ಲಖನೌ: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರ, ರಾಜ್ಯಾದ್ಯಂತ ಖಾಸಗಿ ವೃತ್ತಿಪರ ಕಾಲೇಜುಗಳಲ್ಲಿ ಜಾತಿ ಆಧರಿತ ಮೀಸಲಿಗೆ ಮಂಗಳ ಹಾಡಿದೆ.
ಖಾಸಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿ ಪರಿಶಿಷ್ಟ ಜಾತಿ (ಎಸ್ಸಿ), ಪರಿಶಿಷ್ಟ ವರ್ಗ (ಎಸ್ಟಿ) ಮತ್ತು ಇತರ ಹಿಂದುಳಿದ ವರ್ಗ (ಒಬಿಸಿ) ವಿಭಾಗದಲ್ಲಿ ಮೀಸಲು ರದ್ದುಪಡಿಸಿ ಆದೇಶ ಹೊರಡಿಸಿದೆ.
ಜಾತಿ ಆಧರಿತ ಮೀಸಲು ರದ್ದುಗೊಳಿಸಲು ಈ ಹಿಂದಿನ ಅಖಿಲೇಶ್ ಯಾದವ್ ಸರಕಾರ ತೀರ್ಮಾನ ಕೈಗೊಂಡಿತ್ತಾದರೂ, ಆದಿತ್ಯನಾಥ್ ನೇತೃತ್ವದ ಬಿಜೆಪಿ ಆಡಳಿತ ಇದನ್ನು ಜಾರಿಗೊಳಿಸಿದೆ.
ಸರಕಾರಿ ಶಾಲೆಯಲ್ಲೂ ನರ್ಸರಿಯಿಂದಲೇ ಇಂಗ್ಲಿಷ್: ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಪ್ರಕಟಿಸಿರುವ ಸರಕಾರ, ಸರಕಾರಿ ಶಾಲೆಗಳಲ್ಲಿ 6ನೇ ತರಗತಿ ಬದಲಿಗೆ ನರ್ಸರಿ ಹಂತದಿಂದಲೇ ಇಂಗ್ಲಿಷ್ ಭಾಷೆ ಕಲಿಕೆ ಜಾರಿ ಮಾಡಲು ಮುಂದಾಗಿದೆ. ರಾಜ್ಯಮಟ್ಟದ ಪಠ್ಯವನ್ನು ರಾಷ್ಟ್ರಮಟ್ಟದ ಮತ್ತು ಆಧುನಿಕ ಪಠ್ಯಕ್ಕೆ ಸಮಾನವಾಗಿಸುವುದು ಇದರ ಉದ್ದೇಶವಾಗಿದೆ.
ವಿದೇಶಿ ಭಾಷೆ ಕಡ್ಡಾಯ: ಅಲ್ಲದೆ, ವಿದ್ಯಾರ್ಥಿಗಳಿಗೆ ಒಂದು ವಿದೇಶಿ ಭಾಷೆಯನ್ನು ಕಡ್ಡಾಯಗೊಳಿಸಲು ಯುಪಿ ಸರಕಾರ ನಿರ್ಧರಿಸಿದೆ. ಪಠ್ಯದಲ್ಲಿ 'ರಾಷ್ಟ್ರೀಯತೆ' ಮತ್ತು 'ದೇಶಭಕ್ತಿ'ಯನ್ನು ಪ್ರೇರೇಪಿಸುವ ವಿಷಯವಸ್ತು ಸೇರಿಸುವಂತೆಯೂ ಸರಕಾರ ಅಧಿಕಾರಿಗಳಿಗೆ ಆದೇಶಿಸಿದೆ.
ಶಾಲೆಗಳಲ್ಲಿ ಯೋಗ-ಸ್ವಯಂ ರಕ್ಷಣೆ ತರಬೇತಿ: ಸರಕಾರಿ ಶಾಲೆಗಳಲ್ಲಿ ಯೋಗ ಮತ್ತು ಸ್ವಯಂ ರಕ್ಷಣೆ ತರಬೇತಿಯನ್ನು ಕಡ್ಡಾಯಗೊಳಿಸುವಂತೆ ಅಧಿಕಾರಿಗಳಿಗೆ ಸಿಎಂ ಆದಿತ್ಯನಾಥ್ ನಿರ್ದೇಶನ ನೀಡಿದ್ದಾರೆ.