ಆ್ಯಪ್ನಗರ

ನಿರುದ್ಯೋಗದಿಂದ ಐಸಿಸ್‌ ಉಗಮ: ವಿವಾದ ಸೃಷ್ಟಿಸಿದ ರಾಹುಲ್ ಹೇಳಿಕೆ

ಉಗ್ರರ ಸಂಘಟನೆ ಐಸಿಸ್‌ನ ಹುಟ್ಟು ಮತ್ತು ಅದಕ್ಕೆ ಮೋದಿ ಸರಕಾರದೊಂದಿಗೆ ತಳುಕು ಹಾಕಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ.

Vijaya Karnataka 24 Aug 2018, 7:42 am
ಹೊಸದಿಲ್ಲಿ: ಉಗ್ರರ ಸಂಘಟನೆ ಐಸಿಸ್‌ನ ಹುಟ್ಟು ಮತ್ತು ಅದಕ್ಕೆ ಮೋದಿ ಸರಕಾರದೊಂದಿಗೆ ತಳುಕು ಹಾಕಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. ಅದರಲ್ಲೂ ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತದ ಆಂತರಿಕ ವಿಷಯಗಳ ಬಗ್ಗೆ ಮಾತನಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿ ಇದನ್ನು ಖಂಡಿಸಿದ್ದು, ಕ್ಷಮೆಗೆ ಆಗ್ರಹಿಸಿದೆ.
Vijaya Karnataka Web Rahul Gandhi 1


''ಐಸಿಸ್‌ನಂತಹ ಉಗ್ರ ಸಂಘಟನೆಗಳ ಉಗಮಕ್ಕೆ ನಿರುದ್ಯೋಗ ಹಾಗೂ ಅಭಿವೃದ್ಧಿ ಪ್ರಕ್ರಿಯೆಯಿಂದ ಹೆಚ್ಚಿನ ಜನರನ್ನು ದೂರವಿಟ್ಟಿರುವುದೇ ಕಾರಣ. ದಲಿತರು, ಅಲ್ಪ ಸಂಖ್ಯಾತರು, ಬುಡಕಟ್ಟು ಸಮುದಾಯವನ್ನು ಮೋದಿ ಸರಕಾರ ಅಭಿವೃದ್ಧಿಯಿಂದ ದೂರವಿಟ್ಟು, ಶ್ರೀಮಂತರ ಉದ್ಧಾರದಲ್ಲಿ ತೊಡಗಿದೆ. ಇದು ಅತ್ಯಂತ ಅಪಾಯಕಾರಿ. ನೀವು 21ನೇ ಶತಮಾನದಲ್ಲಿ ಜನರಿಗೆ ಒಂದು ದೂರದೃಷ್ಟಿಯನ್ನು ನೀಡದಿದ್ದರೆ, ಬೇರೊಬ್ಬರು (ಐಸಿಸ್‌ ಉಗ್ರರು) ಜನರಿಗೆ ದೂರದೃಷ್ಟಿಯನ್ನು ಒದಗಿಸುತ್ತಾರೆ,'' ಎಂದು ರಾಹುಲ್‌ ಅವರು ಬ್ಯುಸೆರಿಯಸ್‌ ಸಮ್ಮರ್‌ ಸ್ಕೂಲ್‌'ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.

ಬಡಿದು ಕೊಲ್ಲುವ ಪ್ರವೃತ್ತಿ:
ಭಾರತದಲ್ಲಿ ಆಡಳಿತಾರೂಢ ಎನ್‌ಡಿಎ ಸರಕಾರದ ವಿರುದ್ಧ ಜನರ ಆಕ್ರೋಶವೇ ಇತ್ತೀಚೆಗೆ ದೇಶದಲ್ಲಿ ಹೆಚ್ಚಿರುವ ಸಮೂಹ ಸನ್ನಿ ಕೊಲೆಗಳಿಗೆ ಕಾರಣ. ನಿರುದ್ಯೋಗ, ನಗದು ಅಮಾನ್ಯೀಕರಣ, ಜಿಎಸ್‌ಟಿ ಅಸಂಬದ್ಧ ಅನುಷ್ಠಾನ ಪರೋಕ್ಷವಾಗಿ ಬಡಿದು ಕೊಲ್ಲುವ ಪ್ರವೃತ್ತಿಗೆ ಕಾರಣ ಎಂದೂ ರಾಹುಲ್‌ ಹೇಳಿದ್ದರು.

ರಾಹುಲ್‌ ಗಾಂಧಿ ಅವರು ಭಯೋತ್ಪಾದನೆಯನ್ನು ಬೆಂಬಲಿಸಿದ್ದು, ಪ್ರಧಾನಿ ಮೋದಿ ಅವರ ಮೇಲೆ ವಾಗ್ದಾಳಿ ನಡೆಸುವ ಭರದಲ್ಲಿ ಶುದ್ಧ ಸುಳ್ಳುಗಳ ಕಂತೆ ಬಿಡಿಸಿಟ್ಟಿದ್ದಾರೆ. ವಿದೇಶಿ ನೆಲದಲ್ಲಿ ಭಾರತದ ಬಗ್ಗೆ ಕೀಳಾಗಿ ಮಾತನಾಡುವ ಮೂಲಕ ರಾಹುಲ್‌ ದೇಶಕ್ಕೆ ಅಪಮಾನ ಮಾಡಿದ್ದಾರೆ. ಅವರು ಕ್ಷಮಾಪಣೆ ಕೋರಬೇಕು -ಸಂಬಿತ್‌ ಪಾತ್ರ, ಬಿಜೆಪಿ ವಕ್ತಾರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ