ಆ್ಯಪ್ನಗರ

ಗೋವಾದಲ್ಲಿ ಎರಡು ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿ ಆಯ್ಕೆ ಬಾಕಿ ಇದೆ; ಗೋವಾ ಉಸ್ತುವಾರಿ ಸಿ.ಟಿ ರವಿ

ಬಿಜೆಪಿ ಮೂಲಗಳ ಪ್ರಕಾರ, ಗೋವಾ ಚುನಾವಣೆ ಉಸ್ತುವಾರಿ ದೇವೇಂದ್ರ ಫಡ್ನವಿಸ್‌ ಮತ್ತು ಸಿ.ಟಿ.ರವಿ ಅವರು ರಾಜ್ಯ ಚುನಾವಣಾ ಸಮಿತಿ, ಕೋರ್‌ ಕಮಿಟಿಗಳ ಜತೆ ಸುದೀರ್ಘ ಸಭೆ ನಡೆಸಿದ ಬಳಿಕ 38 ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಕ್ಯಾಥೋಲಿಕ್‌ ಕ್ರೈಸ್ತರೇ ಅಧಿಕ ಸಂಖ್ಯೆಯಲ್ಲಿರುವ ಹಾಗೂ ಬಿಜೆಪಿಯೇತರ ಅಭ್ಯಥಿಗಳೇ ಆಯ್ಕೆಯಾಗುತ್ತ ಬಂದಿರುವ ಬೆನೌಲಿಮ್‌ ಮತ್ತು ನುವೆಮ್‌ ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ಬಾಕಿ ಇದೆ.

Vijaya Karnataka 15 Jan 2022, 7:59 am
ಪಣಜಿ: ಗೋವಾ ವಿಧಾನಸಭೆಯ ಎಲ್ಲ 40 ಕ್ಷೇತ್ರಗಳಲ್ಲೂ ಸ್ಪರ್ಧೆ ನಡೆಸಲು ತೀರ್ಮಾನಿಸಿರುವ ಬಿಜೆಪಿಯು, 38 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಿದೆ.
Vijaya Karnataka Web Maharashtra: Shiv Sena drifting away from Bal Thackerays thoughts, says general secretary CT Ravi
BJP General Secretary CT Ravi (File photo)


‘ನಾವು ಎಲ್ಲ 40 ಕ್ಷೇತ್ರಗಳಲ್ಲಿಯೂ ಸ್ಪರ್ಧಿಸುವುದು ಖಚಿತ. ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಬಾಕಿ ಇದ್ದು ಇನ್ನಷ್ಟು ಸಮಾಲೋಚನೆ ಬಳಿಕ ಅಭ್ಯರ್ಥಿಗಳನ್ನು ಘೋಷಿಸಲಾಗುವುದು’ ಎಂದು ಪಕ್ಷದಲ್ಲಿ ಗೋವಾ ಉಸ್ತುವಾರಿಯಾಗಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಬಿಜೆಪಿ ಮೂಲಗಳ ಪ್ರಕಾರ, ಗೋವಾ ಚುನಾವಣೆ ಉಸ್ತುವಾರಿ ದೇವೇಂದ್ರ ಫಡ್ನವಿಸ್‌ ಮತ್ತು ಸಿ.ಟಿ.ರವಿ ಅವರು ರಾಜ್ಯ ಚುನಾವಣಾ ಸಮಿತಿ, ಕೋರ್‌ ಕಮಿಟಿಗಳ ಜತೆ ಸುದೀರ್ಘ ಸಭೆ ನಡೆಸಿದ ಬಳಿಕ 38 ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಕ್ಯಾಥೋಲಿಕ್‌ ಕ್ರೈಸ್ತರೇ ಅಧಿಕ ಸಂಖ್ಯೆಯಲ್ಲಿರುವ ಹಾಗೂ ಬಿಜೆಪಿಯೇತರ ಅಭ್ಯಥಿಗಳೇ ಆಯ್ಕೆಯಾಗುತ್ತ ಬಂದಿರುವ ಬೆನೌಲಿಮ್‌ ಮತ್ತು ನುವೆಮ್‌ ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ಬಾಕಿ ಇದೆ.
ಗೋವಾದಲ್ಲಿ ಬಿಜೆಪಿಗೆ ಭಾರೀ ಆಘಾತ, ಒಂದೇ ದಿನ ಇಬ್ಬರು ಶಾಸಕರು ರಾಜೀನಾಮೆ, ಈವರೆಗೆ ನಾಲ್ವರು ಜಂಪ್‌!
ಪ್ರಮೋದ್‌ ಸಾವಂತ್‌ ಸಂಪುಟದಲ್ಲಿದ್ದ ಕ್ರಿಶ್ಚಿಯನ್‌ ಸಮುದಾಯದ ಮೈಕೆಲ್‌ ಲೊಬೊ ಇತ್ತೀಚೆಗೆ ರಾಜೀನಾಮೆ ನೀಡಿ ಕಾಂಗ್ರೆಸ್‌ ಸೇರಿದ್ದಾರೆ. ಜ.16ರಂದು ಬಿಜೆಪಿ ಸಂಸದೀಯ ಮಂಡಳಿ ಸಭೆ ನಡೆಯಲಿದ್ದು, ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆ ಇದೆ. ಮಾಜಿ ಮುಖ್ಯಮಂತ್ರಿ ದಿ.ಮನೋಹರ ಪರಿಕ್ಕರ್‌ ಅವರ ಪುತ್ರ ಉತ್ಪಲ್‌ ಪರಿಕ್ಕರ್‌ ತಮ್ಮ ತಂದೆ ಐದು ಸಲ ಪ್ರತಿನಿಧಿಸಿದ್ದ ಪಣಜಿ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದು, ವರಿಷ್ಠರು ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂಬ ಕುತೂಹಲ ಮೂಡಿದೆ. ಗೋವಾ ವಿಧಾನಸಭೆಗೆ ಫೆ.14ರಂದು ಚುನಾವಣೆ ನಡೆಯಲಿದೆ.

ಮೈತ್ರಿಗೆ ಮುಂದಾದ ಟಿಎಂಸಿ: ಗೋವಾದಲ್ಲಿ ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಳ್ಳಲು ಮಮತಾ ಬ್ಯಾನರ್ಜಿ ನೇತೃತ್ವದ ತೃಣ-ಮೂಲ ಕಾಂಗ್ರೆಸ್‌ ನಿರ್ಧರಿಸಿದೆ. ‘ಕಾಂಗ್ರೆಸ್‌ ಏಕಾಂಗಿಯಾಗಿ ಬಿಜೆಪಿಯನ್ನು ಮಣಿಸಲು ಸಾಧ್ಯವಿಲ್ಲ. ಹೀಗಾಗಿ ಆ ಪಕ್ಷದ ಎದುರು ಮೈತ್ರಿ ಪ್ರಸ್ತಾಪ ಇರಿಸಿದ್ದೇವೆ’ ಎಂದು ಪಕ್ಷದ ಸಂಸದೆ ಮಹುವಾ ಮೊಯಿತ್ರಾ ತಿಳಿಸಿದ್ದಾರೆ. ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌ ಅವರು, ‘ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್‌, ಟಿಎಂಸಿ, ಎನ್‌ಸಿಪಿಗಳು ಒಗ್ಗೂಡಿ ಹೋರಾಡುವುದು ಅಗತ್ಯ’ ಎಂದು ಕೆಲದಿನಗಳ ಹಿಂದೆ ಹೇಳಿದ್ದರು. ಅದರ ಬೆನ್ನಲ್ಲಿಯೇ ಈಗ ಟಿಎಂಸಿಯೇ ಮೈತ್ರಿ ಪ್ರಸ್ತಾಪ ಇರಿಸಿದೆ. ಆದರೆ, ಗೋವಾ ಫಾರ್ವರ್ಡ್‌ ಪಾರ್ಟಿ ಜತೆ ಚುನಾವಣೆ ಹೊಂದಾಣಿಕೆ ಮಾಡಿಕೊಂಡಿರುವ ಕಾಂಗ್ರೆಸ್‌ ಮೈತ್ರಿಗೆ ಒಪ್ಪುವ ಸಾಧ್ಯತೆ ಕಡಿಮೆ. ಇನ್ನೊಂದೆಡೆ, ಅರವಿಂದ್‌ ಕೇಜ್ರಿವಾಲ್‌ ಆಮ್‌ ಆದ್ಮಿ ಪಾರ್ಟಿ ಕೂಡ ಗೋವಾದಲ್ಲಿ ಒಂದು ಕೈ ನೋಡುವ ಉಮೇದಿಯಲ್ಲಿದೆ. ಕಳೆದ ಸಲ ಶೂನ್ಯ ಸಾಧನೆ ಮಾಡಿದ್ದ ಆಪ್‌ ಈ ಸಲ ಖಾತೆ ತೆರೆಯುವ ಸಾಧ್ಯತೆ ಇದೆ ಎಂದು ಕೆಲವು ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ