ಅತ್ತ ದಿಲ್ಲಿಯಲ್ಲಿ ರೈತರ ಪ್ರತಿಭಟನೆ ಜೋರಾಗಿದ್ದರೆ, ರಾಜ್ಯದಲ್ಲಿ ರಾಜಕೀಯ ವಿಷಯಗಳು ಸದ್ದು ಮಾಡಿದವು. ಲವ್ ಜಿಹಾದ್ ಕಾನೂನಿಗೆ ವಿರೋಧಿಸುತ್ತಾ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಮೊಘಲರ ಕಾಲದಲ್ಲಿ ಹಿಂದೂ-ಮುಸ್ಲಿಂ ಕ್ರಾಸ್ ಆಗಿ ಬಹಳಷ್ಟು ಜನ ಹುಟ್ಟಿದ್ದಾರೆ ಎಂದು ಹೇಳುವ ಮೂಲಕ ಹಿಂದೂ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇನ್ನು, ಸಚಿವ ಸಂಪುಟಕ್ಕೆ ಸಿಪಿ ಯೋಗೇಶ್ವರ್ಗೆ ಪ್ರವೇಶ ಸಿಗುವುದು ಖಚಿತವಾಗಿದ್ದು, ಸ್ವತಃ ಸಿಎಂ ಇದನ್ನು ಹೇಳಿರುವುದು ಮಹತ್ವ ಪಡೆದಿದೆ.
ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಎಚ್ ವಿಶ್ವನಾಥ್ ಅವರು ಸಚಿವರಾಗಲು ಅರ್ಹರಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದ ನಂತರ ಸುಪ್ರೀಂ ಮೊರೆಹೋಗಲು ಹಳ್ಳಿಹಕ್ಕಿ ತೀರ್ಮಾನಿಸಿದೆ. ಅವರಿಗೆ ಮೈಸೂರಿನಲ್ಲಿ ಟಾಂಗ್ ನೀಡಿರುವ ಸಾರಾ ಮಹೇಶ್ ಕಾರ್ಯಕರ್ತರು ಹಾಗೂ ನನ್ನ ನಿಟ್ಟುಸಿರು ವಿಶ್ವನಾಥ್ಗೆ ತಟ್ಟಿದೆ ಎಂದಿದ್ದಾರೆ. ಇನ್ನು, ವಿಜಯನಗರ ಜಿಲ್ಲೆಯ ಘೋಷಣೆ ಹಿಟ್ಲರ್ ತೀರ್ಮಾನವಲ್ಲ ಎಂದು ಶ್ರೀರಾಮುಲು ಕಂಪ್ಲಿ ಶಾಸಕ ಜೆಎನ್ ಗಣೇಶ್ಗೆ ತಿರುಗೇಟು ನೀಡಿದ್ದರೆ, ರಾಜ್ಯದಲ್ಲಿ ಕೊರೊನಾ ವೈರಸ್ ಮತ್ತೆ ಸಾವಿರದ ಗಡಿ ದಾಟಿದೆ. ಇವುಗಳು ಜೊತೆ ಇನ್ನೂ ಹಲವು ಸುದ್ದಿಗಳು ಮಂಗಳವಾರದ ಟಾಪ್ 10 ಸುದ್ದಿಯಲ್ಲಿ ನೋಡಿ.
ತೀರ್ಮಾನಗಳಿಲ್ಲದೇ ಅಂತ್ಯಗೊಂಡ ಕೇಂದ್ರ-ರೈತರ ಸಭೆ
ಕೇಂದ್ರದ ಕೃಷಿ ಕಾನೂನುಗಳ ಪೂರ್ವಾಪರ ಚರ್ಚಿಸಲು ಕೇಂದ್ರ ಸರಕಾರ ಮತ್ತು ರೈತ ಸಂಘಟನೆಗಳ ನಡುವೆ ನಡೆದ ಸಭೆ, ಯಾವುದೇ ನಿರ್ದಿಷ್ಟ ತೀರ್ಮಾನಗಳಿಲ್ಲದೇ ಅಂತ್ಯಗೊಂಡಿದೆ. ಕೇಂದ್ರ ಸರ್ಕಾರ ಮುಂದಿಟ್ಟ ತಜ್ಞ ಸಲಹಾ ಸಮಿತಿ ರಚನೆ ಪ್ರಸ್ತಾವನೆಯನ್ನು ತಿರಸ್ಕರಿಸಿರುವ ರೈತ ಸಂಘಟನೆಗಳು, ನೇರವಾಗಿ ರೈತರೊಂದಿಗೆ ಮಾತ್ರ ಮಾತುಕತೆ ನಡೆಸುವಂತೆ ಆಗ್ರಹಿಸಿವೆ. ಈ ಹಿನ್ನೆಲೆಯಲ್ಲಿ ಇಂದಿನ(ಡಿ.01-ಮಂಗಳವಾರ) ಯಾವುದೇ ತಾರ್ಕಿಕ ತೀರ್ಮಾನಗಳಿಲ್ಲದೇ ಅಂತ್ಯಗೊಂಡಿದೆ. ಆದರೂ ಡಿ.03ರಂದು ಮತ್ತೊಂದು ಸುತ್ತಿನ ಚರ್ಚೆ ನಡೆಸಲು ಎರಡೂ ಬಣ ಒಪ್ಪಿಕೊಂಡಿವೆ. ಕೃಷಿ ನೀತಿಗಳ ಪೂರ್ವಾಪರ ಕುರಿತು ಚರ್ಚಿಸಲು ಕೇಂದ್ರ ಸರ್ಕಾರ, ರೈತ ಸಂಘಟನೆಗಳು ಹಾಗೂ ಕೃಷಿ ತಜ್ಞರನ್ನೊಳಗೊಂಡ ಸಮಿತಿ ರಚನೆಗೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸಲಹೆ ನೀಡಿದ್ದರು. ಆದರೆ, ಅದನ್ನು ರೈತ ಸಂಘಟನೆಗಳು ತಿರಸ್ಕರಿಸಿವೆ.
ಕೇಂದ್ರದ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ
ದಿಲ್ಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಎಚ್ಚೆತ್ತುಕೊಳ್ಳಿ, ದುರಹಂಕಾರ ಬಿಡಿ, ರೈತರ ಹಕ್ಕುಗಳಿಗಾಗಿ ಸ್ಪಂದಿಸಿ ಎಂದು ಆಗ್ರಹಿಸಿದ್ದಾರೆ. ಈ ಸಂಬಂಧ ಟ್ವಿಟ್ಟರ್ನಲ್ಲಿ ಸರ್ಕಾರದ ವಿರುದ್ಧ ಕಿಡಿಕಾರಿರುವ ರಾಹುಲ್ ಗಾಂಧಿ, ಅನ್ನದಾತರಿಗೆ ದೇಶದ ನಾವೆಲ್ಲರೂ ಋಣಿಗಳು. ಅವರಿಗೆ ನ್ಯಾಯ ಒದಗಿಸುವ ಮೂಲಕ ನಾವು ಅವರ ಋಣ ತೀರಿಸಬೇಕು ಎಂದು ರಾಹುಲ್ ಅಭಿಪ್ರಾಯಪಟ್ಟಿದ್ದಾರೆ. ರೈತರು ರಸ್ತೆಗಳಲ್ಲಿ, ಬಯಲಲ್ಲಿ ಕುಳಿತಿದ್ದಾರೆ, ನೀವು ಟಿವಿಯಲ್ಲಿ ಭಾಷಣ ಮಾಡುತ್ತಿದ್ದೀರಿ. ನಾವೆಲ್ಲರೂ ರೈತರಿಗೆ ಋಣಿಗಳು, ಅವರಿಗೆ ನ್ಯಾಯ ಒದಗಿಸುವ ಮೂಲಕ, ಅವರ ಹಕ್ಕುಗಳನ್ನು ಅವರಿಗೆ ನೀಡುವ ಮೂಲಕ ನಾವು ಈ ಋಣ ತೀರಿಸಬೇಕು. ಇದರ ಬದಲು ನಾವು ಅವರ ಮೇಲೆ ದೌರ್ಜನ್ಯ ಎಸಗಬಾರದು, ಅಶ್ರುವಾಯು ಸಿಡಿಸಬಾರದು ಎಂದು ಹಿಂದಿಯಲ್ಲಿ ರಾಹುಲ್ ಟ್ವೀಟ್ ಮಾಡಿದ್ದಾರೆ.
ಸಿಪಿ ಯೋಗೇಶ್ವರ್ಗೆ ಸಚಿವ ಸ್ಥಾನ ಫಿಕ್ಸ್..!
ಪರಿಷತ್ ಸದಸ್ಯ ಸಿಪಿ ಯೋಗೇಶ್ವರ್ ಅವರಿಗೆ ಭಾಗಶಃ ಸಚಿವ ಸ್ಥಾನ ಫಿಕ್ಸ್ ಆಗಿದೆ. ಅವರನ್ನು ನೂರಕ್ಕೆ ನೂರರಷ್ಟು ಸಚಿವರನ್ನಾಗಿ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರೇ ಸ್ವತಃ ಭರವಸೆ ನೀಡಿದ್ದಾರೆ. ಯೋಗೇಶ್ವರ್ಗೆ ಸಚಿವ ಸ್ಥಾನ ನೀಡುವ ಕುರಿತಂತೆ ಮಾಧ್ಯಮದವರ ಪ್ರಶ್ನೆಗೆ ವಿಧಾನಸೌಧದಲ್ಲಿ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಅವರಿಗೆ ಸಚಿವ ಸ್ಥಾನ ನೀಡುತ್ತೇವೆ ಎಂದರು. ಇತ್ತೀಚೆಗಷ್ಟೇ ‘ಯೋಗೇಶ್ವರ್ ಪರ ಬ್ಯಾಟಿಂಗ್ ಮಾಡುವವರು ಸಚಿವ ಸ್ಥಾನ ತ್ಯಾಗ ಮಾಡಲಿ’ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಶಾಸಕ ರೇಣುಕಾಚಾರ್ಯ ಹೇಳಿಕೆ ನೀಡಿದ್ದರು. ಆದರೆ, ಇದೀಗ ಸಿಪಿ ಯೋಗೇಶ್ವರ್ ಪರ ಸಿಎಂ ಬಿಎಸ್ವೈ ಅವರೇ ನಿಂತಿರುವುದು ಸಿಎಂ ಆಪ್ತರಿಗೆ ಇರುಸು-ಮುರುಸು ಉಂಟುಮಾಡಿದೆ.
'ಮೊಗಲರ ಕಾಲದಲ್ಲಿ ಹಿಂದೂ-ಮುಸ್ಲಿಂ ಕ್ರಾಸ್ ಆಗಿ ಹುಟ್ಟಿದವರು ಬಹಳಷ್ಟಿದ್ದಾರೆ'
ಲವ್ ಜಿಹಾದ್ ನಿಷೇಧ ಕಾನೂನು ಜಾರಿ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ದೇಶದಲ್ಲಿ 600 ವರ್ಷಗಳ ಕಾಲ ಆಳ್ವಿಕೆ ನಡೆಸಿದ ಮೊಗಲರ ಕಾಲದಲ್ಲಿ ಹಿಂದೂ-ಮುಸ್ಲಿಂ ಕ್ರಾಸ್ ಆಗಿ ಹುಟ್ಟಿದವರು ಸಾಕಷ್ಟು ಜನರಿದ್ದಾರೆ. ಇಂತಹ ಸಂದರ್ಭದಲ್ಲಿ ಲವ್ ಜಿಹಾದ್ ತಡೆ ಕಾಯ್ದೆ ಮೂರ್ಖತನ. ಇದಕ್ಕೆ ಸಂವಿಧಾನ ಅವಕಾಶ ನೀಡಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಲವ್ ಜಿಹಾದ್ ನಿಷೇಧಕ್ಕೆ ಕಾಯ್ದೆ ಜಾರಿ ಅಸಂವಿಧಾನಿಕ. ಕಾನೂನಿನಲ್ಲಿ ವಯಸ್ಕರಾದವರಿಗೆ ಯಾರನ್ನು ಬೇಕಾದರು ಮದುವೆಯಾಗುವ ಸ್ವಾತಂತ್ರ್ಯ ಇದೆ. ಆದರೆ ವಿವೇಕ ಇಲ್ಲದೆ ಲವ್ ಜಿಹಾದ್ ತಡೆ ಕಾಯ್ದೆ ಜಾರಿಗೆ ತರುತ್ತಿದ್ದಾರೆ ಎಂದು ಕಿಡಿಕಾರಿದರು.
'ನಮ್ಮಿಂದ ಸಹಾಯ ಪಡೆದವರು ನನ್ನ ಸಹಾಯಕ್ಕೆ ಬರಲಿಲ್ಲ'
ಸಚಿವ ಸ್ಥಾನಕ್ಕೆ ಅನರ್ಹರಾಗಿರುವ ಎಚ್ ವಿಶ್ವನಾಥ್ ಅನೇಕರ ಮೇಲೆ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮ್ಮಿಂದ ಸಹಾಯ ಪಡೆದುಕೊಂಡು ಸರ್ಕಾರ ರಚನೆ ಮಾಡಿ ಎಲ್ಲ ಅನುಭವಿಸುತ್ತಿರುವವರು ನಮ್ಮ ಕಷ್ಟ ಕಾಲದಲ್ಲಿ ಯಾಕೆ ನನ್ನ ಸಹಾಯಕ್ಕೆ ಬರಲಿಲ್ಲ ಎಂದು ಅವರು ಹೇಳಿದ್ದಾರೆ. ಸಚಿವ ಸ್ಥಾನಕ್ಕೆ ನಾನು ಕಾಯುತ್ತಿದ್ದೇನೆ ಎಂದಲ್ಲ. ನಾನು ರಾಜಕಾರಣವನ್ನು ವ್ಯವಹಾರವಾಗಿ ತೆಗೆದುಕೊಂಡಿಲ್ಲ, ಬದಲಾಗಿ ಸಾಂಸ್ಕೃತಿಕ ಹೋರಾಟವಾಗಿ ತೆಗೆದುಕೊಂಡವನು. ಸಚಿವನಾಗಿ ನನ್ನ ಕಾರ್ಯವೈಖರಿ ಜನತೆಗೆ ಗೊತ್ತಿದೆ. ವಿಧಾನ ಪರಿಷತ್ ಸದಸ್ಯತ್ವಕ್ಕೆ ಜೂನ್ನಲ್ಲಿ ಕೋರ್ ಕಮಿಟಿ ಕಳುಹಿಸಿದ್ದ ಮೊದಲ ಪಟ್ಟಿಯಲ್ಲಿ ನನ್ನ ಹೆಸರಿತ್ತು. ವಾಪಸ್ ಬಂದಾಗ ನನ್ನ ಹೆಸರು ಕೈ ಬಿಟ್ಟು ಹೋಗಿತ್ತು. ಏಕೆ ಅಂತಾ ತಿಳಿಯಲಿಲ್ಲ ಎಂದು ಹೇಳಿದರು. ಆದರೆ, ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಮೆಟ್ಟಿಲೇರುವುದಾಗಿ ಅವರು ಹೇಳಿದರು.
'ವಿಶ್ವನಾಥ್ಗೆ ನನ್ನ, ಕಾರ್ಯಕರ್ತರ ನಿಟ್ಟುಸಿರು ತಟ್ಟಿದೆ'
ಸಚಿವ ಸ್ಥಾನಕ್ಕೆ ಅನರ್ಹ ಎಂದು ಹೈಕೋರ್ಟ್ನಿಂದ ತೀರ್ಪು ಪಡೆದಿರುವ ಎಚ್ ವಿಶ್ವನಾಥ್ ವಿರುದ್ಧ ಜೆಡಿಎಸ್ ಶಾಸಕ ಸಾರಾ ಮಹೇಶ್ ಕಿಡಿಕಾರಿದರು. ಕಾರ್ಯಕರ್ತರಿಗೆ ಮೋಸ ಮಾಡಿದರೆ ದೇವರು ಕೂಡ ಕ್ಷಮಿಸಲ್ಲ. ಆಣೆ ಪ್ರಮಾಣ ನಡೆದು ಸರಿಯಾಗಿ ಒಂದೇ ವರ್ಷಕ್ಕೆ ಸತ್ಯ ಯಾವುದು ಎಂದು ತೀರ್ಮಾನವಾಗಿದೆ. ಚಾಮುಂಡಿ ದೇವಿ ನ್ಯಾಯ ದೇವತೆ ಮೂಲಕ ತಪ್ಪು ಮಾಡಿದವರಿಗೆ ಶಿಕ್ಷೆ ನೀಡಿದ್ದಾಳೆ ಎಂದು ಸಾರಾ ಮಹೇಶ್ ಹೇಳಿದರು. ಕಳೆದ ವರ್ಷ ನಾನು ದೇವಾಲಯದಲ್ಲಿ ತಾಯಿ ಬಳಿ ತಪ್ಪು ಯಾರದ್ದು, ಸರಿ ಯಾರದ್ದು ಎಂದು ತೋರಿಸುವಂತೆ ಹೇಳಿದ್ದೆ. ಪ್ರಸಂಗ ನಡೆದ ಒಂದೇ ವರ್ಷಕ್ಕೆ ತೀರ್ಪು ಬಂದಿದೆ. ತಪ್ಪು ಮಾಡಿದರೂ ಶಕ್ತಿ ದೇವತೆ ಮುಂದೆ ಕೂತರೆ ಏನಾಗುತ್ತದೆ ಎಂಬುದಕ್ಕೆ ಇದು ಉದಾಹರಣೆ ಎಂದರು.
ಜೆಡಿಎಸ್ ತೊರೆಯಲ್ಲ ಎಂದು ವೈಎಸ್ವಿ ದತ್ತ ಸ್ಪಷ್ಟನೆ
ಮಾಜಿ ಶಾಸಕ ವೈಎಸ್ವಿ ದತ್ತ ಜೆಡಿಎಸ್ ತೊರೆಯುತ್ತಾರೆ ಎಂಬ ಸುದ್ದಿಗಳನ್ನು ಸ್ವತಃ ಅವರೇ ನಿರಾಕರಿಸಿದ್ದಾರೆ. ಈ ಕುರಿತು ತಮ್ಮ ಫೇಸ್ಬುಕ್ ವಾಲ್ನಲ್ಲಿ ಸ್ಪಷ್ಟೀಕರಣ ನೀಡಿರುವ ಅವರು, ಸೋಮವಾರ ರಾತ್ರಿ ಎಚ್ಡಿ ದೇವೇಗೌಡರ ಮನೆಗೆ ಹೋಗಿ ಅವರ ಆರೋಗ್ಯ ವಿಚಾರಿಸಿಕೊಂಡು ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಗಳ ಬಗ್ಗೆ ಮಾತನಾಡಿಕೊಂಡು ಬಂದಿದ್ದೇನೆ. ನನ್ನ ತಲೆಯಲ್ಲಿ ಇದುವರೆಗೂ ಬಂದಿಲ್ಲದ ಆಲೋಚನೆಯನ್ನು ಟಿವಿ ಅವರು ಸುದ್ದಿ ಅಂತ ಪ್ರಸಾರ ಮಾಡಿದ್ದಾರೆ. ಸುದ್ದಿಯನ್ನು ಇವರೇ ಸೃಷ್ಟಿಸಿ ಪ್ರಸಾರ ಮಾಡುವ ಮುನ್ನ ನಮ್ಮದೊಂದು ಪ್ರತಿಕ್ರಿಯೆ ಕೇಳಬೇಕಲ್ಲವೇ ? ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸುಮ್ಮನೆ ಇವನ್ನೆಲ್ಲ ನಿರ್ಲಕ್ಷಿಸಿ. ಜೆಡಿಎಸ್ ಪಕ್ಷ ಸಂಘಟನೆ ಕಡೆ ಗಮನ ಕೊಡೋಣ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಮತ್ತೆ ಸಾವಿರದ ಗಡಿ ದಾಟಿದ ಕೊರೊನಾ..!
ರಾಜ್ಯದಲ್ಲಿ ಮತ್ತೆ ಕೊರೊನಾ ವೈರಸ್ ಹೊಸ ಪ್ರಕರಣಗಳ ಸಂಖ್ಯೆ ಸಾವಿರದ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ 1330 ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ. ಆದರೆ, ಕೇವಲ 886 ಜನ ಮಾತ್ರ ಸೋಂಕಿನಿಂದ ಚೇತರಿಸಿಕೊಂಡಿದ್ದು, ಗುಣಮುಖ ಪ್ರಮಾಣ ಕೊಂಚ ತಗ್ಗಿದೆ. ಅದಲ್ಲದೇ 14 ಕೊರೊನಾ ಸಂಬಂಧಿತ ಸಾವುಗಳು ಈ ದಿನ ಸಂಭವಿಸಿವೆ. ಹೊಸ ಪ್ರಕರಣಗಳೊಂದಿಗೆ ಕರ್ನಾಟಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 8,86,227ಕ್ಕೆ ಏರಿದೆ. ಇದರಲ್ಲಿ 8,50,707 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. 23,709 ಪ್ರಕರಣಗಳು ಸಕ್ರಿಯವಾಗಿವೆ. ಇನ್ನು, 11,792 ಜನ ಕೊರೊನಾ ವೈರಸ್ನಿಂದ ಸಾವನ್ನಪ್ಪಿದ್ದರೆ, ಬೆಂಗಳೂರಿನಲ್ಲಿ 758 ಹೊಸ ಪಾಸಿಟಿವ್ ಕೇಸ್ಗಳು ಪತ್ತೆಯಾಗಿವೆ.
ರಣಾಂಗಣವಾದ ಹೈದರಾಬಾದ್ ಪಾಲಿಕೆ ಚುನಾವಣೆ
ಹೈದರಾಬಾದ್ ಮಹಾನಗರ ಪಾಲಿಕೆ(GHMC) ಚುನಾವಣೆ ಮತದಾನದ ವೇಳೆ ಆಡಳಿತಾರೂಢ ಟಿಆರ್ಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, ಮತಕೇಂದ್ರ ರಣಾಂಗಣವಾಗಿ ಮಾರ್ಪಟ್ಟಿತ್ತು. ಇಲ್ಲಿನ ಕುಕತ್ಪಲ್ಲಿ ಮತದಾನ ಕೇಂದ್ರದ ಬಳಿ ಟಿಆರ್ಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಪರಸ್ಪರ ಕೈ ಕೈ ಮಿಲಾಯಿಸಿದ್ದು, ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಟಿಆರ್ಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪರಸ್ಪರ ಕೈ ಕೈ ಮಿಲಾಯಿಸಿದ್ದಾರೆ ಎಂದು ಹೇಳಲಾಗಿದೆ. ಬಿಜೆಪಿ ಮತ್ತು ಟಿಆರ್ಎಸ್ಗೆ ಜಿಎಚ್ಎಂಸಿ ಚುನಾವಣೆ ಪ್ರತಿಷ್ಠೆಯ ಕಣವಾಗಿದ್ದು, ಮುತ್ತಿನ ನಗರಿಯಲ್ಲಿ ಮೊದಲ ಬಾರಿಗೆ ಕಮಲ ಅರಳಿಸಲು ಬಿಜೆಪಿ ನಾಯಕರು ಭಾರೀ ತಂತ್ರ ನಡೆಸಿದ್ದಾರೆ.
ಉ. ಕೊರಿಯಾ ಸರ್ವಾಧಿಕಾರಿಗೆ ಚೀನಾದಿಂದ ರಹಸ್ಯ ಕೊರೊನಾ ಲಸಿಕೆ..!
ಜಗತ್ತಿಗೆ ಮಾರಕ ಕೊರೊನಾ ವೈರಸ್ ಹಬ್ಬಿಸಿರುವ ಆರೋಪ ಎದುರಿಸುತ್ತಿರುವ ಚೀನಾ, ಈಗ ರಹಸ್ಯವಾಗಿ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕುಟುಂಬಕ್ಕೆ ಪ್ರಾಯೋಗಿಕ ಕೊರೊನಾ ಲಸಿಕೆಯನ್ನು ರವಾನಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಕುರಿತು ಮಾತನಾಡಿರುವ 'ವಾಷಿಂಗ್ಟನ್ ಸೆಂಟರ್ ಫಾರ್ ದಿ ನ್ಯಾಷನಲ್ ಇಂಟರೆಸ್ಟ್ ಥಿಂಕ್ ಟ್ಯಾಂಕ್'ನ ಉತ್ತರ ಕೊರಿಯಾದ ತಜ್ಞ ಹ್ಯಾರಿ ಕಾಜಿಯಾನಿಸ್, ಕಿಮ್ ಜಾಂಗ್ ಉನ್ ಕುಟುಂಬ ಹಾಗೂ ಉತ್ತರ ಕೊರಿಯಾದ ಹಿರಿಯ ಸೈನ್ಯಾಧಿಕಾರಿಗಳಿಗೆ ಚೀನಾ ಪ್ರಾಯೋಗಿಕ ಕೊರೊನಾ ಲಸಿಕೆಯನ್ನು ರವಾನಿಸಿದೆ ಎಂದು ಪ್ರತಿಪಾದಿಸಿದ್ದಾರೆ. ಈಗಾಗಲೇ ಕಿಮ್ ಕುಟುಂಬ ವರ್ಗ ಮತ್ತು ಉತ್ತರ ಕೊರಿಯಾದ ಹಿರಿಯ ಸೈನ್ಯಾಧಿಕಾರಿಗಳು, ಚೀನಾ ರವಾನಿಸಿರುವ ಈ ಪ್ರಾಯೋಗಿಕ ಕೊರೊನಾ ಲಸಿಕೆಯನ್ನು ಸ್ವೀಕರಿಸಿದ್ದಾರೆ ಎಂದು ಹ್ಯಾರಿ ಕಾಜಿಯಾನಿಸ್ ಹೇಳಿದ್ದಾರೆ.