ಆ್ಯಪ್ನಗರ

ಭಾರತದ ವಿರುದ್ಧ ಕಟುವಾಗಿ ಮಾತನಾಡಿದರೆ ಜೋಕೆ: ಪಾಕ್‌ಗೆ ಟ್ರಂಪ್ ಎಚ್ಚರಿಕೆ

ಪ್ರಧಾನಿ ನರೇಂದ್ರ ಮೋದಿ ಜತೆ ಸೋಮವಾರ ರಾತ್ರಿ 30 ನಿಮಿಷ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದ ಟ್ರಂಪ್‌, ನಂತರ ಇಮ್ರಾನ್‌ ಖಾನ್‌ ಅವರಿಗೆ ಕರೆ ಮಾಡಿ ಸಂಯಮ ಕಾಪಾಡಿಕೊಳ್ಳುವಂತೆ ಸೂಚಿಸಿದರು.

PTI 21 Aug 2019, 8:00 am
ವಾಷಿಂಗ್ಟನ್‌: ಕಾಶ್ಮೀರ ಕುರಿತು ಮಾತನಾಡುವಾಗ ಭಾರತದ ಬಗ್ಗೆ ಕಟು ಶಬ್ದಗಳನ್ನು ಬಳಸದಿರುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರಿಗೆ ಕಿವಿಮಾತು ಹೇಳಿದ್ದಾರೆ.
Vijaya Karnataka Web trumph


ಪ್ರಧಾನಿ ನರೇಂದ್ರ ಮೋದಿ ಜತೆ ಸೋಮವಾರ ರಾತ್ರಿ 30 ನಿಮಿಷ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದ ಟ್ರಂಪ್‌, ನಂತರ ಇಮ್ರಾನ್‌ ಖಾನ್‌ ಅವರಿಗೆ ಕರೆ ಮಾಡಿ ಸಂಯಮ ಕಾಪಾಡಿಕೊಳ್ಳುವಂತೆ ಸೂಚಿಸಿದರು. '' ನಿಮ್ಮ ವಾಕ್ಚಾತುರ್ಯವನ್ನು ಸ್ವಲ್ಪ ನಿಯಂತ್ರಣದಲ್ಲಿಟ್ಟುಕೊಳ್ಳಿ. ಕಾಶ್ಮೀರದ ಬಗ್ಗೆ ಮಾತನಾಡುವಾಗ ಪ್ರಜ್ಞೆ ಇರಲಿ. ಭಾರತದ ವಿರುದ್ಧ ಹರಿಹಾಯುವ ಭರದಲ್ಲಿ ಶಾಂತಿ ಕದಡುವಂತಹ ಪದಗಳನ್ನು ಬಳಸಬೇಡಿ. ಕಾಶ್ಮೀರದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುವಂಥ ಹೇಳಿಕೆಗಳು ಬೇಡ'', ಎಂದು ಕಿವಿಹಿಂಡಿದರು.

ಈ ಕುರಿತು ಶ್ವೇತಭವನ ಕೂಡ ಪ್ರಕಟಣೆ ಬಿಡುಗಡೆ ಮಾಡಿದ್ದು, ಜಮ್ಮು ಮತ್ತು ಕಾಶ್ಮೀರ ವಿಚಾರವಾಗಿ ಭಾರತ-ಪಾಕಿಸ್ತಾನ ಎರಡೂ ಕಡೆಯಿಂದ ಸಂಯಮದ ವರ್ತನೆ ಅಗತ್ಯವಿದೆ. ಇದನ್ನು ಅರಿತಿರುವ ಅಮೆರಿಕ ಅಧ್ಯಕ್ಷರು ಪಾಕ್‌ ಪ್ರಧಾನಿಗೆ ಕರೆ ಮಾಡಿ ಹೇಳಿಕೆ ನೀಡುವಾಗ ಸಂಯಮ ಉಳಿಸಿಕೊಂಡು ಬಿಕಟ್ಟು ಶಮನಕ್ಕೆ ಯತ್ನಿಸಿ ಎಂದು ಕಿವಿಮಾತು ಹೇಳಿದ್ದಾರೆ ಎಂದಿದೆ.

ಉಗ್ರವಾದ ಕಿತ್ತೊಗೆಯದೆ ಬಿಡಲ್ಲ: ಇನ್ನೊಂದೆಡೆ, ಟ್ರಂಪ್‌ ಅವರೊಂದಿಗೆ ದೂರವಾಣಿಯಲ್ಲಿ ಪ್ರಧಾನಿ ಮೋದಿ ಅವರ ಮಾತುಕತೆ ಕುರಿತು ಪ್ರಧಾನಿ ಕಾರ್ಯಾಲಯ ಮಂಗಳವಾರ ಹೇಳಿಕೆ ಬಿಡುಗಡೆ ಮಾಡಿದೆ. ''ಗಡಿಯಾಚೆಗಿನ ಕುಮ್ಮಕ್ಕಿನಿಂದ ನಮ್ಮ ನೆಲದಲ್ಲಿ ಭಯೋತ್ಪಾದನೆ ಬೇರೂರಲು ಬಿಡುವುದಿಲ್ಲ. ಅದನ್ನು ಕಿತ್ತೊಗೆದು ಉಗ್ರವಾದ ಮುಕ್ತ ವಾತಾವರಣ ನಿರ್ಮಾಣವೇ ನಮಗೆ ಮುಖ್ಯ. ಆ ನಿಟ್ಟಿನಲ್ಲಿ 370ನೇ ವಿಧಿ ರದ್ದತಿ ಒಂದು ಕ್ರಮ ಎಂದು ಅಮೆರಿಕ ಅಧ್ಯಕ್ಷರಿಗೆ ಮನದಟ್ಟು ಮಾಡಿಕೊಡಲಾಗಿದೆ,'' ಎಂದು ಹೇಳಿಕೆ ತಿಳಿಸಿದೆ.

ಭಾರತ ಸರಕಾರ ಹಿಂದೂ ಬಲಪಂಥೀಯ ತತ್ವಗಳನ್ನು ಪ್ರತಿಪಾದಿಸುತ್ತದೆ. ಹಾಗಾಗಿ ಅಣ್ವಸ್ತ್ರ ಸಂಗ್ರಹಗಳ ಬಗ್ಗೆ ಇಡೀ ಜಗತ್ತು ಆತಂಕ ಪಡಬೇಕಿದೆ ಎಂದು ಖಾನ್‌ ಭಾನುವಾರ ಟ್ವೀಟ್‌ ಮಾಡಿದ್ದರು. ಇದಕ್ಕೂ ಮುನ್ನ ಆರ್‌ಎಸ್‌ಎಸ್‌ ಹಾಗೂ ಮೋದಿ ಸರಕಾರದ ವಿರುದ್ಧವೂ ಟ್ವಿಟರ್‌ನಲ್ಲಿ ಹರಿಹಾಯ್ದಿದ್ದರು.

ಕಾಶ್ಮೀರವನ್ನು ಮಾರಿದ ಇಮ್ರಾನ್‌ ಎಂದು ತರಾಟೆ

ಒಂದೆಡೆ ಕಾಶ್ಮೀರದಲ್ಲಿನ 370ನೇ ವಿಧಿ ರದ್ದತಿ ವಿಚಾರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿಸಿ ಭಾರತಕ್ಕೆ ಮುಜುಗರ ಉಂಟುಮಾಡುವಲ್ಲಿ ವಿಫಲವಾಗಿರುವ ಇಮ್ರಾನ್‌ ಖಾನ್‌ ಸರಕಾರಕ್ಕೆ ಪಾಕ್‌ನ ಪ್ರತಿಪಕ್ಷಗಳಿಂದ ತಲೆನೋವು ಎದುರಾಗಿದೆ. ''ನೀವು ಮೋದಿ ಅವರ ಜತೆಗೆ ಒಪ್ಪಂದ ಮಾಡಿಕೊಂಡು ಕಾಶ್ಮೀರವನ್ನು ಭಾರತಕ್ಕೆ ಮಾರಾಟ ಮಾಡಿದ್ದೀರಿ,'' ಎಂದು ಪ್ರತಿಪಕ್ಷಗಳಾದ ಜೆಯುಈ-ಎಫ್‌ , ಪಿಎಂಎಲ್‌-ನವಾಜ್‌ ಹಾಗೂ ಪಿಪಿಪಿ ಪಕ್ಷಗಳು ಇಮ್ರಾನ್‌ ಖಾನ್‌ ಸರಕಾರದ ವಿರುದ್ಧ ಆರೋಪ ಮಾಡುತ್ತಾ ಕಿಡಿಕಾರುತ್ತಿವೆ. ಅಮೆರಿಕ ಪ್ರವಾಸಕ್ಕೆ ಇಮ್ರಾನ್‌ ತೆರಳಿದ್ದಾಗ ಅಲ್ಲಿ ಟ್ರಂಪ್‌ ಅವರೊಂದಿಗೆ ಬಹುಶಃ ಒಪ್ಪಂದವಾಗಿದೆ. ಭಾರತ ಕಾಶ್ಮೀರ ವಿಚಾರಾವಾಗಿ ಏನೇ ಬದಲಾವಣೆ ಮಾಡಿದರೂ ಪಾಕ್‌ ಸುಮ್ಮನಿರಲಿದೆ ಎಂದು ಖಾನ್‌ ವಾಗ್ದಾನ ಮಾಡಿ ಬಂದಿರಬೇಕು ಎಂದು ಪ್ರತಿಪಕ್ಷ ಜೆಯುಐ-ಎಫ್‌ ಮುಖ್ಯಸ್ಥ ಮೌಲಾನಾ ಫಜಲುರ್‌ ರೆಹಮಾನ್‌ ಆರೋಪ ಮಾಡಿದ್ದಾರೆ.

ಐಸಿಜೆಗೆ ಕಾಶ್ಮೀರ ವಿಚಾರ ಒಯ್ಯಲಿದೆ ಪಾಕ್‌

ಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿ ಹಾಗೂ ರಾಜ್ಯ ಪುನರ್‌ ವಿಂಗಡನೆ ವಿಚಾರವನ್ನು ದ್ವಿಪಕ್ಷೀಯ ವಿಚಾರವಾಗಿ ಬಗೆಹರಿಸಿಕೊಳ್ಳಲು ವಿಶ್ವಸಂಸ್ಥೆ ಭದ್ರತಾ ಮಂಡಳಿ ಸೂಚಿಸಿದ್ದರೂ, ಒಣ ಪ್ರತಿಷ್ಠೆ ಬಿಡದ ಪಾಕಿಸ್ತಾನವು ಈ ವಿಚಾರವನ್ನು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಒಯ್ಯಲು ನಿರ್ಧರಿಸಿದೆ. ಈ ವಿಷಯವನ್ನು ಪಾಕ್‌ ವಿದೇಶಾಂಗ ಸಚಿವ ಶಾ ಮೆಹಮೂದ್‌ ಖುರೇಷಿ ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ. ನೆಹರೂ ಕಟ್ಟಿದ್ದ ಭಾರತವನ್ನು ಪ್ರಧಾನಿ ಮೋದಿ ಹೂತು ಹಾಕಿದ್ದಾರೆ ಎಂದು ಖುರೇಷಿ ಕಿಡಿಕಾರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ