ಆ್ಯಪ್ನಗರ

ಚಂದಿರ ದರ್ಶನಕ್ಕೆ ಟೂರು ಶುರು!

ಸ್ಪೇಸ್‌ ಎಕ್ಸ್‌ನಿಂದ ಜಗತ್ತಿನ ಮೊದಲ ಖಾಸಗಿ ಪಯಣ ಘೋಷಣೆ

Vijaya Karnataka 15 Sep 2018, 5:30 am
ವಾಷಿಂಗ್ಟನ್‌: ಚಂದ್ರನಲ್ಲಿಗೆ ಪ್ರವಾಸ ಎಂಬ ಕಲ್ಪನೆ ನಿಜವಾಗುವ ಕಾಲ ಸನ್ನಿಹಿತವಾಗಿದೆ. ಸ್ಪೇಸ್‌ ಎಕ್ಸ್‌ ಎಂಬ ಖಾಸಗಿ ಬಾಹ್ಯಾಕಾಶ ಸಂಸ್ಥೆ ಇದೇ ಮೊದಲ ಬಾರಿಗೆ ಗಗನಯಾತ್ರಿಯೇತರ ಖಾಸಗಿ ವ್ಯಕ್ತಿಯನ್ನು ಚಂದಿರನಲ್ಲಿಗೆ ಕಳುಹಿಸಿಕೊಡಲಿದೆ. ಗುರುವಾರ ರಾತ್ರಿ ಈ ಘೋಷಣೆ ಹೊರಬಿದ್ದಿದ್ದು, ಚಂದ್ರನಲ್ಲಿಗೆ ಹೋಗಲಿರುವ ಮೊದಲ ಪ್ರವಾಸಿಗ ಯಾರು ಎನ್ನುವುದನ್ನು ಸೆಪ್ಟೆಂಬರ್‌ 17ರಂದು ಪ್ರಕಟಿಸುವುದಾಗಿ ತಿಳಿಸಿದೆ.
Vijaya Karnataka Web ಚಂದ್ರಯಾನ
ಚಂದ್ರಯಾನ


ಇದು ಬಾಹ್ಯಾಕಾಶದಲ್ಲಿ ಪ್ರವಾಸ ಮಾಡುವ ಜನರ ಕನಸನ್ನು ನನಸು ಮಾಡುವ ದೊಡ್ಡ ಹೆಜ್ಜೆ ಎಂದೇ ಪರಿಗಣಿತವಾಗಿದೆ.

ಹಿಂದೆಯೂ ಘೋಷಿಸಿದ್ದರು: ಚಂದ್ರಯಾನದ ಬಗ್ಗೆ ಸ್ಪೇಸ್‌ ಎಕ್ಸ್‌ ಘೋಷಣೆ ಮಾಡಿದ್ದು ಇದು ಮೊದಲ ಸಲವೇನಲ್ಲ. ಸ್ಪೇಸ್‌ ಎಕ್ಸ್‌ ಸಿಇಒ, ಅಮೆರಿಕ ಉದ್ಯಮಿ ಎಲೋನ್‌ ಮಸ್ಕ್‌ ಅವರು 2017ರ ಫೆಬ್ರವರಿಯಲ್ಲಿ ಇಬ್ಬರು ವ್ಯಕ್ತಿಗಳನ್ನು ಚಂದ್ರನ ಸುತ್ತ ಪ್ರವಾಸಕ್ಕೆ ಕಳುಹಿಸಲಾಗುತ್ತಿದೆ ಎಂದು ಘೋಷಿಸಿದ್ದರು. ನಾಸಾ ಈ ಹಿಂದೆ ಕಳುಹಿಸಿದ್ದ ಅಪೋಲೊ ಗಗನ ನೌಕೆಗಳ ದಾರಿಯಲ್ಲೇ ಚಂದ್ರನ ಸುತ್ತ ಎರಡು ನೌಕೆಗಳನ್ನು ಕಳುಹಿಸಲಾಗುವುದು ಎಂದಿದ್ದರು. ಆದರೆ, ಈಗ ಪ್ರವಾಸಿಗರ ಸಂಖ್ಯೆ 2ರಿಂದ 1ಕ್ಕೆ ಇಳಿದಿದೆ.

ಚಂದ್ರನ ಸುತ್ತ ತಿರುಗಾಟ

ಬಿಗ್‌ ಫಾಲ್ಕನ್‌ ರಾಕೆಟ್‌ (ಬಿಎಫ್‌ಆರ್‌) ಎಂಬ ನೌಕೆಯ ಪ್ರವಾಸಿಗನನ್ನು ಹೊತ್ತು ಚಂದ್ರನ ಸುತ್ತ ತಿರುಗಾಡುವ ಟೂರ್‌ ಇದಾಗಿದೆ. ಚಂದ್ರನ ಮೇಲೆ ಪ್ರವಾಸಿಗ ಇಳಿಯುವ ಪ್ಲ್ಯಾನ್‌ ಸದ್ಯಕ್ಕಿಲ್ಲ.

ಪ್ರವಾಸಿಗ ಜಪಾನಿ ಪ್ರಜೆ?


ಚಂದ್ರನ ಸುತ್ತು ಸುತ್ತಲಿರುವ ಮೊದಲ ಪ್ರಯಾಣಿಕ ಯಾರು ಎಂಬ ಪ್ರಶ್ನೆಗೆ ಉದ್ಯಮಿ ಎಲೋನ್‌ ಮಸ್ಕ್‌ ಅವರು ಜಪಾನಿ ಧ್ವಜದ ಎಮೊಜಿ ಹಾಕಿದ್ದಾರೆ. ಹೀಗಾಗಿ ಜಪಾನಿ ಪ್ರಜೆ ಎಂದು ಊಹಿಸಲಾಗಿದೆ.

ಎಷ್ಟು ಖರ್ಚು?

1078 ಕೋಟಿ ರೂ.

ಮೂವರ ನಡುವೆ ಫೈಟ್‌

ಬಾಹ್ಯಾಕಾಶ ಪ್ರವಾಸ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆಯಲು ವಿಶ್ವದ ಮೂವರು ಶ್ರೀಮಂತರು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ. ಅಮೆಜಾನ್‌ ಕಂಪನಿಯ ಸಿಇಒ ಜೆಫ್‌ ಬೆಜೋಸ್‌, ಸ್ಪೇಸ್‌ ಎಕ್ಸ್‌ನ ಸಿಇಒ ಎಲೋನ್‌ ಮಸ್ಕ್‌, ವರ್ಜಿನ್‌ ಗ್ರೂಪ್‌ನ ಮಾಲೀಕ ರಿಚರ್ಡ್‌ ಬ್ರಾನ್ಸನ್‌. ಈ ಮೂವರೂ ತಮ್ಮದೇ ಆದ ಖಾಸಗಿ ರಾಕೆಟ್‌ ಸಂಸ್ಥೆಗಳನ್ನು ಹೊಂದಿದ್ದು, ಸ್ವಯಂ ತಂತ್ರಜ್ಞಾನ ಬೆಳೆಸುತ್ತಿದ್ದಾರೆ. ಅದಕ್ಕಾಗಿ ಗಗನ ನೌಕೆಗಳನ್ನು ನಿರ್ಮಿಸುತ್ತಿದ್ದಾರೆ. ಒಂದೊಮ್ಮೆ ಸ್ಪೇಸ್‌ ಎಕ್ಸ್‌ ಸಾಹಸ ಯಶಸ್ವಿಯಾದರೆ ಮೂರೂ ಕಂಪನಿಗಳು ಮುಗಿಬಿದ್ದು ಬಾಹ್ಯಾಕಾಶ ಟೂರ್‌ ನಡೆಸಲಿವೆ.

ದುಡ್ಡಿದ್ದರಷ್ಟೇ ಸಾಲದು

ಚಂದ್ರನಲ್ಲಿ ಹೋಗಲು ಶ್ರೀಮಂತರೇ ಆಗಬೇಕು ಎನ್ನುವುದು ನಿಜ. ಆದರೆ, ದುಡ್ಡೊಂದೇ ಸಾಕಾಗುವುದಿಲ್ಲ. ಪ್ರಯಾಣಿಕರು ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ‌ ಹೊಂದಿರುವುದು ದುಡ್ಡಿಗಿಂತಲೂ ಮುಖ್ಯ. ತೀವ್ರ ವೈದ್ಯಕೀಯ ಪರೀಕ್ಷೆ, ಬಾಹ್ಯಾಕಾಶದ ಒತ್ತಡಗಳನ್ನು ನಿಭಾಯಿಸಲು ಕಠಿಣ ತರಬೇತಿಗಳನ್ನು ನೀಡಿದ ಬಳಿಕವೇ ಅವರನ್ನು ಆಯ್ಕೆ ಮಾಡಲಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ