ಆ್ಯಪ್ನಗರ

ಉರಿ ದಾಳಿ: ಪಠಾಣ್‌ಕೋಟ್‌ಗಿಂತಲೂ 'ಉಗ್ರ'

ಈ ಉರಿ ಸೇನಾ ಪ್ರಧಾನ ಕಚೇರಿ ಮೇಲಿನ ದಾಳಿಯಲ್ಲಿ 17 ಯೋಧರು ಹುತಾತ್ಮರಾಗಿದ್ದು, 19 ಮಂದಿ ಗಾಯಗೊಂಡಿದ್ದಾರೆ.

ಏಜೆನ್ಸೀಸ್ 18 Sep 2016, 2:40 pm
ಹೊಸದಿಲ್ಲಿ: ಪಠಾಣ್‌ಕೋಟ್ ದಾಳಿಯಾದಾಗಲೇ, ಸೇನಾ ನೆಲೆಯೊಳಗೆ ಉಗ್ರರು ನುಸುಳಿದ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದ್ದವು. ಆಗ ಏಳು ಸೇನಾ ಸಿಬ್ಬಂದಿ ಮೃತಪಟ್ಟು, ಹಲವರಿಗೆ ಗಾಯಗಳಾಗಿದ್ದವು. ಅದಕ್ಕಿಂತಲೂ ಭಯಾನಕವಾದ ಈ ಉರಿ ಸೇನಾ ಪ್ರಧಾನ ಕಚೇರಿ ಮೇಲಿನ ದಾಳಿಯಲ್ಲಿ 17 ಯೋಧರು ಹುತಾತ್ಮರಾಗಿದ್ದು, 19 ಮಂದಿ ಗಾಯಗೊಂಡಿದ್ದಾರೆ.
Vijaya Karnataka Web uri terror attack 17 soldiers killed 19 injured in strike on army camp
ಉರಿ ದಾಳಿ: ಪಠಾಣ್‌ಕೋಟ್‌ಗಿಂತಲೂ 'ಉಗ್ರ'


ಬಾರಾಮುಲ್ಲಾ ಜಿಲ್ಲೆಯ ಉರಿಯ 12ನೇ ಬ್ರಿಗೇಡ್ ಭಾರತೀಯ ವಾಯು ಸೇನಾ ಪ್ರಧಾನ ಕಚೇರಿ ಮೇಲೆ ನಡೆದ ಈ ದಾಳಿ ಅತ್ಯಂತ ದೊಡ್ಡ ಅಂತಾರಾಷ್ಟ್ರೀಯ ರಾಜತಾಂತ್ರಿಕ ಘಟನೆಯಾಗಿದೆ.

ಮತ್ತೆ ಮತ್ತೆ ಉಗ್ರರು ಸೇನಾ ನೆಲೆ ಮೇಲೆ ದಾಳಿ ನಡೆಯುತ್ತಿದ್ದು, ದೇಶದ ಭದ್ರತೆ ಬಗ್ಗೆ ಮತ್ತಷ್ಟು ಎಚ್ಚರ ತಾಳುವುದು ಅನಿವಾರ್ಯ ಎನ್ನುವ ಸಂದೇಶ ತಾಳುತ್ತಿದೆ.

ಈ ದಾಳಿಯಲ್ಲಿ ಹೆಚ್ಚು ಯೋಧರು ಹುತಾತ್ಮರಾಗಿರುವುದು ದೇಶಕ್ಕಾದ ಅತೀ ದೊಡ್ಡ ನಷ್ಟ. ಡೋರಾ ರೆಜಿಮೆಂಟ್‌ನ ಸೈನಿಕರು ಈ ನೆಲೆಯಲ್ಲಿ ಟೆಂಟ್ ಹಾಗೂ ಇತರೆ ತಾತ್ಕಾಲಿಕ ವಸತಿಯಲ್ಲಿರುತ್ತಾತರೆ. ಸಾಮಾನ್ಯವಾಗಿ ಇಲ್ಲಿಂದಲೇ ಬೇರೆ ಬೇರೆ ಕಡೆಗೆ ಸೈನಿಕರು ಕರ್ತವ್ಯಕ್ಕೆ ಮರಳುತ್ತಾರೆ. ಉಗ್ರರು ದಾಳಿ ನಡೆಸಿದಾಗ ಅನೇಕ ಟೆಂಟ್‌ಗಳು ಬೆಂಕಿಗಾಹುತಿಯಾಗಿದೆ. ಆ ಬೆಂಕಿ ಇತರೆಡೆಗೂ ಹರಡಿದೆ.

ಬೆಳಗಿನ ಜಾವ ಸುಮಾರು 4ರ ವೇಳೆ ಈ ನೆಲೆಯೊಳಗೆ ನುಗ್ಗಿದ ಅಪಾರ ಶಸ್ತ್ರಾಸ್ತ್ರ ಹೊಂದಿದ್ದ ಉಗ್ರರು, ದಾಳಿ ನಡೆಸಲು ಆರಂಭಿಸಿದರು. ಸೈನಿಕರು ಉಗ್ರರ ಸದ್ದಡಿಗಿಸಿದರೂ, ಕಾರ್ಯಾಚರಣೆ ಮುಂದುವರಿದಿದೆ.

ಉಗ್ರರು ನುಸುಳಿದ್ದು ಎಲ್ಲಿ?

ಈ ದಾಳಿ ನಡೆಸಿದ ಉಗ್ರರು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಗಡಿ ರೇಖೆಯ ಮೂಲಕ ದೇಶದೊಳಗೆ ನುಸುಳಿರಬಹುದೆಂದು ಶಂಕಿಸಲಾಗಿದೆ. ಇದೇ ಪ್ರದೇಶದ ಮೊಹ್ರಾದಲ್ಲಿ ಎರಡು ವರ್ಷಗಳ ಹಿಂದೆ ನಡೆಸಿದ ದಾಳಿ ನಂತರ ಇದು ಉಗ್ರರು ನಡೆಸಿದ ಅತಿ ದೊಡ್ಡ ದಾಳಿಯಾಗಿದೆ. ಡಿಸೆಂಬರ್ 5, 2014ರಲ್ಲಿ ನಡೆದ ಆ ದಾಳಿಯಲ್ಲಿ ಹತ್ತು ಸೈನಿಕರು ಹುತಾತ್ಮರಾಗಿದ್ದರು.

ಗಾಯಗೊಂಡ ಸೈನಿಕರನ್ನು ಸ್ಥಳಾಂತರಿಸಲು ಬಾರಾಮುಲ್ಲಾದಿಂದ 19ನೇ ಘಟಕದ ಸೇನಾ ಹೆಲಿಕಾಪ್ಟರ್‌ಗಳನ್ನು ಬಳಸಲಾಗುತ್ತಿದೆ.

ಸೇನಾ ಮುಖ್ಯಸ್ಥ ಜ.ದಲ್ಬೀರ್ ಸಿಂಗ್ ಸುಹಾಗ್ ಹಾಗೂ ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಕಾಶ್ಮೀರಕ್ಕೆ ಭೇಟಿ ನೀಡುವ ನಿರೀಕ್ಷೆಯಿದ್ದು, ಗಾಯಗೊಂಡ ಸೈನಿಕರನ್ನು ಭೇಟಿಯಾಗಲಿದ್ದಾರೆ.

ಮೋದಿ ಖಂಡನೆ:

ಈ ಉಗ್ರ ದಾಳಿಯನ್ನು ಖಂಡಿಸಿದ ಪ್ರಧಾನಿ ಮೋದಿ, ದಾಳಿಗೆ ಕಾರಣರಾದ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ