ಆ್ಯಪ್ನಗರ

ಉ.ಕ ಪ್ರತ್ಯೇಕತಾ ಹೋರಾಟದ ವಿರುದ್ಧ ತ್ರಿಪಕ್ಷ ಧ್ವನಿ: ಒಡಕಿನ ಬಳಿಕ ಐಕ್ಯಮಂತ್ರ

ಬಜೆಟ್ ಹಂಚಿಕೆಯಲ್ಲಿ ತಾರತಮ್ಯವಾಗಿದೆ ಎಂಬ ಕಾರಣಕ್ಕಾಗಿ ಹುಟ್ಟಿಕೊಂಡು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪ್ರಚೋದನಾಕಾರಿ ಹೇಳಿಕೆಯ ಬಳಿಕ ತೀವ್ರಗೊಂಡ ಉತ್ತರ ಕರ್ನಾಟಕ ಪ್ರತ್ಯೇಕತೆಯ ಕಾವನ್ನು ಶಮನಗೊಳಿಸುವ ಪ್ರಯತ್ನ ಈಗ ಶುರುವಾಗಿದೆ.

Vijaya Karnataka 29 Jul 2018, 7:46 am
ಬೆಂಗಳೂರು: ಬಜೆಟ್ ಹಂಚಿಕೆಯಲ್ಲಿ ತಾರತಮ್ಯವಾಗಿದೆ ಎಂಬ ಕಾರಣಕ್ಕಾಗಿ ಹುಟ್ಟಿಕೊಂಡು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪ್ರಚೋದನಾಕಾರಿ ಹೇಳಿಕೆಯ ಬಳಿಕ ತೀವ್ರಗೊಂಡ ಉತ್ತರ ಕರ್ನಾಟಕ ಪ್ರತ್ಯೇಕತೆಯ ಕಾವನ್ನು ಶಮನಗೊಳಿಸುವ ಪ್ರಯತ್ನ ಈಗ ಶುರುವಾಗಿದೆ. ಆಡಳಿತಾರೂಢ ಜೆಡಿಎಸ್ ಮತ್ತು ಕಾಂಗ್ರೆಸ್ ಮಿತ್ರಕೂಟ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಗಮನ ಹರಿಸುವ ಅನಿವಾರ್ಯತೆಯ ಬಗ್ಗೆ ಮಾತನಾಡಿದ್ದರೆ, ಪ್ರತಿಪಕ್ಷ ಬಿಜೆಪಿ ಹೋರಾಟದಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ್ದುಘಿ, ಪರ-ವಿರೋಧ ಹೇಳಿಕೆ ನೀಡದಂತೆ ನಾಯಕರಿಗೆ ಸೂಚನೆ ನೀಡಿದೆ.
Vijaya Karnataka Web state


ಈ ನಡುವೆ, ಉತ್ತರ ಕರ್ನಾಟಕದ ಭಾಗವಾಗಿರುವ ಹೈದರಾಬಾದ್ ಕರ್ನಾಟಕ ಆಗಸ್ಟ್ ೨ರ ಬಂದ್ ಮತ್ತು ಇತರ ಹೋರಾಟಗಳಿಗೆ ಬೆಂಬಲ ನೀಡದಿರಲು ನಿರ್ಧರಿಸಿದ್ದು, ಪ್ರತ್ಯೇಕತಾ ಹೋರಾಟಕ್ಕೆ ವಿರೋಧ ವ್ಯಕ್ತಪಡಿಸಿದೆ.
ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡಿಕೆ ಸಮಂಜಸವಲ್ಲ ಎನ್ನುವುದರ ಜತೆಗೆ, ಜನರನ್ನು ಕೆರಳಿಸುವ ರೀತಿಯ ಹೇಳಿಕೆ ನೀಡದಂತೆ ಮುಖ್ಯಮಂತ್ರಿಗಳಿಗೂ ಕಿವಿಮಾತು ಹೇಳಿದ್ದಾರೆ. ಕುಮಾರಸ್ವಾಮಿ ಅವರೂ ಹೋರಾಟಗಾರರು ಬಯಸುವ ಕಡೆ ಸಭೆ ನಡೆಸಿ ಅಭಿವೃದ್ಧಿ ಬಗ್ಗೆ ಚರ್ಚಿಸಲು ಸಿದ್ಧ ಎಂದು ಪುನರುಚ್ಚರಿಸಿದ್ದಾರೆ.

ಉತ್ತರ ಕರ್ನಾಟಕದ ಹಲವು ಸಂಘಟನೆಗಳು, ಮಠಾಧೀಶರು, ರಾಜಕಾರಣಿಗಳು ಬಂದ್ ಮತ್ತು ಪ್ರತ್ಯೇಕತಾ ಹೋರಾಟ ಅಗತ್ಯವಿಲ್ಲ ಎಂದು ಪ್ರತಿಪಾದಿಸಿರುವುದು ಸರಕಾರಕ್ಕೆ ಸ್ವಲ್ಪ ಮಟ್ಟಿಗೆ ನಿರಾಳತೆ ಮೂಡಿಸಿದೆ.

ಪ್ರತ್ಯೇಕತೆ ಕೂಗು ಹೆಚ್ಚಿಸುವ ರೀತಿ ಮಾತನಾಡಬೇಡಿ ಎಂದು ಕುಮಾರಸ್ವಾಮಿ ಅವರಿಗೆ ಹೇಳಿರುವೆ. ಆ ರೀತಿ ಮಾತಾಡಿಲ್ಲ. ಮುಂದೆಯೂ ಆ ಭಾಗದ ಜನರ ಮನಸ್ಸಿಗೆ ನೋವನ್ನು ಮಾಡುವುದಿಲ್ಲವೆಂದು ಕುಮಾರಸ್ವಾಮಿ ಸಹ ನನಗೆ ಭರವಸೆ ನೀಡಿದ್ದಾರೆ.
- ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ನಾಯಕ

ಆಗಸ್ಟ್‌ 2ರಂದು ಕರೆ ನೀಡಿರುವ ಬಂದ್‌ ಕೈಬಿಡಬೇಕು ಎಂದು ಕೈ ಮುಗಿದು ಮನವಿ ಮಾಡಿಕೊಳ್ಳುವೆ. ಅಖಂಡ ಕರ್ನಾಟಕಕ್ಕೆ ಬಿಜೆಪಿ ಬದ್ಧವಾಗಿದೆ. ಪಕ್ಷದ ಯಾವುದೇ ಮುಖಂಡರು ಪರ-ವಿರೋಧದ ಹೇಳಿಕೆ ನೀಡಬಾರದು.
- ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ನಾಯಕ

ಕಲ್ಯಾಣ ಕರ್ನಾಟಕ ಸಮಿತಿ ಬೆಂಬಲವಿಲ್ಲ

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗಿಗೆ ಬೆಂಬಲ ನೀಡದಿರಲು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಜಾಗೃತಿ ಸಮಿತಿ ನಿರ್ಧರಿಸಿದೆ ಎಂದು ಅಧ್ಯಕ್ಷ ಎಂ.ಎಸ್‌. ಪಾಟೀಲ್‌ ನರಿಬೋಳ ಹೇಳಿದ್ದಾರೆ. ಬದಲಿಗೆ ಕಲ್ಯಾಣ ಕರ್ನಾಟಕ ರಚನೆಗೆ ಆಗ್ರಹಿಸಿ ಆ.2ರಂದು ಮಠಾಧೀಶರು, ಪ್ರಗತಿಪರ ಚಿಂತಕರು, ಬುದ್ಧಿಜೀವಿಗಳು, ವಿವಿಧ ಸಂಘಟನೆಗಳ ಮುಖಂಡರ ಬೆಂಬಲದೊಂದಿಗೆ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದಿದ್ದಾರೆ. ಪ್ರತ್ಯೇಕ ರಾಜ್ಯ ಬೇಡಿಕೆಗೆ ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಶರಣಬಸಪ್ಪ ಅಪ್ಪ ವಿರೋಧ ವ್ಯಕ್ತಪಡಿಸಿದ್ದಾರೆ.

ಬಂದ್‌ ಖಚಿತ: ಹೋರಾಟ ಸಮಿತಿ

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸಿ ಆಗಸ್ಟ್‌ 2ರಂದು ಉಕ ಭಾಗದ 13 ಜಿಲ್ಲೆಗಳಲ್ಲಿ ಬಂದ್‌ ನಡೆಯುವುದು ಖಚಿತ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗೇಶ ಗೋಲಶೆಟ್ಟಿ ಹೇಳಿದ್ದಾರೆ.

ದೂರ ನಿಂತ ಹೈಕ

ಆಗಸ್ಟ್‌ 2ರ ಬಂದ್‌ಗೆ ಸುತಾರಾಂ ಬೆಂಬಲ ನೀಡುವುದಿಲ್ಲ. ಆದರೆ, ಹೈದರಾಬಾದ್‌ ಕರ್ನಾಟಕ ಭಾಗದ ಅಭಿವೃದ್ಧಿಯ ವಿಷಯದಲ್ಲಿ ತೋರಲಾಗುತ್ತಿರುವ ನಿರ್ಲಕ್ಷ್ಯ ವಿರೋಧಿಸಿ ನವೆಂಬರ್‌ ನಂತರ ಹೋರಾಟ ಚುರುಕುಗೊಳಿಸಲಾಗುವುದು ಎಂದು ಹೈ.ಕ. ಜನಪರ ಸಂಘರ್ಷ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ತಿಳಿಸಿದ್ದಾರೆ.

ಇಡೀ ರಾಜ್ಯದ ಜನರನ್ನು ತಮ್ಮ ಕುಟುಂಬದಂತೆ ಭಾವಿಸುವ ಕುಮಾರಸ್ವಾಮಿ ಅವರಿಂದ ಯಾವ ಭಾಗದ ಜನರಿಗೂ ಅನ್ಯಾಯ, ತಾರತಮ್ಯವಾಗುವ ಪ್ರಶ್ನೆಯೇ ಇಲ್ಲ.
- ಬಂಡೆಪ್ಪ ಕಾಶಂಪುರ, ಸಹಕಾರ ಸಚಿವ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ