ಆ್ಯಪ್ನಗರ

ಆಂಧ್ರದ ಗೋದಾವರಿ ನದಿಯಲ್ಲಿ ದೋಣಿ ದುರಂತ: 12 ಸಾವು, ಹತ್ತಾರು ಜನ ನಾಪತ್ತೆ

ಪೂರ್ವ ಗೋದಾವರಿ ಜಿಲ್ಲೆಗೆ ಸೇರಿದ ದೇವಿಪಟ್ನಂ ಪ್ರದೇಶದ ಗೋದಾವರಿ ನದಿಯಲ್ಲಿ 61 ಪ್ರವಾಸಿಗರಿದ್ದ ಬೋಟ್‌ ಇಂದು ಮಧ್ಯಾಹ್ನ ಮುಳುಗಡೆಯಾಗಿದೆ. ಇದರಲ್ಲಿ 12ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ.

TIMESOFINDIA.COM 15 Sep 2019, 6:26 pm
ವಿಜಯವಾಡ: ಆಂಧ್ರ ಪ್ರದೇಶದಲ್ಲಿ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದ ಭೀಕರ ದೋಣಿ ದುರಂತದಲ್ಲಿ 12ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಜಿಲ್ಲೆಯ ದೇವಿಪಟ್ನಂನಲ್ಲಿ ಹರಿಯುವ ಗೋದಾವರಿ ನದಿಯಲ್ಲಿ ಇಂದು ಮಧ್ಯಾಹ್ನ 61 ಪ್ರವಾಸಿಗರಿದ್ದ ದೋಣಿ ಮುಳುಗಡೆಯಾಗಿತ್ತು. ದೋಣಿಯಲ್ಲಿದ್ದ 23 ಜನರನ್ನು ರಕ್ಷಿಸಲಾಗಿದ್ದು, ಇನ್ನುಳಿದವರು ಸದ್ಯಕ್ಕೆ ನಾಪತ್ತೆಯಾಗಿದ್ದಾರೆ.
Vijaya Karnataka Web boat capsicized in godavari


ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಗೋದಾವರಿ ನದಿ ತುಂಬಿ ಹರಿಯುತ್ತಿದ್ದು, ಆಂಧ್ರ ಪ್ರದೇಶ ಪ್ರವಾಸೋದ್ಯಮ ಇಲಾಖೆಯ ಅಡಿಯಲ್ಲಿ ಬರುವ ರಾಯಲ್‌ ವಸಿಷ್ಠ ಬೋಟ್‌ ಇದರಲ್ಲಿ ವಿಹಾರಕ್ಕೆ ಹೊರಟಿತ್ತು. ಗಂಡಿ ಪೊಚಮ್ಮ ದೇವಸ್ಥಾನದ ಬಳಿಯಿರುವ ಪ್ರಖ್ಯಾತ ಪ್ರವಾಸಿ ಸ್ಥಳ ಪಾಪಿ ಕೊಂಡಲುವಿನಿಂದ ಹೊರಟಿದ್ದ ಬೋಟ್‌ ಕಚ್ಚಲೂರುವಿನಲ್ಲಿ ಮುಳುಗಡೆಯಾಗಿದೆ.

ಘಟನೆ ಬೆನ್ನಿಗೆ ಸ್ಥಳಕ್ಕೆ ಆಗಮಿಸಿರುವ ರಾಜ್ಯ ಮತ್ತು ರಾಷ್ಟ್ರೀಯ ವಿಕೋಪ ನಿರ್ವಹಣಾ ಪಡೆಗಳು ಆಗಮಿಸಿದ್ದು, ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ. ಒಎನ್‌ಜಿಸಿಯ ಹೆಲಿಕಾಪ್ಟರ್‌ಗಳನ್ನು ರಕ್ಷಣಾ ಕಾರ್ಯಕ್ಕೆ ಬಳಸಿಕೊಳ್ಳಲಾಗಿದ್ದು, ಇದೀಗ ಕತ್ತಲಾಗುತ್ತಿರುವುದರಿಂದ ಹೆಚ್ಚುವರಿ ಹೆಲಿಕಾಪ್ಟರ್‌ಗಳನ್ನು ಒದಗಿಸುವಂತೆ ನೌಕಾ ಸೇನೆಗೆ ರಾಜ್ಯದ ಪೊಲೀಸ್‌ ಮಹಾ ನಿರ್ದೇಶಕರು ಮನವಿ ಮಾಡಿಕೊಂಡಿದ್ದಾರೆ.

ಘಟನೆ ನಂತರ ಗೋದಾವರಿ ನದಿಯಲ್ಲಿ ಎಲ್ಲಾ ಪ್ರಕಾರದ ದೋಣಿ ವಿಹಾರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿರುವಮುಖ್ಯಮಂತ್ರಿ ವೈ.ಎಸ್‌. ಜಗನ್‌ಮೋಹನ್‌ ರೆಡ್ಡಿ, ಬೋಟ್‌ಗಳಿಗೆ ನೀಡಲಾಗಿರುವ ಪರವಾನಿಗೆ ಮತ್ತು ಸಿಬ್ಬಂದಿಗಳಿಗೆ ಅಗತ್ಯ ತರಬೇತಿ ನೀಡಲಾಗಿದೆಯೇ ಎಂಬುದನ್ನು ಪರಿಶೀಲನೆ ನಡೆಸುವಂತೆ ಆದೇಶಿಸಿದ್ದಾರೆ.

ಇದಲ್ಲದೆ ಅವಘಡದ ಪೂರ್ಣ ವರದಿ ನೀಡುವಂತೆ ಆದೇಶ ಇತ್ತಿರುವ ಅವರು, ತಜ್ಞರು ತಯಾರಿಸಿರುವ ಸುರಕ್ಷತಾ ಮಾನದಂಡಗಳನ್ನು ಬಿಡುಗಡೆ ಮಾಡಲು ಹೇಳಿದ್ದಾರೆ.

ಘಟನೆಯಲ್ಲಿ ಸಾವಿಗೀಡಾದವರ ಕುಟುಂಬಕ್ಕೆ ಜಗನ್‌ ಮೋಹನ್‌ ರೆಡ್ಡಿ 10 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಲ್ಲದೆ, ಜಿಲ್ಲೆಯಲ್ಲಿರುವ ಎಲ್ಲಾ ಸಚಿವರು ತಕ್ಷಣ ಸ್ಥಳಕ್ಕೆ ತೆರಳಿ ಖುದ್ದು ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಳ್ಳುವಂತೆ ಸೂಚಿಸಿದ್ದಾರೆ. ಜಿಲ್ಲಾಧಿಕಾರಿ, ಪಕ್ಷದ ನಾಯಕರು, ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ನಿರಂತರ ಸಂಪರ್ಕದಲ್ಲಿದ್ದು, ಕ್ಷಣ ಕ್ಷಣದ ಮಾಹಿತಿ ನೀಡುವಂತೆ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಗೆ ಆದೇಶಿಸಿದ್ದಾರೆ.

ದೋಣಿ ದುರಂತದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಆಂಧ್ರ ಪ್ರದೇಶದ ಪೂರ್ವ ಗೋದಾವರಿಯಲ್ಲಿ ದೋಣಿ ಮುಳುಗಡೆಯಾದ ಬಗ್ಗೆ ಅಪಾರ ನೋವಾಗಿದೆ. ದುಃಖಿತ ಕುಟುಂಬದೊಮದಿಗೆ ತಾವಿರುವುದಾಗಿ ಅವರು ಟ್ಟೀಟ್‌ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ