ಚೆನ್ನೈ: ಖಾಸಗಿ ವಸತಿ ಶಾಲೆಯಲ್ಲಿ ಪಿಯುಸಿ ವಿದ್ಯಾರ್ಥಿನಿ ಸಾವಿಗೀಡಾದ ಘಟನೆಯ ಬೆನ್ನಲ್ಲೇ ಹಿಂಸಾಚಾರ ಭುಗಿಲೆದ್ದಿದೆ. ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ಪ್ರತಿಭಟನೆಯು ಹಿಂಸಾರೂಪ ಪಡೆದಿದ್ದು, ಸುಮಾರು 13 ಬಸ್ಗಳಿಗೆ ಬೆಂಕಿ ಹಚ್ಚಿರುವ ಘಟನೆ ಭಾನುವಾರ ನಡೆದಿದೆ.
12ನೇ ತರಗತಿಯ ವಿದ್ಯಾರ್ಥಿನಿ (17 ವರ್ಷ) ಶಾಲೆ ಹಾಸ್ಟೆಲ್ನ ಆವರಣದಲ್ಲಿ ಬುಧವಾರ (ಜುಲೈ 13ರಂದು) ಮೃತಪಟ್ಟಿದ್ದಳು. ಹಾಸ್ಟೆಲ್ನ ಮಹಡಿ ಮೇಲಿನಿಂದ ಬಿದ್ದು ವಿದ್ಯಾರ್ಥಿನಿ ಸಾವಿಗೀಡಾಗಿರುವ ಸಂಶಯ ವ್ಯಕ್ತವಾಗಿದೆ. ತೀವ್ರ ರಕ್ತಸ್ರಾವ ಮತ್ತು ಗಾಯಗಳಿಂದಾಗಿ ಮೃತಪಟ್ಟಿರುವುದಾಗಿ ಶವಪರೀಕ್ಷೆಯ ವರದಿಯಿಂದ ತಿಳಿದು ಬಂದಿದೆ. ಅಂತಿಮ ವರದಿ ಇನ್ನಷ್ಟೇ ಬರಬೇಕಿದೆ.
ಈ ನಡುವೆ ಯುವಜನರು ಹಲವು ವಾಟ್ಸ್ಆ್ಯಪ್ ಗುಂಪುಗಳು ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರತಿಭಟನೆಗೆ ಜನರನ್ನು ಸೆಳೆದಿದ್ದರು. ಬುಧವಾರ ಸಹ ಪ್ರತಿಭಟನೆ ನಡೆದಿತ್ತು ಹಾಗೂ ಶಾಲೆಯ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಭರವಸೆ ನೀಡಲಾಗಿತ್ತು.
ಭಾನುವಾರ ಬೆಳಿಗ್ಗೆಯಿಂದಲೇ ಶುರುವಾದ ಪ್ರತಿಭಟನೆ ಅರ್ಧ ತಾಸಿನಲ್ಲೇ ಹಿಂಸಾರೂಪ ಪಡೆಯಿತು. ಗುಂಪುಗೂಡಿದ್ದ ಜನರು ಶಾಲೆಯ ಕಟ್ಟಡಕ್ಕೆ ಕಲ್ಲು ತೂರಿದರು ಹಾಗೂ ಶಾಲೆಯ ಕೊಠಡಿಗಳು, ಶಿಕ್ಷಕರ ಕೊಠಡಿಗಳಲ್ಲಿ ದಾಂಧಲೆ ನಡೆಸಿದರು. ಶಾಲೆಯ ಮೈದಾನದಲ್ಲಿ ನಿಲ್ಲಿಸಿದ್ದ ಬಸ್ಗಳಿಗೆ ಬೆಂಕಿ ಹಚ್ಚಿದರು. ಅವುಗಳಲ್ಲಿ ಬಹುತೇಕ ಬಸ್ಗಳು ಸಂಪೂರ್ಣ ಸುಟ್ಟು ಹೋಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದಕ್ಕೂ ಮುನ್ನ ಜಿಲ್ಲೆಯ ಎಸ್ಪಿ ಸೇರಿದಂತೆ ಹಲವು ಪೊಲೀಸರು ತಲ್ಲು ತೂರಾಟದಿಂದ ಗಾಯಗೊಂಡರು. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.
ಹಾಸ್ಟೆಲ್ನಲ್ಲಿ ಆತ್ಮಹತ್ಯೆಯ ಪತ್ರ ಸಿಕ್ಕಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿದ್ಯಾರ್ಥಿನಿಯು ಹಲವು ವಿಷಯಗಳ ಕಲಿಕೆಯಲ್ಲಿ ಕಷ್ಟ ಅನುಭವಿಸಿರುವುದು ಹಾಗೂ ಅದೇ ವಿಚಾರದಲ್ಲಿ ಹಲವು ಶಿಕ್ಷಕರು ಕಠೋರವಾಗಿ ನಡೆದುಕೊಂಡಿರುವ ಬಗ್ಗೆ ಪತ್ರದಲ್ಲಿದೆ. ಆಕೆಯ ಪಾಲಕರಿಗೆ ಶಾಲೆಯ ಶುಲ್ಕವನ್ನು ಮರುಪಾವತಿಸುವಂತೆ ಕೆಲವು ಶಿಕ್ಷಕರು ಶಾಲೆಯ ಮಂಡಳಿಗೆ ತಿಳಿಸಿರುವ ಬಗ್ಗೆಯೂ ಪ್ರಸ್ತಾಪವಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಪ್ರಕರಣದ ಕುರಿತು ಅರ್ಜಿಯ ವಿಚಾರಣೆಯನ್ನು ಮದ್ರಾಸ್ ಹೈಕೋರ್ಟ್ ನಾಳೆ ನಡೆಸಲಿದೆ. ಅಗತ್ಯವಾದರೆ ಪ್ರಕರಣವನ್ನು ಸಿಬಿ-ಸಿಐಡಿಗೆ ವಹಿಸಲಾಗುತ್ತದೆ ಎಂದು ಸರ್ಕಾರ ಭರವಸೆ ನೀಡಿದೆ.