ಆ್ಯಪ್ನಗರ

ಮಹಾರಾಷ್ಟ್ರದಲ್ಲಿನ್ನು 'ಹುಲಿ' ರಾಜ್ಯಭಾರ; ಸಂಜೆ ಉದ್ಧವ್‌ ಠಾಕ್ರೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ

ಮಹಾರಾಷ್ಟ್ರದಲ್ಲಿ ಉದ್ಧವ್‌ ಠಾಕ್ರೆ ಮುಖ್ಯಮಂತ್ರಿಯಾಗಿ ಪದಗ್ರಹಣಕ್ಕೆ ಭರ್ಜರಿ ತಯಾರಿ ನಡೆದಿದೆ. ಗುರುವಾರ ಸಂಜೆ 6.30ಕ್ಕೆ ಶಿವಾಜಿ ಪಾರ್ಕ್‌ನಲ್ಲಿ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

Vijaya Karnataka Web 28 Nov 2019, 7:04 am
ಮುಂಬಯಿ: ಶಿವಸೇನೆ ವರಿಷ್ಠ ಉದ್ಧವ್‌ ಠಾಕ್ರೆ ಅವರು ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಗುರುವಾರ ಸಂಜೆ ಅಧಿಕಾರ ವಹಿಸಿಕೊಳ್ಳಲಿದ್ದು, ರಾಜ್ಯ ರಾಜಕಾರಣದಲ್ಲಿ ಹೊಸ ಅಧ್ಯಾಯವೊಂದು ಆರಂಭವಾಗಲಿದೆ. ಬಿಜೆಪಿ ಜತೆಗಿನ ಅಲ್ಪಕಾಲದ ಸಖ್ಯ ತೊರೆದು 'ಮನೆಗೆ ಮರಳಿದ' ಎನ್‌ಸಿಪಿಯ ಅಜಿತ್‌ ಪವಾರ್‌ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ಒಲಿಯುವುದು ಖಚಿತವಾಗಿದೆ.
Vijaya Karnataka Web Uddhav Thackeray


ಶಿವಸೇನೆ ಸ್ಥಾಪಕ ಬಾಳಾಸಾಹೇಬ್‌ ಠಾಕ್ರೆ ಅವರು ಎಂದಿಗೂ ಸರಕಾರದಲ್ಲಿ ಭಾಗಿಯಾಗಿರಲಿಲ್ಲ. ಹೀಗಾಗಿ 59 ವರ್ಷದ ಉದ್ಧವ್‌ ಠಾಕ್ರೆ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಠಾಕ್ರೆ ಕುಟುಂಬದ ಮೊದಲ ವ್ಯಕ್ತಿಯಾಗಿದ್ದಾರೆ. ಈವರೆಗೆ ಠಾಕ್ರೆ ಕುಟುಂಬ ಸದಸ್ಯರು ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಉದ್ಧವ್‌ ಪುತ್ರ ಆದಿತ್ಯ ಠಾಕ್ರೆ ಅವರು ಮುಂಬಯಿಯ ವರ್ಲಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ಕಳೆದ ಚುನಾವಣೆಯಲ್ಲಿ ಹೊಸ ದಾಖಲೆ ಬರೆದಿದ್ದರು. ಮಂಗಳವಾರ ಸಂಜೆ ನಡೆದ ಶಿವಸೇನೆ, ಎನ್‌ಸಿಪಿ, ಕಾಂಗ್ರೆಸ್‌ ಮೈತ್ರಿಕೂಟ 'ಮಹಾ ವಿಕಾಸ ಅಘಾಡಿ'ಯ ಜಂಟಿ ಶಾಸಕಾಂಗ ಸಭೆಯಲ್ಲಿ ಉದ್ಧವ್‌ ಅವರನ್ನು ಮುಖ್ಯಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ.

ಸಂಪುಟ ರಚನೆ ಸಂಬಂಧ ಗುರುವಾರ ಇಡೀ ದಿನ ಮುಂಬಯಿನಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆದವು. ಎನ್‌ಸಿಪಿ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಆ ಬಳಿಕ ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌ ಅವರ ನಿವಾಸದಲ್ಲಿ ಕಾಂಗ್ರೆಸ್‌ ನಾಯಕರಾದ ಅಹ್ಮದ್‌ ಪಟೇಲ್‌, ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆಸಿ ವೇಣುಗೋಪಾಲ್‌ ಅವರು ಚರ್ಚೆ ನಡೆಸಿ ಅಧಿಕಾರ ಹಂಚಿಕೆ ಸೂತ್ರ ಸಿದ್ಧ ಪಡಿಸಿದರು. ನಂತರ ನಿಯೋಜಿತ ಸಿಎಂ ಉದ್ಧವ್‌ ಠಾಕ್ರೆ ಜತೆ ಶರದ್ ಪವಾರ್‌ ಅವರು ಮಾತುಕತೆ ನಡೆಸಿದರು.

ಬೆರಳೆಣಿಕೆ ದಿನಗಳ ಕಾಲ ಮುಖ್ಯಮಂತ್ರಿಯಾಗಿ 'ಸಾಧನೆ' ಮಾಡಿದ ನಾಯಕರಿವರು!

ಅಧಿಕಾರ ಹಂಚಿಕೆ ಸೂತ್ರ
ಶಾಸಕ ಸಂಖ್ಯಾಬಲದ ಆಧಾರದ ಮೇಲೆ ಸಂಪುಟದಲ್ಲಿ ಪ್ರಾತಿನಿಧ್ಯಕ್ಕೆ ನಿರ್ಧರಿಸಲಾಯಿತು. ಆ ಪ್ರಕಾರ ಶಿವಸೇನೆಗೆ ಸಿಎಂ ಸೇರಿ 16, ಎನ್‌ಸಿಪಿಗೆ ಡಿಸಿಎಂ ಒಳಗೊಂಡು 15, ಕಾಂಗ್ರೆಸ್‌ಗೆ 13 ಸ್ಥಾನ ಎಂದು ನಿರ್ಧಾರವಾಗಿತ್ತು. ಸಂಜೆ ವೇಳೆಗೆ ಸಮೀಕರಣ ಬದಲಾಗಿ, ತನ್ನ ಪಾಲಿನ 1 ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲು ಶಿವಸೇನೆ ತೀರ್ಮಾನಿಸಿತು. ಸ್ಪೀಕರ್‌ ಹುದ್ದೆ ಬೇಡವೆಂದಿದ್ದ ಕಾಂಗ್ರೆಸ್‌ ಕೊನೆಗೂ ಈ ಹುದ್ದೆ ಪಡೆಯಲು ಒಪ್ಪಿಕೊಂಡಿದೆ.

ಅಜಿತ್‌ ಪವಾರ್‌ ಅಪ್ಪಿಕೊಂಡು ಸ್ವಾಗತಿಸಿದ ಶರದ್‌ ಪವಾರ್‌ ಪುತ್ರಿ ಸುಪ್ರಿಯಾ ಸುಳೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ