ಆ್ಯಪ್ನಗರ

ಹಿಂದೂ ಸೋದರಿಯರ ಅಪಹರಣ: ಪಾಕ್‌ ಸಚಿವರಿಗೆ ಸುಷ್ಮಾ ಸ್ವರಾಜ್ ತರಾಟೆ

ಇಬ್ಬರು ಸಚಿವರ ನಡುವೆ ತೀಕ್ಷ್ಣ ವಾಗ್ವಾದ ನಡೆದ ಹಿನ್ನೆಲೆಯಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್‌, ಹಿಂದೂ ಬಾಲಕಿಯರ ತ್ವರಿತ ಪತ್ತೆ ಹಾಗೂ ರಕ್ಷಣೆಗೆ ಸಿಂಧ್ ಮತ್ತು ಪಂಜಾಬ್ ಪ್ರಾಂತ್ಯ ಸರಕಾರಗಳಿಗೆ ಆದೇಶ ನೀಡಿದ್ದಾರೆ. ಮುಂದೆಂದೂ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವಂತೆಯೂ ತಾಕೀತು ಮಾಡಿದ್ದಾರೆ.

Vijaya Karnataka Web 25 Mar 2019, 10:20 am
ಹೊಸದಿಲ್ಲಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಹೋಳಿ ಆಚರಣೆ ವೇಳೆ ಇಬ್ಬರು ಹಿಂದೂ ಸಹೋದರಿಯರನ್ನು ಅಪಹರಿಸಿ, ಬಲವಂತವಾಗಿ ಮತಾಂತರಿಸಿ ಮುಸ್ಲಿಂ ವ್ಯಕ್ತಿಗಳ ಜತೆ ಮದುವೆ ಮಾಡಿಸಿದ ಪ್ರಕರಣವನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತೀವ್ರವಾಗಿ ಖಂಡಿಸಿದ್ದಾರೆ.
Vijaya Karnataka Web Sushma Swaraj


ಘಟನೆ ಕುರಿತು ಸುಷ್ಮಾ ಸ್ವರಾಜ್ ಹಾಗೂ ಪಾಕ್ ವಾರ್ತಾ ಸಚಿವ ಫವಾದ್ ಚೌಧರಿ ನಡುವೆ ತೀವ್ರ ವಾಗ್ವಾದಗಳು ನಡೆದಿವೆ.

ಇಬ್ಬರು ಸಚಿವರ ನಡುವೆ ತೀಕ್ಷ್ಣ ವಾಗ್ವಾದ ನಡೆದ ಹಿನ್ನೆಲೆಯಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್‌, ಹಿಂದೂ ಬಾಲಕಿಯರ ತ್ವರಿತ ಪತ್ತೆ ಹಾಗೂ ರಕ್ಷಣೆಗೆ ಸಿಂಧ್ ಮತ್ತು ಪಂಜಾಬ್ ಪ್ರಾಂತ್ಯ ಸರಕಾರಗಳಿಗೆ ಆದೇಶ ನೀಡಿದ್ದಾರೆ. ಮುಂದೆಂದೂ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವಂತೆಯೂ ತಾಕೀತು ಮಾಡಿದ್ದಾರೆ.

ಭಾರತ ಸರಕಾರ ಪಾಕ್ ವಿದೇಶಾಂಗ ಸಚಿವಾಲಯದ ಕಚೇರಿಗೆ ಅಧಿಕೃತ ಪತ್ರ ಕಳುಹಿಸಿದ್ದು, 'ಪಾಕಿಸ್ತಾನದ ಅಲ್ಪಸಂಖ್ಯಾತ ಸಮುದಾಯದ ನಾಗರಿಕರ ರಕ್ಷಣೆ, ಭದ್ರತೆ ಹಾಗೂ ಹಿತ ಕಾಪಾಡಲು' ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.

ಸಿಂಧ್ ಪ್ರಾಂತ್ಯದ ಘೋಟ್ಕಿ ಜಿಲ್ಲೆಯ ಧರ್ಕಿ ಪಟ್ಟಣದಲ್ಲಿ ಹೋಳಿ ಹಬ್ಬದ ಸಂಭ್ರಮದಲ್ಲಿದ್ದ ರವೀನಾ (13) ಮತ್ತು ರೀನಾ (15) ಎಂಬ ಹಿಂದೂ ಸೋದರಿಯರನ್ನು ದುಷ್ಕರ್ಮಿಗಳು ಅಪಹರಿಸಿ ಮತಾಂತರಗೊಳಿಸಿ ಬಲವಂತವಾಗಿ ಮುಸ್ಲಿಂ ವ್ಯಕ್ತಿಗಳ ಜತೆ ಮದುವೆ ಮಾಡಿಸಿದ್ದರು ಎಂದು ಮಾರ್ಚ್ 23ರಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿತ್ತು.

ಪಾಕಿಸ್ತಾನದ ಹಿಂದೂ ಸೇವಾ ಕಲ್ಯಾಣ ಟ್ರಸ್ಟ್‌ನ ಮುಖ್ಯಸ್ಥ ಸಂಜೇಶ್ ಧಂಜಾ ಕರಾಚಿಯಿಂದ ಟೈಮ್ಸ್‌ ಆಫ್ ಇಂಡಿಯಾ ಜತೆ ಮಾತನಾಡಿ, ಹಿಂದೂಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ ಬಳಿಕವಷ್ಟೇ ಪೊಲೀಸರು ಎಫ್‌ಐಆರ್‌ ದಾಖಲಿಸಿದರು ಎಂದು ತಿಳಿಸಿದ್ದರು. ಇಬ್ಬರೂ ಸೋದರಿಯರು ಧರ್ಕಿ ಪಟ್ಟಣ ಸಮೀಪದ ಹಫೀಜ್ ಸಲ್ಮಾನ್ ಗ್ರಾಮದ ನಿವಾಸಿಗಳು.

ಭಾನುವಾರ ಬೆಳಗ್ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ, ಟೈಮ್ಸ್‌ ಆಫ್‌ ಇಂಡಿಯಾ ವರದಿ ಕುರಿತು ವರದಿ ಕಳುಹಿಸುವಂತೆ ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನರ್‌ಗೆ ಸೂಚಿಸಿದರು.

ಅದಾಗಿ ಕೆಲವೇ ಗಂಟೆಗಳಲ್ಲಿ ಪಾಕ್ ಸಚಿವ ಚೌಧರಿ ಪ್ರತಿಕ್ರಿಯಿಸಿ, 'ಇದು ಪಾಕಿಸ್ತಾನದ ಆಂತರಿಕ ವಿಷಯ. ಮೋದಿಯ ಭಾರತ ಇದರಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ. ಮೋದಿಯ ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುವ ದೌರ್ಜನ್ಯದಂತೆ ಇಮ್ರಾನ್ ಖಾನ್ ಅವರ ನಯಾ ಪಾಕಿಸ್ತಾನದಲ್ಲಿ ನಡೆಯುತ್ತಿಲ್ಲ. ನಮ್ಮ ರಾಷ್ಟ್ರಧ್ವಜದಲ್ಲಿರುವ ಬಿಳಿ ಬಣ್ಣವೇ ನಮ್ಮ ಸಹಿಷ್ಣುತೆಯ ಸಂಕೇತ. ನಮ್ಮ ಅಲ್ಪಸಂಖ್ಯಾತರನ್ನು ನಾವು ರಾಷ್ಟ್ರಧ್ವಜದಷ್ಟೇ ಪ್ರೀತಿಸುತ್ತೇವೆ' ಎಂದು ಪ್ರತಿಕ್ರಿಯಿಸಿದರು. 'ಭಾರತದಲ್ಲೂ ಅಲ್ಪಸಂಖ್ಯಾತರನ್ನು ಚೆನ್ನಾಗಿ ನೋಡಿಕೊಳ್ಳಲು ಸುಷ್ಮಾ ಸ್ವರಾಜ್ ಕ್ರಮ ಕೈಗೊಳ್ಳುತ್ತಾರೆ ಎಂದು ಭಾವಿಸುತ್ತೇವೆ' ಎಂದು ಚೌಧರಿ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆಯಾಗಿ ಸುಷ್ಮಾ ಸ್ವರಾಜ್, 'ಮಿಸ್ಟರ್ ಮಿನಿಸ್ಟರ್ @ಫವಾದ್‌ಚೌಧರಿ- ನಾನು, ಇಬ್ಬರು ಅಪ್ರಾಪ್ತ ವಯಸ್ಸಿನ ಹಿಂದೂ ಬಾಲಕಿಯರನ್ನು ಅಪಹರಿಸಿ ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿದ ಬಗ್ಗೆ ವರದಿ ನೀಡುವಂತೆ ನಮ್ಮ ಹೈಕಮಿಷನರ್‌ಗೆ ಕೇಳಿದ್ದೇನೆ ಅಷ್ಟೇ. ಇಷ್ಟಕ್ಕೇ ನೀವು ದಿಗಿಲುಗೊಂಡಿದ್ದೀರಿ. ಇದು ನಿಮ್ಮ ತಪ್ಪಿತಸ್ಥ ಭಾವನೆಯನ್ನು ತೋರಿಸುತ್ತದೆ' ಎಂದು ಕುಟುಕಿದರು.

ಇದಕ್ಕೆ ಪ್ರತಿಕ್ರಿಯಿಸಿದ ಚೌಧರಿ- 'ಮೇಡಂ ಮಿನಿಸ್ಟರ್, ಬೇರೆ ದೇಶಗಳಲ್ಲಿ ಅಲ್ಪಸಂಖ್ಯಾತರ ಬಗ್ಗೆ ಭಾರತ ಸರಕಾರದ ಕಾಳಜಿ ಮೆಚ್ಚಬೇಕಾದ್ದೇ. ಅದೇ ರೀತಿ ನಿಮ್ಮ ದೇಶದಲ್ಲೂ ಅಲ್ಪಸಂಖ್ಯಾತರ ರಕ್ಷಣೆಗೆ ಕಾಳಜಿವಹಿಸುವಿರಿ ಎಂದು ನಂಬುತ್ತೇನೆ. ಗುಜರಾತ್‌ ಮತ್ತು ಜಮ್ಮು ನಿಮ್ಮ ಮನಸ್ಸಿನಲ್ಲಿರಲಿ' ಎಂದು ಟ್ವೀಟ್ ಮಾಡಿದರು.

ರವೀನಾ ಮತ್ತು ರೀನಾ ಎಂಬ ಹಿಂದೂ ಬಾಲಕಿಯರಿಗೆ ಆದ ಪಾಡು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ದಿನ ನಿತ್ಯದ ಕಥೆಯಾಗಿದೆ ಎಂದು ಮೂಲಗಳು ಹೇಳಿವೆ.

'ಇಬ್ಬರು ಸೋದರಿಯರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿದ ವೀಡಿಯೋ ಜಾಲತಾಣಗಳಲ್ಲಿ ವೈರಲ್ ಆಯಿತು. ಆ ಬಾಲಕಿಯರ ಸೋದರ ತನ್ನ ತಂಗಿಯರಿಗೆ ಆದ ಗತಿಯನ್ನು ಕಂಡು ಬಿಕ್ಕಿ ಬಿಕ್ಕಿ ಅಳುತ್ತ, ಪಾಕ್ ಸರಕಾರ ಇಂತಹ ಕೃತ್ಯಗಳನ್ನು ತಡೆಯಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸುವ ಮತ್ತೊಂದು ವೀಡಿಯೋ ಕೂಡ ವೈರಲ್ ಆಯಿತು.

ಕೋಹ್ಬರ್ ಮತ್ತು ಮಲಿಕ್ ಬುಡಕಟ್ಟಿನ ಜನರು ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ.


ಈ ಬಾಲಕಿಯರ ಅಪಹರಣದ ಬಳಿಕ ಅವರ ತಾಯಿಗೆ ಹೃದಯಾಘಾತಕ್ಕೆ ಒಳಗಾದರು. ಬಳಿಕ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆ ಮಹಿಳೆ ಇದೀಗ ಸಾವು-ಬದುಕಿನ ಹೋರಾಟ ನಡೆಸಿದ್ದಾರೆ ಎಂದು ಪಾಕಿಸ್ತಾನದ ಸಮುಂದ್ರಿಯ ಸರಕಾರಿ ಸ್ನಾತಕೋತ್ತರ ಕಾಲೇಜಿನ ರಾಜ್ಯಶಾಸ್ತ್ರ ಪ್ರಾಧ್ಯಾಪಕಿ ಅಂಜುಮ್ ಜೇಮ್ಸ್ ಪೌಲ್‌ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದರು. ಇದರಿಂದಾಗಿ ಪ್ರಕರಣ ಹೊರ ಜಗತ್ತಿಗೆ ತಿಳಿಯುವಂತಾಯಿತು ಎಂದು ಹಿಂದೂ ಸಂಘಟನೆ ಮುಖ್ಯಸ್ಥ ಧಂಜಾ ಟಿಓಐಗೆ ತಿಳಿಸಿದರು.

ಬಾಲಕಿಯರ ಅಪಹರಣ ಮತ್ತು ಬಲವಂತದ ಮತಾಂತರ ವಿರುದ್ಧ ಶುಕ್ರವಾರ ಮತ್ತು ಶನಿವಾರ ಪಾಕಿಸ್ತಾನದಲ್ಲಿ ಹಿಂದೂ ಸಂಘಟನೆ ಭಾರೀ ಪ್ರತಿಭಟನೆ ನಡೆಸಿತು. ಮಾರ್ಚ್‌ ತಿಂಗಳಲ್ಲೇ ಇಂತಹ 6 ಪ್ರಕರಣಗಳು ನಡೆದಿವೆ. ಹೋಳಿ ಹಬ್ಬದ ಮುನ್ನಾದಿನ ಸಿಂಧ್ ಪ್ರಾಂತ್ಯದಲ್ಲೇ ಮಿರ್‌ಪುರ್‌ಖಾಸ್ ಎಂಬಲ್ಲಿ ಇನ್ನೊಬ್ಬ ಅಪ್ರಾಪ್ತ ವಯಸ್ಸಿನ ಹಿಂದೂ ಬಾಲಕಿ ಶಾನಿಯಾ ಎಂಬಾಕೆಯನ್ನು ಅಪಹರಿಸಿ ಮತಾಂತರ ಮಾಡಲಾಗಿತ್ತು.

ಬಾಲಕಿಯರ ಅಪಹರಣ ವಿರುದ್ಧ ಸಿಂಧ್ ಪ್ರಾಂತ್ಯದಲ್ಲಿ ಎಫ್‌ಐಆರ್‌ ದಾಖಲಾಗಿರುವುದರಿಂದ ನ್ಯಾಯವನ್ನು ವಿಳಂಬಿಸಲೆಂದೇ ಈ ಸೋದರಿಯರನ್ನು ಪಂಜಾಬ್‌ನ ರಹೀಮ್ ಯಾರ್‌ ಖಾನ್‌ಗೆ ಸ್ಥಳಾಂತರಿಸಲಾಗಿದೆ ಎಂದು ಧಂಜಾ ಆರೋಪಿಸಿದ್ದಾರೆ.

'2016ರಲ್ಲಿ ಸಿಂಧ್ ಪ್ರಾಂತ್ಯದ ಶಾಸನಸಭೆಯಲ್ಲಿ ಬಲವಂತದ ಮತಾಂತರ ವಿರುದ್ಧ ಕಾಯ್ದೆಯನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿತ್ತು. ಆದರೆ ನಂತರ ಮೂಲಭೂತವಾದಿಗಳ ಒತ್ತಡಕ್ಕೆ ಮಣಿದು ಕಾಯ್ದೆಯನ್ನು ರದ್ದುಪಡಿಸಲಾಯಿತು. ಅದನ್ನು ಮತ್ತಷ್ಟು ಬಲಗೊಳಿಸಿ ಪುನಃ ಜಾರಿಗೊಳಿಸಬೇಕು' ಎಂದು ಧಂಜಾ ಒತ್ತಾಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ