ಆ್ಯಪ್ನಗರ

ಅಕ್ಟೋಬರ್‌ನಿಂದ ಚಿತ್ರಮಂದಿರ ಓಪನ್‌? ಕುತೂಹಲ ಮೂಡಿಸಿದ ಅನ್‌ಲಾಕ್‌ 5.0

ಅನ್‌ಲಾಕ್‌ 5.0 ಮಾರ್ಗಸೂಚಿಯಲ್ಲಿ ಪ್ರವಾಸೋದ್ಯಮ, ಆರ್ಥಿಕ ಚಟುವಟಿಕೆಗೆ ಒತ್ತು ನೀಡುವ ಸಾಧ್ಯತೆ ಇದ್ದು, ಅಕ್ಟೋಬರ್‌ 1ರಿಂದ ನಿರ್ಬಂಧಗಳನ್ನು ಮತ್ತಷ್ಟು ಸಡಿಲಗೊಳಿಸುವ ಸಾಧ್ಯತೆ ಇದೆ.

Agencies 28 Sep 2020, 8:22 pm
ಹೊಸದಿಲ್ಲಿ: ಲಾಕ್‌ಡೌನ್‌ ಬಳಿಕ ನಿರ್ಬಂಧಗಳನ್ನು ಕ್ರಮೇಣ ಸಡಿಗೊಳಿಸುತ್ತಿರುವ ಕೇಂದ್ರ ಸರಕಾರ ಅಕ್ಟೋಬರ್‌ 1ರಿಂದ ಜಾರಿಯಾಗಲಿರುವ ‘ಅನ್‌ಲಾಕ್‌ 5.0’ ಮಾರ್ಗಸೂಚಿಗಳಲ್ಲಿ ಯಾವೆಲ್ಲಾ ಬದಲಾವಣೆಗಳನ್ನು ಪ್ರಕಟಿಸಲಿದೆ ಎಂಬ ವಿಷಯ ಕುತೂಹಲ ಮೂಡಿಸಿದೆ.
Vijaya Karnataka Web cinema-halls


ಒಂದೆಡೆ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಮುಖ್ಯಮಂತ್ರಿಗಳ ಜೊತೆ ಮಾತುಕತೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ‘ಮೈಕ್ರೊ-ಕಂಟೈನ್‌ಮೆಂಟ್‌’ ಬಗ್ಗೆ ಪ್ರಸ್ತಾಪಿಸಿರುವುದರಿಂದ ಕುತೂಹಲ ಹೆಚ್ಚಿದೆ. ಒಟ್ಟಾರೆ ಲಾಕ್‌ಡೌನ್‌ ಬದಲಿಗೆ ಸ್ಥಳೀಯ ಮಟ್ಟದಲ್ಲಿ ಸೋಂಕು ಹೆಚ್ಚಿರುವ ಕಡೆ ಲೋಕಲ್‌ ಲಾಕ್‌ಡೌನ್‌ ಜಾರಿ ಮಾಡುವುದು ಇದರ ತಿರುಳು.

ಈ ಮಧ್ಯೆ ದಸರಾ, ದೀಪಾವಳಿ ಹಬ್ಬಗಳೂ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕವಾಗಿ ಮತ್ತಷ್ಟು ಚಟುವಟಿಕೆಗಳಿಗೆ ಸರಕಾರ ನಿರ್ಬಂಧ ತೆರವುಗೊಳಿಸಬಹುದೆಂಬ ನಿರೀಕ್ಷೆ ಮೂಡಿದೆ.

ಆರ್ಥಿಕ ಚಟುವಟಿಕೆ

ಈಗಾಗಲೇ ಕೇಂದ್ರ ಗೃಹ ಸಚಿವಾಲಯ ರೆಸ್ಟೋರೆಂಟ್‌ಗಳು, ಮಾಲ್‌ಗಳು, ಸಲೂನ್‌, ಜಿಮ್‌ ತೆರೆಯಲು ಅನುಮತಿಸಿದೆ. ಇದೇ ರೀತಿ ಮತ್ತಷ್ಟು ಆರ್ಥಿಕ ಚಟುವಟಿಕೆಗಳಿಗೆ ಹೊಸ ಮಾರ್ಗಸೂಚಿಯಲ್ಲಿ ಗ್ರೀನ್‌ ಸಿಗ್ನಲ್‌ ತೋರುವ ಸಾಧ್ಯತೆಯಿದೆ. ರಾಜ್ಯ ಸರಕಾರಗಳು ಕೇಂದ್ರದ ಅನುಮತಿ ಇಲ್ಲದೆ ಲಾಕ್‌ಡೌನ್‌ ಜಾರಿಗೊಳಿಸುವಂತಿಲ್ಲ ಎಂದು ‘ಅನ್‌ಲಾಕ್‌ 4.0’ ಮಾರ್ಗಸೂಚಿಯಲ್ಲಿ ಈಗಾಗಲೇ ಗೃಹ ಸಚಿವಾಲಯ ಸೂಚಿಸಿದೆ. ಅಲ್ಲದೆ, ಆರ್ಥಿಕ ಚಟುವಟಿಕೆಗೆ ಅಡ್ಡಿಯಾಗದಂತೆ ಕಂಟೈನ್‌ಮೆಂಟ್‌ ಜೋನ್‌ ಮತ್ತು ಲಾಕ್‌ಡೌನ್‌ ನಿಯಮಗಳನ್ನು ಮರುರೂಪಿಸುವಂತೆ ರಾಜ್ಯಗಳಿಗೆ ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತಷ್ಟು ಆರ್ಥಿಕ ಚಟುವಟಿಕೆಗೆ ಅನುಮತಿಸುವ ನಿರೀಕ್ಷೆ ಮೂಡಿದೆ.

ಚಿತ್ರ ಮಂದಿರಗಳು

ಅಕ್ಟೋಬರ್‌ 1ರಿಂದ ಚಿತ್ರ ಮಂದಿರಗಳನ್ನು ತೆರೆಯಲು ಕೇಂದ್ರ ಹಸಿರು ನಿಶಾನೆ ತೋರುವ ಸಾಧ್ಯತೆಯಿದೆ. ಕಳೆದ ಆಗಸ್ಟ್‌ನಲ್ಲೇ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯದ ಕಾರ್ಯದರ್ಶಿ ಅಮಿತ್‌ ಖರೆ ಅವರು ಚಿತ್ರ ಮಂದಿರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ನೆರವಾಗುವಂತೆ ಸೀಟಿಂಗ್‌ ವ್ಯವಸ್ಥೆ ನಿಯಮಗಳನ್ನು ರೂಪಿಸಲು ಸಲಹೆ ನೀಡಿದ್ದರು. ಅ.1ರಿಂದ ಚಿತ್ರ ಮಂದಿರದ ಒಟ್ಟು ಸಾಮರ್ಥ್ಯ‌ದ ಶೇ. 50ರಷ್ಟು ಪ್ರೇಕ್ಷಕರೊಂದಿಗೆ ಶೋ ನಡೆಸಲು ಈಗಾಗಲೇ ಪಶ್ಚಿಮ ಬಂಗಾಳ ಸರಕಾರ ಅನುಮತಿ ನೀಡಿದೆ.

ಪ್ರವಾಸೋದ್ಯಮ

ಕೋವಿಡ್‌-19 ಸಾಂಕ್ರಾಮಿಕದಿಂದ ಅತ್ಯಂತ ಹೆಚ್ಚು ಸಂಕಷ್ಟಕ್ಕೆ ಸಿಲುಕಿರುವ ಪ್ರವಾಸೋದ್ಯಮಕ್ಕೂ ಈ ಬಾರಿ ಅನ್‌ಲಾಕ್‌ ಮಾರ್ಗಸೂಚಿಯಲ್ಲಿ ಕೊಂಚ ರಿಲೀಫ್‌ ಸಿಗುವ ಸಾಧ್ಯತೆಯಿದೆ. ಈಗಾಗಲೇ ರಾಜ್ಯಗಳು ಒಂದೊಂದಾಗಿಯೇ ಪ್ರವಾಸಿ ತಾಣಗಳನ್ನು ಸಾರ್ವಜನಿಕರ ಭೇಟಿಗೆ ಮುಕ್ತಗೊಳಿಸುತ್ತಿವೆ. ಇತ್ತೀಚೆಗಷ್ಟೇ ಉತ್ತರಾಖಂಡ್‌ ಸರಕಾರವು ಕೊರೊನಾ ನೆಗೆಟಿವ್‌ ವರದಿ ಇಲ್ಲದೆಯೇ ರಾಜ್ಯಕ್ಕೆ ಪ್ರವಾಸಿಗರು ಪ್ರವೇಶಿಸಲು ಅನುಮತಿಸಿದೆ. ತಾಜ್‌ ಮಹಲ್‌ ಸೇರಿದಂತೆ ಹಲವು ಪ್ರವಾಸಿ ಕೇಂದ್ರಗಳನ್ನು ಈಗಾಗಲೇ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ.

ಶಿಕ್ಷಣ ಸಂಸ್ಥೆಗಳು

ಸೆ.21ರಿಂದ ಹಲವು ರಾಜ್ಯಗಳಲ್ಲಿ ಶಾಲೆಗಳನ್ನು ಭಾಗಶಃ ತೆರೆಯಲು ಅನುಮತಿಸಲಾಗಿದೆ. ಅಕ್ಟೋಬರ್‌ನಲ್ಲಿ ಇದು ಮುಂದುವರಿಯುವ ಸಾಧ್ಯತೆಯಿದೆ. ಆದರೆ ಪ್ರಾಥಮಿಕ ಹಂತದ ತರಗತಿಗಳು ಇನ್ನೂ ಕೆಲ ವಾರಗಳ ಕಾಲ ‘ಬಂದ್‌’ ಆಗುವ ಸಾಧ್ಯತೆಯಿದೆ.

ಮಹಾರಾಷ್ಟ್ರದಲ್ಲಿ ಡೈನಿಂಗ್‌ಗೆ ಅನುಮತಿಅಕ್ಟೋಬರ್‌ನಿಂದ ಮಹಾರಾಷ್ಟ್ರ ಸರಕಾರ ಹೋಟೆಲ್‌ಗಳಲ್ಲಿ ಕುಳಿತು ತಿಂಡಿ ಸೇವನೆಗೆ ಅವಕಾಶ ಕಲ್ಪಿಸುವ ನಿರೀಕ್ಷೆಯಿದೆ. ಇದೇ ವೇಳೆ ಬಾರ್‌ಗಳನ್ನು ತೆರೆಯಲು ಅವಕಾಶ ನೀಡುವ ಸಾಧ್ಯತೆಯಿದೆ. ರೆಸ್ಟೋರೆಂಟ್‌ಗಳ ಮಾಲೀಕರ ಜೊತೆ ಇತ್ತೀಚೆಗೆ ನಡೆದ ಸಭೆಯಲ್ಲಿ ಸಿಎಂ ಉದ್ಧವ್‌ ಠಾಕ್ರೆ ಈ ಬಗ್ಗೆ ಸುಳಿವು ನೀಡಿದ್ದರು. ಇದಕ್ಕಾಗಿ ಸೂಕ್ತ ಮಾರ್ಗಸೂಚಿಗಳನ್ನು ಸರಕಾರ ಸಿದ್ಧಪಡಿಸುತ್ತಿದೆ. ಅತ್ತ ಕೇರಳದಲ್ಲಿ ಶಬರಿಮಲೆ ಭೇಟಿಗೆ ಅವಕಾಶ ಕಲ್ಪಿಸುವ ಸಂಬಂಧ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ