ಆ್ಯಪ್ನಗರ

ಕೃಷ್ಣಾ ಪ್ರವಾಹ ಭೀತಿ: ನಿವಾಸ ಖಾಲಿ ಮಾಡಲು ಚಂದ್ರಬಾಬು ನಾಯ್ಡುಗೆ ನೋಟಿಸ್‌ ಜಾರಿ

ನದಿಯ ಮೇಲ್ದಂಡೆಯಿಂದ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಇದರಿಂದ ಕೆಳಭಾಗದಲ್ಲಿ ಪ್ರವಾಹ ಭೀತಿ ಸೃಷ್ಟಿಯಾಗಿದೆ.

PTI 18 Aug 2019, 5:00 am
ಹೈದರಾಬಾದ್‌: ಅಮರಾವತಿಯ ಉಂದವಲ್ಲಿಯಲ್ಲಿ ಕೃಷ್ಣಾ ನದಿ ತಟದ ಮೇಲೆ ಇರುವ ಬಾಡಿಗೆ ನಿವಾಸವನ್ನು ತುರ್ತಾಗಿ ತೆರವುಗೊಳಿಸುವಂತೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ತೆಲುಗು ದೇಶಂ ಪಾರ್ಟಿ ವರಿಷ್ಠ ಎನ್‌.ಚಂದ್ರಬಾಬು ನಾಯ್ಡು ಅವರಿಗೆ ರಾಜ್ಯ ಸರಕಾರ ಶನಿವಾರ ನೋಟಿಸ್‌ ನೀಡಿದೆ.
Vijaya Karnataka Web naidu


ನದಿಯ ಮೇಲ್ದಂಡೆಯಿಂದ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಇದರಿಂದ ಕೆಳಭಾಗದಲ್ಲಿ ಪ್ರವಾಹ ಭೀತಿ ಸೃಷ್ಟಿಯಾಗಿದೆ. ನಾಯ್ಡು ವಾಸವಾಗಿರುವ ನಿವಾಸಕ್ಕೂ ನೀರು ನುಗ್ಗುವ ಅಪಾಯ ಎದುರಾಗಿದ್ದು, ತುರ್ತು ನೋಟಿಸ್‌ ನೀಡಲು ಕಾರಣ ಎಂದು ಆಂಧ್ರಪ್ರದೇಶ ಸರಕಾರ ಸ್ಪಷ್ಟಪಡಿಸಿದೆ.

ವಿಜಯವಾಡ ಮತ್ತು ಗುಂಟೂರ್‌ ಸಂಪರ್ಕಿಸುವ ಪ್ರಕಾಶಂ ಬ್ಯಾರೇಜ್‌ ಬಳಿ ಕೃಷ್ಣಾ ನದಿಯ ಒಳಹರಿವು ದಿಢೀರ್‌ ಏರಿಕೆಯಾಗಿದೆ. ಶುಕ್ರವಾರ 5.6 ಲಕ್ಷ ಕ್ಯೂಸೆಕ್ಸ್‌ ಇದ್ದ ಒಳಹರಿವಿನ ಪ್ರಮಾಣ ಶನಿವಾರ ಬೆಳಗಿನ ವೇಳೆಗೆ 7.66 ಲಕ್ಷ ಕ್ಯೂಸೆಕ್ಸ್‌ಗೆ ಹೆಚ್ಚಿದೆ. ಇದರಿಂದ ನದಿ ಪಾತ್ರದ ಅನೇಕ ಮನೆಗಳು ಮುಳುಗಡೆಯಾಗಿವೆ.

ನಾಯ್ಡು ನಿವಾಸಕ್ಕೆ ಕಳೆದ ಎರಡು ದಿನಗಳ ಹಿಂದೆಯೇ ನೀರು ನುಗ್ಗಿದ್ದು, ಹಿತ್ತಲಿನ ಔಟ್‌ಹೌಸ್‌ ಜಲಾವೃತಗೊಂಡಿದೆ. ನಾಯ್ಡು ಹಾಗೂ ಅವರ ಕುಟುಂಬ ಸದಸ್ಯರು ಈಗಾಗಲೇ ಮನೆ ತೊರೆದು ಖಾಲಿ ಮಾಡಿ ಹೈದರಾಬಾದ್‌ಗೆ ಸ್ಥಳಾಂತರಗೊಂಡಿದ್ದಾರೆ. ನಿವಾಸದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸಿಬ್ಬಂದಿಯು ಪಾತ್ರೆಪಗಡೆಗಳನ್ನೆಲ್ಲ ಮೇಲ್ಮಹಡಿಗೆ ಸಾಗಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ವಾಗ್ವಾದ:
ಏತನ್ಮಧ್ಯೆ, ನಾಯ್ಡು ನಿವಾಸಕ್ಕೆ ಅಂಟಿಸಿರುವ ತುರ್ತು ನೋಟಿಸ್‌, ಪ್ರತಿಪಕ್ಷ ಟಿಡಿಪಿ ಮತ್ತು ಆಡಳಿತಾರೂಢ ವೈಎಸ್‌ಆರ್‌ ಕಾಂಗ್ರೆಸ್‌ ನಡುವಿನ ವಾಗ್ವಾದಕ್ಕೆ ಎಡೆಮಾಡಿಕೊಟ್ಟಿದೆ. ''ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ನಿರ್ಮಿಸಿರುವ ಕಟ್ಟಡವು ಈಗ ಪ್ರಕೃತಿಯ ವಿಕೋಪಕ್ಕೆ ಗುರಿಯಾಗಿದೆ. ಅದನ್ನು ಅವರು ತಕ್ಷಣ ತೆರವುಗೊಳಿಸಬೇಕು. ಇಲ್ಲದೇ ಹೋದರೆ ದೊಡ್ಡ ಅಪಾಯವನ್ನು ಮೈಮೇಲೆದುಕೊಳ್ಳುತ್ತಾರೆ. ನೋಟಿಸ್‌ ನೀಡಿರುವುದು ಅವರ ಒಳಿತಿಗಾಗಿ,'' ಎಂದು ವೈಎಸ್‌ಆರ್‌ಸಿ ವಕ್ತಾರ ಅಂಬಾಟಿ ರಾಮ್‌ಬಾಬು ಹೇಳಿದ್ದಾರೆ.

ಇದು ರಾಜಕೀಯ ದುರುದ್ದೇಶದ ಕ್ರಮ ಎಂದು ಟಿಡಿಪಿ ತಿರುಗೇಟು ನೀಡಿದೆ. ''ನಾಯ್ಡು ವಾಸವಾಗಿರುವ ನಿವಾಸ ಎತ್ತರದಲ್ಲಿದೆ. ಅಲ್ಲಿಗೆ ಪ್ರವಾಹದ ನೀರು ನುಗ್ಗುವುದಿಲ್ಲ. ಇದುವರೆಗೆ ಔಟ್‌ಹೌಸ್‌ಗೆ ಮಾತ್ರ ನೀರು ಬಂದಿದೆ. ಅದರಿಂದ ಮೇಲಕ್ಕೆ ಬರಲು ಸಾಧ್ಯವೇ ಇಲ್ಲ. ಆದರೆ ಸರಕಾರ ಉದ್ದೇಶಪೂರ್ವಕವಾಗಿ ಭೀತಿ ಸೃಷ್ಟಿಸುತ್ತಿದೆ,'' ಎಂದು ಟಿಡಿಪಿ ಪ್ರಧಾನ ಕಾರ್ಯದರ್ಶಿ ಹಾಗೂ ನಾಯ್ಡು ಪುತ್ರ ನಾರಾ ಲೋಕೋಶ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ