ಕೊರೊನಾ ನಡುವಲ್ಲೇ ರಾಜಕೀಯ ಕೂಡಾ ಚುರುಕಾಗಿದ್ದು, ಜೆಡಿಎಸ್ ಜೊತೆಗಿನ ಮೈತ್ರಿಗೆ ತಾವು ಈ ಹಿಂದೆಯೇ ವಿರೋಧಿಸಿದ್ದನ್ನು ಸಿದ್ದು ನೆನಪಿಸಿದ್ದಾರೆ. ಇತ್ತ ಗಾಂಧಿ ಪರಿವಾರದ ಟ್ರಸ್ಟ್ಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ತನಿಖೆಗೆ ಮುಂದಾಗಿರುವ ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಕೆಂಡಾಮಂಡಲರಾಗಿದ್ದಾರೆ. ಇನ್ನೊಂದೆಡೆ ಸಿಬಿಎಸ್ಐ ಪಠ್ಯಕ್ರಮದಿಂದ ಜಾತ್ಯತೀತತೆ, ಪೌರತ್ವ ಹಾಗೂ ಮೂಲಭೂತ ಹಕ್ಕುಗಳ ಪಾಠವನ್ನು ಕೈಬಿಟ್ಟಿರುವ ಕೇಂದ್ರದ ಕ್ರಮಕ್ಕೆ ದೀದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾನ್ಪುರ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾಸ್ಥಳದಲ್ಲಿ ಇದ್ದು ಪರಾರಿಯಾಗಿದ್ದ ಇಬ್ಬರು ಪೊಲೀಸರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಇತ್ತ ಅಮೆರಿಕದಲ್ಲಿ ಭಾರತದ ರೀತಿಯಲ್ಲೇ ಚೀನಾ ಆ್ಯಪ್ ನಿರ್ಬಂಧಿಸಲು ಚಿಂತನೆ ನಡೆಯುತ್ತಿದೆ. ಪಾಕಿಸ್ತಾನದಲ್ಲಿ ದೇಶದ ಮೊದಲ ಹಿಂದೂ ದೇಗುಲ ನಿರ್ಮಾಣಕ್ಕೆ ತಡೆ ನೀಡಲು ಅಲ್ಲಿನ ಕೋರ್ಟ್ ನಿರಾಕರಿಸಿದೆ.
1 - ಬೆಂಗಳೂರಲ್ಲಿ 30 ಸಾವಿರ ಗಡಿ ಸಮೀಪಿಸಿದ ಕೊರೊನಾ: ಬೆಂಗಳೂರಲ್ಲಿ ಉಲ್ಬಣ
ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಇಳಿಕೆಯಾಗಿದ್ದ ಕೊರೊನಾ ಸೋಂಕು, ಬುಧವಾರ ಮತ್ತೆ ಉಲ್ಬಣಗೊಂಡಿದೆ. ಒಂದೇ ದಿನ ಹೊಸ ಸೋಂಕಿತರ ಸಂಖ್ಯೆ 2 ಸಾವಿರ ಗಡಿ ದಾಟಿದೆ. ಸೋಂಕಿನಿಂದಾಗಿ ಸಾಯುವವರ ಸಂಖ್ಯೆಯಲ್ಲೂ ದಾಖಲೆಯ ಏರಿಕೆ ಕಂಡಿದೆ.
ರಾಜ್ಯದಲ್ಲಿ ಬುಧವಾರ ಒಂದೇ ದಿನ 2062 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 30 ಸಾವಿರಕ್ಕೆ ಸಮೀಪವಿದೆ. ಒಟ್ಟು ಸೋಂಕಿತರ ಸಂಖ್ಯೆ 28,877ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರ ಒಂದರಲ್ಲೇ ಬುಧವಾರ 1148 ಪ್ರಕರಣಗಳು ದೃಢವಾಗಿದ್ದು, ನಗರದಲ್ಲಿ ಒಟ್ಟು ಪಾಸಿಟಿವ್ ಕೇಸ್ಗಳ ಸಂಖ್ಯೆ 12509 ತಲುಪಿದೆ .
ರಾಜ್ಯದಲ್ಲಿ ತಗ್ಗುತ್ತಿರುವ ಕೊರೊನಾ ಆರ್ಭಟ..! 1498 ಹೊಸ ಕೇಸ್, 2 ದಿನದಿಂದ ಸೋಂಕು ಇಳಿಕೆ
2 - ಕೊರೊನಾ ಲಕ್ಷಣ ಇಲ್ಲದವರು ಆಸ್ಪತ್ರೆಗೆ ಆಂಬ್ಯುಲೆನ್ಸ್ನಲ್ಲೇ ಹೋಗುವ ಅಗತ್ಯವಿಲ್ಲ: ಸುಧಾಕರ್
ಕೊರೊನಾ ಸೋಂಕು ಲಕ್ಷಣ ಇಲ್ಲದವರಿಗೆ ಅಂಬ್ಯುಲೆನ್ಸ್ನಲ್ಲಿ ಆಸ್ಪತ್ರೆಗೆ ಅಥವಾ ಕೋವಿಡ್ ಕೇರ್ ಸೆಂಟರ್ಗೆ ತೆರಳಬೇಕಾದ ಅಗತ್ಯ ಇಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ಆಂಬ್ಯುಲೆನ್ಸ್ ಕೊರತೆ ಇದೆ ಎಂಬ ಕುರಿತಾದ ಸುದ್ದಿಗಳ ಹಿನ್ನೆಲೆಯಲ್ಲಿ ಮಾತನಾಡಿದ ಅವರು ಸೋಂಕು ಲಕ್ಷಣಗಳನ್ನು ಹೊಂದಿದವರಿಗೆ ಮಾತ್ರ ಅಂಬ್ಯುಲೆನ್ಸ್ ಅಗತ್ಯ ಇದೆ. ಉಳಿದವರು ಇತರ ವಾಹನಗಳಲ್ಲಿ ಬಂದು ತಪಾಸಣೆ ನಡೆಸಬಹುದು ಎಂದರು.
ಹೀಗಿದ್ದರೂ ಬೆಂಗಳೂರಿಲ್ಲಿ 500 ವಾಹನಗಳ ವ್ಯವಸ್ಥೆ ಕಲ್ಪಿಸಲಾಗುವುದು. ಸೋಂಕು ಪಾಸಿಟಿವ್ ಇದ್ದವರಿಗೆ ನೇರವಾಗಿ ಬಿಬಿಎಂಪಿ ಫೋನ್ ಮಾಡಿ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆಯನ್ನು ಮಾಡಲಿದೆ. ಮುಂದಿನ ದಿನಗಳಲ್ಲಿ ವೈಜ್ಞಾನಿಕವಾಗಿ ಹಾಗೂ ವ್ಯವಸ್ಥಿತವಾಗಿ ಕೊರೊನಾ ಸೋಂಕು ನಿರ್ವವಣೆ ಮಾಡಲಾಗುತ್ತದೆ ಎಂದರು.
ಕೊರೊನಾ ಲೈವ್ ಅಪ್ಡೇಟ್ಸ್: ವಿಶ್ವದಾದ್ಯಂತ 5,46,720ಕ್ಕೂ ಹೆಚ್ಚು ಜನರ ಬಲಿ!
3 - ಕೊರೊನಾ ಹಗರಣಕ್ಕೆ ನಿರಾಣಿ 'ಪೆನ್ ಡ್ರೈವ್' ಸಾಕ್ಷಿ: ಸಿದ್ದು ಬಾಂಬ್
ವೈದ್ಯಕೀಯ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಂಬಂಧ ಟ್ಟಿಟ್ಟರ್ನಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ. ಅವ್ಯವಹಾರ ನಡೆದಿಲ್ಲ ಎಂದು ವಾದಿಸಿದ್ದ ಕರ್ನಾಟಕದ ಸಚಿವರುಗಳಿಗೆ ಪ್ರತ್ಯುತ್ತರ ನೀಡಿರುವ ಅವರು, ವೈದ್ಯಕೀಯ ಉಪಕರಣ ಖರೀದಿ ಅವ್ಯವಹಾರದ ದಾಖಲೆ ಕೇಳ್ತಿದ್ರಲ್ವಾ? ನಿಮ್ಮ ಪಕ್ಷದ ಮಾಜಿ ಸಚಿವ ಮುರುಗೇಶ್ ನಿರಾಣಿ ಬಳಿ ಇರುವ ಪೆನ್ಡ್ರೈವ್ನಲ್ಲಿ ಇದೆಯಂತೆ ಸಂಗ್ರಹಿಸಿಕೊಳ್ಳಿ ಅಂತ ಟ್ಟೀಟ್ ಮಾಡಿದ್ದಾರೆ.
ಆರೋಗ್ಯ ಸಚಿವ ಬಿ. ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಿ. ಸುಧಾಕರ್ ಹಾಗೂ ಉಪ ಉಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ಉಲ್ಲೇಖಿಸಿ ಈ ಟ್ಟೀಟ್ ಮಾಡಿರುವ ಸಿದ್ದರಾಮಯ್ಯ, 'ಸಾರ್ವಜನಿಕ ಲೆಕ್ಕ ಪತ್ರ ಸಮಿತಿ (ಪಿಎಸಿ)' ಸಭೆಯಲ್ಲಿ ಮುರುಗೇಶ್ ನಿರಾಣಿ ಹೇಳಿದ್ದೆನ್ನಲಾದ ಹೇಳಿಕೆಯನ್ನೂ ಟ್ಟೀಟ್ ಜೊತೆಗೆ ಲಗತ್ತಿಸಿದ್ದಾರೆ.
'ಕೊರೊನಾ ನಿರ್ವಹಣಾ ಖರ್ಚು ವೆಚ್ಚಗಳ ಮಾಹಿತಿ ಕೊಡೋ ತನಕ ಹಿಂದೆ ಸರಿಯಲ್ಲ' - ಸಿದ್ದರಾಮಯ್ಯ
4 - 'ಆನ್ಲೈನ್ ಶಿಕ್ಷಣ'ಕ್ಕೆ ಅಸ್ತು ಎಂದ ಹೈಕೋರ್ಟ್!
ಭಾರೀ ಚರ್ಚೆಗೆ ಒಳಗಾಗಿದ್ದ ಆನ್ಲೈನ್ ಶಿಕ್ಷಣ ಕುರಿತಂತೆ ಕರ್ನಾಟಕ ಹೈಕೋರ್ಟ್ ಬುಧವಾರ ತೀರ್ಪು ನೀಡಿದೆ. ಈ ಹಿಂದೆ ಆನ್ಲೈನ್ ಶಿಕ್ಷಣವನ್ನು ನಿರ್ಬಂಧಿಸಿ ರಾಜ್ಯ ಸರಕಾರ ನೀಡಿದ್ದ ಎರಡೂ ಆದೇಶಗಳಿಗೂ ತಡೆ ನೀಡಿರುವ ಹೈಕೋರ್ಟ್, ಆನ್ಲೈನ್ ಶಿಕ್ಷಣಕ್ಕೆ ಹಸಿರು ನಿಶಾನೆ ತೋರಿಸಿದೆ.
ಆನ್ ಲೈನ್ ಶಿಕ್ಷಣಕ್ಕೆ ಸರಕಾರ ನಿರ್ಬಂಧ ವಿಧಿಸಿದ್ದು ಸರಿಯಲ್ಲ. ಇದು ಕಾನೂನು ಬಾಹಿರ. ಶಿಕ್ಷಣ ಮೂಲಭೂತ ಹಕ್ಕಾಗಿದೆ. ಹೀಗಾಗಿ ಕೊರೊನಾ ಸೋಂಕಿರುವ ಈ ಪರಿಸ್ಥಿತಿಯಲ್ಲಿ ಆನ್ಲೈನ್ ಶಿಕ್ಷಣವೂ ಮೂಲಭೂತ ಹಕ್ಕಾಗಿದೆ. ಹೀಗಾಗಿ ಮೂಲಭೂತ ಹಕ್ಕಾದ ಆನ್ಲೈನ್ ಶಿಕ್ಷಣಕ್ಕೆ ಸರಕಾರ ನಿರ್ಬಂಧ ಹೇರುವಂತಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ಆನ್ಲೈನ್ ಶಿಕ್ಷಣಕ್ಕೆ ನೂತನ ಮಾರ್ಗಸೂಚಿ ಸಲ್ಲಿಸಿದ ತಜ್ಞರ ಸಮಿತಿ!
5 - ಜೆಡಿಎಸ್ ಜೊತೆಗಿನ ಮೈತ್ರಿ ವಿಚಾರವನ್ನು ಮತ್ತೆ ಕೆದಕಿದ ಸಿದ್ದು!
ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಜೊತೆಗಿನ ಮೈತ್ರಿ ವಿಚಾರವನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತೆ ಪ್ರಸ್ತಾಪಿಸಿದ್ದಾರೆ. ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳದೆ ಇದ್ದಿದ್ದರೆ ಕನಿಷ್ಠ 7 ರಿಂದ 8 ಸ್ಥಾನಗಳನ್ನು ಗೆಲ್ಲುತ್ತಿದ್ದೆವು ಎನ್ನುವ ಮೂಲಕ ಹೈಕಮಾಂಡ್ ಅಂದು ತೆಗೆದುಕೊಂಡ ನಿರ್ಧಾರವನ್ನು ವಿರೋಧಿಸಿದ್ದಾರೆ.
“ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಚುನಾವಣಾ ಪೂರ್ವ ಮೈತ್ರಿ ಬೇಡ ಎಂದು ನಾನೂ ಹೇಳಿದ್ದೆ. ಇದರಿಂದ ನಿರೀಕ್ಷಿಸಿದ ಹಾಗೆ ಮತ ಧ್ರುವೀಕರಣ ಆಗುವುದಿಲ್ಲ ಎಂಬುದು ನನ್ನ ಲೆಕ್ಕಾಚಾರವಾಗಿತ್ತು. ಮೈತ್ರಿ ಮಾಡಿಕೊಳ್ಳದೆ ಇದ್ದಿದ್ದರೆ ಕನಿಷ್ಠ 7 ರಿಂದ 8 ಸ್ಥಾನಗಳನ್ನು ಗೆಲ್ಲುತ್ತಿದ್ದೆವು” ಎಂಬ ಸಿದ್ದರಾಮಯ್ಯ ಟ್ವೀಟ್ ಕುತೂಹಲ ಕೆರಳಿಸಿದೆ.
ಮೈತ್ರಿ ಸಹವಾಸ ಬೇಡ, ವೇದಿಕೆಯಲ್ಲೇ ಡಿಕೆಶಿಗೆ ಸಲಹೆ ನೀಡಿದ ದಿನೇಶ್ ಗುಂಡೂರಾವ್
6 - ಮೋದಿ ಸರಕಾರ ಭಯದಿಂದ ಕಾಂಗ್ರೆಸ್ ವಿರುದ್ಧ ದ್ವೇಷ ಕಾರುತ್ತಿದೆ: ರಾಹುಲ್
ಗಾಂಧಿ ಕುಟುಂಬದ ಜೊತೆ ಸಂಬಂಧ ಹೊಂದಿರುವ ಟ್ರಸ್ಟ್ಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣಕಾಸು ವಹಿವಾಟು ಸಂಬಂಧ ಕೇಂದ್ರ ಸರಕಾರ ತನಿಖೆಗೆ ಮುಂದಾದ ಬೆನ್ನಲ್ಲೇ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದಾರೆ.
"ಸತ್ಯಕ್ಕಾಗಿ ಹೋರಾಡುವವರಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಮತ್ತು ಬೆದರಿಸಲು ಸಾಧ್ಯವಿಲ್ಲ” ಎಂದು ಹೇಳಿರುವ ರಾಹುಲ್ ಗಾಂಧಿ, ಭಯಭೀತಗೊಂಡ ಸರಕಾರವು ಹೇಡಿತನದ ಕೃತ್ಯಗಳು ಮತ್ತು ಕುರುಡು ಶೋಧನೆಯ ಮೂಲಕ ತಮ್ಮನ್ನು ಹೆದರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಮೋದಿ ಅವರು ಜಗತ್ತು ಅವರಂತೆಯೇ ಇದೆ ಎಂದು ನಂಬಿದ್ದಾರೆ. ಪ್ರತಿಯೊಬ್ಬರನ್ನೂ ಕೊಳ್ಳಬಹುದು ಅಥವಾ ಬೆದರಿಸಬಹುದು ಎಂದು ಅವರು ಭಾವಿಸಿದ್ದಾರೆ. ಸತ್ಯಕ್ಕಾಗಿ ಹೋರಾಡುವವರಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಮತ್ತು ಬೆದರಿಸಲು ಸಾಧ್ಯವಿಲ್ಲ ಎಂದು ಅವರು ಎಂದಿಗೂ ಅರ್ಥಮಾಡಿಕೊಳ್ಳುವುದಿಲ್ಲ ಎಂದು ಮಾಜಿ ಕಾಂಗ್ರೆಸ್ ಅಧ್ಯಕ್ಷರು ಹರಿಹಾಯ್ದಿದ್ದಾರೆ.
ಕಾಂಗ್ರೆಸ್ಗೆ ಕೇಂದ್ರದ ಬಿಗ್ ಶಾಕ್..! ಗಾಂಧಿ ಮನೆತನದ 3 ಟ್ರಸ್ಟ್ಗಳ ವಿರುದ್ಧ ತನಿಖೆಗೆ ಆದೇಶ
7 - ಸಿಬಿಎಸ್ಇ ಪಠ್ಯಕ್ರಮದಿಂದ ಜಾತ್ಯಾತೀತತೆ, ಪ್ರಜಾಪ್ರಭುತ್ವ ಪಾಠ ಕೈಬಿಟ್ಟಿದ್ದಕ್ಕೆ ದೀದಿ ಖಂಡನೆ
ಕೊರೊನಾ ವೈರಸ್ ಕಾರಣ ನೀಡಿ ಸಿಬಿಎಸ್ಇ 9 ರಿಂದ 12ನೇ ತರಗತಿಯ ಅರ್ಥಶಾಸ್ತ್ರ ಹಾಗೂ ರಾಜ್ಯಶಾಸ್ತ್ರ ಪಠ್ಯಕ್ರಮದಿಂದ ಜಾತ್ಯತೀತತೆ, ಪೌರತ್ವ ಹಾಗೂ ಮೂಲಭೂತ ಹಕ್ಕುಗಳನ್ನು ಕೈಬಿಟ್ಟಿರುವುದಕ್ಕೆ ಪಶ್ಚಿಮ ಬಂಗಾಳ ಸಿಎಂ ಆಘಾತ ವ್ಯಕ್ತಪಡಿಸಿದ್ದು, ಕೇಂದ್ರದ ನಡೆಯನ್ನು ಖಂಡಿಸಿದ್ದಾರೆ.
ಈ ಬಗ್ಗೆ ಬುಧವಾರ ಟ್ವೀಟ್ ಮಾಡಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಕೇಂದ್ರ ಸರಕಾರ ಕೊರೊನಾ ವೈರಸ್ ಹಿನ್ನೆಲೆ ಸಿಬಿಎಸ್ಇ ಪಠ್ಯಕ್ರಮ ಕಡಿತಗೊಳಿಸುವ ನೆಪದಲ್ಲಿ ನಾಗರೀಕತ್ವ, ಸಂಯುಕ್ತ ವ್ಯವಸ್ಥೆ, ಜಾತ್ಯಾತೀತ ಹಾಗೂ ವಿಭಜನೆಯನ್ನು ಕೈಬಿಟ್ಟಿರುವುದು ಗೊತ್ತಾಗಿ ಆಘಾತವುಂಟಾಗಿದೆ ಎಂದು ಹೇಳಿದ್ದಾರೆ.
ಕೊರೊನಾ ಲಾಕ್ಡೌನ್ನಲ್ಲಿ ಕೋಮು ಗಲಭೆ; ಕಠಿಣ ಕ್ರಮಕ್ಕೆ ಮಮತಾ ಬ್ಯಾನರ್ಜಿ ಆದೇಶ
8 - ಕಾನ್ಪುರ್ ಎನ್ಕೌಂಟರ್ ಸ್ಥಳದಿಂದ ಕಾಲ್ಕಿತ್ತಿದ್ದ ಪೊಲೀಸರ ಬಂಧನ..!
ರೌಡಿ ವಿಕಾಸ್ ದುಬೆ ಬಂಧನಕ್ಕೆ ತೆರಳಿದ್ದ ವೇಳೆ ಸಂಭವಿಸಿದ್ದ ಎನ್ಕೌಂಟರ್ನಲ್ಲಿ 8 ಪೊಲೀಸರು ಹುತಾತ್ಮರಾದ ಘಟನೆ ದಿನ ದಿನಕ್ಕೂ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ರೌಡಿ ವಿಕಾಸ್ ದುಬೆಗೆ ಕೆಲವು ಪೊಲೀಸ್ ಅಧಿಕಾರಿಗಳೇ ಸಹಾಯ ಮಾಡುತ್ತಿದ್ದಾರೆ ಎಂದು ಮೂರು ತಿಂಗಳ ಹಿಂದೆಯೇ, ಎನ್ಕೌಂಟರ್ನಲ್ಲಿ ಹುತಾತ್ಮರಾದ ಡಿವೈಎಸ್ಪಿ ದೇವೇಂದ್ರ ಕುಮಾರ್ ಮಿಶ್ರಾ ಪತ್ರ ಬರೆದಿದ್ದರು ಎಂಬ ಮಾತುಗಳು ಕೇಳಿ ಬರುತ್ತಿವೆ.
ಅಲ್ಲದೇ ಮಿಶ್ರಾ ತಮ್ಮ ಪತ್ರದಲ್ಲಿ ಚೌಬೇಪುರ್ ಪೊಲೀಸ್ ಠಾಣೆಯ ಉಸ್ತುವಾರಿ ವಿನಯ್ ತಿವಾರಿ ಹಾಗೂ ಪೊಲೀಸ್ ಸಬ್ ಇನ್ಸಪೆಕ್ಟರ್ ಕೆಕೆ ಶರ್ಮಾ ಅವರ ಹೆಸರನ್ನೂ ಉಲ್ಲೇಖಿಸಿದ್ದರು ಎನ್ನಲಾಗಿದೆ. ಎನ್ಕೌಂಟರ್ ಸಂದರ್ಭದಲ್ಲಿ ಸ್ಥಳದಲ್ಲೇ ಹಾಜರಿದ್ದ ವಿನಯ್ ತಿವಾರಿ ಹಾಗೂ ಕೆಕೆ ಶರ್ಮಾ, ವಿಕಾಸ್ ದುಬೆ ಮತ್ತವನ ಬೆಂಬಲಿಗರು ಪೊಲೀಸರನ್ನು ನಿರ್ಯವಾಗಿ ಕೊಲ್ಲುತ್ತಿರುವ ಸಂದರ್ಭದಲ್ಲಿ ಸ್ಥಳದಿಂದ ಕಾಲ್ಕಿತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ವಿನಯ್ ತಿವಾರಿ ಹಾಗೂ ಕೆಕೆ ಶರ್ಮಾ ಅವರನ್ನು ಬಂಧಿಸಿರುವ ಪೊಲೀಸರು, ರೌಡಿ ವಿಕಾಸ್ ದುಬೆ ಜೊತೆಗೆ ಇವರಿಬ್ಬರಿಗೂ ಇರುವ ಸಂಬಂಧದ ಕುರಿತು ತನಿಖೆ ನಡೆಸಲಿದ್ದಾರೆ.
ರೌಡಿಗಳ ಬೆಂಬಲಕ್ಕಿರುವ ಪೊಲೀಸರ ಹೆಸರು ಉಲ್ಲೇಖಿಸಿ ಪತ್ರ ಬರೆದಿದ್ದ ಕಾನ್ಪುರ್ ಎನ್ಕೌಂಟರ್ ಹುತಾತ್ಮ!
9 - ಅಮೆರಿಕದಲ್ಲಿ ಟಿಕ್ಟಾಕ್ ನಿಷೇಧಿಸುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ..!
ಚೀನಾದ 59 ಆ್ಯಪ್ಗಳನ್ನು ಭಾರತ ನಿಷೇಧಿಸಿದ ಬೆನ್ನಲ್ಲೇ, ಅಮೆರಿಕ, ಇಟಲಿ ಹಾಗೂ ಜರ್ಮನಿಯಲ್ಲೂ ಇಂತದ್ದೇ ಒತ್ತಾಯ ಕೇಳಿ ಬರುತ್ತಿದೆ. ಅದರಲ್ಲೂ ಪ್ರಮುಖವಾಗಿ ಅಮೆರಿಕದಲ್ಲಿ ಚೀನಾ ಆ್ಯಪ್ಗಳ ಮೇಲೆ ನಿಷೇಧ ಹೇರಲು ಒತ್ತಡ ಹೆಚ್ಚುತ್ತಿದೆ.
ಅಮೆರಿಕದಲ್ಲಿ ಚೀನಾ ಆ್ಯಪ್ ಬಳಕೆ ವಿರುದ್ಧ ಆಕ್ರೋಶ ಭುಗಿಲೆದ್ದಿದ್ದು, ಕೂಡಲೇ ಚೀನಾ ಆ್ಯಪ್ಗಳನ್ನು ನಿರ್ಬಂಧಿಸುವಂತೆ ಒತ್ತಾಯ ಕೇಳಿ ಬರುತ್ತಿದೆ. ಈ ಕುರಿತು ಖುದ್ದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡುವಷ್ಟರ ಮಟ್ಟಿಗೆ ಆ್ಯಪ್ ಬಳಕೆಗೆ ವಿರೋಧ ವ್ಯಕ್ತವಾಗಿದೆ. ಅದರಂತೆ ಅಮೆರಿಕದಲ್ಲಿ ಟಿಕ್ಟಾಕ್ ನಿಷೇಧಿಸುವ ಕುರಿತು ಸಲ್ಲಿಸಲಾದ ಪ್ರಸ್ತಾವನೆಯನ್ನು ಪರಿಶೀಲಿಸುತ್ತಿರುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
ಚೀನಿ ಆ್ಯಪ್ಗಳನ್ನ ಬ್ಯಾನ್ ಮಾಡುವ ಬಗ್ಗೆ ಗಮನಹರಿಸುತ್ತಿದ್ದೇವೆ ಎಂದ ಅಮೆರಿಕ, ಚೀನಾಗೆ ಮತ್ತೆ ಆಘಾತ?
10 - ಪಾಕ್ನಲ್ಲಿ ಕೃಷ್ಣ ದೇಗುಲಕ್ಕೆ ಕೋರ್ಟ್ ಸಮ್ಮತಿ
ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್ನಲ್ಲಿ ಮೊದಲ ಹಿಂದೂ ದೇವಾಲಯ ನಿರ್ಮಾಣದ ವಿರುದ್ಧ ಸಲ್ಲಿಕೆಯಾಗಿದ್ದ ಎಲ್ಲ ಅರ್ಜಿಗಳನ್ನು ಅಲ್ಲಿನ ಹೈಕೋರ್ಟ್ ತಿರಸ್ಕರಿಸಿದೆ. ಅರ್ಜಿಗಳ ವಿಚಾರಣೆ ನಡೆಸಿದ ಇಸ್ಲಾಮಾಬಾದ್ ಹೈಕೋರ್ಟ್ನ ಏಕಸದಸ್ಯ ಪೀಠದ ನ್ಯಾ. ಆಮೀರ್ ಫಾರೂಕ್, ಇನ್ಸ್ಟಿಟ್ಯೂಟ್ ಆಫ್ ಹಿಂದೂ ಪಂಚಾಯತ್ಗೆ (ಐಎಚ್ಪಿ) ಮಂದಿರ ನಿರ್ಮಾಣಕ್ಕಾಗಿ ಸ್ಥಳ ನೀಡಲಾಗಿದೆ. ಅದನ್ನು ತಮ್ಮ ಖರ್ಚಿನಿಂದಲೇ ನಿರ್ಮಿಸಲು ಕೂಡ ಸೂಚಿಸಲಾಗಿದೆ. ಹಾಗಾಗಿ ಅದಕ್ಕೆ ನಿರ್ಬಂಧ ಹೇರುವುದು ಸಾಧ್ಯವಿಲ್ಲಎಂದಿದ್ದಾರೆ.
ರಾಜಧಾನಿಯ ಎಚ್-9 ಆಡಳಿತ ವಲಯದ 20,000 ಚ.ಅಡಿ ಪ್ರದೇಶದಲ್ಲಿ ಶ್ರೀಕೃಷ್ಣ ದೇವಸ್ಥಾನ ನಿರ್ಮಾಣ ಮಾಡುವ ಯೋಜನೆ ಇದಾಗಿದೆ. ಮಾನವ ಹಕ್ಕುಗಳ ಸಂಸದೀಯ ಕಾರ್ಯದರ್ಶಿ ಲಾಲ್ ಚಾಂದ್ ಮಾಲ್ಹಿ ಅವರು ಇತ್ತೀಚೆಗೆ ಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ಕೂಡ ನೆರವೇರಿಸಿದ್ದಾರೆ.
TikTok Ban: ಒಂದಲ್ಲಾ, ಎರಡಲ್ಲಾ.. ಚೀನಾ ಕಂಪನಿಗೆ 45,000 ಕೋಟಿ ರೂ. ನಷ್ಟ!