ಆ್ಯಪ್ನಗರ

ಎನ್‌ಆರ್‌ಸಿ ಬಗ್ಗೆ ವಿಶ್ವಸಂಸ್ಥೆ ಕಳವಳ

''ಸದ್ಯದ ಸ್ಥಿತಿಯಲ್ಲಿ ಯಾರನ್ನೂ ಅತಂತ್ರಗೊಳಿಸುವ ಯಾವುದೇ ನಿರ್ಧಾರ ಕೈಗೊಳ್ಳಬೇಡಿ,'' ಎಂದು ವಿಶ್ವಸಂಸ್ಥೆ ನಿರಾಶ್ರಿತರ ಅಧಿಕಾರಿ ಫಿಲಿಪ್ಪೊ ಗ್ರ್ಯಾಂಡಿ ಭಾರತಕ್ಕೆ ಮನವಿ ಮಾಡಿದ್ದಾರೆ.

Agencies 2 Sep 2019, 5:00 am
ಬರ್ಲಿನ್‌: ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಪಟ್ಟಿಯಿಂದ ಹೊರ ಉಳಿದಿರುವ ಸುಮಾರು 19 ಲಕ್ಷ ಜನರ ಅತಂತ್ರ ಭವಿಷ್ಯದ ಬಗ್ಗೆ ವಿಶ್ವಸಂಸ್ಥೆ ತೀವ್ರ ಕಳವಳ ವ್ಯಕ್ತಪಡಿಸಿದೆ.
Vijaya Karnataka Web un refugee chief urges india to ensure no one left stateless
ಎನ್‌ಆರ್‌ಸಿ ಬಗ್ಗೆ ವಿಶ್ವಸಂಸ್ಥೆ ಕಳವಳ


ಎನ್‌ಆರ್‌ಸಿ ಅಂತಿಮ ಪಟ್ಟಿ ಶನಿವಾರ ಪ್ರಕಟಗೊಂಡ ಬೆನ್ನ ಹಿಂದೆಯೇ ಲಕ್ಷಾಂತರ ಜನ ಅಕ್ರಮ ವಲಸಿಗರು ಗಡಿಪಾರಾಗುವ ಸಾಧ್ಯತೆಯ ಚರ್ಚೆಗಳು ಶುರುವಾಗಿದ್ದು, ಅವರಲ್ಲಿ ಆತಂಕ ಆವರಿಸಲು ಕಾರಣವಾಗಿದೆ. ಈ ಬೆಳವಣಿಗೆಗೆ ಜಿನೇವಾದಲ್ಲಿ ಭಾನುವಾರ ಪ್ರತಿಕ್ರಿಯಿಸಿದ ವಿಶ್ವಸಂಸ್ಥೆ ನಿರಾಶ್ರಿತರ ಅಧಿಕಾರಿ ಫಿಲಿಪ್ಪೊ ಗ್ರ್ಯಾಂಡಿ, ''ಸದ್ಯದ ಸ್ಥಿತಿಯಲ್ಲಿ ಯಾರನ್ನೂ ಅತಂತ್ರಗೊಳಿಸುವ ಯಾವುದೇ ನಿರ್ಧಾರ ಕೈಗೊಳ್ಳಬೇಡಿ,'' ಎಂದು ಭಾರತಕ್ಕೆ ಮನವಿ ಮಾಡಿದ್ದಾರೆ.

''ಭಾರತ ಎನ್‌ಆರ್‌ಸಿ ಅನುಷ್ಠಾನದ ಮುಂದಿನ ಕ್ರಮ ಕೈಗೊಂಡರೆ ಅಪಾರ ಸಂಖ್ಯೆಯ ಜನರಿಗೆ ನೆಲೆ ಇಲ್ಲದಾಗುತ್ತದೆ. ಇದರಿಂದ ಜಾಗತಿಕ ಮಟ್ಟದಲ್ಲಿ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತವೆ. ವಿಶೇಷವಾಗಿ, ನಿರಾಶ್ರಿತರ ನಿರ್ಮೂಲನೆಗೆ ವಿಶ್ವಸಂಸ್ಥೆ ನಡೆಸಿರುವ ಪ್ರಯತ್ನಕ್ಕೆ ಹಿನ್ನಡೆಯಾಗುತ್ತದೆ,'' ಎಂದು ಅವರು ವಿವರಿಸಿದ್ದಾರೆ.

ಎನ್‌ಆರ್‌ಸಿಯಿಂದ ಹೊರ ಉಳಿದರ ಹೊರತಾಗಿಯೂ ಭಾರತದ ಪ್ರಾಮಾಣಿಕ ಪ್ರಜೆಗಳಾರೂ ಆತಂಕಗೊಳ್ಳಬೇಕಿಲ್ಲ. ಅವರು ತಮ್ಮ ಪೌರತ್ವ ಸಾಬೀತುಪಡಿಸಲು ಇನ್ನು ಹಲವು ಅವಕಾಶಗಳಿವೆ. ತಕ್ಷಣ ಬಂಧನದ ಕ್ರಮ ಕೈಗೊಳ್ಳುವುದಿಲ್ಲ ಎಂದು ಅಸ್ಸಾಂ ಸರಕಾರ ಭರವಸೆ ನೀಡಿದೆ.

ಭಾರತದಲ್ಲಿ ಅಕ್ರಮ ಬಾಂಗ್ಲಾದೇಶಿಯರಿಲ್ಲ ಎಂದ ಸಚಿವ
ಢಾಕಾ: ಬಾಂಗ್ಲಾದೇಶ ರಚನೆಯಾದ 1971ರ ಬಳಿಕ ಒಬ್ಬನೇ ಒಬ್ಬ ಬಾಂಗ್ಲಾದೇಶಿ ಪ್ರಜೆ ಅಕ್ರಮವಾಗಿ ಗಡಿದಾಟಿ ಭಾರತಕ್ಕೆ ಹೋಗಿ ನೆಲೆಸಿಲ್ಲ ಎಂದು ಬಾಂಗ್ಲಾದೇಶ ಗೃಹ ಸಚಿವ ಅಸಾದುಝಮನ್‌ ಖಾನ್‌ ಸ್ಪಷ್ಟನೆ ನೀಡಿದ್ದಾರೆ.

ಎನ್‌ಆರ್‌ಸಿ ಅಂತಿಮ ಪಟ್ಟಿ ನಂತರ ಅಸ್ಸಾಂನಲ್ಲಿ ಅತಂತ್ರಗೊಂಡಿರುವ ತನ್ನ ಪ್ರಜೆಗಳನ್ನು ನೆರೆಯ ಸ್ನೇಹ ರಾಷ್ಟ್ರ ಬಾಂಗ್ಲಾದೇಶವು ಸ್ವಇಚ್ಛೆಯಿಂದ ಕರೆಸಿಕೊಳ್ಳುವುದು ಸೂಕ್ತ ಎಂದು ಅಸ್ಸಾಂ ಸಚಿವ ಹಿಮಂತ ಬಿಸ್ವಾಸ್‌ ನೀಡಿದ್ದ ಹೇಳಿಕೆಗೆ ಭಾನುವಾರ ಖಾನ್‌ ಈ ಸ್ಪಷ್ಟನೆ ನೀಡಿದ್ದಾರೆ. ''ಹೌದು, ಎನ್‌ಆರ್‌ಸಿ ಪ್ರಕಟಗೊಂಡ ಬಗ್ಗೆ ನನಗೆ ತಿಳಿದಿದೆ. ಅದು ಸಂಪೂರ್ಣವಾಗಿ ಭಾರತದ ಆಂತರಿಕ ವಿಷಯ. ಹೀಗಾಗಿ ಅದಕ್ಕೆ ಪ್ರತಿಕ್ರಿಯಿಸುವ ಅಗತ್ಯ ನಮಗಿಲ್ಲ,'' ಎಂದಿದ್ದಾರೆ.

''ಭಾರತವು ನಮ್ಮ ನೆರೆಯ ಸ್ನೇಹರಾಷ್ಟ್ರ. ನಮ್ಮ ನಡುವಿನ ಸಂಬಂಧ ಅತ್ಯುತ್ತಮವಾಗಿದೆ. ಎನ್‌ಆರ್‌ಸಿ ವಿಷಯದಲ್ಲಿ ಬಾಂಗ್ಲಾ ನಿರ್ವಹಿಸುವ ಪಾತ್ರ ಏನೂ ಇಲ್ಲ. 1971ರ ನಂತರ ನಮ್ಮಿಂದ ಯಾರೂ ಭಾರತಕ್ಕೆ ಹೋಗಿ ನೆಲೆಸಿಲ್ಲ. ಅಸ್ಸಾಂನ ಕೆಲವು ಕಡೆ ಆ ರೀತಿ ನೆಲೆಸಿರುವವರೆಲ್ಲರೂ ಬಂಗಾಳಿಗಳು ಇರಬಹುದೇ ವಿನಾ ಬಾಂಗ್ಲಾದೇಶಿಯರಲ್ಲ,'' ಎಂದು ಖಾನ್‌ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ