ಆ್ಯಪ್ನಗರ

ಉಗ್ರ ನಿಗ್ರಹಕ್ಕೆ ಭಾರತದ ಸಹಕಾರ ಅಗತ್ಯ: ವಿಶ್ವಸಂಸ್ಥೆ ಮುಖ್ಯಸ್ಥ ಗುಟೆರಸ್‌ ಪ್ರತಿಪಾದನೆ

ಭಯೋತ್ಪಾದನೆ ವಿರುದ್ಧದ ಹೋರಾಟ ಹಾಗೂ ಹಿಂಸಾತ್ಮಕ ಉಗ್ರವಾದ ತಡೆಗಟ್ಟುವ ನಿಟ್ಟಿನಲ್ಲಿ ಭಾರತವು ವಿಶ್ವಸಂಸ್ಥೆಯ ‘ಬಹುಮುಖ್ಯ ಪಾಲುದಾರ’ ರಾಷ್ಟ್ರವಾಗಿದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್‌ ಭಾನುವಾರ ಹೇಳಿದ್ದಾರೆ.

Vijaya Karnataka 1 Oct 2018, 10:51 am
ವಿಶ್ವಸಂಸ್ಥೆ: ಭಯೋತ್ಪಾದನೆ ವಿರುದ್ಧದ ಹೋರಾಟ ಹಾಗೂ ಹಿಂಸಾತ್ಮಕ ಉಗ್ರವಾದ ತಡೆಗಟ್ಟುವ ನಿಟ್ಟಿನಲ್ಲಿ ಭಾರತವು ವಿಶ್ವಸಂಸ್ಥೆಯ ‘ಬಹುಮುಖ್ಯ ಪಾಲುದಾರ’ ರಾಷ್ಟ್ರವಾಗಿದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್‌ ಭಾನುವಾರ ಹೇಳಿದ್ದಾರೆ.
Vijaya Karnataka Web Teror


ಭಯೋತ್ಪಾದನೆ ಜಾಗತಿಕ ಪಿಡುಗು. ಪರಸ್ಪರ ಸಹಕಾರದೊಂದಿಗೆ ಅದನ್ನು ಮಟ್ಟಹಾಕಬೇಕಿದೆ. ಈ ದಿಸೆಯಲ್ಲಿ ಭಾರತ ಪ್ರಮುಖ ಪಾಲುದಾರ ರಾಷ್ಟ್ರವಾಗಿದ್ದು, ಉಗ್ರರಿಗೆ ಹಣಕಾಸು ನೆರವು ಒದಗಿಸುವ ಮೂಲಗಳನ್ನೂ ಮಟ್ಟಹಾಕಲು ವಿಶ್ವಸಂಸ್ಥೆ ಜತೆ ಕೈಜೋಡಿಸಲಿದೆ ಎಂದು ಗುಟೆರಸ್‌ ವಿಶ್ವಾಸ ವ್ಯಕ್ತಪಡಿಸಿದರು.

ಪಾಕ್‌ ಪ್ರಚೋದಿತ ಭಯೋತ್ಪಾದನೆ ವಿರುದ್ಧ ವಿಶ್ವಸಂಸ್ಥೆ ಮಹಾ ಅಧಿವೇಶನದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ವಾಗ್ದಾಳಿ ನಡೆಸಿದ ಮರುದಿನ ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಗುಟೆರಸ್‌ ಈ ಅಭಿಪ್ರಾಯ ಹೊರ ಹಾಕಿರುವುದು ವಿಶೇಷ. ಸೋಮವಾರದಿಂದ ಮೂರು ದಿನಗಳ ಭಾರತ ಪ್ರವಾಸ ಕೈಗೊಳ್ಳಲಿರುವ ಗುಟೆರಸ್‌, ಭಯೋತ್ಪಾದನೆ ಬಗ್ಗುಬಡಿಯುವ ದಿಸೆಯಲ್ಲಿ ರೂಪಿಸಿರುವ ಕಾನೂನುಗಳನ್ನು ಅನುಷ್ಠಾನಗೊಳಿಸುವುದು ಎಲ್ಲ ರಾಷ್ಟ್ರಗಳ ಜವಾಬ್ದಾರಿ ಎಂದು ನೆನಪಿಸಿದರು. ಇದೇ ವೇಳೆ, ವಿಶ್ವಸಂಸ್ಥೆ ಆರಂಭಿಸಿರುವ ‘ಭಯೋತ್ಪಾದನೆ ನಿಗ್ರಹ ಕಚೇರಿ’(ಒಸಿಟಿ)ಯ ಕಾರ್ಯ ಬಲವರ್ಧನೆಗೆ ಭಾರತ 550,000 ಡಾಲರ್‌ ನೆರವು ಘೋಷಣೆ ಮಾಡಿರುವುದನ್ನು ಶ್ಲಾಘಿಸಿದರು.

ಕಾಶ್ಮೀರ ಶಾಂತಿ ಪ್ರಯತ್ನಕ್ಕೆ ಮೆಚ್ಚುಗೆ

ಜಮ್ಮು-ಕಾಶ್ಮೀರದಲ್ಲಿನ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ, ಬಿಕ್ಕಟ್ಟಿಗೆ ಶಾಂತಿಯುತ ಪರಿಹಾರ ಕಂಡುಕೊಳ್ಳಲು ನಡೆಸುವ ಸಕಾರಾತ್ಮಕ ಮಾತುಕತೆಯನ್ನು ಬೆಂಬಲಿಸುವುದಾಗಿ ತಿಳಿಸಿದರು. ಉಪ ಖಂಡದ ಶಾಂತಿ ಹಾಗೂ ಭದ್ರತಾ ಸವಾಲುಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಭಾರತ ಪ್ರಮುಖ ಪಾತ್ರ ವಹಿಸುವುದನ್ನು ವಿಶ್ವಸಂಸ್ಥೆ ಸ್ವಾಗತಿಸುತ್ತದೆ. ಅಭಿವೃದ್ಧಿಯ ಮುಂಚೂಣಿಯಲ್ಲಿರುವ ಭಾರತವು, ಪ್ರಾದೇಶಿಕ ನೇತಾರ ರಾಷ್ಟ್ರವಾಗಿಯೂ ಪ್ರಮುಖ ಪಾತ್ರ ವಹಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಕಾಶ್ಮೀರದ ಬಿಕ್ಕಟ್ಟಿಗೆ ಶಾಂತಿಯುತ ಪರಿಹಾರ ಕಂಡುಕೊಳ್ಳುವ ಅಗತ್ಯ ಇದೆ. ಅದಕ್ಕೆ ಬೇಕಾದ ಎಲ್ಲ ನೆರವನ್ನು ವಿಶ್ವಸಂಸ್ಥೆ ನೀಡಲಿದೆ. ಈ ಕುರಿತು ಭಾರತದ ಪ್ರವಾಸ ವೇಳೆ ತಾವು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ ಮತ್ತು ಸಚಿವೆ ಸುಷ್ಮಾ ಸ್ವರಾಜ್‌ ಅವರ ಜತೆ ಚರ್ಚಿಸುವುದಾಗಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ