ಆ್ಯಪ್ನಗರ

ತೆಲಂಗಾಣ ಬಸ್‌ ದುರಂತ: ಅವೈಜ್ಞಾನಿಕ ವೇಗತಡೆಗೆ ಬಲಿಯಾದವು 57 ಜೀವಗಳು

ದೇಶದ ಅತಿ ಭೀಕರ ರಸ್ತೆ ಅಪಘಾತಗಳಲ್ಲಿ ಒಂದಾಗಿರುವ ಮಂಗಳವಾರ ತೆಲಂಗಾಣದಲ್ಲಿ ಸಂಭವಿಸಿದ ದುರಂತಕ್ಕೆ ಅವೈಜ್ಞಾನಿಕ ಸ್ಪೀಡ್‌ ಬ್ರೇಕರ್‌ ಕಾರಣ ಎಂಬುದು ಬೆಳಕಿಗೆ ಬಂದಿದೆ. ರಸ್ತೆಯಲ್ಲಿ ಸ್ಪೀಡ್‌ ಬ್ರೇಕರ್‌ ಅಳವಡಿಸಿರುವುದು ಗಮನಕ್ಕೆ ಬಾರದೆ ಚಾಲಕ ಶ್ರೀನಿವಾಸ್ ಬಸ್ಸಿನ ವೇಗ ನಿಯಂತ್ರಿಸಲಾಗದೆ ದುರಂತ ಸಂಭವಿಸಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

Vijaya Karnataka Web 12 Sep 2018, 12:48 pm
[This story originally published in Times of India on Sept.12, 2018]
Vijaya Karnataka Web Telangana Bus tragedy


ಹೈದರಾಬಾದ್‌: ದೇಶದ ಅತಿ ಭೀಕರ ರಸ್ತೆ ಅಪಘಾತಗಳಲ್ಲಿ ಒಂದಾಗಿರುವ ಮಂಗಳವಾರ ತೆಲಂಗಾಣದಲ್ಲಿ ಸಂಭವಿಸಿದ ದುರಂತಕ್ಕೆ ಅವೈಜ್ಞಾನಿಕ ಸ್ಪೀಡ್‌ ಬ್ರೇಕರ್‌ ಕಾರಣ ಎಂಬುದು ಬೆಳಕಿಗೆ ಬಂದಿದೆ. ರಸ್ತೆಯಲ್ಲಿ ಸ್ಪೀಡ್‌ ಬ್ರೇಕರ್‌ ಅಳವಡಿಸಿರುವುದು ಗಮನಕ್ಕೆ ಬಾರದೆ ಚಾಲಕ ಶ್ರೀನಿವಾಸ್ ಬಸ್ಸಿನ ವೇಗ ನಿಯಂತ್ರಿಸಲಾಗದೆ ದುರಂತ ಸಂಭವಿಸಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ದುರಂತದಲ್ಲಿ ಚಾಲಕ ಸೇರಿದಂತೆ 57 ಮಂದಿ ಮೃತಪಟ್ಟಿದ್ದರು. ಬಸ್ಸು ಕಮರಿಗೆ ಉರುಳುವ ಮೊದಲು ನಾಲ್ಕು ಬಾರಿ ಪಲ್ಟಿ ಹೊಡೆದಿತ್ತು. ಹೆಚ್ಚಿನ ಪ್ರಯಾಣಿಕರೂ ಒಬ್ಬರ ಮೇಲೊಬ್ಬರು ಬಿದ್ದಾಗ ಉಸಿರುಗಟ್ಟಿ ಸತ್ತಿರುವ ಸಾಧ್ಯತೆಯಿದೆ.

ತೆಲಂಗಾಣ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಜಗತ್ಯಾಲ್ ಜಿಲ್ಲೆಯ ಘಾಟಿ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ 30 ಅಡಿ ಆಳದ ಕಣಿವೆಗೆ ಉರುಳಿತ್ತು. ಅಪಘಾತದ ಹಿನ್ನೆಲೆಯಲ್ಲಿ ಜಗತ್ಯಾಲ್ ಡಿಪೋದ ಮ್ಯಾನೇಜರ್ ಹನುಮಂತ ರಾವ್ ಅವರನ್ನು ಅಮಾನತುಗೊಳಿಸಲಾಗಿದೆ.

87 ಮಂದಿ ಪ್ರಯಾಣಿಕರಿಂದ ಕಿಕ್ಕಿರಿದ ಬಸ್ಸು ಕೊಂಡಗಟ್ಟುವಿನ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಜಗತ್ಯಾಲ್ ಕಡೆಗೆ ವಾಪಸಾಗುತ್ತಿದ್ದಾಗ ದುರಂತ ಸಂಭವಿಸಿದೆ. ಶನಿವಾರಂಪೇಟ್‌ ಎಂಬಲ್ಲಿ ಬಸ್ಸಿನ ಚಾಲಕ ಶ್ರೀನಿವಾಸ್‌ ನಿಯಂತ್ರಣ ಕಳೆದುಕೊಂಡರು. ಕಳೆದ ತಿಂಗಳು ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಚಾಲಕ ಶ್ರೀನಿವಾಸ್ ಅವರಿಗೆ ಟಿಎಸ್‌ಆರ್‌ಟಿಸಿಯಿಂದ ಉತ್ತಮ ಚಾಲಕ ಪ್ರಶಸ್ತಿಯೂ ಬಂದಿತ್ತು. ಕೇವಲ ಎರಡು ಕಿ.ಮೀ ದೂರವನ್ನು ಕಡಿಮೆ ಮಾಡುವುದಕ್ಕಾಗಿ ಅವರು ಘಾಟಿ ರಸ್ತೆಯನ್ನು ಆಯ್ದುಕೊಂಡಿದ್ದರು.

ಮೃತರ ಕುಟುಂಬಗಳಿಗೆ ರಾಜ್ಯ ಸರಕಾರ ತಲಾ 5 ಲಕ್ಷ ರೂ ಪರಿಹಾರ ಘೋಷಿಸಿದೆ. ಟಿಎಸ್‌ಆರ್‌ಟಿಸಿ ಕೂಡ ತಲಾ 3 ಲಕ್ಷ ಪರಿಹಾರ ಘೋಷಿಸಿದೆ.

ನಗರಾಡಳಿತ ಮತ್ತು ಐಟಿ ಸಚಿವ ಕೆ.ಟಿ ರಾಮ ರಾವ್ ಸ್ಥಳಕ್ಕೆ ಧಾವಿಸಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಂಡರು.

ಗಂಭೀರ ಗಾಯಗೊಂಡವರನ್ನು ಹೈದರಾಬಾದ್‌ ಮತ್ತು ಕರೀಂನಗರದ ಆಸ್ಪತ್ರೆಗೆಳಿಗೆ ಸ್ಥಳಾಂತರಿಸಲಾಗಿದೆ. ಮೃತದೇಹಗಳನ್ನು ಜಗತ್ಯಾಲ್‌ ಸರಕಾರಿ ಆಸ್ಪತ್ರೆಗೆ ಒಯ್ಯಲಾಗಿದ್ದು, ಗುರುತಿಸಿದ ಬಳಿಕ ಮರಣೋತ್ತರ ಪರೀಕ್ಷೆ ನಡೆಯಲಿದೆ. ಮೃತರ ಪೈಕಿ 45 ಮಂದಿಯನ್ನು ಈಗಾಗಲೇ ಗುರುತಿಸಲಾಗಿದೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್‌, ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ವೈಎಸ್ಸಾರ್‌ಪಿ ಮುಖ್ಯಸ್ಥ ವೈ.ಎಸ್‌. ಜಗನ್ಮೋಹನ್ ರೆಡ್ಡಿ ಹಾಗೂ ಇತರ ಹಲವು ಗಣ್ಯರು ಅಪಘಾತದ ಬಗ್ಗೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

'ತೆಲಂಗಾಣದ ಜಗತ್ಯಾಲ್ ಜಿಲ್ಲೆಯಲ್ಲಿ ಸಂಭವಿಸಿದ ಬಸ್ ಅಪಘಾತ ತೀವ್ರ ಆಘಾತ ಉಂಟುಮಾಡಿದೆ. ಜೀವಹಾನಿಯಿಂದ ಬಹಳಷ್ಟು ನೋವಾಗಿದೆ. ಅವರ ಕುಟುಂಬಗಳ ನೋವಿನಲ್ಲಿ ನಾವೂ ಭಾಗಿಯಾಗುತ್ತೇವೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ