ಆ್ಯಪ್ನಗರ

ಚೀನಾಗೆ ಮೂಗುದಾರ ಹಾಕಲು ಸಜ್ಜಾದ ಭಾರತ: ಉನ್ನತ ರಾಜಕೀಯ, ಮಿಲಿಟರಿ ನಾಯಕರ ಮಹತ್ವದ ಸಭೆ!

ಇಂದು(ಶುಕ್ರವಾರ) ಭಾರತದ ಉನ್ನತ ರಾಜಕೀಯ ಹಾಗೂ ಮಿಲಿಟರಿ ಅಧಿಕಾರಿಗಳ ಸಬೆ ನಡೆಯಲಿದ್ದು, ಲಡಾಖ್ ಹಾಗೂ ಅರುಣಾಚಲ ಪ್ರದೇಶದ ಗಡಿಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.

Vijaya Karnataka Web 18 Sep 2020, 3:22 pm
ನವದೆಹಲಿ: ಲಡಾಖ್ ಗಡಿಯಲ್ಲಿ ಹೂಂಕರಿಸಿ ಬಂದಿರುವ ಚೀನಾಗೆ ಮೂಗುದಾರ ಹಾಕಲು ಸಜ್ಜಾಗಿರುವ ಭಾರತ, ಗಡಿಯಲ್ಲಿ ಚೀನಾವನ್ನು ಹದ್ದುಬಸ್ತಿನಲ್ಲಿಡಲು ಸಕಲ ಸಿದ್ಧತೆ ನಡೆಸಿದೆ.
Vijaya Karnataka Web Ladakh
ಸಂಗ್ರಹ ಚಿತ್ರ


ಇದಕ್ಕೆ ಪೂರಕವಾಗಿ ಇಂದು(ಶುಕ್ರವಾರ) ಭಾರತದ ಉನ್ನತ ರಾಜಕೀಯ ಹಾಗೂ ಮಿಲಿಟರಿ ಅಧಿಕಾರಿಗಳ ಸಬೆ ನಡೆಯಲಿದ್ದು, ಲಡಾಖ್ ಗಡಿಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಕೇಂದ್ರದ ಹಿರಿಯ ಸಚಿವರು ಹಾಗೂ ಮೂರೂ ರಕ್ಷಣಾ ಪಡೆಗಳ ಉನ್ನತ ಸೇನಾಧಿಕಾರಿಗಳು ಇಂದಿನ ಸಭೆಯಲ್ಲಿ ಭಾಗವಹಿಸಲಿದ್ದು, ಲಡಾಖ್ ಗಡಿಯಲ್ಲಿ ಭಾರತದ ಸಾಮರಿಕ ಶಕ್ತಿಯನ್ನು ವೃದ್ಧಿಸುವ ಕುರಿತು ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

ಯಾವ ಯುದ್ಧದಲ್ಲೂ ಪರೀಕ್ಷೆಗೊಳಪಡದ ಚೀನಾದ ಜೆ-20 ವಿಮಾನಕ್ಕೆ ಹೆದರುವ ಪ್ರಶ್ನೆಯೇ ಇಲ್ಲ!

ಕೇವಲ ಲಡಾಖ್ ಮಾತ್ರವಲ್ಲದೇ ಅರುಣಾಚಲ ಪ್ರದೇಶದ ಗಡಿಯಲ್ಲೂ ಚೀನಿ ಸೇನಾ ಚಟುವಟಿಕೆಗಳನ್ನು ಗಮನಿಸಲಾಗಿದ್ದು, ಪೂರ್ವದ ಗಡಿಯನ್ನೂ ಸುರಕ್ಷಿತಗೊಳಿಸುವ ಕುರಿತು ಸೇನೆಗೆ ಕೇಂದ್ರದಿಂದ ಆದೇಶ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.

ಡೋಕ್ಲಾಮ್‌ನಲ್ಲಿ ಚೀನಾ ತನ್ನ ಸೈನ್ಯವನ್ನು ಜಮಾವಣೆ ಮಾಡುತ್ತಿದ್ದು, ಸೈನ್ಯ ಬಲವರ್ಧನೆಗೆ ಭೂತಾನ್ ನೆಲವನ್ನು ಬಳಸಿಕೊಳ್ಳುತ್ತಿರುವ ಮಾಹಿತಿ ಲಭ್ಯವಾಗಿದೆ. ಚೀನಾದ ಈ ಸಾಮರಿಕ ಪ್ರಚೋದನೆಯನ್ನು ಅತ್ಯಂತ ದೃಢವಾಗಿ ಎದುರಿಸುವ ನಿರ್ಣಯ ಇಂದಿನ ಸಭೆಯಿಂದ ಹೊರ ಬೀಳಲಿದೆ.


ಲಡಾಖ್ ಹಾಗೂ ಅರುಣಾಚಲ ಪ್ರದೇಶದಲ್ಲಿ ಭಾರತೀಯ ಸೇನೆಯ ಕಾರ್ಯಚರಣೆ ಸಿದ್ಧತೆ ಕುರಿತು ಉನ್ನತ ಸೇನಾಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಲಿದ್ದು, ವಾಯುಸೇನೆ ಕೂಡ ತನ್ನ ಸಮರ ಸಿದ್ಧತೆಯ ವರದಿ ಒಪ್ಪಿಸಲಿದೆ.

ಪಿಎಲ್‌ಎ 'ದೈತ್ಯ ಪಡೆ' ಎಂಬ ಚೀನಿಯರ ಸೊಕ್ಕು ಮುರಿದ ಭಾರತೀಯ ಸೇನೆ: ಲಡಾಖ್ ಗಾಯ ಮಾಸದು!

ರಷ್ಯಾದ ಎಸ್‌ಸಿಒ ಸಚಿವರ ಸಭೆಯಲ್ಲಿ ಭಾರತ-ಚೀನಾದ ರಕ್ಷಣಾ ಹಾಗೂ ವಿದೇಶಾಂಗ ಸಚಿವರು ಪರಸ್ಪರ ಭೇಟಿಯಾಗಿ ಚರ್ಚೆ ನಡೆಸಿದ್ದು, ಈ ಸಭೆಯ ನಿರ್ಣಯಗಳನ್ನು ಇಂದಿನ ಸಭೆಗೆ ತಿಳಿಸಲಾಗುವುದು.

ಲಡಾಖ್ ಹಾಗೂ ಅರುಣಾಚಲ ಗಡಿಯಲ್ಲಿ ಭಾರತೀಯ ಭೂಸೇನೆ ಹಾಗೂ ವಾಯುಸೇನೆ ಸರ್ವ ಸನ್ನದ್ಧವಾಗಿದ್ದು, ರಾಜತಾಂತ್ರಿಕ ಮಾತುಕತೆಗಳ ಬೆಳವಣಿಗೆಗಳನ್ನಾಧರಿಸಿ ಮುಂದಿನ ಹೆಜ್ಜೆ ಇಡಲು ಇಚ್ಛಿಸಿವೆ ಎನ್ನಲಾಗಿದೆ.

ಭಾರತ-ಚೀನಾ ಗಡಿಯಲ್ಲಿ ಕಳೆದ 20 ದಿನಗಳಲ್ಲಿ ಕನಿಷ್ಟ 3 ಬಾರಿ ಗುಂಡಿನ ಕಾಳಗ..!

ಒಟ್ಟಿನಲ್ಲಿ ಗಡಿಯಲ್ಲಿನ ಚೀನಾ ಅಪಾಯವನ್ನು ಎದುರಿಸುವ ಬಗೆ ಕುರಿತು ದೃಢ ನಿರ್ಧಾರ ಕೈಗೊಳ್ಳುವಲ್ಲಿ ಇಂದಿನ ಸಭೆ ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದು ನಿರೀಕ್ಷಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ