ಲಖನೌ: ಪುರಿ-ಹರಿದ್ವಾರ ಮಾರ್ಗದ 'ಕಳಿಂಗ ಉತ್ಕಲ್' ಎಕ್ಸ್ಪ್ರೆಸ್ ರೈಲಿನ ಬೋಗಿಗಳು ಉತ್ತರ ಪ್ರದೇಶದ ಮುಜಾಫರ್ನಗರದ ಬಳಿ ಹಳಿ ತಪ್ಪಿದ್ದು, ದುರಂತದಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರು ಮೃತಪಟ್ಟಿದ್ದಾರೆ. ಕನಿಷ್ಠ 100 ಮಂದಿ ಗಾಯಗೊಂಡಿದ್ದಾರೆ. ಇದಕ್ಕೆ ಕಾರಣ ಹಳಿ ನಿರ್ವಹಣೆಯಲ್ಲಿನ ಲೋಪ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಎಂದು ಹೇಳಲಾಗಿದೆ.
ಇದೇ ಮಾರ್ಗದಲ್ಲಿ ಹಳಿ ನಿರ್ವಹಣೆ ನಡೆಯುತ್ತಿತ್ತು. ಆದರೆ ಚಾಲಕನಿಗೆ ಈ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಹಳಿ ರಿಪೇರಿಯಾಗುತ್ತಿರುವುದನ್ನು ನೋಡಿ ಒಮ್ಮೆಲೇ ಚಾಲಕ ಬ್ರೇಕ್ ಹಾಕಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ಅಪಘಾತದ ತೀವ್ರತೆಗೆ ರೈಲಿನ ಕೆಲ ಬೋಗಿಗಳು ಹಾರಿ ಒಂದರ ಮೇಲೊಂದು ಕುಳಿತಿವೆ. ಮತ್ತೆ ಕೆಲವು ಬೋಗಿಗಳು ಪಕ್ಕದ ಮನೆಯ ಮೇಲೆ ಬಿದ್ದಿವೆ. ಹೀಗಾಗಿ ಸಾವಿನ ಪ್ರಮಾಣ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶನಿವಾರ ಸಂಜೆ 5.30ರ ವೇಳೆಗೆ ರೈಲು ಒಡಿಶಾದ ಪುರಿಯಿಂದ ಉತ್ತರಾಖಂಡದ ಹರಿದ್ವಾರಕ್ಕೆ ತೆರಳುತ್ತಿದ್ದಾಗ ಮುಜಾಫರ್ನಗರದ ಕತೌಲಿ ಬಳಿ ಅಪಘಾತಕ್ಕೀಡಾಯಿತು. ಘಟನೆ ನಡೆದ ಸ್ಥಳವು ಮೀರತ್ನಿಂದ 40 ಕಿ.ಮೀ. ದೂರದಲ್ಲಿದೆ.
ಕಂಬಿಗಳ ಕತ್ತರಿಸಿ ರಕ್ಷಣೆ
ರಾಷ್ಟ್ರೀಯ ವಿಪತ್ತು ದಳದ ನಾಲ್ಕು ತುಕಡಿಗಳು ಸ್ಥಳಕ್ಕೆ ಧಾವಿಸಿದ್ದು, ಬೋಗಿಗಳ ನಡುವೆ ಸಿಲುಕಿಕೊಂಡವರು ಮತ್ತು ಗಾಯಾಳುಗಳ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಕಬ್ಬಿಣದ ಕಂಬಿಗಳನ್ನು ಕತ್ತರಿಸಿ, ನಜ್ಜುಗುಜ್ಜಾದ ಬೋಗಿಗಳಿಂದ ಪ್ರಯಾಣಿಕರನ್ನು ರಕ್ಷಿಸಲಾಗಿದೆ.
26 ಸರಕಾರಿ ಮತ್ತು 20 ಖಾಸಗಿ ಆಂಬ್ಯುಲೆನ್ಸ್ಗಳ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳು ಮತ್ತು ಪ್ರಯಾಣಿಕರ ಸ್ಥಳಾಂತರಕ್ಕಾಗಿ ಖಾಸಗಿ ಹಾಗೂ ಸರಕಾರಿ ಬಸ್ಗಳ ವ್ಯವಸ್ಥೆ ಮಾಡಲಾಗಿದ್ದು, 1000ಕ್ಕೂ ಹೆಚ್ಚು ಆಹಾರ ಪೊಟ್ಟಣಗಳನ್ನು ವಿತರಿಸಲಾಗಿದೆ.
ಅಪಘಾತಕ್ಕೆ ನಿಖರ ಕಾರಣ ತಿಳಿಯಲು ರೈಲ್ವೆ ಸಚಿವ ಸುರೇಶ್ ಪ್ರಭು ತನಿಖೆಗೆ ಆದೇಶಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.
ಸಚಿವರು, ಅಧಿಕಾರಿಗಳ ಭೇಟಿ
ರೈಲ್ವೆ ಖಾತೆ ಉಪ ಸಚಿವ ಮನೋಜ್ ಸಿನ್ಹಾ ಅಪಘಾತದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ, ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ಉತ್ತರ ಪ್ರದೇಶದ ಇಬ್ಬರು ಸಚಿವರು ಸ್ಥಳಕ್ಕೆ ಧಾವಿಸಿದ್ದಾರೆ.
ಉಗ್ರ ಸಂಚು ತನಿಖೆ
ಘಟನೆಯ ಹಿಂದೆ ಉಗ್ರರ ಕೈವಾಡವಿರುವ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಉತ್ತರ ಪ್ರದೇಶದ ಉಗ್ರ ನಿಗ್ರಹ ಪಡೆಯೂ ಲಖನೌದಿಂದ ಸ್ಥಳಕ್ಕೆ ಧಾವಿಸಿದೆ. 'ಎಟಿಎಸ್' ಉಪ ಅಧೀಕ್ಷಕ ಅನೂಪ್ ಸಿಂಗ್ ತನಿಖೆಯ ನೇತೃತ್ವ ವಹಿಸಿದ್ದಾರೆ.
'Unofficial' track maintenance could be reason behind accident