ಆ್ಯಪ್ನಗರ

ತ್ರಿವಳಿ ತಲಾಖ್ ವಿಧೇಯಕ ರಾಜ್ಯಸಭೆಯಲ್ಲಿ ಮಂಡನೆ

ಮುಸ್ಲಿಂ ಮಹಿಳೆಯರ ಮದುವೆ ಹಕ್ಕುಗಳ ರಕ್ಷಣೆ ಕುರಿತ ವಿಧೇಯಕ (ತ್ರಿವಳಿ ತಲಾಖ್ ನಿಷೇಧ ವಿಧೇಯಕ)ವನ್ನು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಇಂದು ರಾಜ್ಯಸಭೆಯಲ್ಲಿ ಮಂಡಿಸಿದರು. ವಿಧೇಯಕದ ಚರ್ಚೆಗೆ ಸಭಾಪತಿ ಎಂ. ವೆಂಕಯ್ಯ ನಾಯ್ಡು ಅವರು ನಾಲ್ಕು ಗಂಟೆಗಳ ಕಾಲಾವಕಾಶ ನೀಡಿದ್ದಾರೆ.

TIMESOFINDIA.COM 30 Jul 2019, 2:45 pm
ಹೊಸದಿಲ್ಲಿ: ತ್ರಿವಳಿ ತಲಾಖ್ ನಿಷೇಧ ವಿಧೇಯಕವನ್ನು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಮಂಗಳವಾರ ರಾಜ್ಯಸಭೆಯಲ್ಲಿ ಮಂಡಿಸಿದರು. ಈ ವಿಧೇಯಕ ಮುಸ್ಲಿಂ ಮಹಿಳೆಯರಿಗೆ ನ್ಯಾಯ ಒದಗಿಸುವ ಉದ್ದೇಶ ಹೊಂದಿದೆಯೇ ಹೊರತು ರಾಜಕೀಯ ದೃಷ್ಟಿಯಿಂದ ನೋಡಬಾರದು ಎಂದು ಅವರು ಹೇಳಿದರು.
Vijaya Karnataka Web Ravi Shankar Prasad


'ಮುಸ್ಲಿಂ ಮಹಿಳೆಯರ (ಮದುವೆ ಹಕ್ಕುಗಳ ರಕ್ಷಣೆ) ವಿಧೇಯಕ 2019' ಅನ್ನು ಸದನ ಅಂಗೀಕರಿಸಬೇಕು ಎಂದು ಮನವಿ ಮಾಡಿದ ಸಚಿವರು, ಸುಪ್ರೀಂ ಕೋರ್ಟ್‌ ಆದೇಶದಂತೆ ಈ ವಿಧೇಯಕ ರೂಪಿಸಲಾಗಿದೆ ಎಂದರು.

'ವೋಟ್‌ ಬ್ಯಾಂಕ್ ರಾಜಕಾರಣಕ್ಕಾಗಿ ಈ ವಿಷಯವನ್ನು ರಾಜಕೀಯ ದೃಷ್ಟಿಕೋನದಿಂದ ನೋಡಬಾರದು. ಇದು ಮಾನವೀಯತೆಯ ಪ್ರಶ್ನೆ. ಇದು ಮಹಿಳೆಯರಿಗೆ ನ್ಯಾಯ, ಘನತೆ, ಲಿಂಗ ಸಮಾನತೆ ಒದಗಿಸುವುದರ ಜತೆಗೆ ಅವರ ಸಬಲೀಕರಣದ ಖಾತ್ರಿಗಾಗಿ ಇರುವ ವಿಧೇಯಕ' ಎಂದು ಸಚಿವ ರವಿಶಂಕರ್ ಪ್ರಸಾದ್ ಹೇಳಿದರು.

ತ್ರಿವಳಿ ತಲಾಖ್ ನಿಷೇಧಿಸಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಅನುಸಾರ ಈ ವಿಧೇಯಕ ಸಿದ್ಧಪಡಿಸಲಾಗಿದೆ. ಈ ರೀತಿ ಕಾನೂನೂ ಬಾಹಿರವಾಗಿ ತಲಾಖ್ ನೀಡಿದ 574 ಪ್ರಕರಣಗಳು ಕೋರ್ಟಿನ ಮುಂದೆ ವಿಚಾರಣೆಗೆ ಬಂದಿದ್ದವು ಎಂದು ಸಚಿವರು ವಿವರಿಸಿದರು.

ತ್ರಿವಳಿ ತಲಾಖ್ ಪದ್ಧತಿಯನ್ನು ಅಪರಾಧವೆಂದು ಘೋಷಿಸಿ ಸರಕಾರ ಕಳೆದ ಬಾರಿ ಸುಗ್ರೀವಾಜ್ಞೆ ಹೊರಡಿಸಿದ ಬಳಿಕ 101 ತಲಾಖ್ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಪ್ರಸಾದ್ ತಿಳಿಸಿದರು.

ಈಗಾಗಲೇ 20ಕ್ಕೂ ಹೆಚ್ಚು ಇಸ್ಲಾಮಿಕ್ ರಾಷ್ಟ್ರಗಳು ತ್ರಿವಳಿ ತಲಾಖ್ ಪದ್ಧತಿಯನ್ನು ನಿಷೇಧಿಸಿವೆ. ಆದರೆ ಜಾತ್ಯತೀತ ಭಾರತ ಯಾವ್ಯಾವುದೋ ಕಾರಣಕ್ಕೆ ಇದುವರೆಗೂ ಇಂತಹದೊಂದು ಕಾನೂನು ಜಾರಿಗೆ ತಂದಿಲ್ಲ ಎಂದು ಸಚಿವರು ನುಡಿದರು.

ವಿಧೇಯಕವನ್ನು ಕಾಂಗ್ರೆಸ್ ವಿರೋಧಿಸಿದೆ. ಪಕ್ಷದ ನಾಯಕ ಅಮೀ ಯಾಜ್ಞಿಕ್, ಈ ವಿಧೇಯಕದ ಮೂಲಕ ಸರಕಾರ ಮುಸ್ಲಿಂ ಮಹಿಳೆಯರ ಕೌಟುಂಬಿಕ ವಿಚಾರದಲ್ಲಿ ಮೂಗು ತೂರಿಸಿದೆ ಎಂದು ಆರೋಪಿಸಿದರು.

ವಿಧೇಯಕದ ಕುರಿತು ಚರ್ಚೆಗೆ ನಾಲ್ಕು ಗಂಟೆಗಳ ಕಾಲಾವಕಾಶವನ್ನು ಮೇಲ್ಮನೆ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು ನೀಡಿದ್ದಾರೆ. ಲೋಕಸಭೆ ಕಳೆದ ವಾರ ಈ ವಿಧೇಯಕವನ್ನು ಅನುಮೋದಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ