ಆ್ಯಪ್ನಗರ

ಒಂದು ಭಾರತ, ಶ್ರೇಷ್ಠ ಭಾರತ ಘೋಷಣೆಯೊಂದಿಗೆ ಬಿಹಾರದಲ್ಲಿ ಯೋಗಿ ಪ್ರಚಾರ ಆರಂಭ!

ಬಿಹಾರ ವಿಧಾನಸಭೆ ಚುನಾವಣೆ ಪ್ರಚಾರದ ಅಖಾಡಕ್ಕೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಧುಮುಕಿದ್ದಾರೆ. ರೋಹ್ತಾಸ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಯೋಗಿ, ಒಂದು ಭಾರತ, ಶ್ರೇಷ್ಠ ಭಾರತ ಪರಿಕಲ್ಪನೆಯಲ್ಲಿ ನಾವು ಮುನ್ನಡೆಯೋಣ ಎಂದು ಜನತೆಗೆ ಕರೆ ನೀಡಿದರು.

Vijaya Karnataka Web 20 Oct 2020, 4:07 pm
ರೋಹ್ತಾಸ್: ಬಿಹಾರ ವಿಧಾನಸಭೆ ಚುನಾವಣೆ ಪ್ರಚಾರದ ಅಖಾಡಕ್ಕೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಧುಮುಕಿದ್ದಾರೆ. ಇಲ್ಲಿನ ರೋಹ್ತಾಸ್ ಜಿಲ್ಲೆಯಲ್ಲಿ ಯೋಗಿ ಆದಿತ್ಯನಾಥ್ ಎನ್‌ಡಿಎ ಪರ ಚುನಾವಣೆ ಪ್ರಚಾರ ನಡೆಸಿದರು.
Vijaya Karnataka Web Yogi-Adityanath-bccl
ಸಂಗ್ರಹ ಚಿತ್ರ


ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ದೇಶದ ರಾಜಕೀಯ ಚಹರೆ ಬದಲಾಗಿದ್ದು, ದೇಶ ಏಕತೆಯ ಮಂತ್ರದೊಂದಿಗೆ ಅಖಂಡತೆಯೆಡೆಗೆ ಮುನ್ನುಗ್ಗುತ್ತಿದೆ ಎಂದು ಯೋಗಿ ಆದಿತ್ಯನಾತ್ ಹೇಳಿದರು.

ಭಾರತದ ಗಡಿಗಳ ಸುರಕ್ಷತೆಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒತ್ತು ನೀಡಿದ್ದು, ಈ ಹಿಂದಿನಂತೆ ಪಾಕ್ ಬೆಂಬಲಿತ ಉಗ್ರರು ಜಮ್ಮು ಮತ್ತು ಕಾಶ್ಮೀರದ ಗಡಿಯೊಳಗೆ ನುಸುಳಿ ನಮ್ಮ ಸೈನಿಕರನ್ನು ಹತ್ಯೆಗೈಯಲಾರರು ಎಂದು ಯೋಗಿ ಆದಿತ್ಯನಾಥ್ ಅಭಿಪ್ರಾಯಪಟ್ಟರು.

ನಿತೀಶ್‌ ಪರ ಮೋದಿ ಬ್ಯಾಟಿಂಗ್: ಬಿಹಾರದಲ್ಲಿ 12 ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ ಪ್ರಧಾನಿ!

ಭಯೋತ್ಪಾದನೆಯನ್ನು ಹೆಡೆಮುರಿ ಕಟ್ಟುವಲ್ಲಿ ಮೋದಿ ಸರ್ಕಾರ ಯಶಸ್ವಿಯಾಗಿದ್ದು, ಉಗ್ರರನ್ನು ಅವರ ಅಡಗುತಾಣಗಳವರೆಗೆ ಬೆನ್ನತ್ತಿ ಬೇಟೆಯಾಡಲಾಗುತ್ತಿದೆ. ಈ ಹಿಂದಿನಂತೆ ಸರಾಗವಾಗಿ ಕಣಿವೆಯ ಗಡಿಯೊಳಗೆ ನುಸುಳಿ ನಮ್ಮ ಸೈನಿಕರ ಮೇಲೆ ಉಗ್ರರು ದಾಳಿ ಮಾಡಲಾರರು ಎಂದು ಯೋಗಿ ಹೇಳಿದರು.


ಇಷ್ಟೇ ಅಲ್ಲದೇ ದೇಶದ ರಾಜಕೀಯ ಸ್ಥಿತಿಗಳೂ ಬದಲಾಗಿದ್ದು, ಈ ಹಿಂದೆ ಜೆಎನ್‌ಯುವಿನಲ್ಲಿ ಭಾರತವನ್ನು ತುಂಡರಿಸುವ ಕುರಿತು ಘೋಷಣೆಗಳು ಮೊಳಗುತ್ತಿದ್ದವು. ಆದರೆ ಇದೀಗ ಒಂದು ಭಾರತ, ಶ್ರೇಷ್ಠ ಭಾರತದಂತಹ ಘೋಷಣೆಗಳು ಮೊಳಗುತ್ತಿವೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ನುಡಿದರು.

ಬಿಹಾರ ಕೂಡ ಇದೇ ದೇಶಭಕ್ತಿಯ ಸಮುದ್ರದಲ್ಲಿ ನದಿಯಂತೆ ಸೇರಿಕೊಂಡಿದ್ದು, ಮತ್ತೆ ಎನ್‌ಡಿಎ ಮೈತ್ರಿಕೂಟವನ್ನು ಅಧಿಕಾರಕ್ಕೆ ತರುವ ಮೂಲಕ ಅಭಿವೃದ್ಧಿಯ ಹೊಸ ಪರ್ವಕ್ಕೆ ನಾಂದಿ ಹಾಡಲಿದೆ ಎಂದೂ ಯೋಗಿ ಆದಿತ್ಯನಾಥ್ ಈ ವೇಳೆ ಭರವಸೆ ವ್ಯಕ್ತಪಡಿಸಿದರು.

ಮೋದಿ ಇದ್ದರೆ ಸಾಧ್ಯ, ನಿತೀಶ್ ಇದ್ದರೆ ಸಂಭವ: ಬಿಹಾರ ಚುನಾವಣಾ ಪ್ರಚಾರಕ್ಕೆ ಬಿಜೆಪಿ ಚಾಲನೆ!

ಬಿಹಾರದ ಸರ್ವಾಂಗೀಣ ಅಭಿವೃದ್ಧಿಗೆ ಎನ್‌ಡಿಎ ಮೈತ್ರಿಕೂಟವನ್ನು ಬೆಂಬಲಿಸುವಂತೆ ಮನವಿ ಮಾಡಿದ ಯೋಗಿ ಆದಿತ್ಯನಾಥ್, ಉತ್ತರಪ್ರದೇಶ ಮತ್ತು ಬಿಹಾರ ಸಹೋದರ ರಾಜ್ಯಗಳಾಗಿದ್ದು ನಾವು ಒಟ್ಟಾಗಿ ಹೆಜ್ಜೆ ಇಡೋಣ ಎಂದು ಕರೆ ನೀಡಿದರು.

ಯೋಗಿ ಆದಿತ್ಯನಾಥ್ ಆರು ದಿನಗಳಲ್ಲಿ ಬಿಹಾರದ ಒಟ್ಟು 18 ಕಡೆಗಳಲ್ಲಿ ಚುನಾವಣಾ ಪ್ರಚಾರ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ