ಆ್ಯಪ್ನಗರ

ಅಣ್ವಸ್ತ್ರ ಬಳಸುವುದು ಪರಿಸ್ಥಿತಿಯ ಮೇಲೆ ಅವಲಂಬಿತ: ರಾಜನಾಥ್‌ ಸಿಂಗ್‌

ಪೋಖ್ರಾನ್‌ನಲ್ಲಿ ಭಾರತ ನಡೆಸಿದ ಪರಮಾಣು ಪರೀಕ್ಷೆ ಇಡೀ ವಿಶ್ವವನ್ನೇ ನಿಬ್ಬೆರಗಾಗಿಸಿತ್ತು. ಇದಕ್ಕೆ ಕಾರಣರಾದವರು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಮತ್ತು ಅಬ್ದುಲ್‌ ಕಲಾಂ ತಂಡ.

Vijaya Karnataka Web 16 Aug 2019, 4:56 pm
ಹೊಸದಿಲ್ಲಿ: ಭವಿಷ್ಯದಲ್ಲಿ ಭಾರತ ಅಣ್ವಸ್ತ್ರ ಪ್ರಯೋಗಿಸುವುದು ಪರಿಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಪಾಕಿಸ್ತಾನಕ್ಕೆ ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದು ಮಾಡಿದಾಗಿನಿಂದಲೂ ಪಾಕಿಸ್ತಾನ ಕ್ಯಾತೆ ತೆಗೆಯುತ್ತಲೇ ಇದೆ. ಇದಕ್ಕೆ ರಾಜನಾಥ್‌ ಸಿಂಗ್ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ.

ಅಟಲ್‌ ಬಿಹಾರಿ ವಾಜಪೇಯಿ ಅವರ ಮೊದಲ ಪುಣ್ಯಸ್ಮರಣೆಯ ದಿನದಂದೇ ಪೋಖ್ರಾನ್‌ಗೆ ಭೇಟಿ ನೀಡಿದ ರಾಜನಾಥ್‌ ಸಿಂಗ್‌ ಪರಿಶೀಲನೆ ನಡೆಸಿದರು.

ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಕೈಗೊಳ್ಳಲಾದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಪೋಖ್ರಾನ್‌ ಕೂಡ ಒಂದಾಗಿದೆ.


ನಂತರ ಮಾತನಾಡಿದ ರಾಜನಾಥ್‌ ಸಿಂಗ್‌, ಅಣ್ವಸ್ತ್ರ ವಿಷಯದಲ್ಲಿ ಭಾರತ ವಿಶ್ವದ ನಿಲುವಿಗೆ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.

'ಮೊದಲು ನಾವು ಬಳಸುವುದಿಲ್ಲ' ಎಂಬ ಧೋರಣೆಗೆ ನಾವು ಈಗಲೂ ಬದ್ಧವಾಗಿದ್ದೇವೆ. ಹಾಗೆಂದು ನಮ್ಮನ್ನು ಕೆಣಕುವವರನ್ನು ಅಥವಾ ಭವಿಷ್ಯದಲ್ಲಿ ಪರಿಸ್ಥಿತಿ ಹೇಗೆ ಬರುತ್ತದೋ ಅದನ್ನು ನೋಡಿಕೊಂಡು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದರು.


ಪೋಖ್ರಾನ್‌ಗೆ ಭೇಟಿ ನೀಡುವ ಮುನ್ನ ರಾಜನಾಥ್‌ ಸಿಂಗ್‌ ಜೈಸಲ್ಮೇರ್‌ಗೆ ಭೇಟಿ ನೀಡಿ, 5ನೇ ಆರ್ಮಿ ಸ್ಕೌಟ್‌ ಮಾಸ್ಟರ್ಸ್‌ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡರು.


ಆರ್ಮಿ ಸ್ಕೌಟ್‌ ಮಾಸ್ಟರ್ಸ್‌ ಸಮಾರೋಪ ಸಮಾರಂಭ ಅಟಲ್‌ ಬಿಹಾರಿ ವಾಜಪೇಯಿ ಅವರ ಮೊದಲ ಪುಣ್ಯಸ್ಮರಣೆಯಂದೇ ಇದ್ದದು ಕಾಕತಾಳೀಯ. ಹೀಗಾಗಿ ಪೋಖ್ರನ್‌ಗೆ ಭೇಟಿ ನೀಡಿ ಅಟಲ್‌ಜೀಗೆ ಶ್ರದ್ಧಾಂಜಲಿ ಸಲ್ಲಿಸಲು ಭೇಟಿ ನೀಡಿದೆ ಎಂದು ರಾಜನಾಥ್‌ ಸಿಂಗ್‌ ಸ್ಪಷ್ಟಪಡಿಸಿದರು.

ಭಾರತ ಎಂದಿಗೂ ವಿಶ್ವದ ನೀತಿ ನಿಯಮಗಳಿಗೆ ಅನುಗುಣವಾಗಿಯೇ ಸಾಗಿದೆ. ಜವಾಬ್ದಾರಿಯುತ ರಾಷ್ಟ್ರವಾಗಿ ಜಾಗತಿಕ ಮಟ್ಟದಲ್ಲಿಯೇ ಮುಂಚೂಣಿಯಲ್ಲಿದೆ ನಮ್ಮ ದೇಶ. ಅಣ್ವಸ್ತ್ರ ಹೊಂದಿದ ದೇಶ ಎಂಬ ಹೆಗ್ಗಳಿಕೆ ಬರಲು ಕಾರಣಕರ್ತರಾಗಿರುವ ಅಟಲ್‌ಜೀ ನಾವೆಲ್ಲರೂ ಆಭಾರಿಯಾಗಿರಬೇಕು ಎಂದು ಸಚಿವ ರಾಜನಾಥ್‌ ಸಿಂಗ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ