ಇನ್ನು, ಮೈತ್ರಿ ಸರಕಾರ ಪತನದ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದ್ದು, ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ ಬಾಂಬೆ ಸೂಟ್ಕೇಸ್ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಅದರ ಜೊತೆ ಕುರುಬರ ಮೀಸಲಾತಿ ಹೋರಾಟದಲ್ಲಿ ನನ್ನನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಹಾಸನದಲ್ಲಿ ಎಚ್ಡಿ ರೇವಣ್ಣ ದುಷ್ಟಶಕ್ತಿಗಳನ್ನು ಎದುರಿಸಲು ನಿಂಬೆಹಣ್ಣು ಇಟ್ಟುಕೊಂಡಿದ್ದೇನೆ ಎಂದು ಸಚಿವ ಎಸ್ಟಿ ಸೋಮಶೇಖರ್ಗೆ ತಿರುಗೇಟು ನೀಡುವ ಪ್ರಯತ್ನ ಮಾಡಿದ್ದಾರೆ. ರಾಜಕೀಯ ಹೊರತು ಪಡಿಸಿದರೆ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಸ್ಥಿರತೆ ಕಂಡುಬಂದಿದ್ದು, ಕೊಪ್ಪಳದಲ್ಲಿ ಯಾವುದೇ ಹೊಸ ಪ್ರಕರಣಗಳು ಕಂಡುಬಂದಿಲ್ಲ.
ರೈತರ ಪ್ರತಿಭಟನೆ ಪ್ರಶಸ್ತಿ ವಾಪಸಿಗೆ ಬದಲಾಗಿದ್ದು, ಪದ್ಮವಿಭೂಷಣ ಪ್ರಶಸ್ತಿಯನ್ನು ಪ್ರಕಾಶ್ ಸಿಂಗ್ ಬಾದಲ್ ಹಿಂತಿರುಗಿಸಿದ್ದಾರೆ. ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಸಭೆ ನಡೆಸಿ ದೇಶದ ಭದ್ರತೆ ದೃಷ್ಟಿಯಿಂದ ರೈತರ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಿ ಎಂದು ಮನವಿ ಮಾಡಿದ್ದಾರೆ. ಇನ್ನು, ತಮಿಳುನಾಡು ರಾಜಕೀಯಕ್ಕೆ ತಲೈವಾ ರಜನಿಕಾಂತ್ ಎಂಟ್ರಿ ನೀಡುವುದು ಪಕ್ಕಾ ಆಗಿದೆ. ಇದರ ಜೊತೆ ಇನ್ನು ಅನೇಕ ಸುದ್ದಿಗಳು ದಿನದ Top 10 Newsನಲ್ಲಿ..
ವಿವಾದ ಸೃಷ್ಟಿಸಿದ ಬಿಸಿ ಪಾಟೀಲ್ ಹೇಳಿಕೆ
ಕೃಷಿ ಸಚಿವ ಬಿಸಿ ಪಾಟೀಲ್ ಅವರ ಹೇಳಿಕೆಯೊಂದು ರಾಜ್ಯದಲ್ಲಿ ಗುರುವಾರ ವಿವಾದ ಸೃಷ್ಟಿಸಿದೆ. ಪೊನ್ನಂಪೆಟೆ ಅರಣ್ಯ ಮಹಾವಿದ್ಯಾಲಯದ ಕಾರ್ಯಕ್ರಮದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂದು ಕೖಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದರು. ಸಮಸ್ಯೆಗಳಲ್ಲಿ ಸಿಲುಕಿರುವ ರೈತರು ಶ್ರಮವಹಿಸಿ ಸಮಸ್ಯೆಗಳ ಸುಳಿಯಿಂದ ಹೊರಬರುವಂತಾಗಬೇಕು. ಅದು ಬಿಟ್ಟು ಹೇಡಿಗಳಂತೆ ಸಾವಿಗೆ ಶರಣಾಗಬಾರದು. ಹೆಂಡತಿ, ಮಕ್ಕಳನ್ನು ನೋಡಿಕೊಳ್ಳಲಾಗದೇ ಆತ್ಮಹತ್ಯೆ ಮಾಡಿಕೊಳ್ಳುವಾತ ಹೇಡಿ ಎಂದಿದ್ದಾರೆ. ಭೂಮಿಯನ್ನು ನಂಬಿಕೊಂಡು ಜೀವನದಲ್ಲಿ ಮುಂದೆ ಬಂದ ಅನೇಕರು ನಮ್ಮ ಮುಂದಿದ್ದಾರೆ. ಹೀಗಿರುವಾಗ ಸಮಸ್ಯೆ ಇದೆ ಎಂದು ಸಾವಿಗೆ ಶರಣಾಗುವುದು ಎಷ್ಟು ಸರಿ ಎಂದ ಸಚಿವ ಬಿಸಿ ಪಾಟೀಲ್ ಇದೆ ವೇಳೆ ಪ್ರಶ್ನಿಸಿದ್ದಾರೆ.
ಕೌರವನ ವಿರುದ್ಧ ಕುಮಾರಸ್ವಾಮಿ ಆಕ್ರೋಶ
ಇನ್ನು, ಕೌರವನ ಹೇಳಿಕೆಗೆ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೃಷಿ ಸಚಿವರೇ ರೈತರ ವಿರುದ್ಧ ನಾಲಗೆ ಹರಿಬಿಡುವುದು ಖಂಡನೀಯ ಎಂದು ಹೇಳಿರುವ ಅವರು, ಕೃಷಿ ಸಚಿವರಾಗಿದ್ದುಕೊಂಡು ರೈತರ ಕುರಿತು ಹೊಣೆಗೇಡಿತನ ಪ್ರದರ್ಶಿಸಬಾರದು ಎಂದಿದ್ದಾರೆ. ರೈತ ಹುಟ್ಟು ಸ್ವಾಭಿಮಾನಿ ಹಾಗೂ ಮರ್ಯಾದಸ್ತ. ಸಾಲ ಕೊಟ್ಟವರು ಬಂದು ಕಿಬ್ಬದಿಯ ಕೀಲು ಮುರಿದಂತೆ ಪೀಡಿಸುವಾಗ ಮರ್ಯಾದೆಗೆ ಅಂಜಿ ದಿಕ್ಕು ತೋಚದಂತಾಗಿ ಆತ್ಮಹತ್ಯೆಗೆ ಶರಣಾಗುತ್ತಾನೆ. ಕೃಷಿ ಸಚಿವರು ಹೇಳಿದಂತೆ ರೈತ ಹೇಡಿಯಲ್ಲ ಎಂದು ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ. ಹೆಂಡತಿ, ಮಕ್ಕಳು, ನೆಂಟರು, ಊರಿನವರ ಮುಂದೆ ಮರ್ಯಾದೆ ಹೋಯಿತಲ್ಲ ಎಂದು ಸಾವಿಗೆ ಶರಣಾಗುತ್ತಾನೆ. ಹೇಡಿತನದ ಪಟ್ಟ ಕಟ್ಟಿಕೊಳ್ಳಲು ಅಲ್ಲ. ಕೃಷಿ ಸಚಿವರ ಹೇಳಿಕೆ ರೈತ ಸಮುದಾಯಕ್ಕೆ ಮಾಡಿದ ಅಪಮಾನ.
'ಬಾಂಬೆ ಸೂಟ್ಕೇಸ್ ಬಗ್ಗೆ ತನಿಖೆಯಾಗಲಿ'
ರಾಜ್ಯದಲ್ಲಿ ಮತ್ತೆ ಸೂಟ್ಕೇಸ್ ರಾಜಕಾರಣದ ಬಗ್ಗೆ ಚರ್ಚೆ ಶುರುವಾಗಿದೆ. ನನಗೆ ತಂದಿದ್ದ ದೊಡ್ಡ ಮೊತ್ತದ ಹಣ ಇರುವ ಸೂಟ್ಕೇಸ್ ಬೇರೆಯವರ ಪಾಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಹೇಳಿರುವ ಹಿನ್ನೆಲೆಯಲ್ಲಿ ಈ ಕುರಿತು ಲೋಕಾಯುಕ್ತ ತನಿಖೆಯಾಗಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ದೊಡ್ಡ ಮೊತ್ತದ ಹಣ ತಂದಿದ್ದರು ಎಂದು ನಾನು ಹೇಳುತ್ತಿಲ್ಲ. ಸ್ವತಃ ವಿಶ್ವನಾಥ್ ಅವರೇ ಹೇಳಿದ್ದಾರೆ. ಆ ಮೊತ್ತದ ಸೂಟ್ಕೇಸ್ ಅನ್ನು ಸಿ.ಪಿ. ಯೋಗೇಶ್ವರ್ ಹಾಗೂ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ತೆಗೆದುಕೊಂಡು ಹೋಗಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ ಎಂದರು. ಈ ದೊಡ್ಡ ಮೊತ್ತವನ್ನು ನೀಡಿದವರು ಯಾರು? ಅದು ಕಾನೂನು ಬದ್ಧ ಹಣವೇ? ಕಪ್ಪು ಹಣವೇ? ಅದು ಎಲ್ಲಿ ಹೋಯಿತು ಎನ್ನುವ ಕುರಿತು ಲೋಕಾಯುಕ್ತ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ರಾಜನಾಥ್ ಸಿಂಗೇ ನಿಂಬೆಹಣ್ಣು ಇಟ್ಕೋತಾರೆ, ನಾನ್ ಇಟ್ಕೊಂಡ್ರೆ ತಪ್ಪೇನು..?
ದುಷ್ಟ ಶಕ್ತಿಗಳನ್ನು ಎದುರಿಸಲು ನಿಂಬೆಹಣ್ಣು ಇಟ್ಟುಕೊಳ್ಳಬೇಕು ಅದಕ್ಕೆ ನಿಂಬೆಹಣ್ಣು ಇಟ್ಟುಕೊಂಡಿದ್ದೀನಿ ಎಂದು ಮಾಜಿ ಸಚಿವ ಎಚ್ಡಿ ರೇವಣ್ಣ ಹೇಳಿದ್ದಾರೆ. ಈ ಮೂಲಕ ರೇವಣ್ಣ ಯಾವಾಗಲೂ ಕೈಯಲ್ಲಿ ನಿಂಬೆಹಣ್ಣು ಇಟ್ಟುಕೊಳ್ಳುತ್ತಾರೆ ಎಂಬ ಸಚಿವ ಎಸ್ಟಿ ಸೋಮಶೇಖರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಹಾಸನದಲ್ಲಿ ಗುರುವಾರ ಮಾತನಾಡಿದ ಅವರು, ಶತ್ರುಗಗಳನ್ನು ಎದುರಿಸಲು ನಿಂಬೆಹಣ್ಣು ಇಟ್ಟುಕೊಂಡಿದ್ದೀನಿ. ಮಾಟ ಮಂತ್ರ ಮಾಡ್ತಾರಲ್ಲಾ ಅವುಗಳನ್ನು ಎದುರಿಸಲು ನಿಂಬೆಹಣ್ಣು ಇಟ್ಟುಕೊಳ್ಳಬೇಕಲ್ವಾ, ಅದಕ್ಕೆ ನಾನು ನಿಂಬೆಹಣ್ಣು ಇಟ್ಟುಕೊಂಡಿದ್ದೀನಿ ಎಂದು ಹೇಳಿದರು. ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರೇ ನಿಂಬೆಹಣ್ಣು ಇಟ್ಟುಕೊಂಡಿದ್ದಾರೆ. ರಫೆಲ್ ಯುದ್ಧ ವಿಮಾನಕ್ಕೆ ನಿಂಬೆಹಣ್ಣು ಇಟ್ಟು ಪೂಜೆ ಮಾಡುತ್ತಾರೆ. ಅಂತದ್ರಲ್ಲಿ ನಾನು ನಿಂಬೆಹಣ್ಣು ಇಟ್ಟುಕೊಳ್ಳುವುದರಲ್ಲಿ ತಪ್ಪೇನಿದೆ ಎಂದಿದ್ದಾರೆ.
'ದೇಶದ ಭದ್ರತೆ ದೃಷ್ಟಿಯಿಂದ ರೈತರ ಸಮಸ್ಯೆ ಶೀಘ್ರ ಬಗೆಹರಿಸಿ'
ದೇಶದ ಭ್ರದ್ರತೆ ದೃಷ್ಟಿಯಿಂದ ಕೇಂದ್ರ ಸರ್ಕಾರ ಆದಷ್ಟು ಶೀಘ್ರದಲ್ಲಿ ರೈತರ ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕು ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾ.ಅಮರಿಂದರ್ ಸಿಂಗ್ ಆಗ್ರಹಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅಮರಿಂದರ್ ಸಿಂಗ್, ಕೇಂದ್ರ ಸರ್ಕಾರ ಆದಷ್ಟು ಬೇಗ ರೈತರ ಆಕ್ರೋಶವನ್ನು ತಣಿಸುವುದು ಒಳಿತು ಎಂದು ಹೇಳಿದರು. ರೈತರ ದಿಲ್ಲಿ ಚಲೋ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವಂತೆ ಮಾಡುವಲ್ಲಿ ನನ್ನ ಪಾತ್ರವೇನು ಇಲ್ಲ. ಆಕ್ರೋಶಿತ ರೈತರು ನನ್ನ ಮಾತು ಕೇಳುವುದೂ ಇಲ್ಲ. ಹೀಗಾಗಿ ದೇಶದ ಭದ್ರತೆ, ಪಂಜಾಬ್ ಆರ್ಥಿಕ ಸ್ಥಿತಿ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಆದಷ್ಟು ಬೇಗ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಅಮಿತ್ ಶಾ ಅವರಿಗೆ ಹೇಳಿದ್ದಾಗಿ ಕ್ಯಾ.ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಪದ್ಮವಿಭೂಷಣ ಹಿಂತಿರುಗಿಸಿದ ಪ್ರಕಾಶ್ ಸಿಂಗ್ ಬಾದಲ್.!
ಕೇಂದ್ರದ ಹೊಸ ಕೃಷಿ ಕಾನೂನುಗಳ ಜಾರಿ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆ ಇದೀಗ ಬೇರೆ ಬೇರೆ ಆಯಾಮಗಳನ್ನು ಪಡೆಯುತ್ತಿದೆ. ಕೇಂದ್ರ ಸರ್ಕಾರ ರೈತರನ್ನು ನಡೆಸಿಕೊಳ್ಳುತ್ತಿರುವ ಪರಿಯನ್ನು ಖಂಡಿಸಿರುವ ಪಂಜಾಬ್ ಮಾಜಿ ಮುಖ್ಯಮಂತ್ರಿ ಹಾಗೂ ಶಿರೋಮಣಿ ಅಕಾಲಿದಳ(SAD) ನಾಯಕ ಪ್ರಕಾಶ್ ಸಿಂಗ್ ಬಾದಲ್ ತಮಗೆ ನೀಡಲಾಗಿದ್ದ ಪದ್ಮವಿಭೂಷಣ ಪ್ರಶಸ್ತಿಯನ್ನು ಹಿಂತಿರುಗಿಸಿದ್ದಾರೆ. ರೈತರ ಬೇಡಿಕೆಗಳನ್ನು ಪರಿಗಣಿಸದಿರುವ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿರುವ ಪ್ರಕಾಶ್ ಸಿಂಗ್ ಬಾದಲ್, 2015ರಲ್ಲಿ ತಮಗೆ ನೀಡಲಾಗಿದ್ದ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮ ವಿಭೂಷಣವನ್ನು ಹಿಂತಿರುಗಿಸಿದ್ದಾರೆ. ರೈತರು ತಮ್ಮ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಹಾಗೂ ಆಡಳಿತಾರೂಢ ಬಿಜೆಪಿ ಪಕ್ಷ ರೈತರನ್ನು ನಡೆಸಿಕೊಳ್ಳುತ್ತಿರುವ ರೀತಿ ತಮ್ಮಿಂದ ಸಹಿಸಿಕೊಳ್ಳಲಾಗುತ್ತಿಲ್ಲ ಎಂದು 92 ವರ್ಷದ ಪ್ರಕಾಶ್ ಸಿಂಗ್ ಬಾದಲ್ ಅಸಮಾಧಾನ ಹೊರಹಾಕಿದ್ದಾರೆ.
ರಾಜಕೀಯಕ್ಕೆ ತಲೈವಾ ಎಂಟ್ರಿ ಖಚಿತ..!
ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆ ರೋಚಕತೆಗೆ ಸಾಕ್ಷಿಯಾಗುವ ಎಲ್ಲ ಲಕ್ಷಣಗಳು ಕಾಣುತ್ತಿದ್ದು, ಸೂಪರ್ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ಎಂಟ್ರಿ ನೀಡುವುದು ಖಚಿತ ಆಗಿದೆ. ಈ ಬಗ್ಗೆ ಅವರೇ ಸ್ವತಃ ಟ್ವೀಟ್ ಮಾಡಿದ್ದು, 'ಪಕ್ಷವನ್ನು ಜನವರಿಯಲ್ಲಿ ಲಾಂಚ್ ಮಾಡಲಿದ್ದೇನೆ. ಈ ಕುರಿತಂತೆ ಡಿ.31ರಂದು ಘೋಷಣೆ ಮಾಡಲಾಗುವುದು' ಎಂದು ತಿಳಿಸಿದ್ದಾರೆ. 'ಜನರ ಬೆಂಬಲದಿಂದ ಮುಂಬರುವ ಚುನಾವಣೆಯಲ್ಲಿ ನಾವು ದೊಡ್ಡ ಗೆಲುವು ಸಾಧಿಸುತ್ತೇನೆ. ತಮಿಳುನಾಡಿನಲ್ಲಿ ಪಾರದರ್ಶಕ ಮತ್ತು ಪ್ರಾಮಾಣಿಕವಾದ ಒಂದು ಹೊಸಬಗೆಯ ರಾಜಕೀಯ ಮುನ್ನೆಲೆಗೆ ಬರಲಿದೆ. ಭ್ರಷ್ಟಾಚಾರವಿಲ್ಲದ, ಜಾತಿ-ಧರ್ಮಗಳ ಭೇದ ಇಲ್ಲ ರಾಜಕೀಯ ಇದಾಗಿರಲಿದೆ. ಅದ್ಭುತಗಳು ನಡೆಯಬಹುದು' ಎಂದು ರಜನಿಕಾಂತ್ ಭರವಸೆ ನೀಡಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸ್ಥಿರ; ಕೊಪ್ಪಳದಲ್ಲಿ ಜೀರೋ ಕೇಸ್
ರಾಜ್ಯದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಸ್ಥಿರತೆ ಕಂಡುಬಂದಿದ್ದು, ಕಳೆದ 24 ಗಂಟೆಗಳಲ್ಲಿ 1446 ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು, 894 ಜನ ಮಾತ್ರ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಗುಣಮುಖ ಪ್ರಮಾಣ ಏರಿಕೆಯಾಗದಿರುವುದು ಆತಂಕ ಮೂಡಿಸಿದೆ. 13 ಜನ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಆದರೆ, ಕೊಪ್ಪಳ ಜಿಲ್ಲೆಯಲ್ಲಿ ಯಾವುದೇ ಹೊಸ ಪ್ರಕರಣಗಳು ಕಂಡುಬಂದಿಲ್ಲದಿರುವುದು ಅಲ್ಲಿನ ಜನಕ್ಕೆ ಸಂತಸ ಉಂಟುಮಾಡಿದೆ. ಹೊಸ ಪ್ರಕರಣಗಳೊಂದಿಗೆ ಕರ್ನಾಟಕದಲ್ಲಿ ಒಟ್ಟು ಪಾಸಿಟಿವ್ ಕೇಸ್ಗಳ ಸಂಖ್ಯೆ 8,89,113ಕ್ಕೆ ಏರಿದೆ. ಇದರಲ್ಲಿ 8,52,584 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. 24,689 ಪ್ರಕರಣಗಳು ಸಕ್ರಿಯವಾಗಿವೆ. ಬೆಂಗಳೂರಿನಲ್ಲಿ ಪ್ರಕರಣಗಳ ಸಂಖ್ಯೆ ಕೊಂಚ ಹೆಚ್ಚಾಗಿದೆ. ಗುರುವಾರ 758 ಹೊಸ ಪಾಸಿಟಿವ್ ಕೇಸ್ಗಳು ಪತ್ತೆಯಾಗಿವೆ.
ಚಂದ್ರನ ಮಾದರಿಯನ್ನು ಭೂಮಿಗೆ ಕಳುಹಿಸಲು ಚೀನಾ ನೌಕೆ ಸಜ್ಜು..!
ಚಂದ್ರನ ಅಧ್ಯಯನಕ್ಕಾಗಿ ಚೀನಾ ರವಾನಿಸಿರುವ Chang'e-5 ಬಾಹ್ಯಾಕಾಶ ನೌಕೆ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದಿದ್ದು, ಚಂದ್ರನ ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ರವಾನಿಸಲು ಸಿದ್ಧತೆ ನಡೆಸಿದೆ. ಈ ಕುರಿತು ಮಾಹಿತಿ ನೀಡಿರುವ ಚೀನಾದ ಬಾಹ್ಯಾಕಾಶ ಸಂಸ್ಥೆ, Chang'e-5 ಚಂದ್ರನ ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ರವಾನಿಸುವ ಕಾರ್ಯಾಚರಣೆಗೆ ಮುಂದಡಿ ಇಟ್ಟಿದೆ ಎಂದು ಸ್ಪಷ್ಟಪಡಿಸಿದೆ. ಚಂದ್ರನ ಮಾದರಿಗಳನ್ನು ರಿಟರ್ನ್ ಕ್ಯಾಪ್ಸುಲ್ ಆಗಿ ಪ್ಯಾಕ್ ಮಾಡಿ ಭೂಮಿಗೆ ಕಳುಹಿಸಲು Chang'e-5 ಕೆಲಸ ಆರಂಭಿಸಿದ್ದು, ಡಿ.17ರಂದು ಮಂಗೋಲಿಯಾದಲ್ಲಿ ಈ ಬಾಹ್ಯಾಕಾಶ ನೌಕೆ ಇಳಿಯಲಿದೆ. ಚಂದ್ರನ ಓಷಿಯನಸ್ ಪ್ರೊಸೆಲ್ಲಾರಮ್ ಅಥವಾ ಓಷನ್ ಆಫ್ ಸ್ಟ್ರೋರ್ಮ್ಸ್ ಪ್ರದೇಶದಲ್ಲಿ ಲ್ಯಾಂಡ್ ಆಗಿರುವ Chang'e-5, ಸದ್ಯ ಮಾನ್ಸ್ ರಾಮ್ಕರ್ ಎಂಬ ಜ್ವಾಲಾಮುಖಿ ಪ್ರಸ್ಥಭೂಮಿಯ ಪೂರ್ವದಲ್ಲಿ ಕಾರ್ಯನಿರತವಾಗಿದೆ ಎನ್ನಲಾಗಿದೆ.
ನೀವು ಸೇವಿಸುವ ಬ್ರಾಂಡೆಡ್ ಜೇನುತುಪ್ಪ ಕಲಬೆರಕೆ..!
ಭಾರತದಲ್ಲಿ ಇರುವ ಬಹುತೇಕ ಬ್ರಾಂಡ್ಗಳ ಜೇನುತುಪ್ಪ ಕಲಬೆರಕೆ ಎಂಬ ತೀರ್ಪು ಹೊರಬಿದ್ದಿದೆ..! ವಿಜ್ಞಾನ ಹಾಗೂ ಪರಿಸರ ಕೇಂದ್ರ (ಸಿಎಸ್ಇ) ದೇಶಾದ್ಯಂತ ನಡೆಸಿದ ಸಂಶೋಧನೆ ವೇಳೆ ಈ ಫಲಿತಾಂಶ ಲಭ್ಯವಾಗಿದೆ ಭಾರತದಲ್ಲಿ ಇರುವ ಜೇನುತುಪ್ಪ ಮಾರಾಟ ಬ್ರಾಂಡ್ಗಳ ಪೈಕಿ ಶೇ. 77ರಷ್ಟು ಬ್ರಾಂಡ್ಗಳ ಜೇನುತುಪ್ಪ ನಕಲಿಎಂದು ಪತ್ತೆಯಾಗಿದೆ. ತಪಾಸಣೆ ವೇಳೆ ಜೇನುತುಪ್ಪದಲ್ಲಿ ಸಕ್ಕರೆ ಪಾಕ ಸಿಕ್ಕಿದೆ. ಡಾಬರ್, ಪತಂಜಲಿ, ಬೈದ್ಯನಾಥ್ ಹಾಗೂ ಝಂಡು ಸೇರಿ ದೇಶದ 13 ಅತ್ಯುನ್ನತ ಜೇನುತುಪ್ಪದ ಬ್ರಾಂಡ್ಗಳನ್ನೂ ತಪಾಸಣೆಗೆ ಒಳಪಡಿಸಲಾಗಿತ್ತು. ಈ ಪೈಕಿ ಕೇವಲ ಮೂರು ಬ್ರಾಂಡ್ಗಳು ಮಾತ್ರ ಪರೀಕ್ಷೆಯಲ್ಲಿ ಪಾಸ್ ಆಗಿವೆ. ನ್ಯೂಕ್ಲಿಯರ್ ಮ್ಯಾಗ್ನೆಟಿಕ್ ರೆಸ್ಪಾನ್ಸ್ ಸ್ಪೆಕ್ಟ್ರೋಸ್ಕೋಪಿ ಎನ್ನಲಾಗುವ ಈ ಪರೀಕ್ಷೆಯಲ್ಲಿ ಪಾಸ್ ಆಗಲು ಬಹುತೇಕ ಕಂಪನಿಗಳು ತಿಣುಕಾಡಿವೆ.