಿನಿ ಸಾವು

ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಕೈಗೊಂಡಿದ್ದ ವಿಪತ್ತು ನಿರ್ವಹಣೆ ಜಾಗೃತಿ ಪ್ರಾತ್ಯಕ್ಷಿಕೆಗೆ ಕೊಯಂಬತ್ತೂರಿನಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಬಲಿಯಾಗಿದ್ದಾಳೆ.

Vijaya Karnataka Web 13 Jul 2018, 11:53 am
ಕೊಯಂಬತ್ತೂರು: ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಕೈಗೊಂಡಿದ್ದ ವಿಪತ್ತು ನಿರ್ವಹಣೆ ಜಾಗೃತಿ ಪ್ರಾತ್ಯಕ್ಷಿಕೆಗೆ ಕೊಯಂಬತ್ತೂರಿನಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಬಲಿಯಾಗಿದ್ದಾಳೆ. ಈ ದೃಶ್ಯವನ್ನು ವಿದ್ಯಾರ್ಥಿಯೊಬ್ಬ ವೀಡಿಯೊ ಮಾಡಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜಾಗೃತಿ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿ ಎರಡನೇ ಮಹಡಿಯಿಂದ ಜಿಗಿದಿದ್ದಾಳೆ, ಉಳಿದ ವಿದ್ಯಾರ್ಥಿಗಳು ಕೆಳಗೆ ನೆಟ್‌ ಹಿಡಿದು ನಿಂತಿದ್ದರು. ಆದರೆ ಜಿಗಿಯುವ ವೇಳೆ ಆಕೆಯ ತಲೆ ಮೊದಲ ಮಹಡಿಯ ಸಜ್ಜಕ್ಕೆ ಬಡಿದು ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ವೆಲ್ಲಿಮಲೈಪಟ್ಟಣಂನಲ್ಲಿರುವ ಕೊವೈ ಕಲೈ ಮಗಲ್‌ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಲೋಕೇಶ್ವರಿ (19) ಮೃತಪಟ್ಟವಳು.


ಆಕೆ ಎರಡನೇ ಮಹಡಿಯಿಂದ ಜಿಗಿಯುವುದಕ್ಕೆ ಹಿಂಜರಿಯುತ್ತಿದ್ದಾಗ ಟ್ರೈನರ್‌ ತಳ್ಳಿದ್ದರಿಂದ ಈ ದುರಂತ ಸಂಭವಿಸಿದೆ. ತಳ್ಳಿದಾಗ ಆತಂಕಗೊಂಡ ಆಕೆ ಮುಂದಕ್ಕೆ ಜಿಗಿಯದ ಪರಿಣಾಮ ತಲೆ ಸಜ್ಜಕ್ಕೆ ಬಡಿದು ಪ್ರಜ್ಞಾಹೀನಳಾಗಿ ಬಿದ್ದಿದ್ದಾಳೆ. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ.

ಇಪ್ಪತ್ತು ವಿದ್ಯಾರ್ಥಿಗಳಿಗೆ ಎಮರ್ಜೆನ್ಸಿ ವಿಂಡೋ ಮೂಲಕ ಜಿಗಿಯುವ ತರಬೇತಿ ನೀಡಲಾಗಿತ್ತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಪ್ರಮಾಣಪತ್ರ ಪಡೆದಿರುವ ಅಧಿಕಾರಿ ತರಬೇತಿ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ವಿದ್ಯಾರ್ಥಿನಿ ಎರಡನೇ ಮಹಡಿಯಿಂದ ಜಿಗಿಯುವುದಕ್ಕೆ ಆಸಕ್ತಿ ತೋರಿದ್ದು, ಬಳಿಕ ಹಿಂಜರಿದಿದ್ದರು. ಹೀಗಾಗಿ ತರಬೇತಿದಾರರು ಅವರನ್ನು ವಾಪಸ್‌ ಕಳಿಸಿದ್ದರು. ಮತ್ತೆ ಅವರು ಜಿಗಿಯುವ ಧೈರ್ಯ ಮಾಡಿದ್ದರು. ಜಿಗಿಯಲು ಮುಂದಾಗಿ ಹಿಂಜರಿದಾಗ ತರಬೇತಿದಾರ ಮುಂದಕ್ಕೆ ತಳ್ಳಿದ್ದರು ಎಂದು ವಿದ್ಯಾರ್ಥಿಯೊಬ್ಬರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ